ಮೈಸೂರಿನಲ್ಲಿ ಕ್ಲಿನಿಕ್ಗಳತ್ತ ನಿಗಾ ವಹಿಸಿದ ಜಿಲ್ಲಾಡಳಿತ!
ಮೈಸೂರು, ಮೇ 29: ಜ್ವರ, ಕೆಮ್ಮು, ಶೀತ ನೆಗಡಿಯಂತಹ ಕೊರೊನಾದ ಗುಣಲಕ್ಷಣಗಳಿರುವ ರೋಗಿಗಳು ಬಂದಾಗ ಅವರನ್ನು ಕೋವಿಡ್ ತಪಾಸಣೆಗೆ ಕಳುಹಿಸಿಕೊಡದೆ ತಮ್ಮ ಕ್ಲಿನಿಕ್ಗಳಲ್ಲಿಯೇ ಕೆಲವು ಖಾಸಗಿ ವೈದ್ಯರು ಚಿಕಿತ್ಸೆ ನೀಡುತ್ತಿದ್ದು, ಇದರಿಂದ ಕೊರೊನಾ ಉಲ್ಬಣಗೊಂಡು ಕೊನೆಘಳಿಗೆಯಲ್ಲಿ ಕೋವಿಡ್ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಫಲಕಾರಿಯಾಗದೆ ಸೋಂಕಿತರು ಸಾವನ್ನಪ್ಪುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಇನ್ನೊಂದೆಡೆ ಮುಂಗಾರು ಆರಂಭದಲ್ಲಿ ಸಾಮಾನ್ಯವಾಗಿ ಶೀತ, ಜ್ವರ ಮನುಷ್ಯನಲ್ಲಿ ಈ ಹಿಂದೆ ಕಾಣಿಸಿಕೊಳ್ಳುತ್ತಿದ್ದವು. ಅವುಗಳನ್ನು ಸಂಬಂಧಿಸಿದ ಮಾತ್ರೆಗಳನ್ನು ಸೇವಿಸಿ ವಾಸಿ ಮಾಡಿಕೊಳ್ಳುತ್ತಿದ್ದರು. ಆದರೆ ಕಳೆದ ವರ್ಷದಿಂದ ಎಲ್ಲವೂ ಬದಲಾಯಿತು. ಜ್ವರ, ಕೆಮ್ಮು, ನೆಗಡಿ ಕೊರೊನಾದ ಲಕ್ಷಣಗಳಾದ್ದರಿಂದ ಜನ ಭಯ ಪಡುವಂತಾಯಿತು. ಕಳೆದ ಕೊರೊನಾ ಮೊದಲ ಅಲೆಯಲ್ಲಿ ಕೆಮ್ಮು, ನೆಗಡಿ, ಜ್ವರಕ್ಕೆ ಸಂಬಂಧಿಸಿದ ಮಾತ್ರೆಗಳನ್ನು ಔಷಧಿ ಅಂಗಡಿಗಳಲ್ಲಿ ಸಾರ್ವಜನಿಕರಿಗೆ ವೈದ್ಯರ ಚೀಟಿ ಇಲ್ಲದೆ ನೀಡದಂತೆ ಆದೇಶ ನೀಡಲಾಗಿತ್ತು.

ನಿಯಮ ಉಲ್ಲಂಘನೆಯಿಂದಲೇ ಸೋಂಕು ಉಲ್ಬಣ
ತದನಂತರ ಒಂದೊಂದಾಗಿ ಕೊರೊನಾ ನಿಯಮವನ್ನು ಸಡಿಲಿಸಿದ್ದರಿಂದ ಎರಡನೇ ಅಲೆ ವೇಳೆಗೆ ಜನ ಕೋವಿಡ್ ನಿಯಮ ಮೀರಿ ಸ್ವಚ್ಛಂದವಾಗಿ ಓಡಾಡಲಾರಂಭಿಸಿದರು. ಅದರ ಪರಿಣಾಮ ಎರಡನೇ ಅಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುವುದರೊಂದಿಗೆ ಹಲವರು ಪ್ರಾಣ ಕಳೆದುಕೊಳ್ಳುವಂತಾಯಿತು ಎಂಬುದನ್ನು ನಾವೆಲ್ಲರೂ ಒಪ್ಪಿಕೊಳ್ಳಲೇಬೇಕಾಗಿದೆ. ಜನ ಕೂಡ ಕೋವಿಡ್ ನಿಯಮವನ್ನು ಅರ್ಥೈಸಿಕೊಂಡು ಪಾಲನೆ ಮಾಡಿದರೆ ಇವತ್ತು ಇಷ್ಟೊಂದು ಕಷ್ಟ-ನಷ್ಟಗಳನ್ನು ಅನುಭವಿಸಬೇಕಾದ ಪ್ರಮೇಯವೇ ಬರುತ್ತಿರಲಿಲ್ಲವೇನೋ?

ಮೈಸೂರಿನಲ್ಲಿ ಕಡಿಮೆಯಾಗದ ಸೋಂಕು
ಈ ನಡುವೆ ಸಾಂಸ್ಕೃತಿಕ ನಗರಿ ಮೈಸೂರು, ಬೆಂಗಳೂರು ಬಳಿಕ ಕೊರೊನಾ ಡೇಂಜರ್ ಸಿಟಿಯಾಗಿ ಕಂಡು ಬರುತ್ತಿದೆ. ಪರಿಣಾಮ ಇಲ್ಲಿ ಸೋಂಕಿತರ ಸಂಖ್ಯೆ ಇಳಿಮುಖವಾದಂತೆ ಕಾಣುತ್ತಿಲ್ಲ. ಜತೆಗೆ ಮರಣದ ಪ್ರಮಾಣವೂ ಹೆಚ್ಚುತ್ತಿದೆ. ಲಾಕ್ಡೌನ್ ಮಾಡಿದರೂ ಅದರಿಂದ ಹೇಳಿಕೊಳ್ಳುವಂತಹ ಯಾವುದೇ ಉತ್ತಮ ಫಲಿತಾಂಶ ಬಂದಿಲ್ಲ. ಹೀಗಾಗಿಯೇ ಜಿಲ್ಲಾಡಳಿತ ಇದೀಗ ಸಂಪೂರ್ಣ ಲಾಕ್ಡೌನ್ಗೆ ಮುಂದಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಕಳೆದ ಬಾರಿ ಸೋಂಕಿತರ ಸಂಖ್ಯೆ ಪಟ್ಟಣ ಭಾಗದಲ್ಲಿ ಹೆಚ್ಚಾಗಿತ್ತು. ಆದರೆ ಈ ಸಲ ಹಳ್ಳಿಗಳಲ್ಲೂ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಬಹಳಷ್ಟು ಮಂದಿ ತಮ್ಮಲ್ಲಿ ಕೊರೊನಾ ಸೋಂಕಿನ ಲಕ್ಷಣಗಳಿದ್ದರೂ ತಪಾಸಣೆ ಮಾಡಿಸಿಕೊಳ್ಳದೆ ಒಂದಷ್ಟು ಮಾತ್ರೆಗಳನ್ನು ಸೇವಿಸಿಕೊಂಡು ಎಲ್ಲೆಂದರಲ್ಲಿ ಸುತ್ತಾಡುತ್ತಿರುವುದರಿಂದ ಸೋಂಕು ಉಲ್ಬಣಗೊಳ್ಳುವುದರೊಂದಿಗೆ, ಸೋಂಕು ಕೂಡ ಹರಡುತ್ತಿದೆ.

ಪರೀಕ್ಷೆಯಿಲ್ಲದೆ ಔಷಧಿ ನೀಡಿಕೆಯಿಂದ ತೊಂದರೆ
ಇನ್ನು ಗ್ರಾಮೀಣ ಭಾಗದಲ್ಲಿ ಬಹಳಷ್ಟು ಖಾಸಗಿ ಕ್ಲಿನಿಕ್ಗಳ ವೈದ್ಯರು ಕೂಡ ರೋಗಿಗಳಿಗೆ ಕೋವಿಡ್ ಪರೀಕ್ಷೆ ಮಾಡುವಂತೆ ಸಲಹೆ ನೀಡಿದರೆ ಶೀತ, ಜ್ವರಕ್ಕೆ ಔಷಧಿ ನೀಡುತ್ತಿದ್ದಾರೆ. ಕೆಲವೊಮ್ಮೆ ರೋಗಿಗೆ ಕೊರೊನಾ ಸೋಂಕು ಇದ್ದು, ಖಾಸಗಿ ವೈದ್ಯರು ನೀಡುವ ಔಷಧಿ ಸೇವಿಸಿ ಮನೆಯಲ್ಲಿಯೇ ಇರುವುದರಿಂದ ಕೆಲವು ದಿನಗಳ ನಂತರ ಸೋಂಕು ಉಲ್ಬಣಗೊಂಡು ಉಸಿರಾಟದ ಸಮಸ್ಯೆ ಹೆಚ್ಚಾಗಿ ಗಂಭೀರ ಪರಿಸ್ಥಿತಿಯಲ್ಲಿ ಕೋವಿಡ್ ಆಸ್ಪತ್ರೆಯತ್ತ ರೋಗಿಗಳು ಬರುತ್ತಿರುವುದರಿಂದ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪುವ ಸ್ಥಿತಿ ನಿರ್ಮಾಣವಾಗುತ್ತಿದೆ.

ಖಾಸಗಿ ಕ್ಲಿನಿಕ್ ಪರಿಶೀಲಿಸಿದ ಜಿಲ್ಲಾಧಿಕಾರಿ
ಇದನ್ನು ತಪ್ಪಿಸುವ ಸಲುವಾಗಿಯೇ ಮೈಸೂರು ಜಿಲ್ಲಾಡಳಿತ ಖಾಸಗಿ ಕ್ಲಿನಿಕ್ಗಳತ್ತ ನಿಗಾವಹಿಸಿದ್ದು, ತಾಲೂಕು ಅಧಿಕಾರಿಗಳು ಖಾಸಗಿ ಕ್ಲಿನಿಕ್ಗಳಿಗೆ ಪರಿಶೀಲನೆ ನಡೆಸುತ್ತಿದ್ದಾರೆ. ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಕೂಡ ತಾವು ತೆರಳುವ ಸ್ಥಳಗಳಲ್ಲಿರುವ ಖಾಸಗಿ ಕ್ಲಿನಿಕ್ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಒಂದಷ್ಟು ಸಲಹೆ ಸೂಚನೆಗಳನ್ನು ನೀಡುತ್ತಿದ್ದಾರೆ. ಈ ನಡುವೆ ಪಿರಿಯಾಪಟ್ಟಣದ ಖಾಸಗಿ ಕ್ಲಿನಿಕ್ ಲಕ್ಷ್ಮೀ ಹೆಲ್ತ್ ಕೇರ್ ಸೆಂಟರ್ಗೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ದಿಢೀರ್ ಭೇಟಿ ನೀಡಿ, ಸರ್ಕಾರದ ಕೊರೊನಾ ಮಾರ್ಗಸೂಚಿಗಳನ್ನು ಕಡ್ಡಾಯ ಪಾಲಿಸಿ ಚಿಕಿತ್ಸೆ ನೀಡುವಂತೆ ಕ್ಲಿನಿಕ್ ಮಾಲೀಕರಿಗೆ ಎಚ್ಚರಿಕೆ ನೀಡುವ ಮೂಲಕ ಇತರೆ ಖಾಸಗಿ ಕ್ಲಿನಿಕ್ಗಳಿಗೆ ಎಚ್ಚರಿಕೆಯನ್ನು ರವಾನಿಸಿದ್ದಾರೆ.

ಸ್ವಚ್ಛತೆಗೆ ಆದ್ಯತೆ ನೀಡಲು ಸಲಹೆ
ಕ್ಲಿನಿಕ್ಗಳಲ್ಲಿ ಮೆಡಿಕಲ್ ತ್ಯಾಜ್ಯ ವಿಲೇವಾರಿಗೆ ಸೂಕ್ತ ವ್ಯವಸ್ಥೆ ಮಾಡಿಕೊಂಡು ಸ್ವಚ್ಛತೆಗೆ ಆದ್ಯತೆ ನೀಡಬೇಕು. ಕ್ಲಿನಿಕ್ನಲ್ಲಿ ಕೊರೊನಾ ಸೋಂಕಿತರು ಚಿಕಿತ್ಸೆ ಪಡೆದು, ನಂತರ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗುತ್ತಿರುವ ಸಂಖ್ಯೆ ಹೆಚ್ಚುತ್ತಿದೆ. ಸಾರ್ವಜನಿಕ ಆಸ್ಪತ್ರೆಯಲ್ಲಿ ಅಂತವರು ಮೃತಪಟ್ಟರೆ ಕ್ಲಿನಿಕ್ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು, ಕೊರೊನಾ ಸೋಂಕು ತಗ್ಗಿಸಲು ತಾಲೂಕು ಆಡಳಿತ ಮತ್ತು ಆರೋಗ್ಯ ಇಲಾಖೆಯೊಂದಿಗೆ ಸಹಕರಿಸುವಂತೆಯೂ ಅವರು ಮನವಿ ಮಾಡಿದ್ದಾರೆ.












Click it and Unblock the Notifications