ಸಾಹಿತ್ಯ ಸಮ್ಮೇಳನಕ್ಕೆ ದಿನಗಣನೆ ಶುರು: ಅಕ್ಷರ ಜಾತ್ರೆಗೆ ಕುಂದಿತೇ ಉತ್ಸಾಹ!?
ಮೈಸೂರು, ನವೆಂಬರ್ 5: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನವೆಂಬರ್ 24ರಿಂದ ಮೂರು ದಿನಗಳ ಕಾಲ ನಡೆಯಲಿರುವ 83ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಈಗಾಗಲೇ ದಿನಗಣನೆ ಆರಂಭವಾಗಿದೆ. ಆದರೆ ಎಲ್ಲಿಯೂ ಕೂಡ ಸಮ್ಮೇಳನದ ಕುರಿತಾಗಿ ದಸರೆಗೆ ನೀಡಿದ ಮಹತ್ವ ತೋರುತ್ತಿರುವಂತೆ ವಿಜೃಂಭಣೆ ಕಾಣಸಿಗುತ್ತಿಲ್ಲ ಎಂಬುದು ವಿಪರ್ಯಾಸವೇ ಸರಿ.
ಇದುವರೆಗೂ ಕೇವಲ 4 ರಿಂದ 5 ಸಭೆಗಳು ಬಿಟ್ಟರೆ ಸಮ್ಮೇಳನಕ್ಕೆ ಇನ್ನುಳಿದಿರುವುದು ಕೇವಲ 20 ದಿನಗಳು ಮಾತ್ರವೇ ಸಿದ್ಧತೆ ಕುರಿತು ಕಣ್ಣಿಗೆ ಕಾಣುವಂತೆ ಇನ್ನೂ ಸಡಗರ ಕೂಡಿ ಬಂದಿಲ್ಲ.
ಸಾಹಿತ್ಯ ಸಮ್ಮೇಳನದ ಟ್ವೀಟರ್ ನಲ್ಲಿಯೂ ನಿರಾಸಕ್ತಿ:
ದಸರೆ ಎಂದ ಕೂಡಲೇ ಸಾಕು, ಮೊದಲು ಮಾರು ಹೋಗುವುದು ಸಾಮಾಝಿಕ ಜಾಲತಾಣದ ಪ್ರಚಾರ ಕಾರ್ಯದಲ್ಲಿ. ಅದು ಕೇವಲ ನಾಡಹಬ್ಬಕ್ಕೆ ಮಾತ್ರ ಸೀಮಿತವಾಗಿಲ್ಲ ಅಕ್ಷರ ಜಾತ್ರೆಗೂ ಮುಂದುವರೆಯಬೇಕೆಂದು ನಮ್ಮ ಅಭಿಲಾಷೆಯೂ ಹೌದು.
ಸಾಮಾಜಿಕ ಜಾಲತಾಣದಲ್ಲಿ ಮಾತ್ರ ಸಮ್ಮೇಳನದ ಸಿದ್ಧತೆ ಸಂಭ್ರಮಕ್ಕೆ ಬೀಜಾಂಕುರವಾಗಿದೆ. ಸಾಹಿತ್ಯ ಸಮ್ಮೇಳನ ಹೆಸರಿನ ಟ್ವಿಟರ್ (@83rdkasammelana) ಹಾಗೂ '83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ಮೈಸೂರು' ಹೆಸರಿನಲ್ಲಿ ಆರಂಭಿಸಿರುವ ಫೇಸ್ ಬುಕ್ ಖಾತೆಗಳು ಮೆಲ್ಲಗೆ ಕನ್ನಡದ ಕಂಪು ಮೂಡಿಸಲಾರಂಭಿಸಿವೆ. ಇದರಲ್ಲಿರುವುದು ಕೇವಲ 35 ಜನ ಫಾಲೋವರ್ಸ್ ಎಂಬುದು ವಿಪರ್ಯಾಸ.

ಸಮ್ಮೇಳನದ ಸಭೆ ಕುರಿತಾಗಿ ಮಾಹಿತಿಯೇ ಇಲ್ಲ :
ಕೇವಲ ಸಭೆಗಳಲ್ಲಿ ಮಾತ್ರ ಉಳಿಯುತ್ತಿರುವ ಸಾಹಿತ್ಯ ಜಾತ್ರೆಯ ಮಾಹಿತಿಗಳು ಫೇಸ್ ಬುಕ್ ಹಾಗೂ ಟ್ವೀಟರ್ ಗಳೆಲ್ಲಿಯೂ ಲಭ್ಯವಾಗುತ್ತಿಲ್ಲ. ದಸರೆಯ ಇಂಚಿಂಚು ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುತ್ತಿದ್ದ ಜಿಲ್ಲಾಡಳಿತ ಸಾಹಿತ್ಯ ಸಮ್ಮೇಳನದ ಮಾಹಿತಿಯನ್ನು ನೀಡುವಲ್ಲಿ ವಿಫಲವಾಗುತ್ತಿದೆ.
ರಾಜ್ಯೋತ್ಸವ ಮಾಸದಲ್ಲಿ ನಡೆಯಲಿರುವ ಸಾಹಿತ್ಯ ಸಮ್ಮೇಳನದ ಸಿದ್ಧತೆಗಳು, ಈ ಹಿಂದೆ ಮೈಸೂರಿನಲ್ಲಿ ನಡೆದ ಸಮ್ಮೇಳನದ ಫೋಟೊ ನೆನಪುಗಳು ಗಮನಸೆಳೆಯುತ್ತಿವೆ. ಉಳಿದಂತೆ, ಸಮ್ಮೇಳನದ ಸಿದ್ಧತೆಯ ಪತ್ರಿಕಾ ವರದಿಗಳು, ಕನ್ನಡ ನಾಡು-ನುಡಿಗೆ ಸಂಬಂಧಿಸಿದ ಒಳ್ಳೆಯ ಮಾತುಗಳು... ಹೀಗೆ ಸಾಮಾಜಿಕ ಜಾಲತಾಣಗಳೆರಡು ಸಮ್ಮೇಳನದ ಕಥೆ ಹೇಳುತ್ತಿವೆ.

35 ಜನ ಹಿಂಬಾಲಕರನ್ನು ಹೊಂದಿರುವ ಸಮ್ಮೇಳನದ ಟ್ವಿಟರ್ ಅಕ್ಟೋಬರ್ ಕಡೇ ವಾರವಷ್ಟೆ ಜನ್ಮ ತಾಳಿದೆ. ಅಲ್ಲಿಂದ ಇಲ್ಲಿಯವರೆಗೂ ಅದು ಮಾಡಿರುವ ಟ್ವೀಟ್ 35 ಮಾತ್ರ. ಆಗಸಕ್ಕೆ ತಾಕುತ್ತಿರುವ ಅರಮನೆಯ ಏಳು ಗೋಪುರಗಳನ್ನು ಒಳಗೊಂಡ ಸುಂದರ ಚಿತ್ರವೇ ಭಿತ್ತಿಯಾಗಿರುವ ಟ್ವಿಟರ್ ಗೆ, ಸಮ್ಮೇಳನದ ಲಾಂಛನವೇ ಪ್ರೊಫೈಲ್! ಫೇಸ್ಬುಕ್ ಪುಟವೂ ಹೆಚ್ಚು ಕಡಿಮೆ ಇದೇ ಅಂದ-ಚೆಂದದ ಕನ್ನಡತನವನ್ನು ಮೈಗೂಡಿಸಿಕೊಂಡಿದೆ.
ಮೈಸೂರು ಜಿಲ್ಲಾಧಿಕಾರಿ ಡಿ. ರಂದೀಪ್ ಹಾಗೂ ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕರ ವಿಶೇಷ ಆಸಕ್ತಿಯಿಂದ ಶುರು ಮಾಡಿರುವ ಈ ಎರಡೂ ಖಾತೆಗಳು ಕನ್ನಡದ ಜಾತ್ರೆಗಾಗಿ ತಯಾರಾಗಿದೆ.
ಒಳ ಜಗಳದಿಂದಲೇ ಕುಂದಿತೇ ಉತ್ಸಾಹ ?
ಲಕ್ಷಾಂತರ ಕನ್ನಡಿಗರು ಸೇರುವ ಒಂದು ಉತ್ಸವದ ಸಿದ್ಧತೆ ಕುರಿತು, ಎಷ್ಟು ಸಡಗರ-ಸಂಭ್ರಮ ತುಂಬಿರಬೇಕಿತ್ತೋ, ಅಷ್ಟು ಸದ್ಯಕ್ಕಂತೂ ಮೈಸೂರಿನಲ್ಲಿ ಕಾಣುತ್ತಿಲ್ಲ. ಸಮ್ಮೇಳನದ ಸಿದ್ಧತೆಯಲ್ಲಿ ಮೈಸೂರಿನ ಯಾವ ಸಾಹಿತಿಗಳು, ಕನ್ನಡದ ಮನಸ್ಸುಗಳು ತೊಡಗಿಸಿಕೊಂಡಿವೆ ಎಂಬುದು ಕೂಡ ತಿಳಿಯುತ್ತಿಲ್ಲ. ಇನ್ನು ಸಮ್ಮೇಳನದ ಕುರಿತಾಗಿ ಹಾಗೂ ಜಿಲ್ಲಾ ಕಸಾಪದ ಅವ್ಯವಹಾರ ನಡೆದಿರುವ ಕುರಿತಾಗಿ ಈಗಾಗಲೇ ಹಲವು ಗೊಂದಲ ಮೈಸೂರು ಸಾಹಿತ್ಯಾಸಕ್ತರಲ್ಲಿ ಮನೆ ಮಾಡಿದೆ. ಈ ಹಿನ್ನೆಲೆಯೇ ಸಾಹಿತ್ಯ ಸಮ್ಮೇಳನದ ಉತ್ಸುಕತೆ ಕುಂದಿತೆಂದರೂ ತಪ್ಪಾಗಲಾರದು.












Click it and Unblock the Notifications