ದಸರಾ ಜಂಬೂಸವಾರಿ: ಬಣ್ಣಗಳ ಚಿತ್ತಾರದಿಂದ ಕಂಗೊಳಿಸುತ್ತಿರುವ ಗಜಪಡೆ
ಮೈಸೂರು, ಅಕ್ಟೋಬರ್ 26: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಜಂಬೂಸವಾರಿ ಮೆರವಣಿಗೆಗೆ ಕ್ಷಣಗಣನೆ ಶುರುವಾಗಿದೆ.
ಜಂಬೂಸವಾರಿಯ ಪ್ರಮುಖ ಆಕರ್ಷಣೆಯಾದ ಗಜಪಡೆ ಮೆರವಣಿಗೆಗೆ ಸಿದ್ಧಗೊಳ್ಳುತ್ತಿದೆ. ಅರಮನೆ ಆವರಣದಲ್ಲಿ ವೃತ್ತಾಕಾರದ ಮಜ್ಜನ ಜಾಗದಲ್ಲಿ ಆನೆಗಳಿಗೆ ಸ್ನಾನ ಮಾಡಿಸಿ ಸಿಂಗರಿಸಲಾಗುತ್ತಿದೆ.
ಈ ಬಾರಿಯ ಸರಳ ದಸರಾ ಜಂಬೂಸವಾರಿಯಲ್ಲಿ ಪಾಲ್ಗೊಂಡಿರುವ ಕ್ಯಾಪ್ಟನ್ ಅಭಿಮನ್ಯು, ಕಾವೇರಿ, ವಿಜಯ, ಗೋಪಿ, ವಿಕ್ರಮ ಆನೆಗಳು ಬಣ್ಣಗಳ ಚಿತ್ತಾರದಿಂದ ಕಂಗೊಳಿಸುತ್ತಿವೆ.

ಕಲಾವಿದ ನಾಗಲಿಂಗಪ್ಪ ನೇತೃತ್ವದ ಹುಣಸೂರು ಮೂಲದ 5 ಮಂದಿ ಕಲಾವಿದರು ಗಜಪಡೆಗೆ ಬಣ್ಣ ಹಚ್ಚಿ ಸಿಂಗರಿಸುತ್ತಿದ್ದಾರೆ. ಆನೆಗಳ ಕಿವಿ ಮೇಲೆ ಶಂಖ, ಚಕ್ರ, ಸೊಂಡಿಲ ಮೇಲೆ ಗಂಡಭೇರುಂಡ, ಹೂವು, ಎಲೆ, ದಂತದ ಹಿಂಭಾಗ ಗಿಳಿ, ಎಲೆ, ಕೆನ್ನೆಯ ಮೇಲೆ ಹೂವು, ಬಳ್ಳಿ, ಮೊಗ್ಗು, ಎಲೆ ಹಾಗೂ ಕಾಲುಗಳ ಮೇಲೆ ಪಕ್ಷಿ, ಎಲೆ, ಹೂವು, ಮೊಗ್ಗು, ಬಳ್ಳಿ ಚಿತ್ರಗಳನ್ನು ಬಿಡಿಸಲಾಗುತ್ತಿದೆ.

ಆನೆಗಳ ಕಣ್ಣಿನ ಸುತ್ತ ಎಲೆ ಆಕೃತಿ, ಹಣೆಯ ಮೇಲೆ ನಾಮ ಮತ್ತು ಸುರುಳಿ ಚಿತ್ರ ಬಿಡಿಸಲಾಗುತ್ತಿದೆ. ಕಲಾವಿದ ನಾಗಲಿಂಗಪ್ಪ ಕಳೆದ 16 ವರ್ಷಗಳಿಂದ ದಸರಾ ಆನೆಗಳ ಮೈಮೇಲೆ ಬಣ್ಣದ ಚಿತ್ತಾರ ಮೂಡಿಸುತ್ತಿದ್ದಾರೆ.











Click it and Unblock the Notifications