ಕೈ ವಿರುದ್ಧ ಹಳೇ ಮೈಸೂರಿನಲ್ಲಿ ಬಂಡಾಯದ ಕಹಳೆ
ಮೈಸೂರು, ಜೂನ್ 21 : ಹಳೇ ಮೈಸೂರು ವ್ಯಾಪ್ತಿಯಲ್ಲಿ ಕಾಂಗ್ರೆಸ್ನ ಬಂಡಾಯದ ಕಹಳೆ ಜೋರಾಗಿಯೇ ಕೇಳಿಸತೊಡಗಿದೆ. ಸಂಪುಟ ಪುನಾರಚನೆ ನಂತರದ ವಿದ್ಯಮಾನಗಳು ಸರ್ಕಾರಕ್ಕೆ ಮುಳ್ಳಾಗಿ ಪರಿಣಮಿಸುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವರ್ಚಸ್ಸು ಕುಸಿಯುತ್ತಿದೆ ಎಂಬುದಕ್ಕೆ ಇತ್ತೀಚೆಗೆ ನಡೆದ ಚುನಾವಣೆಗಳೇ ಸಾಕ್ಷಿಯಾಗಿವೆ. ಇದೀಗ ಮಂಡ್ಯದಲ್ಲಿ ಅಂಬರೀಶ್, ಮೈಸೂರಿನಲ್ಲಿ ಹಿರಿಯ ನಾಯಕ ವಿ.ಶ್ರೀನಿವಾಸ ಪ್ರಸಾದ್, ಕೊಡಗಿನ ಜಿಲ್ಲಾ ಉಸ್ತುವಾರಿಯಾಗಿದ್ದ ದಿನೇಶ್ ಗುಂಡೂರಾವ್ ಅವರನ್ನು ಸಂಪುಟದಿಂದ ಕೈಬಿಟ್ಟಿರುವುದು ಮುಂದಿನ ದಿನಗಳಲ್ಲಿ ಪಕ್ಷದ ಮೇಲೆ ಭಾರೀ ಪರಿಣಾಮ ಬೀರುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ. []ಮಾಜಿ ಸಚಿವ ಅಂಬರೀಶ್ ಪತ್ರಿಕಾಗೋಷ್ಠಿ ಮುಖ್ಯಾಂಶಗಳು

ಮಂಡ್ಯದಲ್ಲಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದಿದೆ. ಅಭಿಮಾನಿಗಳು ಆತ್ಮಹತ್ಯೆ ಮಾಡಿಕೊಳ್ಳುವ ಹಂತಕ್ಕೂ ಹೋಗಿದ್ದಾರೆ. ಮಂಡ್ಯ ಜೆಡಿಎಸ್ನ ಭದ್ರಕೋಟೆಯಾಗಿತ್ತು. ಇಲ್ಲಿ ಎಸ್.ಎಂ.ಕೃಷ್ಣರ ಬಳಿಕ ಅಂಬರೀಶ್ ಅವರ ಪ್ರಭಾವವಿತ್ತು. ಒಂದು ವೇಳೆ ಅಂಬರೀಶ್ ಅವರು ಪಕ್ಷದಿಂದ ಹೊರ ನಡೆದರೆ ಮತ್ತೆ ಕಾಂಗ್ರೆಸ್ ಇಲ್ಲಿ ನೆಲೆ ಕಂಡುಕೊಳ್ಳುವುದು ಕಷ್ಟಸಾಧ್ಯವಾಗಿದೆ. [ವಿಷ ಕುಡಿದ ಅಂಬಿ ಅಭಿಮಾನಿ, ರಮ್ಯಾ ಮನೆಗೆ ಸುಣ್ಣಬಣ್ಣ!]

ಸಿದ್ದರಾಮಯ್ಯ ಕ್ಷೇತ್ರಕ್ಕೆ ಈಗಾಗಲೇ ಜೆಡಿಎಸ್, ಬಿಜೆಪಿ ಲಗ್ಗೆಯಿಟ್ಟಿದೆ. ಇದೀಗ ಶ್ರೀನಿವಾಸ ಪ್ರಸಾದ್ ಉಲ್ಟಾ ಹೊಡೆದರೆ ಮತ್ತೆ ಕಾಂಗ್ರೆಸ್ ತಲೆ ಎತ್ತುವುದು ಅಷ್ಟು ಸುಲಭವಲ್ಲ. ಶ್ರೀನಿವಾಸಪ್ರಸಾದ್ ಅವರಿಗೆ ಸಿಗುತ್ತಿರುವ ಅಭೂತಪೂರ್ವ ಬೆಂಬಲವನ್ನು ಗಮನಿಸಿದರೆ ಕಾಂಗ್ರೆಸ್ ಒಡೆದು ಹೋಳಾಗುವುದರಲ್ಲಿ ಸಂಶಯವಿಲ್ಲ. ಇದರ ಲಾಭವನ್ನು ಪಡೆಯಲು ಬಿಜೆಪಿ ಮತ್ತು ಜೆಡಿಎಸ್ ತುದಿಗಾಲಿ ನಿಂತಿವೆ.
ಕೊಡಗಿನಲ್ಲಿ ದಿನೇಶ್ ಪರ ಕಹಳೆ : ಇನ್ನು ಕೊಡಗು ಕಾಂಗ್ರೆಸ್ ಮುಕ್ತ ಜಿಲ್ಲೆಯಾಗಿದೆ. ಇದೀಗ ವೀಣಾ ಅಚ್ಚಯ್ಯ ಅವರಿಗೆ ಎಂಎಲ್ಸಿ ಸ್ಥಾನ ನೀಡಿದ್ದಾರೆ. ಆದರೆ ಅದರ ಪ್ರಯೋಜನ ಅಷ್ಟರಲ್ಲೇ ಇದೆ. ಕೊಡಗಿನ ಉಸ್ತುವಾರಿ ಸಚಿವರಾಗಿದ್ದ ದಿನೇಶ್ ಗುಂಡೂರಾವ್ ಅವರನ್ನು ಕೈಬಿಟ್ಟಿದ್ದು ಸ್ಥಳೀಯ ಕಾಂಗ್ರೆಸ್ಸಿಗರಿಗೆ ನೋವು ತಂದಿದೆ. ಈ ಕುರಿತಂತೆ ಪತ್ರಿಕಾಗೋಷ್ಠಿ ನಡೆಸಿ ಅವರನ್ನು ಕೈಬಿಡದಂತೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ.

ದಿನೇಶ್ ಗುಂಡೂರಾವ್ ಮೂಲತಃ ಕೊಡಗಿನವರು. ಅವರ ತಂದೆಗಿದ್ದ ಗೌರವವನ್ನು ಮಕ್ಕಳ ಮೇಲೆಯೂ ಜನ ಇಟ್ಟಿದ್ದಾರೆ. ಜತೆಗೆ ಎಲ್ಲರೊಂದಿಗೆ ಬೆರೆತು ನಡೆಯುವ ಶಕ್ತಿ ಅವರಿಗಿತ್ತು. ನವೆಂಬರ್ನಲ್ಲಿ ಟಿಪ್ಪು ಸುಲ್ತಾನ್ ದಿನಾಚರಣೆಗೆ ಸಂಬಂಧಿಸಿದಂತೆ ಗಲಾಟೆಗಳಾದ ಸಂದರ್ಭ, ತಕ್ಷಣವೇ ಅವರಿಗೆ ಉಸ್ತುವಾರಿ ಸಚಿವ ಸ್ಥಾನ ನೀಡಿ ಕೊಡಗಿಗೆ ಕಳುಹಿಸಲಾಗಿತ್ತು. ಈ ಸಂದರ್ಭ ಅವರು ಆ ಪರಿಸ್ಥಿತಿಯನ್ನು ಜಾಣ್ಮೆಯಿಂದ ನಿಭಾಯಿಸಿದ್ದರು. ಎರಡು ಸಮುದಾಯವನ್ನು ಜತೆ ಸೇರಿಸಿ ಮುಂದೆ ಯಾವುದೇ ಗಲಭೆಗಳಾಗದಂತೆ ನೋಡಿಕೊಂಡಿದ್ದರು.
ಇದೀಗ ದಿಢೀರ್ ಕಾರಣ ನೀಡದೆ ಅವರಿಗೆ ಕೊಕ್ ನೀಡಿದ್ದು ಜನ ಮಾತ್ರವಲ್ಲ ಕಾಂಗ್ರೆಸ್ ನಾಯಕರಲ್ಲಿಯೂ ಅಸಮಾಧಾನವಿದೆ. ಇನ್ನು ಚಾಮರಾಜನಗರದಲ್ಲಿ ಸಚಿವ ಮಹದೇವ ಪ್ರಸಾದ್ ಅವರ ವಿರುದ್ಧ ಜನರಿಗೆ ನೋವಿದೆ. ಈ ನಡುವೆ ಅವರ ಮೇಲೆಯೂ ಗಣಿ ಉರುಳು ಸುತ್ತಿಕೊಂಡಿದೆ. ಇದರ ಆಕ್ರೋಶವನ್ನು ಜನ ತೀರಿಸಿಕೊಳ್ಳಲು ಕಾಯುತ್ತಿದ್ದಾರೆ. [ನಂಜನಗೂಡು ಬಂದ್ ಯಶಸ್ವಿ : ಸಿದ್ದು ವಿರುದ್ಧ ಆಕ್ರೋಶ]

ಮೈಸೂರು ಬಂದ್ಗೆ ಕರೆ : ಚಾಮರಾಜನಗರ ಜಿಲ್ಲೆಯಲ್ಲಿಯೂ ಶ್ರೀನಿವಾಸ ಪ್ರಸಾದ್ ಅವರ ಪ್ರಾಬಲ್ಯವಿದೆ. ಅದಕ್ಕೆ ಚಾಮರಾಜನಗರದಲ್ಲಿ ಅಭಿಮಾನಿಗಳು ಬಂದ್ ಮಾಡಿ ಪ್ರತಿಭಟನೆ ನಡೆಸಿರುವುದು ಸಾಕ್ಷಿ. ಇದೆಲ್ಲವನ್ನು ಗಮನಿಸಿದರೆ ಮುಂದೆ ರಾಜ್ಯ ರಾಜಕೀಯದಲ್ಲಿ ಭಾರೀ ಬೆಳವಣಿಗೆಗಳು ನಡೆಯುವ ಸಾಧ್ಯತೆಗಳೇ ಹೆಚ್ಚಾಗಿದೆ.
ಇದೆಲ್ಲದರ ನಡುವೆ ಶ್ರೀನಿವಾಸಪ್ರಸಾದ್ ಅವರ ಬೆಂಬಲಿಗರು ಜೂ.24ರಂದು ಮೈಸೂರು ಬಂದ್ ನಡೆಸುವುದಾಗಿಯೂ ಘೋಷಿಸಿದ್ದಾರೆ. ಸಣ್ಣದಾಗಿ ಹೊತ್ತಿಕೊಂಡಿರುವ ಕಿಡಿ ಬೃಹತ್ ಜ್ವಾಲೆಯಾಗಿ ಹಬ್ಬಿಕೊಳ್ಳುತ್ತಿದೆ. ಮುಂದೇನಾಗುತ್ತದೆಯೋ ಎಂಬುವುದನ್ನು ಕಾದು ನೋಡಬೇಕಿದೆ.












Click it and Unblock the Notifications