Veena Dhruvanarayan : ಧೃವ ನಾರಾಯಣ ಅವರ ಪತ್ನಿ ವೀಣಾ ಅನಾರೋಗ್ಯದಿಂದ ವಿಧಿವಶ
ದಿವಂಗತ ಆರ್ ಧ್ರುವನಾರಾಯಣ್ ರವರ ಪತ್ನಿ ಶ್ರೀಮತಿ ವೀಣಾ ಆರ್ ಧ್ರುವನಾರಾಯಣ್ ರವರು ವಿಧಿವಶರಾಗಿದ್ದಾರೆ. ಮಾರ್ಚ್ 11ರಂದು ನಿಧನರಾದ ಕಾಂಗ್ರೆಸ್ ಕಾರ್ಯಧ್ಯಕ್ಷ ಆರ್. ಧ್ರುವ ನಾರಾಯಣ ಅವರ ಪತ್ನಿ ವೀಣಾ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಪತಿ ಸಾವಿನ ಕೊರಗಿನಲ್ಲಿದ್ದ ವೀಣಾ ಅವರು ಇಂದು ಜೀವನದ ಪಯಣ ಮುಗಿಸಿದ್ದಾರೆ.
ಸಜ್ಜನ ನಾಯಕ, ದೂರದರ್ಶಿತ್ವ ಹೊಂದಿದ್ದ ಅಜಾತಶತ್ರು ಧ್ರುವನಾರಾಯಣ ಅವರು ಮಾರ್ಚ್ 11ರಂದು ಹೃದಯಾಘಾತದಿಂದ ಮೃತಪಟ್ಟರು. ಅದಾಗಿ ತಿಂಗಳ ಒಳಗೇ ಆ ಮನೆಯಲ್ಲಿ ಮತ್ತೊಂದು ಮೃತ್ಯು ಸಂಭವಿಸಿದೆ. ಧ್ರುವ ನಾರಾಯಣ ಅವರ ಸಾವಿಗೆ ಇಡೀ ನಾಡು ಕಂಬನಿ ಮಿಡಿದಿತ್ತು. ಅಕಾಲಿಕ ಸಾವು ಅವರ ಕುಟುಂಬವನ್ನಂತೂ ಇನ್ನಷ್ಟು ಕಂಗೆಡಿಸಿತ್ತು.

ಮೊದಲೇ ಅನಾರೋಗ್ಯವನ್ನು ಎದುರಿಸುತ್ತಿದ್ದ ವೀಣಾ ಅವರು ಪತಿಯ ಸಾವಿನ ಸಂದರ್ಭದಲ್ಲಿ ತುಂಬಾ ನೋವು ಅನುಭವಿಸಿದ್ದರು. ಅದಾದ ಬಳಿ ಸಾಕಷ್ಟು ಮಾನಸಿಕವಾಗಿ ಕುಗ್ಗಿದ್ದರು. ಇದೀಗ ಅವರ ಸಾವೇ ಸಂಭವಿಸಿದೆ. ವೀಣಾ ಅವರು ಮಕ್ಕಳಾದ ದರ್ಶನ್, ಧೀರನ್ ಅವರನ್ನು ಅಗಲಿದ್ದಾರೆ. ದರ್ಶನ್ ವಕೀಲರಾಗಿದ್ದು, ಧೀರನ್ ಬಿಎಸ್ಸಿ ಮುಗಿಸಿ ಬ್ಯುಸಿನೆಸ್ ಮ್ಯಾನ್ ಆಗಿದ್ದಾರೆ. ಮೈಸೂರಿನಲ್ಲಿರುವ ನಿವಾಸಕ್ಕೆ ನೂರಾರು ಜನ ಅಗಮಿಸಿದ್ದು, ಕಣ್ಣೀರಿನಲ್ಲಿ ಮುಳುಗಿದ್ದಾರೆ.
ಆರ್. ಧ್ರುವನಾರಾಯಣ ಬಗ್ಗೆ:-
ಆರ್. ಧ್ರುವನಾರಾಯಣ ದೀನ ದಲಿತರ ಏಳಿಗೆಗಾಗಿ ಶ್ರಮಿಸಿದ ಧೀಮಂತ ನಾಯಕ. 2004ರ ಕರ್ನಾಟಕ ವಿಧಾನಸಭಾ ಚುನಾವಣೆ ಚಾಮರಾಜನಗರ ಜಿಲ್ಲೆಯ ಸಂತೇಮರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಅಖಾಡಕ್ಕೆ ಧುಮುಕಿದ್ದ ಧ್ರುವನಾರಾಯಣ, ಆ ಚುನಾವಣೆಯಲ್ಲಿ ಒಂದೇ ಮತದ ಅಂತರದಲ್ಲಿ ಗೆದ್ದು ಬಂದಿದ್ದರು. ದೇಶದ ಇತಿಹಾಸದಲ್ಲೇ ಹೀಗಾಗಿದ್ದು ಅದೇ ಮೊದಲು. ಹಾಗಾಗಿ, ಅದೊಂದು ದಾಖಲೆಯಾಗಿಯೇ ಉಳಿದಿದೆ. ಅಲ್ಲದೆ, ಈ ಚುನಾವಣಾ ಫಲಿತಾಂಶವನ್ನು ನಾನಾ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳಲ್ಲಿ ಕೇಳಲಾಗಿದೆ.
ಚಾಮರಾಜನಗರ ಲೋಕಸಭೆಯನ್ನು ಪ್ರತಿನಿಧಿಸಿ ಎರಡು ಭಾರಿ ಸಂಸದರಾಗಿದ್ದರು. ಅತ್ಯುತ್ತಮ ಲೋಕಸಭಾ ಸದಸ್ಯರಾಗಿ ಗುರುತಿಸಿಕೊಂಡಿದ್ದ ಧ್ರುವನಾರಾಯಣ ಅವರು 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ವಿ.ಶ್ರೀನಿವಾಸ ಪ್ರಸಾದ್ ಅವರ ವಿರುದ್ಧ ಸೋಲು ಅನುಭವಿಸಿದ್ದರು.

ಸಂತೇಮರಳ್ಳಿ ವಿಧಾನಸಭಾ ಕ್ಷೇತ್ರ ಮತ್ತು ಕೊಳ್ಳೇಗಾಲದಿಂದ ಸ್ಪರ್ಧಿಸಿ ಎರಡು ಭಾರಿ ಶಾಸಕರಾಗಿದ್ದರು. ಚಾಮರಾಜನಗರ ಜಿಲ್ಲೆಯ ರಾಜಕಾರಣದಲ್ಲಿ ಸಹೃದಯಿ ರಾಜಕಾರಣಿ ಅಂತಲೇ ಗುರುತಿಸಿಕೊಂಡಿದ್ದರು.












Click it and Unblock the Notifications