ಮೈಸೂರು ಡಿಸಿ ಕಚೇರಿ ಮುಂದೆ ಕೊರೊನಾ ಬಗ್ಗೆ ಹೀಗೊಂದು ಗೋಡೆ ಬರಹ
ಮೈಸೂರು, ಮಾರ್ಚ್ 20: ಮೈಸೂರಿನಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಪ್ರವೇಶಿಸುವ ಮುನ್ನ ಎಲ್ಲರೂ ಕೈಗಳನ್ನು ತೊಳೆದುಕೊಂಡೇ ಒಳ ಪ್ರವೇಶಿಸಬೇಕಿದೆ. ನಿನ್ನೆ ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ಅವರು ಹೀಗೊಂದು ನೋಟಿಸ್ ಅನ್ನು ತಮ್ಮ ಕಚೇರಿಯ ಹೊರಭಾಗದಲ್ಲೇ ಹಾಕಿಸಿದ್ದಾರೆ.
ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಸೋಂಕು ಹರಡದಂತೆ ಮುಂಜಾಗ್ರತೆ ವಹಿಸಿ, ಮೈಸೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಒಳಗೆ ಬರುವ ಮುನ್ನ ಸೋಪಿನಲ್ಲಿ ಕೈತೊಳೆದು ಒಳಗೆ ಬನ್ನಿ ಎಂದು ಗೋಡೆಯ ಮೇಲೆ ಬರೆಸಿದ್ದಾರೆ. ಡಿಸಿ ಕಚೇರಿಗೆ ಬರುವ ಪ್ರತಿಯೊಬ್ಬರೂ ಜಿಲ್ಲಾಧಿಕಾರಿಗಳ ಕಾಳಜಿ, ಜಾಗೃತಿಯನ್ನು ನೋಡಿ ಕೈತೊಳೆದು ಒಳಗೆ ಹೋಗುತ್ತಿದ್ದಾರೆ.
ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮ ಕ್ಲೋಸ್; ಯುಗಾದಿ ಪುಣ್ಯಸ್ನಾನವೂ ರದ್ದು
ಮೈಸೂರು ಜಿಲ್ಲೆಯ ಜನರಿಗೆ ಯಾವುದೇ ಕಾರಣಕ್ಕೂ ಕೊರೊನಾ ಸೋಂಕು ಹರಡದಂತೆ, ಜನರ ಸುರಕ್ಷತೆಗಾಗಿ 24 ಗಂಟೆ ಕೆಲಸ ಮಾಡುತ್ತಿರುವ ಜಿಲ್ಲಾಧಿಕಾರಿ ಅಭಿರಾಂ ಜಿ ಶಂಕರ್ ಅವರು ಜಿಲ್ಲಾಧಿಕಾರಿ ಕಚೇರಿಗೆ ಬರುವ ಪ್ರತಿಯೊಬ್ಬರೂ ಸುರಕ್ಷಿತವಾಗಿ, ಆರೋಗ್ಯವಾಗಿರಲಿ ಎಂದು ಹೀಗೊಂದು ಸಂದೇಶ ಬರೆಸಿದ್ದಾರೆ. ಅವರ ಕಾರ್ಯ ವೈಖರಿಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದೇ ಸಂದರ್ಭ ನಿನ್ನೆ ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೊರೊನಾ ಭೀತಿ ಹಿನ್ನೆಲೆ ಮೈಸೂರಿನಲ್ಲಿ ಮದ್ಯ ಮಾರಾಟಕ್ಕೆ ಬ್ರೇಕ್ ಹಾಕಲು ಚಿಂತನೆ ನಡೆಸಿರುವುದಾಗಿ ತಿಳಿಸಿದರು. "ರಾಜ್ಯ ಸರ್ಕಾರದಿಂದ ಆದೇಶ ಆಗಬೇಕಿದೆ. ನಾಳೆ ಸಂಜೆಯವರೆಗೂ ನಾವು ಕಾಯುತ್ತೇವೆ. ಬಳಿಕ ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳುತ್ತೇವೆ" ಎಂದು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯ ಆರಂಭದಲ್ಲೇ ಬೇಸರ ವ್ಯಕ್ತಪಡಿಸಿದ ಅವರು, "ಕೊರೋನಾ ಬಗ್ಗೆ ಮೈಸೂರು ಜಿಲ್ಲಾಡಳಿತ ಸಮರೋಪಾದಿಯಲ್ಲಿ ಜಾಗೃತಿ ಮೂಡಿಸುತ್ತಿದೆ. ಆದರೂ ಜನರಲ್ಲಿ ಇದರ ಗಂಭೀರತೆ ಅರಿವಾದಂತೆ ಕಾಣುತ್ತಿಲ್ಲ. ಯಾಕಾಗಿ ಜನರು ಇದನ್ನು ನಿರ್ಲಕ್ಷ್ಯಿಸುತ್ತಿದ್ದಾರೋ ಅದು ಸಹ ಗೊತ್ತಾಗುತ್ತಿಲ್ಲ. ರೋಗ ಹರಡದಂತೆ ನಾವೆಷ್ಟೇ ಕ್ರಮ ಕೈಗೊಂಡರೂ ಜನರು ಜಾಗೃತರಾಗುತ್ತಿಲ್ಲ. ಕೆಲವೊಂದು ಸೂಚನೆಗಳನ್ನು ಪಾಲಿಸುತ್ತಿಲ್ಲ. ಇದು ಅತ್ಯಂತ ಗಂಭೀರವಾದ ವಿಚಾರ. ಜನರು ಜಿಲ್ಲಾಡಳಿತದ ಎಲ್ಲಾ ಸೂಚನೆ ಪಾಲನೆ ಮಾಡಬೇಕು. ಜನರ ಸಹಕಾರವಿಲ್ಲದೆ ಕೊರೋನಾ ನಿಯಂತ್ರಣ ಸಾಧ್ಯವಿಲ್ಲ" ಎಂದರು.