ಚಾಮರಾಜನಗರದ ಸಚಿವದ್ವಯರ ಮುಸುಕಿನ ಗುದ್ದಾಟ ಬೀದಿಗೆ ಬಂತು!
ಚಾಮರಾಜನಗರ, ಸೆಪ್ಟೆಂಬರ್.26: ಚಾಮರಾಜನಗರಕ್ಕೆ ಮೈತ್ರಿ ಸರ್ಕಾರ ಇಬ್ಬರು ಸಚಿವರನ್ನು ನೀಡಿದ್ದರೂ ಒಟ್ಟಾಗಿ ನಿಂತು ಅಭಿವೃದ್ಧಿ ಮಾಡಬೇಕಾದ ಸಚಿವರು 'ಎತ್ತು ಏರಿಗೆಳೆಯಿತು ಕೋಣ ನೀರೆಗೆಳೆಯಿತು' ಎಂಬಂತೆ ಹಗ್ಗಜಗ್ಗಾಟದಲ್ಲಿ ತೊಡಗಿರುವುದು ಇದೀಗ ಬಹಿರಂಗವಾಗಿದೆ.
ಕಾಂಗ್ರೆಸ್ನ ಶಾಸಕರಾದ ಪುಟ್ಟರಂಗಶೆಟ್ಟಿ ಅವರಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಸ್ಥಾನ ನೀಡಿದ್ದಲ್ಲದೆ, ಜಿಲ್ಲಾ ಉಸ್ತುವಾರಿಯನ್ನು ಸರ್ಕಾರ ನೀಡಿದೆ. ಇನ್ನು ಚುನಾವಣಾ ಪೂರ್ವ ಜೆಡಿಎಸ್ ಮತ್ತು ಬಿಎಸ್ ಪಿ ಮೈತ್ರಿ ಮಾಡಿಕೊಂಡಿದ್ದರಿಂದ ಕೊಳ್ಳೇಗಾಲ ಕ್ಷೇತ್ರದಿಂದ ಸ್ಪರ್ಧಿಸಿದ್ದ ಎನ್.ಮಹೇಶ್ ಅವರು ಗೆಲುವು ಕಂಡಿದ್ದರು.
ಎನ್.ಮಹೇಶ್ಗೆ ಅವತ್ತು ಹೆಚ್ಚು ಪೈಪೋಟಿ ನೀಡಿದವರು ಕಾಂಗ್ರೆಸ್ನವರು. ಹೀಗಾಗಿ ಕ್ಷೇತ್ರದಲ್ಲಿ ಬಿಎಸ್ ಪಿ ಮತ್ತು ಕಾಂಗ್ರೆಸ್ ನಡುವೆ ಅಸಮಾಧಾನವಿದೆ. ಈ ನಡುವೆ ಮಹೇಶ್ ಅವರು ಗೆದ್ದು ಮೈತ್ರಿ ಸರ್ಕಾರದಲ್ಲಿ ಏಕೈಕ ಬಿಎಸ್ ಪಿ ಅಭ್ಯರ್ಥಿಯಾಗಿ ಹೊರಹೊಮ್ಮಿದ್ದರಿಂದ ಅವರಿಗೆ ಸಚಿವ ಸ್ಥಾನ ನೀಡಲೇಬೇಕಾದ ಪರಿಸ್ಥಿತಿ ಬಂದೊದಗಿತ್ತು.
ಹೀಗಾಗಿಯೇ ಅವರಿಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸ್ಥಾನವನ್ನು ನೀಡಲಾಗಿತ್ತು. ಇದು ಕಾಂಗ್ರೆಸ್ನ ಪುಟ್ಟರಂಗಶೆಟ್ಟಿ ಅವರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿತ್ತು. ಅಷ್ಟೇ ಅಲ್ಲ ಚಿಕ್ಕದಾದ ಅಸಮಾಧಾನವೂ ಒಳಗೊಳಗೆ ಕುದಿಯುತ್ತಿತ್ತು. ಅದೆಲ್ಲವೂ ಈಗ ಹೊರಬಂದಿದೆ.
ಇಷ್ಟಕ್ಕೂ ಮಹೇಶ್ ಅವರ ಮೇಲೆ ಪುಟ್ಟರಂಗಶೆಟ್ಟಿ ಅವರಿಗೆ ಕೋಪ ಬರಲು ಕಾರಣ ಏನು ಎಂಬುದು ಇದೀಗ ಗೊತ್ತಾಗಿದೆ. ಅದೇನೆಂದು ತಿಳಿಯಲು ಈ ಲೇಖನ ಓದಿ...

ಸಚಿವ ಎನ್.ಮಹೇಶ್ ಹೀಗಂದದ್ದು ಏಕೆ?
ಕೆಲ ದಿನಗಳ ಹಿಂದೆ ತಮ್ಮ ಸ್ವಕ್ಷೇತ್ರ ಕೊಳ್ಳೇಗಾಲದಲ್ಲಿ ಕೇಂದ್ರ ಸರ್ಕಾರದ 'ಸ್ವಚ್ಛ ಭಾರತ್' ಯೋಜನೆ ಸಂಬಂಧ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಗಿಡಗಂಟಿಗಳನ್ನು ಕಿತ್ತು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಸಚಿವ ಎನ್.ಮಹೇಶ್ ಅವರು ಕಾಂಗ್ರೆಸ್ ಗಿಡ(ಇದೊಂದು ಪಾರ್ಥೇನಿಯಂ ಸಸ್ಯ) ಅಪಾಯಕಾರಿ.
ಇಂತಹ ಕಾಂಗ್ರೆಸ್ ಗಿಡ ಕಿತ್ತು ಸ್ವಚ್ಛತೆಗೆ ಚಾಲನೆ ನೀಡಿದ್ದಾಗಿ ಹೇಳಿದ್ದರು. ಬಹುಶಃ ಮಹೇಶ್ ಅವರು ಉದ್ದೇಶ ಪೂರ್ವಕವಾಗಿ ಹೇಳಿದರೋ ಅಥವಾ ಆಡುಭಾಷೆಯಂತೆ ಕಾಂಗ್ರೆಸ್ ಗಿಡ ಎಂದರೋ ಗೊತ್ತಿಲ್ಲ. ಆದರೆ ಅದು ಕಾಂಗ್ರೆಸ್ ನಾಯಕ ಪುಟ್ಟರಂಗಶೆಟ್ಟಿ ಅವರು ಆಕ್ರೋಶಗೊಳ್ಳುವಂತೆ ಮಾಡಿದ್ದಂತು ಸತ್ಯ.

ಆಕ್ರೋಶ ವ್ಯಕ್ತಪಡಿಸಿದ ಪುಟ್ಟರಂಗಶೆಟ್ಟಿ
ಇದೀಗ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಕುದೇರು ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಚಾಮರಾಜನಗರ ಜಿಲ್ಲಾ ಹಾಲು ಒಕ್ಕೂಟ ಲೋಕಾರ್ಪಣೆ ಮಾಡುವ ಸಲುವಾಗಿ ಕಾಮಗಾರಿಗಳನ್ನು ವೀಕ್ಷಣೆ ಮಾಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಪುಟ್ಟರಂಗಶೆಟ್ಟಿ ಏನ್ ಮಹೇಶ್ ಮಾತನಾಡೋದು, ಅವನಿಗೆ ಅದೃಷ್ಟ ಇತ್ತು.
ಹೀಗಾಗಿ ಮೈತ್ರಿ ಸರ್ಕಾರದಲ್ಲಿ ಮಂತ್ರಿಯಾದ. ಕಾಂಗ್ರೆಸ್ ಬಗ್ಗೆ ಮಾತನಾಡೋರೆಲ್ಲ ಏನಾದರು? ಅಂತ ಆತ ತಿಳಿದುಕೊಳ್ಳಲಿ. ಕಾಂಗ್ರೆಸ್ನವರು ಮನಸ್ಸು ಮಾಡಿದರೆ ನಾಳೆಯೇ ಮಹೇಶ್ನನ್ನು ಸಚಿವ ಸ್ಥಾನದಿಂದ ಕೆಳಗಿಳಿಸುತ್ತೇವೆ ಅಂತ ಆಕ್ರೋಶ ವ್ಯಕ್ತಪಡಿಸಿದರು.

ಏಕವಚನದಲ್ಲಿ ಮಾತನಾಡಬಾರದಿತ್ತು
ಇತ್ತ ಮಹೇಶ್ ಅವರ ವಿರುದ್ಧ ಕೊಳ್ಳೇಗಾಲದಲ್ಲಿ ಪುಟ್ಟರಂಗಶೆಟ್ಟಿಯವರು ಕಿಡಿಕಾರಿದರೆ ಅತ್ತ ಕಾರವಾರದಲ್ಲಿ ಮಾತನಾಡಿದ ಸಚಿವ ಎನ್.ಮಹೇಶ್ ರಾಜ್ಯದ ಮೈತ್ರಿ ಸರ್ಕಾರದಲ್ಲಿ ತಾನು ಸಚಿವನಾಗಿದ್ದು, ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಕೃಪಾಕಟಾಕ್ಷದಿಂದಲ್ಲ.
ಬಹುಜನ ಸಮಾಜ ಪಕ್ಷದ ರಾಷ್ಟ್ರಾಧ್ಯಕ್ಷೆ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ, ಜಾತ್ಯಾತೀತ ಜನತಾದಳದ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ.ದೇವೇಗೌಡರು ಮತ್ತು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರಿಂದಾಗಿದ್ದು, ಸಿ.ಪುಟ್ಟರಂಗಶೆಟ್ಟಿರವರು ಏಕವಚನದಲ್ಲಿ ಮಾತನಾಡಿದ್ದು ಅವರಿಗೆ ಶೋಭೆಯಲ್ಲ ಎಂದು ಹೇಳಿದ್ದಾರೆ.

'ಕಾಂಗ್ರೆಸ್' ಗಿಡದ ಬಗ್ಗೆ ಸ್ಪಷ್ಟನೆ
"ತಾನು ಕೊಳ್ಳೇಗಾಲದಲ್ಲಿ ಸ್ವಚ್ಚ ಭಾರತ್ ಯೋಜನೆಯಡಿ ಸ್ವಚ್ಚತಾ ಕಾರ್ಯಕ್ಕೆ ಚಾಲನೆ ನೀಡುವಾಗ ಪಾರ್ಥೇನಿಯಂ ಗಿಡ ಕಿತ್ತು ಚಾಲನೆ ನೀಡಿದೆ. ಗ್ರಾಮಾಂತರ ಪ್ರದೇಶದಲ್ಲಿ ಪಾರ್ಥೇನಿಯಂ ಗಿಡಕ್ಕೆ ಕಾಂಗ್ರೆಸ್ ಗಿಡ ಅಂತ ಕರೆಯುತ್ತಾರೆ.
ಅದನ್ನೇ ನಾನು ಬಳಕೆ ಮಾಡಿ ಹೇಳಿದ್ದೇನೆ ವಿನಃ ಕಾಂಗ್ರೆಸ್ ಪಕ್ಷವನ್ನು ಟೀಕಿಸುವ ಮತ್ತು ತೆಗಳುವವನಲ್ಲ. ಒಂದು ವೇಳೆ ಪಾರ್ಥೇನಿಯಂ ಗಿಡಕ್ಕೆ ಕಾಂಗ್ರೇಸ್ ಗಿಡ ಎಂದು ಹೇಳಿದ್ದರಿಂದ ಜಿಲ್ಲಾ ಉಸ್ತುವಾರಿ ಸಚಿವರಿಗೆ ನೋವುಂಟಾಗಿದ್ದರೆ ಕ್ಷಮೆಯಾಚಿಸುತ್ತೇನೆ ಎಂದು ಎನ್.ಮಹೇಶ್ ಸ್ಪಷ್ಟನೆ ಕೊಟ್ಟಿದ್ದಾರೆ. ಇದು ಇಲ್ಲಿಗೆ ಮುಗಿಯುತ್ತಾ ಮುಂದುವರೆಯುತ್ತಾ ಎಂಬುದನ್ನು ಕಾದು ನಾವು ನೋಡಬೇಕಿದೆ.












Click it and Unblock the Notifications