ಮೈಸೂರಲ್ಲಿ ‘ಹಳ್ಳಿ ಫೈಟ್’ಗಿಳಿದ ಕಾಂಗ್ರೆಸ್ ನಾಯಕರು!

ಮೈಸೂರು, ಡಿಸೆಂಬರ್ 14: ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ತವರು ಜಿಲ್ಲೆ ಮೈಸೂರಿನಲ್ಲಿ ಕಾಂಗ್ರೆಸ್ ಮಂಕಾಗಿದ್ದು, ಬಿಜೆಪಿ ಮತ್ತು ಜೆಡಿಎಸ್ ಪ್ರಾಬಲ್ಯ ಸಾಧಿಸುವತ್ತ ಹೆಜ್ಜೆಯಿರಿಸಿವೆ. ಸದ್ಯದ ಸ್ಥಿತಿಯಲ್ಲಿ ಮತ್ತೆ ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಬೆಳೆಸುವ ಹಠಕ್ಕೆ ಕೈ ನಾಯಕರು ಬಂದಂತೆ ಕಾಣುತ್ತಿದೆ.

ಮಾಜಿ ಸಂಸದ ಆರ್.ಧ್ರುವನಾರಾಯಣ್ ಚಾಮರಾಜನಗರ ಮಾತ್ರವಲ್ಲದೆ, ಮೈಸೂರು ಜಿಲ್ಲೆಯಾದ್ಯಂತ ಪ್ರವಾಸ ಮಾಡಿ ಗ್ರಾಮೀಣ ಭಾಗದಿಂದಲೇ ಪಕ್ಷವನ್ನು ಕಟ್ಟುವ ಕಾರ್ಯದಲ್ಲಿ ಕಳೆದ ಕೆಲವು ತಿಂಗಳಿನಿಂದ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ. ಒಂದು ಕಾಲದಲ್ಲಿ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಹಿಡಿತ ಸಾಧಿಸಿತ್ತು. ಆದರೆ ಕ್ರಮೇಣ ಇಲ್ಲಿಗೆ ಜೆಡಿಎಸ್ ಮತ್ತು ಬಿಜೆಪಿ ಲಗ್ಗೆಯಿಡುವುದರೊಂದಿಗೆ, ಅದರಲ್ಲೂ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರೇ ಸೋಲುವಷ್ಟರ ಮಟ್ಟಿಗೆ ಕಾಂಗ್ರೆಸ್ ಪ್ರಾಬಲ್ಯ ಕಳೆದುಕೊಂಡಿರುವುದು ಮಾತ್ರ ಪಕ್ಷದ ನಾಯಕರಿಗೆ ಅರಗಿಸಿಕೊಳ್ಳಲಾಗದ ಹೊಡೆತ ಎನ್ನುವುದರಲ್ಲಿ ಎರಡು ಮಾತಿಲ್ಲ.

ಮೈಸೂರಲ್ಲಿ ನೆಲೆಯೂರಲು ಹವಣಿಸುತ್ತಿರುವ ಬಿಜೆಪಿ

ಮೈಸೂರಲ್ಲಿ ನೆಲೆಯೂರಲು ಹವಣಿಸುತ್ತಿರುವ ಬಿಜೆಪಿ

ಹನ್ನೊಂದು ವಿಧಾನಸಭಾ ಕ್ಷೇತ್ರಗಳ ಪೈಕಿ ನಾಲ್ಕು ಕ್ಷೇತ್ರಗಳು ಮಾತ್ರ ಕಾಂಗ್ರೆಸ್ ವಶದಲ್ಲಿದೆ. ಉಳಿದಂತೆ ಜೆಡಿಎಸ್ ಮತ್ತು ಬಿಜೆಪಿ ಹಿಡಿತದಲ್ಲಿವೆ. ಇತ್ತೀಚೆಗಿನ ಚುನಾವಣೆಗಳಲ್ಲಿ ಬಿಜೆಪಿಯನ್ನು ಸೋಲಿಸುವಲ್ಲಿ ಕಾಂಗ್ರೆಸ್ ವಿಫಲವಾಗಿದೆ. ಇದಕ್ಕೆ ಕಾರಣ ಕಾಂಗ್ರೆಸ್ ಪಕ್ಷದ ನಾಯಕರ ನಡುವಿನ ಭಿನ್ನಾಭಿಪ್ರಾಯ ಎಂದರೂ ತಪ್ಪಾಗಲಾರದು. ಇನ್ನು ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಚುನಾವಣೆಗಳಂತು ಗೆಲುವನ್ನು ತಂದುಕೊಟ್ಟಿಲ್ಲ. ಮುಂದಿನ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ನಾಯಕರು ಈಗಿನಿಂದಲೇ ತಯಾರಿ ಮಾಡದೆ ಹೋದರೆ ಪಕ್ಷಕ್ಕೆ ಉಳಿಗಾಲವಿಲ್ಲ ಎಂಬುದು ಬಹುತೇಕ ನಾಯಕರ ಗಮನಕ್ಕೆ ಬಂದಿದೆ. ಅದರಲ್ಲೂ ಹಳೇ ಮೈಸೂರು ವಿಭಾಗದಲ್ಲಿ ಬಿಜೆಪಿ ನಿಧಾನವಾಗಿ ನೆಲೆಯೂರಲು ಆರಂಭಿಸಿರುವುದು ಕೂಡ ಕಾಂಗ್ರೆಸ್ ಪಕ್ಷಕ್ಕೆ ನುಂಗಲಾರದ ತುತ್ತಾಗಿದೆ.

ಕೈ ಮತ್ತು ತೆನೆಗೆ ಗ್ರಾ.ಪಂ ಗೆಲುವು ಅಗತ್ಯ

ಕೈ ಮತ್ತು ತೆನೆಗೆ ಗ್ರಾ.ಪಂ ಗೆಲುವು ಅಗತ್ಯ

ಇದೀಗ ನಡೆಯುತ್ತಿರುವ ಗ್ರಾಮ ಪಂಚಾಯತ್ ಚುನಾವಣೆ ಆಡಳಿತರೂಢ ಬಿಜೆಪಿ, ವಿಪಕ್ಷ ಸ್ಥಾನದಲ್ಲಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಕ್ಕೆ ಪ್ರತಿಷ್ಠೆ ಎಂದರೂ ತಪ್ಪಾಗಲಾರದು. ಇಲ್ಲಿ ಯಾವುದೇ ಪಕ್ಷದ ಅಭ್ಯರ್ಥಿಯನ್ನು ನೇರವಾಗಿ ಘೋಷಿಸದಿದ್ದರೂ ಪಕ್ಷದ ಬೆಂಬಲಿತನಾಗಿ ಚುನಾವಣೆಯನ್ನು ಎದುರಿಸುತ್ತಿರುವುದರಿಂದ ಇದು ಮುಂದಿನ ವಿಧಾನಸಭಾ ಚುನಾವಣೆಗೆ ದಿಕ್ಸೂಚಿ ಎಂದರೆ ತಪ್ಪಾಗಲಾರದು. ಸಾಮಾನ್ಯವಾಗಿ ಗ್ರಾಮ ಪಂಚಾಯತಿ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಆಡಳಿತ ಪಕ್ಷವೇ ಜಯಭೇರಿ ಸಾಧಿಸುತ್ತದೆ ಎಂಬ ಮಾತಿದೆ. ಆದರೆ ಅದನ್ನು ಮೀರಿಯೂ ಜನ ತಮ್ಮ ಆಕ್ರೋಶವನ್ನು ಆಡಳಿತ ಪಕ್ಷದ ವಿರುದ್ಧವಾಗಿ ಮತಗಳನ್ನು ಹಾಕುವ ಮೂಲಕ ಹೊರಗೆಡಬಹುದು ಅಥವಾ ವಿಪಕ್ಷಗಳತ್ತ ಒಲವು ತೋರಬಹುದು.

ನಾಯಕರ ಪ್ರಚಾರ, ಸಮಾವೇಶ ಸಂಘಟನೆಯಲ್ಲ

ನಾಯಕರ ಪ್ರಚಾರ, ಸಮಾವೇಶ ಸಂಘಟನೆಯಲ್ಲ

ಹಾಗೆ ನೋಡಿದರೆ ಗ್ರಾಮ ಮಟ್ಟದಿಂದಲೇ ಪಕ್ಷದ ಸಂಘಟನೆ ಮಾಡುವಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್‍ಗಿಂತ ಬಿಜೆಪಿ ಮುಂದಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಚುನಾವಣೆ ಬಂದಾಗ ಮಾತ್ರ ಅಖಾಡಕ್ಕಿಳಿಯುತ್ತವೆ. ನಾಯಕರು ನಿದ್ದೆಯಿಂದ ಹೊರಬಂದು ಪ್ರಚಾರಗಳಲ್ಲಿ ತೊಡಗುತ್ತಾರೆ. ಬಹಿರಂಗ ಪ್ರಚಾರ ಮಾಡುವುದರಿಂದ ಹೆಚ್ಚಿನ ಜನರನ್ನು ಸೇರಿಸಿ ಸಮಾವೇಶ ಮಾಡುವುದರಿಂದ ಪಕ್ಷದ ಸಂಘಟನೆಯಾಗಿದೆ ಎಂಬುದನ್ನು ಸಾಬೀತುಪಡಿಸಲು ಸಾಧ್ಯವಿಲ್ಲ. ಸಂಘಟನೆಯಾಗ ಬೇಕಾಗಿರುವುದು ತಳಮಟ್ಟದಿಂದ. ಹೀಗಾಗಿ ಗ್ರಾಮ ಮಟ್ಟದಲ್ಲಿ ಪಕ್ಷದ ಸಂಘಟನೆ ಹೇಗಿದೆ. ಅಲ್ಲಿನ ಜನಪ್ರತಿನಿಧಿಗಳು ಪಕ್ಷಕ್ಕೆ ಶಕ್ತಿ ತಂದು ಕೊಡುವಂತಹ ಯಾವ ಕೆಲಸವನ್ನು ಮಾಡಿದ್ದಾರೆ ಎಂಬುದು ಮುಖ್ಯವಾಗುತ್ತದೆ. ಪಕ್ಷದ ಸಂಘಟನೆ ವಿಚಾರದಲ್ಲಿ ಕಾಂಗ್ರೆಸ್ ಹಿಂದಿದೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.

ಬಿಜೆಪಿಯತ್ತ ಜೆಡಿಎಸ್ ಮೆದುಧೋರಣೆ

ಬಿಜೆಪಿಯತ್ತ ಜೆಡಿಎಸ್ ಮೆದುಧೋರಣೆ

ಈಗಾಗಲೇ ಬಿಜೆಪಿ ರಾಜ್ಯದಾದ್ಯಂತ ಗ್ರಾಮ ಸ್ವರಾಜ್ಯ ಸಮಾವೇಶ ಮಾಡಿ ಮುಗಿಸಿದೆ. ಆದರೆ ಕಾಂಗ್ರೆಸ್ ಈಗ ಗ್ರಾಮ ಜನಾಧಿಕಾರ ಸಭೆ ಮಾಡುತ್ತಿದ್ದಾರೆ. ಇನ್ನು ಕಳೆದ ಚುನಾವಣೆಗಳಲ್ಲಿ ಕಾಂಗ್ರೆಸ್‍ನೊಂದಿಗಿದ್ದ ಜೆಡಿಎಸ್ ಈಗ ಗ್ರಾಮ ಪಂಚಾಯತಿ ಚುನಾವಣೆ ಘೋಷಣೆಯಾಗುತ್ತಿದ್ದಂತೆಯೇ ಬಿಜೆಪಿಯತ್ತ ಮೃದು ಧೋರಣೆ ತಾಳುತ್ತಿದೆ. ಭೂಸುಧಾರಣಾ ಕಾಯ್ದೆ ಪರ ಜೆಡಿಎಸ್ ಒಲವು ತೋರಿದ್ದು, ರೈತರ ಅಸಮಾಧಾನಗಳಿಗೆ ಕಾರಣವಾಗಿದೆ. ಇದು ಜೆಡಿಎಸ್‍ಗೆ ಮಾರಕವಾಗುತ್ತಾ? ಬಿಜೆಪಿಗೆ ಮಾರಕವಾಗುತ್ತಾ? ಇಲ್ಲ ಕಾಂಗ್ರೆಸ್ ಪಕ್ಷಕ್ಕೆ ಒಳಿತಾಗುತ್ತಾ ಎಂಬುದು ಚುನಾವಣಾ ಬಳಿಕ ಗೊತ್ತಾಗಬೇಕಿದೆ.

ಸಾ.ರಾ ಕ್ಷೇತ್ರಕ್ಕೆ ಲಗ್ಗೆಯಿಡಲು ಕೈ ಯತ್ನ

ಸಾ.ರಾ ಕ್ಷೇತ್ರಕ್ಕೆ ಲಗ್ಗೆಯಿಡಲು ಕೈ ಯತ್ನ

ಮೈಸೂರು ಜಿಲ್ಲೆಯ ಮಟ್ಟಿಗೆ ಹೇಳಬೇಕೆಂದರೆ ಕಾಂಗ್ರೆಸ್ ಹಿಡಿತದಲ್ಲಿದ್ದ ಹಲವು ವಿಧಾನಸಭಾ ಕ್ಷೇತ್ರಗಳು ಜೆಡಿಎಸ್ ಮತ್ತು ಬಿಜೆಪಿ ಪಾಲಾಗಿವೆ. ಅದರಲ್ಲೂ ಕೆ.ಆರ್.ನಗರ ಕ್ಷೇತ್ರದಲ್ಲಿ ಕಳೆದ ಹದಿನೈದು ವರ್ಷಗಳಿಂದ ದಳಪತಿಯಾಗಿ ಸಾ.ರಾ.ಮಹೇಶ್ ಗೆಲುವಿನ ನಗೆ ಬೀರುತ್ತಲೇ ಇದ್ದಾರೆ. ಇಲ್ಲಿ ಹಿಂದೆ ಎಚ್.ವಿಶ್ವನಾಥ್ ಅವರು ಕಾಂಗ್ರೆಸ್ ರೂವಾರಿಯಾಗಿ ಸಾ.ರಾ.ಮಹೇಶ್ ವಿರುದ್ಧ ಕಾಂಗ್ರೆಸ್ ನಾಯಕರಾಗಿ ಕೆಲಸ ಮಾಡುತ್ತಿದ್ದರು. ಬದಲಾದ ಪರಿಸ್ಥಿತಿಯಲ್ಲಿ ಇಬ್ಬರು ಒಂದೇ ಪಕ್ಷದಲ್ಲಿದ್ದರಾದರೂ ಈಗ ಮತ್ತೆ ವಿಶ್ವನಾಥ್ ಅವರು ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಇವರಿಬ್ಬರ ನಡುವಿನ ರಾಜಕೀಯ ದ್ವೇಷಗಳು ಜಗಜ್ಜಾಹೀರಾಗಿದೆ. ಇದರ ಲಾಭ ಪಡೆಯುತ್ತ ಕಾಂಗ್ರೆಸ್ ನಾಯಕರು ಮುಂದಾಗಿದ್ದಾರೆ.

ಗೆಲುವಿಗಾಗಿ ಪಣ ತೊಟ್ಟ ಕೈ ನಾಯಕರು

ಗೆಲುವಿಗಾಗಿ ಪಣ ತೊಟ್ಟ ಕೈ ನಾಯಕರು

ಕೆ.ಆರ್.ನಗರದಲ್ಲಿ ಕಾಂಗ್ರೆಸ್ ನಾಯಕರಾದ ಶಾಸಕ ತನ್ವೀರ್ ಸೇಠ್, ಉಸ್ತುವಾರಿ ಅಶ್ವಿನಿಕುಮಾರ್ ರೈ, ಕೆಪಿಸಿಸಿ ಕಾರ್ಯಕಾರಿಣಿ ಸದಸ್ಯ ದೊಡ್ಡಸ್ವಾಮೇಗೌಡ, ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ಜಿ.ಪಂ ಸದಸ್ಯ ಡಿ.ರವಿಶಂಕರ್, ಸೈಯದ್ ರಫಿಕ್, ತಾ.ಪಂ ಅಧ್ಯಕ್ಷ ಜಯರಾಮೇಗೌಡ, ಮಾಜಿ ಅಧ್ಯಕ್ಷೆ ಮಲ್ಲಿಕಾ ರವಿಕುಮಾರ್ ಮಾತನಾಡಿದರು. ಪುರಸಭೆ ಅಧ್ಯಕ್ಷ ಕೆ.ಜಿ.ಸುಬ್ರಮಣ್ಯ, ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ಎನ್.ಸಿ.ಪ್ರಸಾದ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್.ಮಹದೇವ್ ಸೇರಿದಂತೆ ಹಲವು ನಾಯಕರು ಸೇರಿ ಗ್ರಾಮ ಜನಾಧಿಕಾರ ಸಭೆ ನಡೆಸಿದ್ದು, ಕೆ.ಆರ್.ನಗರ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಗ್ರಾ.ಪಂ ಕ್ಷೇತ್ರಗಳಲ್ಲಿ ಗೆಲ್ಲಬೇಕೆಂಬ ಪಣತೊಟ್ಟಿದ್ದಾರೆ.

ಕಾಂಗ್ರೆಸ್ ಪಕ್ಷಕ್ಕೆ ಬಹು ಮುಖ್ಯವಾದ ಗ್ರಾ.ಪಂ ಗೆಲುವು

ಕಾಂಗ್ರೆಸ್ ಪಕ್ಷಕ್ಕೆ ಬಹು ಮುಖ್ಯವಾದ ಗ್ರಾ.ಪಂ ಗೆಲುವು

ಮಾಜಿ ಸಚಿವ ತನ್ವಿರ್‍ಸೇಠ್ ಪಕ್ಷದ ಕಾರ್ಯಕರ್ತರಲ್ಲಿ ಹುರಿದುಂಬಿಸಿದ್ದು, ಗ್ರಾ.ಪಂನಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯುವಂತೆ ನೋಡಿಕೊಳ್ಳಬೇಕು, ಈಗಾಗಲೇ ಪಕ್ಷದ ವರಿಷ್ಠರು ಪಂಚಾಯಿತಿಯ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಕಾರ್ಯಕರ್ತರಿಗೆ ಅಧಿಕಾರ ದೊರಕಿಸಿಕೊಡುವ ನಿಟ್ಟಿನಲ್ಲಿ ಪಕ್ಷ ಕೆಲಸ ಮಾಡುತ್ತಿದ್ದಾರೆ. ಕೆ.ಆರ್.ನಗರ ವಿಧಾನ ಸಭಾ ಕ್ಷೇತ್ರದಲ್ಲಿ ಕಳೆದ 15 ವರ್ಷಗಳಿಂದ ಶಾಸಕರು ಆಯ್ಕೆಯಾಗದಿದ್ದರೂ ಚಿಂತೆ ಇಲ್ಲ. ಪಕ್ಷದ ಕಾರ್ಯಕರ್ತರಿಗೆ ಅಧಿಕಾರ ನೀಡಬೇಕೆಂಬ ಉದ್ದೇಶದಿಂದ ಕೆಪಿಸಿಸಿ ಕಾರ್ಯಕಾರಿಣಿ ಸದಸ್ಯ ದೊಡ್ಡಸ್ವಾಮೇಗೌಡ ಅವರು ಎಲ್ಲ ಸ್ಥಳೀಯ ಸಂಸ್ಥೆಯ ಚುನಾವಣೆಗಳನ್ನು ಗಂಭೀರವಾಗಿ ಪರಿಗಣಿಸಿದ್ದು, ಗೆಲುವಿಗೆ ಪಣತೊಡುವಂತೆ ಹೇಳಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಗೆ ಗ್ರಾ.ಪಂ ಚುನಾವಣೆ ಬಹುಮುಖ್ಯವಾಗಿದ್ದು, ಇಲ್ಲಿನ ಗೆಲುವು ಅವರಿಗೆ ಮುಂದಿನ ವಿಧಾನಸಭಾ ಚುನಾವಣೆಗೆ ಮೆಟ್ಟಿಲಾಗುವುದರಲ್ಲಿ ಸಂದೇಹವಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+