"ಸುಳ್ಳು ಜಾಹೀರಾತು ನೀಡಿಕೊಂಡು ಜನರ ದಿಕ್ಕು ತಪ್ಪಿಸುತ್ತಿದ್ದೀರಿ"; ಕಾಂಗ್ರೆಸ್ ವಕ್ತಾರ ಲಕ್ಷ್ಮಣ
ಮೈಸೂರು, ಮೇ 12: ಕೊರೊನಾ ಸೋಂಕಿನ ವಿರುದ್ಧ ಹೋರಾಟಕ್ಕೆ ಹಣ ಬಿಡುಗಡೆ ಮಾಡಿರುವ ಬಗ್ಗೆ ಸರಿಯಾದ ಲೆಕ್ಕ ನೀಡಿ ಶ್ವೇತ ಪತ್ರ ಹೊರಡಿಸುವಂತೆ ಕಾಂಗ್ರೆಸ್ ವಕ್ತಾರ ಲಕ್ಷ್ಮಣ ಒತ್ತಾಯಿಸಿದರು.
ಕೊರೊನಾ ಖರ್ಚಿನ ಬಗ್ಗೆ ರಾಜ್ಯ ಸರ್ಕಾರದಿಂದ ಇಡೀ ಪುಟದ ಜಾಹೀರಾತು ಬಿಡುಗಡೆ ಮಾಡಿದ ಕುರಿತು ಕಾಂಗ್ರೆಸ್ ಭವನದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ವಕ್ತಾರ ಲಕ್ಷ್ಮಣ ಅವರು, "ನಾವು ಕೋವಿಡ್ ಸೋಂಕು ನಿವಾರಣೆಗಾಗಿ ಐದು ಸಾವಿರ ಕೋಟಿ ರೂಪಾಯಿ ಹಣ ಖರ್ಚು ಮಾಡಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಇವರು ಸುಳ್ಳಿನ ಜಾಹೀರಾತು ಮಾಡಿ ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಅಷ್ಟೆ. ವಿಶೇಷ ಪ್ಯಾಕೇಜ್ ಗೆ ನೀಡಲಾಗಿರುವ 1601 ಕೋಟಿ ರೂಪಾಯಿ ರಾಜ್ಯ ಸರ್ಕಾರದ್ದಲ್ಲ. ಅದರಲ್ಲಿ 900 ಕೋಟಿ ಕಾರ್ಮಿಕರ ನಿಧಿಯಿಂದ ಬಂದಿರೋದು. ಇದು ಬಿಜೆಪಿ ಸರ್ಕಾರಕ್ಕೆ ನಾಚಿಕೆಯಾಗಬೇಕಾದ ವಿಚಾರ. ಸುಳ್ಳು ಜಾಹೀರಾತನ್ನು ಎಲ್ಲಾ ಕಡೆ ಪ್ರಕಟ ಮಾಡುತ್ತಿದ್ದಾರೆ" ಎಂದು ದೂರಿದರು.
ಜಿಲ್ಲಾಧಿಕಾರಿಯಿಂದ ರಾಜ್ಯ -ಕೇರಳ ಗಡಿ ಚೆಕ್ ಪೋಸ್ಟ್ ಪರಿಶೀಲನೆ
"ಕೊರೊನಾ ರೋಗಿ 14 ದಿನಕ್ಕೆ ಒಬ್ಬನಿಗೆ 3.5ಲಕ್ಷ ಬಿಲ್ ಮಾಡಿದ್ದಾರೆ. ಒಂದು ದಿನಕ್ಕೆ ಒಬ್ಬ ವ್ಯಕ್ತಿಗೆ 25 ಸಾವಿರ ಬಿಲ್ ಮಾಡಿದ್ದಾರೆ. ಜುಬಿಲಿಯೆಂಟ್ ಕಾರ್ಖಾನೆ ಕಾರ್ಮಿಕರನ್ನು ಕಾರ್ಖಾನೆಯಲ್ಲೇ ಕ್ವಾರೆಂಟೈನ್ ಮಾಡಿದ್ದಾರೆ. ಇವರ ಸಂಪೂರ್ಣ ವೆಚ್ಚವನ್ನು ಕಾರ್ಖಾನೆಯೇ ವಹಿಸಿದೆ. ಆದರೂ ಅವರ ಹೆಸರಲ್ಲೂ ದುಡ್ಡು ಹೊಡೆಯುವ ಕೆಲಸ ಮಾಡ್ತಾ ಇದ್ದೀರಿ. ಹಣ ಬಿಡುಗಡೆ ಮಾಡಿರುವ ಬಗ್ಗೆ ಸರಿಯಾದ ಲೆಕ್ಕ ನೀಡಿ ಶ್ವೇತ ಪತ್ರ ಹೊರಡಿಸಿ. ಕೋವಿಡ್ ಸಂದರ್ಭದಲ್ಲಿ ಕಾಂಗ್ರೆಸ್ ನವರು ಯಾವ ವಿಚಾರದಲ್ಲೂ ರಾಜಕೀಯ ಮಾಡಿಲ್ಲ" ಎಂದರು.
ಹುಣಸೂರನ್ನು ಜಿಲ್ಲೆ ಮಾಡುತ್ತೇವೆ ಎಂದಿರುವ ಎಚ್ ವಿಶ್ವನಾಥ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, "ವಿಶ್ವನಾಥ್ ಗೆ ತೆವಲು ಬಂದಾಗಲೆಲ್ಲ ಹುಣಸೂರನ್ನು ಜಿಲ್ಲೆ ಮಾಡುತ್ತೇವೆ ಅಂತಾರೆ. ಆರ್ ಅಶೋಕ ಕಂದಾಯ ಮಂತ್ರಿ. ಅವರೇ ಜಿಲ್ಲೆ ಮಾಡುವ ವಿಚಾರ ಸರ್ಕಾರದ ಪರಿಶೀಲನೆ ಇಲ್ಲ ಎಂದು ಪತ್ರ ಬರೆದಿದ್ದಾರೆ. ಜನರನ್ನು ತಪ್ಪು ದಾರಿಗೆ ಎಳೆಯುವ ಕೆಲಸ ಮಾಡುತ್ತಿದ್ದಾರೆ. ಬಿಜೆಪಿಯವರು ಹುಣಸೂರಿನ ಜನತೆಗೆ ಒಂದೇ ಒಂದು ಕಿಟ್ ಕೊಡುವ ಕೆಲಸ ಮಾಡಿಲ್ಲ. ಬಿಜೆಪಿ ಸುಳ್ಳು ಹೇಳೋದನ್ನು ದಯಮಾಡಿ ನಿಲ್ಲಿಸಲಿ. ಮುಂದಿನ ದಿನಗಳಲ್ಲಿ ಅಕ್ರಮ ಸಕ್ರಮ, ಸೈಟ್ ಗಳ ಹಲವಾರು ಹಗರಣಗಳನ್ನು ಬಹಿರಂಗ ಮಾಡುತ್ತೇವೆ. ಬಿಜೆಪಿ ಎಂ.ಪಿ.ಶಾಸಕರಿಗೆ ಕೊಡಿಸುವ ಕೆಲಸ ಮಾಡುತ್ತಾ ಇದ್ದೀರಿ. ಎಲ್ಲವನ್ನೂ ಮುಂದಿನ ದಿನಗಳಲ್ಲಿ ಬಹಿರಂಗ ಪಡಿಸುತ್ತೇವೆ" ಎಂದು ಕಿಡಿ ಕಾರಿದರು.
ಪತ್ರಿಕಾ ವಿತರಕರ ನೆರವಿಗೆ ಪ್ಯಾಕೇಜ್ ಘೋಷಿಸಲು ಸಿಎಂಗೆ ಉಸ್ತುವಾರಿ ಸಚಿವರ ಪತ್ರ
ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ನಗರಾಧ್ಯಕ್ಷ ಆರ್.ಮೂರ್ತಿ. ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್ ಮತ್ತಿತರರು ಉಪಸ್ಥಿತರಿದ್ದರು.