ಗೋಮೂತ್ರ ಸಿಂಪಡಿಸಿ ಜನಾಂಗೀಯ ನಿಂದನೆ, ಬಿಜೆಪಿ ಮುಖಂಡರ ಮೇಲೆ ದೂರು
ಮೈಸೂರು, ಜೂನ್ 28 : ಕಲಾಮಂದಿರ ಅಪವಿತ್ರವಾಗಿದೆ ಎಂದು ಹೇಳಿ ಯಾರ ಅನುಮತಿಯನ್ನೂ ಪಡೆಯದೆ ಗೋಮೂತ್ರ ಸಿಂಪಡಣೆ ಮಾಡಿ, ದಲಿತರು ಕೀಳು ಜಾತಿಯವರು ಎಂದು ನಿಂದಿಸಿ, ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ಮುಖಂಡರ ವಿರುದ್ಧ ಜಯಲಕ್ಷ್ಮಿಪುರಂ ಠಾಣೆಯಲ್ಲಿ ಚೋರನಹಳ್ಳಿ ಶಿವಣ್ಣ ದೂರು ದಾಖಲಿಸಿದ್ದಾರೆ.
ಭಾನುವಾರ ಮೈಸೂರಿನ ಕರ್ನಾಟಕ ಕಲಾಮಂದಿರದ ಮನೆಯಂಗಳ ಸಭಾಂಗಣದಲ್ಲಿ ಗೋಮಾಂಸ ಸೇವನೆ ಮಾಡಲಾಗಿತ್ತು. ಇದರಿಂದ ಕಲಾಮಂದಿರ ಅಪವಿತ್ರವಾಗಿದೆ ಎಂದು ಗೋಮೂತ್ರ ಸಿಂಪಡನೆ ಮಾಡಲಾಗಿತ್ತು.

ಜೂನ್ 25ರಂದು ಸ್ವಾಮಿ ಚಾರ್ವಾಕ ಸೋಷಿಯಲ್ ಮತ್ತು ಕಲ್ಚರಲ್ ಟ್ರಸ್ಟ್ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಹಾಗೂ ಎವಿಎಸ್ಎಸ್ ಸಂಸ್ಥೆ ವತಿಯಿಂದ ಕಲಾಮಂದಿರದಲ್ಲಿ ಆಯೋಜಿಸಿದ್ದ 'ಆಹಾರ ಸ್ವಾತಂತ್ರ್ಯ ಹಾಗೂ ವ್ಯಕ್ತಿ ಸ್ವಾತಂತ್ರ್ಯ' ಎಂಬ ವಿಚಾರ ಸಂಕಿರಣದಲ್ಲಿ ಗೋಮಾಂಸ ಸೇವನೆ ಮಾಡಲಾಗಿತ್ತು. ಸಾಹಿತಿ ಕೆಎಸ್ ಭಗವಾನ್, ಪ್ರೊ ಮಹೇಶ್ ಚಂದ್ರ ಗುರು ಗೋಮಾಂಸ ಸೇವನೆ ಮಾಡಿದ್ದವರಲ್ಲಿ ಸೇರಿದ್ದರು.
ಇದನ್ನು ವಿರೋಧಿಸಿ ಜೂನ್ 26ರಂದು ಮೈಸೂರು ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ಗೋಕುಲ್ ಗೋವರ್ಧನ್, ಉಪಾಧ್ಯಕ್ಷ ಕೆ.ಜೆ.ರಮೇಶ್, ಪ್ರಧಾನ ಕಾರ್ಯದರ್ಶಿ ಸಂಪತ್, ಸೋಮಶೇಖರ್, ನಾರಾಯಣ್, ಜಗದೀಶ್, ರವಿ, ರಾಕೇಶ್ಗೌಡ ಸೇರಿದಂತೆ ಇನ್ನಿತರರು ದಲಿತರು ಮಾಂಸ ಸೇವನೆ ಮಾಡಿದ್ದರಿಂದ ಮನೆಯಂಗಳ ಅಪವಿತ್ರವಾಗಿದೆ ಎಂದು ಗೋಮೂತ್ರದಿಂದ ತೊಳೆದಿದ್ದಲ್ಲದೆ ದಲಿತರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ನಮ್ಮ ಆಹಾರ ಕ್ರಮ, ಸಂಸ್ಕೃತಿಯನ್ನು ಹೀಯಾಳಿಸಿ ಜಾತಿ ನಿಂದನೆ ಮಾಡಿರುವ ಇವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಚೋರನಹಳ್ಳಿ ಶಿವಣ್ಣ ದೂರು ನೀಡಿದ್ದಾರೆ.
ವರದಿ ಬಂದ ಬಳಿಕ ಕ್ರಮ
ದೂರು ನೀಡಿರುವ ಕುರಿತು ಪ್ರತಿಕ್ರಿಯೆ ನೀಡಿರುವ ಜಯಲಕ್ಷ್ಮೀಪುರಂ ಠಾಣೆಯ ಇನ್ಸ್ಪೆಕ್ಟರ್ ರವೀಂದ್ರ, "ಗೋಮೂತ್ರ ಸಿಂಪಡಣೆ ಮಾಡಿ ಜಾತಿ ನಿಂದನೆ ಮಾಡಿದ್ದಾರೆ ಎಂದು ದೂರು ನೀಡಿದ್ದಾರೆ. ಈ ಸಂಬಂಧ ಕಲಾಮಂದಿರದ ನಿರ್ದೇಶಕರಿಗೆ ವರದಿ ನೀಡುವಂತೆ ಸೂಚಿಸಲಾಗುವುದು. ವರದಿ ಬಂದ ಬಳಿಕ ಕ್ರಮ ಕೈಗೊಳ್ಳಲಾಗುವುದು," ಎಂದು ತಿಳಿಸಿದ್ದಾರೆ.
ಇನ್ನು ಈ ಸಂಬಂಧ ಮೈಸೂರು ವಿಶ್ವವಿದ್ಯಾಲಯದ ಪ್ರಧ್ಯಾಪಕ ಮಹೇಶ್ ಚಂದ್ರ ಗುರು ವಜಾಕ್ಕೆ ಒತ್ತಾಯಿಸಿ ರಾಜ್ಯಪಾಲ ವಜೂಭಾಯಿ ವಾಲಾಗೆ ಸಂಸದೆ ಶೋಭಾ ಕರಂದ್ಲಾಜೆ ಮಂಗಳವಾರ ಪತ್ರವನ್ನೂ ಬರೆದಿದ್ದರು.












Click it and Unblock the Notifications