ಡೆಂಗ್ಯೂ ಭೀತಿ: ಸೊಳ್ಳೆ ಬ್ಯಾಟ್, ಪರಂಗಿ ಹಣ್ಣಿಗೆ ಡಿಮ್ಯಾಂಡೋ ಡಿಮ್ಯಾಂಡು!
ಮೈಸೂರು, ಜುಲೈ 15 : ರಾಜ್ಯದಲ್ಲಿ ಮೈಸೂರು ಎಂದರೇ ಸಾಕು, ನಿಮ್ಮೂರಿನಲ್ಲಿ ಡೆಂಗ್ಯೂ ಹಾವಳಿ ಜಾಸ್ತಿಯಾಗುತ್ತಿದೆ ಅಲ್ವಾ ಎಂದು ಹೇಳುವವರೇ ಹೆಚ್ಚಾಗಿದ್ದಾರೆ. ಇದಕ್ಕೆ ಪೂರಕವೆಂಬಂತೆ ಸೊಳ್ಳೆಯನ್ನು ಹತ್ತಿಕ್ಕಲು ಸೊಳ್ಳೆಬ್ಯಾಟ್ ಹಾಗೂ ಡೆಂಗ್ಯೂಯಿಂದ ಹೊರಬರಲು ಪರಂಗಿ ಹಣ್ಣಿನ ಬೇಡಿಕೆ ಹೆಚ್ಚಾಗಿದೆ.
ಮಾರಕ ರೋಗ ಮಲೇರೀಯಾ, ಡೆಂಗ್ಯೂ, ಚಿಕೂನ್ ಗುನ್ಯಾ ಕಾಯಿಲೆಗಳು ಬಂದರೆ ಸುಧಾರಿಸಿಕೊಳ್ಳೋದೇ ಕಷ್ಟ. ಈ ಎಲ್ಲಾ ರೋಗಗಳಿಗೆ ಮೂಲ ಕಾರಣ ಒಂದು ಚಿಕ್ಕ ಸೊಳ್ಳೆ. ಅದನ್ನು ಸರ್ವನಾಶ ಮಾಡಲೆಂದೇ ತಯಾರಿಸಲಾದ ಸೊಳ್ಳೆ ಬ್ಯಾಟ್ ಗೀಗ ಎಲ್ಲಿಲ್ಲದ ಬೇಡಿಕೆ ಬಂದಿದೆ.

ಮುಸ್ಸಂಜೆಯಾಗುತ್ತಲೇ ಸಂಗೀತ ಹಾಡಿಕೊಂಡು ಎಲ್ಲರ ಮನೆಗೆ ಲಗ್ಗೆ ಇಡುವ ಈ ಚಿಕ್ಕ ಸೊಳ್ಳೆಗೆ ಇದೀಗ ಎಲ್ಲರೂ ಭಯಪಡಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇತ್ತೀಚಿಗೆ ಈ ಸೊಳ್ಳೆ ಕಡಿದು ಕಾಣಿಸಿಕೊಂಡ ಡೆಂಗ್ಯೂ ಜ್ವರದಿಂದ ಮಡಿದವರು ಏಳೆಂಟು ಮಂದಿ. ಸರಿ ಸುಮಾರಾಗಿ ಎಲ್ಲ ರೀತಿಯ ಜ್ವರಗಳು ಕಾಣಿಸಿಕೊಳ್ಳುವುದು ಈ ಸೊಳ್ಳೆಯಿಂದಲೇ ಎಂದು ಹೇಳಲಾಗುತ್ತದೆ. ಮಾರುಕಟ್ಟೆಗಳಲ್ಲಿ ಸಿಗುವ ಲಿಕ್ವಿಡ್, ಕಾಯಿಲ್ ಗಳಿಗೆ ಸೊಳ್ಳೆ ಸಾಯಲಾರದು. ಗುಂಯ್ ಗುಡುವ ಸದ್ದು ನಿಂತರೂ ಅದು ಸಾವನ್ನಪ್ಪಿದೆ ಎಂದು ತಿಳಿಯಲು ಸಾಧ್ಯವಿಲ್ಲ.
ಕ್ವಾಯಿಲ್ ಅಥವಾ ಲಿಕ್ವಿಡ್ ಪ್ರಭಾವ ಕಡಿಮೆಯಾದ ನಂತರ ಮತ್ತೆ ಸಂಗೀತ ಶುರುವಿಟ್ಟುಕೊಳ್ಳಲಿದೆ. ಈ ಬಾರಿ ಜಿಲ್ಲೆಯಲ್ಲಿ ಸೊಳ್ಳೆಗಳ ಕಾಟ ಅಧಿಕವೆಂದೇ ಕಾಣಿಸುತ್ತಿದ್ದು, ಸೊಳ್ಳೆಯನ್ನು ಸಂಪೂರ್ಣ ಸಾಯಿಸಿ ಅದರ ಸಂತತಿಯನ್ನೇ ನಾಶಗೊಳಿಸಲು ಸೊಳ್ಳೆ ಬ್ಯಾಟುಗಳು ಇದೀಗ ನಗರದ ಎಲ್ಲ ಪ್ರಮುಖ ರಸ್ತೆಗಳಲ್ಲಿ ಕಂಡು ಬರುತ್ತಿವೆ.

ಸೊಳ್ಳೆ ಹತ್ತಿಕ್ಕಲು ಬ್ಯಾಟ್ ಖರೀದಿ
ಮೈಸೂರು ಜಿಲ್ಲಾಧಿಕಾರಿ ಕಚೇರಿಗಳ ಆಸುಪಾಸು, ಅಗ್ರಹಾರದ ಕೆಲವು ಬೀದಿಗಳು, ವಿಶ್ವವಿದ್ಯಾನಿಲಯದ ಕೆಲವು ರಸ್ತೆಗಳಲ್ಲಿ ಈ ಸೊಳ್ಳೆ ಬ್ಯಾಟ್ ಮಾರಾಟಗಾರರು ಕಂಡು ಬರುತ್ತಿದ್ದಾರೆ. ಹಾಸ್ಟೆಲ್ ಆಸುಪಾಸುಗಳಲ್ಲಿಯೂ ಸೊಳ್ಳೆಗಳ ಕಾಟ ಹೆಚ್ಚುತ್ತಿದ್ದು, ಹಾಸ್ಟೆಲ್ ವಿದ್ಯಾರ್ಥಿ-ವಿದ್ಯಾರ್ಥಿನಿಯರೂ ಕೂಡ ಸೊಳ್ಳೆ ಬ್ಯಾಟ್ ಖರೀದಿಸುತ್ತಿದ್ದಾರೆ.
ಸಾರ್ವಜನಿಕರು ಬ್ಯಾಟ್ ಒಂದಕ್ಕೆ 150 ರಿಂದ ಆರಂಭವಾಗಿ 280ರವೆರಗೂ ಹಣ ನೀಡಿ ಖರೀದಿಗೆ ಮುಗಿ ಬಿದ್ದಿದ್ದು, ದಿನಕ್ಕೆ ಕಡಿಮೆಯೆಂದರೂ 50ಕ್ಕಿಂತ ಹೆಚ್ಚು ಬ್ಯಾಟ್ ಗಳು ಮಾರಾಟವಾಗುತ್ತಿವೆ ಎನ್ನುತ್ತಾರೆ ಬೀದಿ ಬದಿ ಬ್ಯಾಟ್ ಇಟ್ಟುಕೊಂಡಿರುವ ವ್ಯಾಪಾರಸ್ಥರು. ಈ ಬಾರಿ ಸೊಳ್ಳೆ ಬ್ಯಾಟ್ ಮಾರಾಟಗಾರರಿಗೆ ಒಳ್ಳೆಯ ಬೇಡಿಕೆ ಬಂದಿದೆ. ಅದೇನೇ ಇರಲಿ ಮಾರಕ ರೋಗಗಳನ್ನು ಹರಡುವ ಸೊಳ್ಳೆಗಳು ನಗರದಲ್ಲಿ ಶಾಶ್ವತವಾಗಿ ಕಣ್ಮರೆಯಾಗಿ, ಜಿಲ್ಲೆಯಲ್ಲಿ ಹರಡಿರುವ ಜ್ವರ ಕಡಿಮೆಯಾದರೆ ಸಾಕು ಎಂಬ ಆಶಯ ಸಾರ್ವಜನಿಕರದ್ದು.
ಪರಂಗಿಗೂ ಹೆಚ್ಚಾಯ್ತು ಬೇಡಿಕೆ
ನಗರದಲ್ಲಿ ಡೆಂಗ್ಯೂ ಜ್ವರ ತೀವ್ರವಾಗುತ್ತಿದ್ದಂತೆ ಪರಂಗಿ ಹಣ್ಣಿಗೆ ಬೇಡಿಕೆ ಸೃಷ್ಟಿಯಾಗುತ್ತಿದೆ. ಇದರಿಂದಾಗಿ ಹೆಚ್ಚಿನ ಪ್ರಮಾಣದಲ್ಲಿ ನಗರಕ್ಕೆ ಪರಂಗಿ ಬಂದಿಳಿಯುತ್ತಿದೆ. ಪರಂಗಿ ಎಲ್ ತಿಂದರ ಪ್ಲೇಟ್ಲೇಟ್ ಗಳ ಸಂಖ್ಎ ಹೆಚ್ಚುತ್ತಾದೆ ಎಂಬ ನಂಬಿಕೆ ಜನರಲ್ಲಿದೆ. ಪರಂಗಿ ಎಲ್ಎ ಸಿಗುವುದು ದುರ್ಲಭವಾದಾಗ ಪರಂಗಿ ಹಣ್ಣು ತಿಂದರೆ ಸಾಕು ಎಂಬ ನಂಬಿಕೆ ಬೇರೂರತೊಡಗಿದೆ.
ಇದರಿಂದ ಸಾಮಾನ್ಯ ಜನರು ಜ್ವರ ಬಂದರೂ ಸರಿ ಕಿವಿ ಹಾಗೂ ಪರಂಗಿ ಹಣ್ಣುಗಳನ್ನು ತಿನ್ನಲು ಮುಂದಾಗುತ್ತಿದ್ದಾರೆ. ತರಕಾರಿಗಳ ಬೆಲೆ ಏರಿಕೆಯಿಂದ ಸರಿಯಾದ ಮಾರಾಟ ಕಾಣದೆ ಹೈರಾಣಾಗಿದ್ದ ತರಕಾರಿ ವ್ಯಾಪಾರಸ್ಥರು ಇದೀಗ ಪರಂಗಿ ಎಡೆಗೆ ಮುಖ ಮಾಡಿದ್ದಾರೆ. ತಾಲೂಕಿನ ಹುಲ್ಲಹಳ್ಳಿ, ನಂಜನಗೂಡು ತಾಲೂಕು ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳೆದಿರುವ ಪರಂಗಿ ಗಿಡಗಳುಇದೇ ಹೊತ್ತಿಗೆ ಇಳುವರಿ ನೀಡಲಾರಂಭಿಸಿದೆ. ಇದರಿಂದ ಸಹಜವಾಗಿಯೇ ತರಕಾರಿಗಳಿಗೆ ಪರ್ಯಾಯವಾಗಿ ಪರಂಗಿ ಹಣ್ಣುಗಳ ಮಾರಾಟದಲ್ಲಿ ವ್ಯಾಪಾರಸ್ಥರು ತೊಡಗಿದ್ದಾರೆ.












Click it and Unblock the Notifications