ದೇವಾಲಯ ತೆರವು ವಿವಾದ, ನಂಜನಗೂಡು ತಹಶೀಲ್ದಾರ್ ವರ್ಗಾವಣೆ
ಮೈಸೂರು, ಸೆಪ್ಟೆಂಬರ್ 27: ಮೈಸೂರಿನ ನಂಜನಗೂಡಿನಲ್ಲಿ ದೇವಾಲಯ ತೆರವು ಮಾಡಿದ್ದು ದೊಡ್ಡ ವಿವಾದವಾಗಿತ್ತು, ರಾಜ್ಯಾದ್ಯಂತ ಸುದ್ದಿಯಾಗಿತ್ತು. ಈಗ ಸರ್ಕಾರ ನಂಜನಗೂಡು ತಹಶೀಲ್ದಾರ್ ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ. ಈ ಮೂಲಕ ಜನರ ಆಕ್ರೋಶ ತಣ್ಣಗಾಗಿಸುವ ಪ್ರಯತ್ನ ಮಾಡಿದೆ.
ಸೋಮವಾರ ನಂಜನಗೂಡು ತಹಶೀಲ್ದಾರ್ ಮೋಹನ ಕುಮಾರಿ ವರ್ಗಾವಣೆಗೊಳಿಸಿ ಆದೇಶ ಹೊರಡಿಸಲಾಗಿದೆ. ವರ್ಗಾವಣೆ ಬಳಿಕ ತಹಶೀಲ್ದಾರ್ ಹುದ್ದೆಯನ್ನು ಖಾಲಿ ಬಿಟ್ಟಿದ್ದು, ಯಾರನ್ನೂ ಸಹ ಹೊಸದಾಗಿ ನೇಮಕ ಮಾಡಿಲ್ಲ.

ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಉಚ್ಚಗಣಿ ಮಹದೇವಮ್ಮ ದೇವಾಲಯ ತೆರವು ಪ್ರಕರಣ ರಾಜ್ಯಾದ್ಯಂತ ಸುದ್ದಿಯಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೋಹನ ಕುಮಾರಿ ವರ್ಗಾವಣೆಯಾಗಿದೆ.
ಕಂದಾಯ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ರಶ್ಮಿ ಎಂ. ಎಸ್. ತಹಶೀಲ್ದಾರ್ ಮೋಹನ ಕುಮಾರಿ ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದ್ದಾರೆ. ಐಎಂಎ ವಂಚನೆ ಪ್ರಕರಣ ಮತ್ತು ಸಕ್ಷಮ ಪ್ರಾಧಿಕಾರ ಬೆಂಗಳೂರು ಇಲ್ಲಿನ ತಹಶೀಲ್ದಾರ್ ಗ್ರೇಡ್ - 1 ಹುದ್ದೆಗೆ ತಕ್ಷಣದಿಂದ ಜಾರಿಗೆ ಬರುವಂತೆ ಅವರನ್ನು ನೇಮಕ ಮಾಡಲಾಗಿದೆ.
ಸರ್ಕಾರ ನಂಜನಗೂಡು ತಹಶೀಲ್ದಾರ್ ಹುದ್ದೆಯನ್ನು ಖಾಲಿ ಉಳಿಸಿಕೊಂಡಿದೆ. ತಹಶೀಲ್ದಾರ್ ಹುದ್ದೆಗೆ ಸೂಕ್ತ ಪ್ರಭಾರ ವ್ಯವಸ್ಥೆ ಮಾಡಲು ಮೈಸೂರು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಸುಪ್ರೀಂಕೋರ್ಟ್ ಆದೇಶದ ಅನ್ವಯ ದೇವಾಲಯ ತೆರವು ಮಾಡಲಾಗಿದೆ ಎಂದು ಮೈಸೂರು ಜಿಲ್ಲಾಡಳಿತ ಹೇಳಿತ್ತು. ಆದರೆ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಸೇರಿದಂತೆ ಹಲವು ನಾಯಕರು ಜಿಲ್ಲಾಡಳಿತ ತೀರ್ಮಾನಕ್ಕೆ ವಿರೋಧ ವ್ಯಕ್ತಪಡಿಸಿದ್ದರು.
ದೇವಾಲಯ ತೆರವು ವಿವಾದ ರಾಜ್ಯಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ವಿಚಾರ ಮುಖ್ಯಮಂತ್ರಿಗಳ ತನಕ ತಲುಪಿತ್ತು. ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೇವಾಲಯ ತೆರವು ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲು ಸೂಚನೆ ಕೊಟ್ಟಿದ್ದರು.
ನಂಜನಗೂಡು ತಾಲೂಕಿನ ಹಲವು ದೇವಾಲಯಗಳು ತೆರವುಗೊಳಿಸುವ ಪಟ್ಟಿಯಲ್ಲಿದ್ದವು. ಆದರೆ ಅಧಿಕಾರಿಗಳು ಜನಪ್ರತಿನಿಧಿಗಳ ಜೊತೆ ಸಮಾಲೋಚನೆ ನಡೆಸದೇ ಏಕಾಏಕಿ ದೇವಾಲಯ ತೆರವುಗೊಳಿಸಿದ್ದರು.
ಸೆಪ್ಟೆಂಬರ್ 8ರ ರಾತ್ರಿ ಉಚ್ಚಗಣಿ ಮಹದೇವಮ್ಮ ದೇವಾಲಯವನ್ನು ಜೆಸಿಬಿ ಸಹಾಯದಿಂದ ತೆರವುಗೊಳಿಸಲಾಗಿತ್ತು. ದೇವಾಲಯ ತೆರವು ವಿಚಾರ ದೊಡ್ಡದಾಗುತ್ತಲೇ ತಹಶೀಲ್ದಾರ್ ತಲೆದಂಡವಾಗಲಿದೆ ಎಂಬ ಮಾತುಗಳು ಕೇಳಿ ಬಂದಿತ್ತು.
ಸೋಮವಾರ ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಸೋಮವಾರ ದೇವಾಲಯ ತೆರವುಗೊಳಿಸಿರುವ ಪ್ರದೇಶಕ್ಕೆ ಭೇಟಿ ಕೊಟ್ಟಿದ್ದರು. ದೇಗುಲ ತೆರವು ಬಳಿಕ ಶೆಡ್ನಲ್ಲಿ ಪ್ರತಿಷ್ಠಾಪನೆ ಮಾಡಿರುವ ಮೂರ್ತಿಗೆ ಸಲ್ಲಿಸಿದ್ದರು.
ಉಚ್ಚಗಣಿ ಮಹದೇವಮ್ಮ ದೇಗುಲ ತೆರವು ವಿಚಾರದಲ್ಲಿ ಗ್ರಾಮಸ್ಥರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂಬ ಆರೋಪ ಸಹ ತಹಶೀಲ್ದಾರ್ ಮೋಹನ ಕುಮಾರಿ ಮೇಲಿತ್ತು. ದೇವಾಲಯನ್ನು ತೆರವುಗೊಳಿಸಿ ಜನರ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಆಡಳಿತ ಪಕ್ಷ ಬಿಜೆಪಿಯ ನಾಯಕರೇ ಆರೋಪಗಳನ್ನು ಮಾಡಿದ್ದರು.
ಆಡಳಿತ ಪಕ್ಷದ ನಾಯಕರೇ ಈ ವಿಚಾರದಲ್ಲಿ ಧ್ವನಿ ಎತ್ತಿದ್ದು ಸರ್ಕಾರಕ್ಕೆ ಮುಖಭಂಗ ಉಂಟು ಮಾಡಿತ್ತು. ದೇವಾಲಯ ತೆರವು ಕುರಿತು ಕಾರಣ ಕೇಳಿ ಜಿಲ್ಲಾಧಿಕಾರಿ ಮತ್ತು ತಹಶೀಲ್ದಾರ್ಗೆ ನೋಟಿಸ್ ನೀಡಲಾಗಿತ್ತು.
ತಹಶೀಲ್ದಾರ್ ಸಹ ವರದಿ ಸಲ್ಲಿಕೆ ಮಾಡಿದ್ದರು. ವರದಿಗಳನ್ನು ಪರಿಶೀಲನೆ ಮಾಡಿದ ಬಳಿಕ ವರ್ಗಾವಣೆ ಆದೇಶವನ್ನು ಮಾಡಲಾಗಿದೆ. ಈ ಮೂಲಕ ಜನಪ್ರತಿನಿಧಿಗಳ, ಹಿಂದೂ ಸಂಘಟನೆಗಳ ಆಕ್ರೋಶ ತಣ್ಣಗಾಗಿಸುವ ಪ್ರಯತ್ನವನ್ನು ಸರ್ಕಾರ ಮಾಡಿದೆ.
ಉಚ್ಚಗಣಿ ಮಹದೇವಮ್ಮ ದೇಗುಲ ತೆರವು ವಿಚಾರದಲ್ಲಿ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಜಿಲ್ಲಾಡಳಿತ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ದೇಗುಲ ರಕ್ಷಣೆ ಹೆಸರಿನಲ್ಲಿ ಅಭಿಯಾನವನ್ನು ಮಾಡುವುದಾಗಿ ಎಚ್ಚರಿಕೆ ಕೊಟ್ಟಿದ್ದರು.












Click it and Unblock the Notifications