ಮೈಸೂರು ದಸರಾ ಕವಿಗೋಷ್ಠಿ: ಹೆಚ್ಚು ಚಪ್ಪಾಳೆ ಗಿಟ್ಟಿಸಿಕೊಂಡವರು ಯಾರು?
ಮೈಸೂರು, ಅಕ್ಟೋಬರ್. 14 :ಎಂದಿನಂತೆ ದಸರಾ ಉಪ ಸಮಿತಿ ವತಿಯಿಂದ ರಾಣಿಬಹದ್ದೂರ್ ಸಭಾಂಗಣದಲ್ಲಿ ನಡೆದ ದಸರಾ ಕವಿಗೋಷ್ಠಿಯಲ್ಲಿ ಭಿನ್ನ ಭಿನ್ನ ದನಿಗಳು ವ್ಯಕ್ತವಾಗಿದ್ದು,
ಮಹಿಳೆಯರು ಅದ್ಭುತ ಕವಿತೆಗಳನ್ನು ವಾಚಿಸಿದರು.
"ಕಾವ್ಯ... ಅನೇಕ ರೂಪಕಗಳ ಮೂಲಕ ಹುಟ್ಟುತ್ತದೆ, ಮನುಷ್ಯತ್ವದ ಬಗ್ಗೆ ಮಾತನಾಡುತ್ತದೆ. ಸೃಜನಶೀಲ ಸೃಷ್ಟಿ ಮಾತ್ರ ಕಾವ್ಯವಲ್ಲ. ಆ ಹೊತ್ತಿನ ತಲ್ಲಣಗಳಿಗೆ ಅದು ದಿವ್ಯ ಔಷಧ. ಕಾವ್ಯಕ್ಕೆ ಜವಾಬ್ದಾರಿ ಇದೆ. ಆದರೆ, ಇಂದಿನ ಬರಹ ಕತ್ತಿ ಅಲುಗಿನ ನಡಿಗೆಯಾಗಿದೆ. ಸೋಷಿಯಲ್ ಮಿಡಿಯಾದಲ್ಲಿನ ತಕ್ಷಣದ ಪತಿಕ್ರಿಯೆಯನ್ನು ನಾವು ಪರಿಗಣಿಸಬೇಕಿದೆ" ಎಂದರು ನೆರೆದ ಕವಿಗಳು.
ಸಾಹಿತಿ ಶೂದ್ರ ಶ್ರೀನಿವಾಸ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಕಾವ್ಯಾಸಕ್ತಿಯಿಂದ ಆರೋಗ್ಯಪೂರ್ಣ ಸಮಾಜ, ಚಿಂತನೆ ಸಾಧ್ಯ. ಕಾವ್ಯದ ಬಗ್ಗೆ ಆಸಕ್ತಿ ಬೆಳೆಸಿಕೊಂಡವರು ಸಾಹಿತ್ಯ, ಸಂಸ್ಕೃತಿ ಬಗ್ಗೆ ಆರೋಗ್ಯ ಪೂರ್ಣ ಮನಸ್ಥಿತಿ ಹೊಂದಿರುತ್ತಾರೆ. ಕಾವ್ಯಾಸಕ್ತಿಯಿಂದ ಮಾನಸಿಕ ಚಿಂತನೆ ಮತ್ತು ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಕವಿ ಎಚ್.ಎನ್.ಈಶಕುಮಾರ್ ಅವರು ಸರಿಸುಮಾರು ಮಾನವರಾಗದೇ!' ಶೀರ್ಷಿಕೆ ಬಗ್ಗೆ ವಾಚಿಸಿ ಮಾನವ ಪ್ರೀತಿಯ ಪಾಠ ಮಾಡಿದರು.
ಕವಿ ಗೋವಿಂದಸ್ವಾಮಿ ಗುಂಡಾಪುರ ಅವರು ಪ್ರೀತಿಸ ಬೇಡ ಗೆಳೆಯ' ಈ ಕವಿತೆಯ ಮೂಲಕ ಮರ್ಯಾದೆಗೇಡು ಹತ್ಯೆಯನ್ನು ಖಂಡಿಸಿದರು.
ಸದ್ಯ ದೇಶದಾದ್ಯಂತ ಸುದ್ದಿಯಾಗಿರುವ ಮೀ ಟೂ ಕುರಿತು ನಿರ್ಮಲಾ ಯಲಿಗಾರ ಅವರು ಓದಿದ ಕವಿತೆ ಗಮನ ಸೆಳೆಯಿತು. ಡಾ.ರೇಷ್ಮಾ ರಮೇಶ್ ಅವರು ಸ್ವಚ್ಛ ಭಾರತಕ್ಕೆ ಸಂಬಂಧಿಸಿದಂತೆ 'ದಯವಿಟ್ಟು ಇಲ್ಲಿ ಮೂತ್ರ ವಿಸರ್ಜನೆ ಮಾಡಿ' ಎನ್ನುವ ಕವಿತೆ ಓದಿ ಹೆಚ್ಚು ಚಪ್ಪಾಳೆ ಗಿಟ್ಟಿಸಿಕೊಂಡರು.
ಜತೆಗೆ ಕಾ.ಹು.ಚಾನ್ ಪಾಷಾ, ಎನ್.ಎಸ್.ಚಾಂದ್ ಪಾಷಾ ಹಾಗೂ ಕೆ.ಆರ್.ಸೌಮ್ಯಾ ಅವರು ಸೀತೆ ಕುರಿತ ವಾಚಿಸಿದ ಕವಿತೆಗಳು ಮನಸ್ಸನ್ನು ಹಿಡಿದಿಟ್ಟವು.

ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಯುವ ಕವಿಗೋಷ್ಠಿಯಲ್ಲಿ 31 ಕವಿಗಳಲ್ಲಿ ಕೆಲವರಷ್ಟೇ ಗಂಭೀರ ಪದ್ಯಗಳನ್ನು ಮಂಡಿಸಿದರೆ, ಉಳಿದವರು ಕವಿತೆಯ ಮೊದಲ ಸಾಲನ್ನೇ ಪುನರಾವರ್ತಿಸಿದರು. ಕೆಲವರು ವಾಚ್ಯವಾಗಿ, ಘೋಷಣಾ ವಾಕ್ಯಗಳನ್ನೇ ಕವಿತೆಗಳೆಂದು ವಾಚಿಸಿದರು. ಜೊತೆಗೆ ಹೆಣ್ಣಿನ ಸಮಸ್ಯೆಗಳು, ನೋವು, ತವಕ- ತಲ್ಲಣಗಳನ್ನು ಬಿಚ್ಚಿಟ್ಟರು.












Click it and Unblock the Notifications