ಮೈಸೂರು ದಸರಾ; ಉತ್ಸವದ ಸಿದ್ಧತೆಗೆ ಉಪಸಮಿತಿಗಳ ರಚನೆ
ಮೈಸೂರು, ಸೆಪ್ಟೆಂಬರ್ 23: ಕೊರೊನಾ ಸೋಂಕಿನ ಕಾರಣದಿಂದ ಈ ಬಾರಿ ಸರಳ ಮತ್ತು ಸಾಂಪ್ರದಾಯಿಕ ದಸರಾ ಆಚರಣೆಗೆ ಸರ್ಕಾರ ತೀರ್ಮಾನಿಸಿದ್ದು, ನಾಡಹಬ್ಬ ದಸರಾ ಮಹೋತ್ಸವಕ್ಕೆ ಸಿದ್ಧತೆ ಆರಂಭವಾಗಿದೆ. ಉತ್ಸವದ ಕುರಿತ ಸಿದ್ಧತೆಗೆ ದಸರಾ ಉಪಸಮಿತಿಗಳನ್ನು ರಚನೆ ಮಾಡಲಾಗಿದೆ. ಈ ಕುರಿತು ಇಂದು ಮೈಸೂರು ಜಿಲ್ಲಾಧಿಕಾರಿ ಶರತ್ ಅವರು ಮಾಹಿತಿ ನೀಡಿದ್ದಾರೆ.
ಕೊರೊನಾ ಸೋಂಕಿನ ಕಾರಣದಿಂದಾಗಿ ಪ್ರಸಿದ್ಧ ದಸರಾ ಮಹೋತ್ಸವನ್ನು ಈ ಬಾರಿ ಸರಳವಾಗಿ, ಹಾಗೆಯೇ ಸಾಂಪ್ರದಾಯಿಕವಾಗಿ ಆಚರಿಸಬೇಕಾಗಿದೆ. ಅದಕ್ಕಾಗಿ ಈಗಾಗಲೇ ಸಿಎಂ ನೇತೃತ್ವದಲ್ಲಿ ದಸರಾ ಉನ್ನತ ಮಟ್ಟ ಸಭೆಯನ್ನು ನಡೆಸಲಾಗಿದೆ. ಇದೀಗ ದಸರಾ ಉಪಸಮಿತಿಗಳನ್ನು ರಚನೆ ಮಾಡಲಾಗಿದೆ ಎಂದು ತಿಳಿಸಿದರು.
ಸರಳ ದಸರಾ ಆಚರಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ: ಮೈಸೂರು ಉಸ್ತುವಾರಿ ಸಚಿವ
ದಸರಾ ಉತ್ಸವಕ್ಕೆ ಸಂಬಂಧಿಸಿದಂತೆ ಸ್ವಾಗತ ಮತ್ತು ಆಮಂತ್ರಣ ಸಮಿತಿ, ದೀಪಾಲಂಕಾರ ಸಮಿತಿ, ಸ್ವಚ್ಛತೆ ಮತ್ತು ವ್ಯವಸ್ಥೆ ಸಮಿತಿ, ಸ್ತಬ್ಧ ಚಿತ್ರ ಸಮಿತಿ, ಮೆರವಣಿಗೆ ಸಮಿತಿ, ಸಾಂಸ್ಕೃತಿಕ ದಸರಾ ಸಮಿತಿಗಳನ್ನು ರಚನೆ ಮಾಡಲಾಗಿದ್ದು, ಉಪಸಮಿತಿಗಳ ಉಪ ವಿಶೇಷಾಧಿಕಾರಿ, ಕಾರ್ಯದರ್ಶಿ ಮತ್ತು ಸಮಿತಿ ಸದಸ್ಯರನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ. ಸ್ವಾಗತ ಮತ್ತು ಆಮಂತ್ರಣ ಉಪ ಸಮಿತಿಯ ವಿಶೇಷ ಅಧಿಕಾರಿಯಾಗಿ ಅಪರ ಜಿಲ್ಲಾಧಿಕಾರಿ ಮಂಜುನಾಥ್, ಕಾರ್ಯಾಧ್ಯಕ್ಷರಾಗಿ ಎಂಸಿಸಿ ಹೆಚ್ಚುವರಿ ಆಯುಕ್ತ ಶಶಿಕುಮಾರ್, ಕಾರ್ಯದರ್ಶಿಯಾಗಿ ಎಂಸಿಸಿ ವಲಯ ಆಯುಕ್ತ ಕುಬೇರಪ್ಪ ಅವರನ್ನು ನೇಮಕ ಮಾಡಲಾಗಿದೆ.
ದೀಪಾಲಂಕಾರ ಸಮಿತಿಗೆ ಉಪ ವಿಶೇಷಾಧಿಕಾರಿಯಾಗಿ ಚೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮನೋಹರ್, ಕಾರ್ಯಧ್ಯಕ್ಷರಾಗಿ ಅಧೀಕ್ಷಕ ಇಂಜಿನಿಯರ್ ಮುನಿಗೋಪಾಲ್ ರಾಜ್, ಕಾರ್ಯದರ್ಶಿಯಾಗಿ ಚೆಸ್ಕಾಂ ಕಾರ್ಯಪಾಲಕ ಇಂಜಿನಿಯರ್ ಯೋಗೇಶ್ ಡಿ.ಕೆ ಅವರನ್ನು ನೇಮಿಸಲಾಗಿದೆ. ಸ್ವಚ್ಛತೆ ಸಮಿತಿಯ ವಿಶೇಷಾಧಿಕಾರಿಯಾಗಿ ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ, ಕಾರ್ಯಾಧ್ಯಕ್ಷರಾಗಿ ಪಾಲಿಕೆ ಆರೋಗ್ಯಾಧಿಕಾರಿ ಡಾ.ಜಯಂತ್, ಕಾರ್ಯಾಧ್ಯಕ್ಷರಾಗಿ ಆರೋಗ್ಯಾಧಿಕಾರಿ ಡಾ.ನಾಗರಾಜ್ ಅವರನ್ನು ನೇಮಿಸಲಾಗಿದೆ.
ಸ್ತಬ್ಧ ಚಿತ್ರ ಉಪಸಮಿತಿ ವಿಶೇಷಾಧಿಕಾರಿಯಾಗಿ ಜಿಲ್ಲಾ ಪಂಚಾಯತ್ ಮುಖ್ಯಯೋಜನಾಧಿಕಾರಿ ಪಾಂಡೆ, ಕಾರ್ಯಾಧ್ಯಕ್ಷರಾಗಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕ ಡಿ.ಕೆ ಲಿಂಗರಾಜು, ಕಾರ್ಯದರ್ಶಿಯಾಗಿ ಖಾದಿ ಮತ್ತು ಗ್ರಾಮೋದ್ಯೋಗ ಮತ್ತು ಕೈಗಾರಿಕೆ ಇಲಾಖೆಯ ಉಪನಿರ್ದೇಶಕರಾದ ಮೇಘಳ ಅವರನ್ನು ನೇಮಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.