ಎಸ್ಕೇಪ್ ಆಗಲು ಮೈಸೂರು ಡಿಸಿ ನಂಬರ್ ಕೊಟ್ಟು ಯಾಮಾರಿಸಿದ ಸೋಂಕಿತ
ಮೈಸೂರು, ಜುಲೈ 25: ಕೊರೊನಾ ಸೋಂಕಿನ ಪರೀಕ್ಷೆ ವೇಳೆ ಮಾಹಿತಿಗಾಗಿ ತನ್ನ ನಂಬರ್ ಬದಲು ಜಿಲ್ಲಾಧಿಕಾರಿ ನಂಬರ್ ಕೊಟ್ಟು ಕೋವಿಡ್ ಸೋಂಕಿತನೊಬ್ಬ ಅಧಿಕಾರಿಗಳನ್ನು ಯಾಮಾರಿಸಿದ ಘಟನೆ ನಗರದಲ್ಲಿ ನಡೆದಿದೆ.
Recommended Video
ಹೆಬ್ಬಾಳದ ನಿವಾಸಿಯಲ್ಲಿ ಕೊರೊನಾ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿದ್ದರಿಂದ ಮೂಗು ಮತ್ತು ಗಂಟಲು ದ್ರವ ಸಂಗ್ರಹ ಕೇಂದ್ರದಲ್ಲಿ ಕೋವಿಡ್ ಪರೀಕ್ಷೆಗೆ ಒಳಗಾಗಿದ್ದ. ಈ ವೇಳೆ ವ್ಯಕ್ತಿಯ ವಿಳಾಸ, ಮೊಬೈಲ್ ನಂಬರ್ ಇನ್ನಿತರೆ ಮಾಹಿತಿಯನ್ನು ಕೇಳಲಾಗಿದೆ. ಈ ಸಂದರ್ಭದಲ್ಲಿ ಆತ ತನ್ನ ನಂಬರ್ ನೀಡುವ ಬದಲಿಗೆ ಜಿಲ್ಲಾಧಿಕಾರಿಯ ಮೊಬೈಲ್ ನಂಬರ್ ಅನ್ನು ಕೊಟ್ಟಿದ್ದಾನೆ.

ವರದಿಯಲ್ಲಿ ಕೊರೊನಾ ದೃಢ
ಈತನ ಪರೀಕ್ಷೆ ನಡೆಸಿದ್ದು, ಆ ಪರೀಕ್ಷೆಯ ವರದಿಯಲ್ಲಿ ಆತನಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ತಕ್ಷಣವೇ ಅಧಿಕಾರಿಗಳು ಆತ ನೀಡಿದ್ದ ನಂಬರ್ ಗೆ ಕರೆ ಮಾಡಿ ಸಂಪರ್ಕಿಸಿದ್ದಾರೆ. ಆದರೆ ಆ ಕರೆ ತೆಗೆದುಕೊಂಡು ಜಿಲ್ಲಾಧಿಕಾರಿ ಅಭಿರಾಂ ಜಿ ಶಂಕರ್ ಅವರು ಉತ್ತರಿಸಿದ ನಂತರವೇ ಅಧಿಕಾರಿಗಳಿಗೆ ನಿಜಾಂಶ ತಿಳಿದದ್ದು.

ಜಿಲ್ಲಾಧಿಕಾರಿ ಅಭಿರಾಂ ಉತ್ತರ...
ಈ ಸಂಬಂಧ ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಪ್ರತಿಕ್ರಿಯಿಸಿ, ಕಂಟ್ರೋಲ್ ರೂಂ ನಿಂದ ಕರೆ ಮಾಡಿ "ಸರ್ ನಿಮಗೆ ಕೊರೊನಾ ಪಾಸಿಟಿವ್ ಬಂದಿದೆ. ಕ್ವಾರಂಟೈನ್ ಗೆ ಒಳಗಾಗಿʼ ಎಂದು ಹೇಳಿದ್ದನ್ನು ಕೇಳಿ ಆಶ್ಚರ್ಯ ಆಯಿತು. ನಾನು ಜಿಲ್ಲಾಧಿಕಾರಿ ಮಾತನಾಡುತ್ತಿರುವುದು ಎಂದು ನಂತರ ಅಧಿಕಾರಿಗೆ ತಿಳಿಸಿದೆ. ಮಾಹಿತಿ ಸಂಗ್ರಹಿಸುವ ವೇಳೆ ಆ ವ್ಯಕ್ತಿ ನನ್ನ ನಂಬರ್ ಕೊಟ್ಟಿರುವುದಾಗಿ ಅಧಿಕಾರಿ ತಿಳಿಸಿದರು" ಎಂದರು

ಮನವಿ ಮಾಡಿದ ಜಿಲ್ಲಾಧಿಕಾರಿ
ಕ್ವಾರಂಟೈನ್ ಗೆ ಒಳಗಾಗುವುದು ಮತ್ತು ಆಸ್ಪತ್ರೆಗೆ ದಾಖಲಾಗುವುದರಿಂದ ತಪ್ಪಿಸಿಕೊಳ್ಳಲು ಕೆಲವರು ಏನೆಲ್ಲಾ ದಾರಿ ತಪ್ಪಿಸುವ ಕೆಲಸ ಮಾಡುತ್ತಾರೆ ಎಂಬುದನ್ನು ಅರಿತು ಒಂದು ಕ್ಷಣ ನನಗೆ ಅಚ್ಚರಿಯಾಯಿತು. ಜೊತೆಗೆ ನಗು ಬಂತು ಎಂದು ಹೇಳಿದ್ದಾರೆ. ʻಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟಲು ಜನರು ಸಹಕರಿಸಬೇಕು, ಸೂಕ್ತ ಮಾಹಿತಿ ನೀಡಬೇಕುʼ ಎಂದು ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.

ಸಹಕಾರ ನೀಡಿ ಎಂದು ಕೋರಿದ ಡಿಸಿ
ʻಒಂದು ವೇಳೆ ವ್ಯಕ್ತಿಯನ್ನು ಸಂಪರ್ಕಿಸುವ ಮಾಹಿತಿ ತಪ್ಪಿದ್ದರೆ, ಕೊರೊನಾ ಸೋಂಕಿತರು ಮತ್ತು ಅವರ ಪ್ರಾಥಮಿಕ, ಸೆಕೆಂಡರಿ ಸಂಪರ್ಕದಲ್ಲಿದ್ದವರನ್ನು ಗುರುತಿಸುವುದು ತುಂಬಾ ಕಷ್ಟ. ದಾರಿ ತಪ್ಪಿಸುವ ಕೆಲಸ ಬಿಟ್ಟು ಕೋವಿಡ್ ಸೋಂಕಿನ ವಿರುದ್ಧದ ಹೋರಾಟದಲ್ಲಿ ಜಿಲ್ಲಾಡಳಿತಕ್ಕೆ ಸಹಕಾರ ನೀಡಿʼ ಎಂದು ಜಿಲ್ಲಾಧಿಕಾರಿ ಕೋರಿಕೊಂಡಿದ್ದಾರೆ.












Click it and Unblock the Notifications