ಮೇ.28ರಂದು ಯದುವೀರ ಅರಸ್ ಪಟ್ಟಾಭಿಷೇಕ
ಮೈಸೂರು, ಮೇ 21 : ಮೈಸೂರು ಯದುವಂಶದ ಉತ್ತರಾಧಿಕಾರಿಯಾಗಿ ನೇಮಕಗೊಂಡಿರುವ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಪಟ್ಟಾಭಿಷೇಕ ಮಹೋತ್ಸವಕ್ಕೆ ಸಿದ್ಧತೆಗಳು ಆರಂಭಗೊಂಡಿವೆ. ಮೇ.28ರಂದು ಅರಮನೆಯಲ್ಲಿ ಪಟ್ಟಾಭಿಷೇಕ ಸಮಾರಂಭ ನಡೆಯಲಿದೆ.
ಅಮೆರಿಕದ ಬೋಸ್ಟನ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ಪದವಿ ಪಡೆದು ಕಳೆದವಾರ ಯದುವೀರ ಒಡೆಯರ್ ಮೈಸೂರಿಗೆ ಆಗಮಿಸಿದ್ದಾರೆ. ಜ್ಯೋತಿಷಿಗಳ ಬಳಿ ಚರ್ಚೆ ನಡೆಸಿದ ಬಳಿಕ ಮೇ 28ರ ಗುರುವಾರ ಪಟ್ಟಾಭಿಷೇಕ ನಡೆಸಲು ನಿರ್ಧರಿಸಿದ್ದು, ಅರಮನೆಯಲ್ಲಿ ಸಿದ್ಧತೆಗಳನ್ನು ಆರಂಭಿಸಲಾಗಿದೆ. [ಯುವರಾಜ ಯದುವೀರ್ ಪರಿಚಯ]

ಒಡೆಯರ್ ಸಹೋದರಿ ಮೀನಾಕ್ಷಿ ದೇವಿ ನಿಧನರಾಗಿದ್ದರಿಂದ ಈಗಲೇ ಪಟ್ಟಾಭಿಷೇಕ ನಡೆಸಬೇಕೋ? ಇಲ್ಲವೋ? ಎಂಬ ಬಗ್ಗೆ ರಾಣಿ ಪ್ರಮೋದಾ ದೇವಿ ಅವರ ನೇತೃತ್ವದಲ್ಲಿ ಚರ್ಚೆ ನಡೆದಿತ್ತು. ಜ್ಯೋತಿಷಿಗಳ ಸಲಹೆ ಪಡೆದ ನಂತರ ಪಟ್ಟಾಭಿಷೇಕ ನಡೆಸುವ ಕುರಿತು ತೀರ್ಮಾನ ಕೈಗೊಳ್ಳಲಾಗಿದೆ.[ಹೇಗಿತ್ತು ದತ್ತು ಸ್ವೀಕಾರ ಸಮಾರಂಭ?]
2015ರ ಫೆಬ್ರವರಿ 23ರಂದು ಯದುವೀರ್ ಅರಸ್ ದತ್ತು ಸ್ವೀಕಾರ ಸಮಾರಂಭ ನಡೆದಿತ್ತು. ಮೇ ಅಂತ್ಯದಲ್ಲಿ ಪಟ್ಟಾಭಿಷೇಕ ಸಮಾರಂಭ ಹಮ್ಮಿಕೊಳ್ಳಲಾಗುತ್ತದೆ ಎಂದು ಅಂದೇ ಪ್ರಮೋದಾ ದೇವಿ ಒಡೆಯರ್ ಪ್ರಕಟಿಸಿದ್ದರು. [ದತ್ತು ಸ್ವೀಕಾರ ಸಮಾರಂಭದ ಚಿತ್ರಗಳು]
2013ರ ಡಿಸೆಂಬರ್ 10ರಂದು ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ವಿಧಿವಶರಾದ ನಂತರ ಯದುವಂಶದ ಉತ್ತರಾಧಿಕಾರಿ ಯಾರೆಂಬ? ಚರ್ಚೆ ನಡೆದಿತ್ತು. ಫೆಬ್ರವರಿಯಲ್ಲಿ ಯದುವೀರ್ ಗೋಪಾಲರಾಜ ಅರಸ್ ಅವರನ್ನು ದತ್ತು ತೆಗೆದುಕೊಳ್ಳುವುದರೊಂದಿಗೆ ಈ ಚರ್ಚೆಗೆ ತೆರೆ ಬಿದ್ದಿತ್ತು. ಈಗ ಪಟ್ಟಾಭಿಷೇಕ ನಡೆಯುತ್ತಿದೆ.
ಮೇ.28ರಂದು ಮೈಸೂರು ಸಂಸ್ಥಾನದ ಗುರುಗಳಾದ ಪರಕಾಲಮಠದ ಸ್ವಾಮೀಜಿಗಳ ನೇತೃತ್ವದಲ್ಲಿ ಪಟ್ಟಾಭಿಷೇಕ ಸಮಾರಂಭ ನಡೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರಿಗೆ ಪಟ್ಟಾಭಿಷೇಕಕ್ಕೆ ಆಹ್ವಾನ ನೀಡಲಾಗುತ್ತದೆ. ಅರಮನೆ ಪಟ್ಟಾಭಿಷೇಕದ ಕುರಿತು ಈ ವಾರದ ಕೊನೆಯಲ್ಲಿ ಅಧಿಕೃತ ಪ್ರಕಟಣೆ ಹೊರಡಿಸುವ ಸಾಧ್ಯತೆ ಇದೆ.











Click it and Unblock the Notifications