Breaking: ಭವಿಷ್ಯದ ಅಂಬಾರಿ ಆನೆ ಗೋಪಾಲಸ್ವಾಮಿ ಕಾದಾಟದಲ್ಲಿ ಸಾವು
ಮೈಸೂರು, ನವೆಂಬರ್ 23: ಭವಿಷ್ಯದ ಅಂಬಾರಿ ಹೊರುವ ಆನೆಗಳಲ್ಲಿ ಒಂದಾಗಿ ಗುರುತಿಸಿಕೊಂಡಿದ್ದ ಗೋಪಾಲಸ್ವಾಮಿ ಆನೆ ಕಾಡಾನೆಗಳ ಕಾದಾಟದಲ್ಲಿ ಮೃತಪಟ್ಟಿದೆ.
ಹುಣಸೂರು ತಾಲೂಕಿನ ಹನಗೋಡಿಗೆ ಸಮೀಪದ ಕೊಳುವಿಗೆ ಬಳಿ ಈ ಘಟನೆ ನಡೆದಿದೆ. ಇತ್ತೀಚೆಗೆ ಮುಗಿದ ದಸರಾ ಮಹೋತ್ಸವದಲ್ಲಿ ಗೋಪಾಲಸ್ವಾಮಿ ಭಾಗವಹಿಸಿತ್ತು. ಅಲ್ಲದೆ, ಜಂಬೂಸವಾರಿಯಲ್ಲೂ ಹೆಜ್ಜೆ ಹಾಕಿತ್ತು. ಆದರೆ, ಇದೀಗ ಕಾಡಾನೆಗಳ ಕಾದಾಟದಲ್ಲಿ ಮೃತಪಟ್ಟಿರುವುದು ವನ್ಯಜೀವಿ ಪ್ರೇಮಿಗಳಲ್ಲಿ ಬೇಸರ ಮೂಡಿಸಿದೆ.
ಸಫಾರಿ ರೈಡ್ ಸೀಟು ಹಂಚಿಕೆ ತಾರತಮ್ಯ: ಹೈಕೋರ್ಟ್ ಮೊರೆ ಹೋದ ಖಾಸಗಿ ರೆಸಾರ್ಟ್ಸ್
ಹುಣಸೂರು ತಾಲೂಕಿನ ಮತ್ತಿಗೋಡು ಶಿಬಿರದಲ್ಲಿದ್ದ ಗೋಪಾಲಸ್ವಾಮಿ ದಸರಾದಲ್ಲಿ ಭಾಗವಹಿಸಿದ್ದ ಆನೆಗಳಲ್ಲೆ ಅತ್ಯಂತ ಬಲಿಷ್ಠ ಆನೆಗಳಲ್ಲಿ ಒಂದಾಗಿತ್ತು. ಬರೋಬ್ಬರಿ 5140 ತೂಕ ಇದ್ದ ಗೋಪಾಲನನ್ನ ಹುಲಿ ಹಾಗೂ ಆನೆ ಹಿಡಿಯುವ ಕಾರ್ಯಾಚರಣೆಯಲ್ಲೂ ಭಾಗವಹಿಸಿದ್ದನು.
ಇತ್ತೀಚೆಗೆ ಸೆರೆ ಹಿಡಿಯಲಾಗಿದ್ದ ಅಯ್ಯಪ್ಪ ಎಂಬ ಕಾಡಾನೆ ಜೊತೆ ಕಾದಾಡಿ ಗೋಪಾಲಸ್ವಾಮಿ ಮೃತಪಟ್ಟಿದೆ. 41 ವರ್ಷದ ಗೋಪಾಲಸ್ವಾಮಿ ಮಸ್ತಿಯಲ್ಲಿತ್ತು ಎನ್ನಲಾಗಿದ್ದು, ವೈದ್ಯರು ಪ್ರಯತ್ನ ಪಟ್ಟರೂ ಚಿಕಿತ್ಸೆ ಫಲಕಾರಿಯಾಗಲಿಲ್ಲ. ಅಂದಹಾಗೆ ಗೋಪಾಲಸ್ವಾಮಿ ಆನೆಯನ್ನು ಹಾಸನ ಜಿಲ್ಲೆಯ ಸಕಲೇಪುರದ ಕಾರೆಕೊಪ್ಪಿ ಅರಣ್ಯದಲ್ಲಿ ಸೆರೆಹಿಡಿಯಲಾಗಿತ್ತು.
ಅಯ್ಯಪ್ಪ ಆನೆಗೆ ಜೊತೆಗಿನ ಕಾದಾಟದಲ್ಲಿ ಗೋಪಾಲಸ್ವಾಮಿ ಕಾಲು, ಹೊಟ್ಟೆ ಭಾಗಕ್ಕೆ ಗಂಭೀರ ಗಾಯವಾಗಿದ್ದವು. ನಾಲ್ಕು ವೈದ್ಯರ ತಂಡದಿಂದ ಚಿಕಿತ್ಸೆ ಕೊಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಆನೆ ಮೃತಪಟ್ಟಿದೆ ಎಂದು ಡಿಸಿಎಫ್ ಹರ್ಷಕುಮಾರ್ ತಿಳಿಸಿದ್ದಾರೆ.
ಶಾಂತಸ್ವಾಭಾವದ ಗೋಪಾಲಸ್ವಾಮಿ ಆನೆ ಈ ಬಾರಿಯ ದಸರಾದಲ್ಲಿ ಮರದ ಅಂಬಾರಿ ಹೊತ್ತು ಗಮನ ಸೆಳೆದಿತ್ತು. ಕಳೆದ ವರ್ಷ ಶ್ರೀರಂಗಪಟ್ಟಣದ ದಸರಾ ಮಹೋತ್ಸವ ಉದ್ಘಾಟನೆ ವೇಳೆ ಜನದಟ್ಟಣೆ, ಪಟಾಕಿ ಶಬ್ದದಿಂದ ವಿಚಲಿತನಾಗಿದ್ದನು. ಮೈಸೂರು ಜಂಬೂಸವಾರಿಯಲ್ಲಿ ಸಾಲಾನೆಯಾಗಿತ್ತು.