ಮೈಸೂರು; ಅಘೋಷಿತ ಬಂದ್, ಪ್ರಮುಖ ರಸ್ತೆಗಳ ಅಂಗಡಿಗೆ ಬೀಗ
ಮೈಸೂರು, ಏಪ್ರಿಲ್ 22; ರಾಜ್ಯದಲ್ಲಿ ಕೊರೊನಾ ಸೋಂಕಿತರ ಪ್ರಕರಣಗಳ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಕಠಿಣ ನಿಯಮ ಜಾರಿಗೊಳಿಸಲಾಗಿದೆ. ಪರಿಣಾಮ ಮೈಸೂರಿನಲ್ಲಿ ಅಂಗಡಿಗಳನ್ನು ಬಂದ್ ಮಾಡಿಸಲಾಗಿದೆ.
ಮೈಸೂರಿನ ಪ್ರಮುಖ ರಸ್ತೆಗಳ ಅಂಗಡಿಗಳನ್ನು ಏಕಾಏಕಿ ಬಂದ್ ಮಾಡಿಸಲಾಗುತ್ತಿದೆ. ಮೈಸೂರಿನಲ್ಲಿ ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿದೆ. ಹೋಟೆಲ್, ಬೇಕರಿ ಸೇರಿದಂತೆ ದಿನಬಳಕೆ ವಸ್ತು, ದಿನಸಿ ಅಂಗಡಿಗಳನ್ನು ಹೊರತುಪಡಿಸಿ ಉಳಿದಂತೆ ಎಲ್ಲಾ ವಾಣಿಜ್ಯ ಸಂಬಂಧಿ ಅಂಗಡಿಗಳನ್ನು ನಗರದಲ್ಲಿ ಬಂದ್ ಮಾಡಿಸಲಾಯಿತು.
ಏಕಾಏಕಿ ಅಂಗಡಿಗಳನ್ನು ಬಂದ್ ಮಾಡಿಸುತ್ತಿರುವ ಕ್ರಮಕ್ಕೆ ಮಾಲೀಕರು ವಿರೋಧ ವ್ಯಕ್ತಪಡಿಸಿದ್ದು, ಸರ್ಕಾರದ ಕ್ರಮದ ಬಗ್ಗೆ ಆಕ್ರೋಶ ಹೊರ ಹಾಕಿದ್ದಾರೆ. ಏಕಾಏಕಿ ಬಂದ್ ಮಾಡಿ ಅಂದರೆ ಹೇಗೆ ಸಾಧ್ಯ?. ಸರ್ಕಾರ ಎಲ್ಲರಲ್ಲೂ ಗೊಂದಲ ಸೃಷ್ಟಿ ಮಾಡುತ್ತಿದೆ. ಬಟ್ಟೆ ವ್ಯಾಪಾರಿಗಳು, ಜ್ಯೂವೆಲರಿ ವ್ಯಾಪಾರಸ್ಥರು ಬಂದ್ ಮಾಡಿದರೆ ಮಾತ್ರ ಕೊರೊನಾ ಹೋಗುತ್ತದೆಯೇ? ಎಂದು ಪ್ರಶ್ನಿಸಿದರು.

ಬೇರೆ ವ್ಯಾಪಾರ ಚಟುವಟಿಕೆ ಸಮಯ ನಿಗದಿ ಮಾಡಿದ ಹಾಗೇ ನಮಗೂ ಟೈಮ್ ನಿಗದಿ ಮಾಡಿ. ನೂರಾರು ದಿನಗೂಲಿ ನೌಕರರು ನಮ್ಮನ್ನೇ ನಂಬಿಕೆ ಜೀವನ ಮಾಡುತ್ತಿದ್ದಾರೆ. ಅವರು ಎಲ್ಲಿಗೆ ಹೋಗಬೇಕು?, ಇಲ್ಲಾ ಮೈಸೂರನ್ನ ಸಂಪೂರ್ಣ ಲಾಕ್ ಡೌನ್ ಮಾಡಿ. ಒಬ್ಬರಿಗೊಂದು ನಿಯಮ ಯಾಕೆ ಮಾಡುತ್ತೀರಿ? ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕೋವಿಡ್ ಹರಡುವಿಕೆ ತಡೆಯಲು ರಾಜ್ಯಾದ್ಯಂತ ಟಫ್ ರೂಲ್ಸ್ ಜಾರಿಗೊಳಿಸಿರುವ ಪರಿಣಾಮ ಮೈಸೂರಿನಲ್ಲಿ ಅಂಗಡಿಗಳನ್ನು ಬಂದ್ ಮಾಡಿಸಲಾಗಿದೆ.#Mysuru #Lockdown #CoronaSecondWave pic.twitter.com/QjIrUtyfWr
— oneindiakannada (@OneindiaKannada) April 22, 2021
ಈ ನಡುವೆ ಮೈಸೂರಿನಲ್ಲಿ ಅಂಗಡಿಗಳನ್ನು ಬಂದ್ ಮಾಡಿರುವ ಬಗ್ಗೆ ಮಾತನಾಡಿದ ಡಿಸಿಪಿ ಪ್ರಕಾಶ್ ಗೌಡ, "ಮೈಸೂರಿನಲ್ಲಿ ಮೇ 4ರ ವರಗೆ ಅಗತ್ಯ ಸೇವೆಗಳನ್ನ ಬಿಟ್ಟು ಉಳಿದೆಲ್ಲ ಅಂಗಡಿಗಳು ಬಂದ್ ಮಾಡಲಾಗಿದೆ. ಕೋವಿಡ್ ಹೆಚ್ಚಳವಾಗುತ್ತಿರುವ ಹಿನ್ನೆಲೆ ಮೇ 4ರವರಗೆ ಸ್ವಯಂ ಪ್ರೇರಿತವಾಗಿ ಅಂಗಡಿಗಳನ್ನು ಬಂದ್ ಮಾಡುವಂತೆ ವ್ಯಾಪಾರಿಗಳಿಗೆ ಪೊಲೀಸ್ ಇಲಾಖೆಯಿಂದ ಸೂಚನೆ ನೀಡಲಾಗಿದೆ" ಎಂದರು.
ಪೊಲೀಸ್ ಇಲಾಖೆಯ ಮನವಿ ಹಿನ್ನಲೆಯಲ್ಲಿ ಮೈಸೂರಿನ ಕಮರ್ಷಿಯಲ್ ಸ್ಟ್ರೀಟ್ನ ಬಹುತೇಕ ಅಂಗಡಿಗಳು ಬಂದ್ ಆಗಿವೆ. ಶುಕ್ರವಾರದಿಂದ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿರಲಿದೆ. ಮೆಡಿಕಲ್, ಮಾಂಸದಂಗಡಿ, ತರಕಾರಿ, ಹಣ್ಣು ಖರೀದಿಸುವವರಿಗೆ ಮಾತ್ರ ಬೆಳಗ್ಗೆ 6ರಿಂದ 10 ಗಂಟೆಯವರೆಗೆ ಕಾಲಾವಕಾಶ ನೀಡಲಾಗಿದೆ. ಮಾಂಸ ಮಾರಾಟಗಾರರು ಅಗತ್ಯಕ್ಕೂ ಹೆಚ್ಚು ಮಾಂಸ ಮಾರಾಟಕ್ಕೆ ಮುಂದಾಗಬಾರದು ಎಂದು ಸೂಚಿಸಲಾಗಿದೆ.
ಕೇವಲ ನಿಗದಿತ ಸಮಯಕ್ಕೆ ಆಗುವಷ್ಟು ಮಾಂಸ ಮಾರಾಟ ಮಾಡಬೇಕು. ಅನಗತ್ಯ ಮಾಂಸ ಮಾರಾಟ ಮಾಡುವ ಮೂಲಕ ನಷ್ಟ ಅನುಭವಿಸದಿರಿ. ಹೇರ್ ಸಲೂನ್, ಬ್ಯುಟಿ ಪಾರ್ಲರ್ ಗಳು ವೀಕೆಂಡ್ ಕರ್ಫ್ಯೂ ನಲ್ಲಿ ಕಾರ್ಯನಿರ್ವಹಿಸುವಂತಿಲ್ಲ. ಬಾರ್, ರೆಸ್ಟೋರೆಂಟ್, ಹೋಟೆಲ್ ಗಳಲ್ಲಿ ಪರ್ಸಲ್ ಕಡ್ಡಾಯ ಎಂದು ಡಿಸಿಪಿ ಪ್ರಕಾಶ್ ಗೌಡ ಹೇಳಿದರು.












Click it and Unblock the Notifications