ಮೈಸೂರು ಮೇಯರ್ ಗಾದಿಗಾಗಿ ಸಿದ್ದು-ಜಿಟಿಡಿ ನಡುವೆ ಮತ್ತೆ ಶುರುವಾಯ್ತು ಮುಸುಕಿನ ಗುದ್ದಾಟ

ಮೈಸೂರು, ನವೆಂಬರ್. 16:ನಾಳೆ (ನವೆಂಬರ್.16) ನಡೆಯುವ ಮೈಸೂರು ಮೇಯರ್ ಚುನಾವಣೆಗೆ ಜೆಡಿಎಸ್, ಕಾಂಗ್ರೆಸ್ ನಲ್ಲಿ ಕಾರ್ಯಚಟುವಟಿಕೆ ತೀವ್ರಗೊಂಡಿದೆ. ಈ ಸಂಬಂಧ ಸಚಿವ ಸಾ.ರಾ. ಮಹೇಶ್ ಅವರನ್ನು ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಭೇಟಿ ಮಾಡಿದ್ದು, ಸಾಕಷ್ಟು ಕುತೂಹಲ ಮೂಡಿಸಿದೆ.
ಎರಡೂ ಪಕ್ಷಗಳು ಮೈತ್ರಿ ಮಾಡಿಕೊಂಡು ಮೈಸೂರು ಮಹಾನಗರ ಪಾಲಿಕೆಯಲ್ಲಿ ಅಧಿಕಾರ ಹಿಡಿಯಲು ಮುಂದಾಗಿವೆ. ಈ ನಡುವೆ ಮೊದಲ ಅವಧಿಯ ಮೇಯರ್ ಸ್ಥಾನ ನಮಗೆ ಬೇಕು ಎಂದು ಎರಡು ಪಕ್ಷಗಳು ತೀವ್ರ ಲಾಭಿ ನಡೆಸುತ್ತಿವೆ.
ಈ ಮಧ್ಯೆ ಶಾಸಕ ತನ್ವೀರ್ ಸೇಠ್ ಅವರು ಸಚಿವ ಸಾರಾ ಮಹೇಶ್ ಅವರನ್ನು ಭೇಟಿಯಾಗಿ ಸುಮಾರು 1 ಗಂಟೆಗಳ ಕಾಲ ಚರ್ಚೆ ನಡೆಸಿದ್ದಾರೆ. ಬಳಿಕ ಈ ಬಗ್ಗೆ ಮಾತನಾಡಿರುವ ಸಚಿವ ಸಾ.ರಾ ಮಹೇಶ್, ಜೆಡಿಎಸ್- ಕಾಂಗ್ರೆಸ್ ಹೊಂದಾಣಿಕೆ ಬಗ್ಗೆ ಅಂತಿಮವಾಗಿದೆ.
ಮೊದಲ ಅವಧಿಗೆ ಮೇಯರ್ ಆದವರಿಗೆ 2 ವರ್ಷ 2ನೇ ಅವಧಿಗೆ ಮೇಯರ್ ಆದವರಿಗೆ ಮೂರು ವರ್ಷ ಎಂಬ ಸೂತ್ರಕ್ಕೆ ಎರಡು ಪಕ್ಷಗಳಿಂದ ಒಪ್ಪಿಗೆ ಸಿಕ್ಕಿದೆ ಎಂಬ ಮಾಹಿತಿ ನೀಡಿದ್ದಾರೆ.

ಸಮಿ ಕೂಡ ಕಾಂಗ್ರೆಸ್ ಸೇರಿಕೊಂಡಿದ್ದಾರೆ
ಇತ್ತ ಕಡೆ ಕಾಂಗ್ರೆಸ್ ಗೆ ಮೇಯರ್ ಸ್ಥಾನ ದಕ್ಕಿಸಿಕೊಳ್ಳಲು ಮಾಜಿ ಸಿಎಂ ಸಿದ್ದರಾಮಯ್ಯ ಸಭೆ ಮೇಲೆ ಸಭೆ ನಡೆಸುತ್ತಿದ್ದಾರೆ. ಕಾಂಗ್ರೆಸ್ ಬಲ ಹೆಚ್ಚಿಸಿಕೊಳ್ಳಲು ಪಕ್ಷೇತರರಿಗೆ ಗಾಳ ಹಾಕಿದ್ದಾರೆ. ಈ ನಡುವೆ ನಿನ್ನೆ ಬೆಂಗಳೂರಿನಲ್ಲಿ ಸಿದ್ದರಾಮಯ್ಯ ಸಮ್ಮುಖದಲ್ಲಿ ಪಕ್ಷೇತರ ಸದಸ್ಯ ಸಮಿ ಕೂಡ ಕಾಂಗ್ರೆಸ್ ಸೇರಿಕೊಂಡಿದ್ದಾರೆ.

18 ನಗರ ಪಾಲಿಕೆ ಸದಸ್ಯರು ರೆಸಾರ್ಟ್ ನತ್ತ
ಇದೆಲ್ಲದರ ನಡುವೆ ತಮ್ಮಪಕ್ಷದ ಸದಸ್ಯರನ್ನ ರಕ್ಷಿಸಿಕೊಳ್ಳಲು ರೆಸಾರ್ಟ್ ರಾಜಕಾರಣ ಶುರುವಾಗಿದೆ. ಮೈಸೂರಿನಿಂದ ಬಿಡದಿ ಬಳಿ ಇರುವ ಈಗಲ್ ಟನ್ ರೆಸಾರ್ಟ್ ನತ್ತ ಜೆಡಿಎಸ್ ಸದಸ್ಯರು ಪ್ರಯಾಣ ಬೆಳೆಸಿದ್ದಾರೆ. ಜೆಡಿಎಸ್ ನ ನಗರಾಧ್ಯಕ್ಷ ಕೆ.ಟಿ ಚೆಲುವೇಗೌಡ ಮುಂದಾಳತ್ವದಲ್ಲಿ ಜೆಡಿಎಸ್ ನ 18 ನಗರ ಪಾಲಿಕೆ ಸದಸ್ಯರು ರೆಸಾರ್ಟ್ ನತ್ತ ತೆರಳಿದ್ದಾರೆ.

ಇವರೆಲ್ಲಾ ಆಕಾಂಕ್ಷಿಗಳು
ಪಾಲಿಕೆ ಗದ್ದುಗೆ ಹಿಡಿಯಲು ಕೈ ಮತ್ತು ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿ ಉಂಟಾಗಿದ್ದು, ಜೆಡಿಎಸ್ ನ ಮೇಯರ್ ಸ್ಥಾನಕ್ಕೆ ಎರಡು ಪಕ್ಷಗಳ ನಡುವೆ ಹಗ್ಗಜಗ್ಗಾಟ ನಡೆಯುತ್ತಿದೆ. ಮೇಯರ್ ಸ್ಥಾನ ಜೆಡಿಎಸ್ ಪಾಲಾದರೇ ಜೆಡಿಎಸ್ ನಲ್ಲಿ ನಗರ ಪಾಲಿಕೆ ಸದಸ್ಯರಾದ ಭಾಗ್ಯ ಮಾದೇಶ್, ರುಕ್ಮಿಣಿ ಮಾದೇಗೌಡ, ಅಶ್ವಿನಿ ಅನಂತ್, ಲಕ್ಷ್ಮೀ ಶಿವಣ್ಣ, ಪ್ರೇಮ ಶಂಕರೇಗೌಡ ಮೇಯರ್ ಆಕಾಂಕ್ಷಿಗಳಾಗಿದ್ದಾರೆ.

ನಾಯಕರಿಂದ ತೀವ್ರ ಕಸರತ್ತು
ಈ ಮಧ್ಯೆ ಮೈಸೂರು ನಗರಪಾಲಿಕೆಯ ಮೇಯರ್ ಚುನಾವಣೆ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ನಡುವೆ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದ್ದು, ನಾಳೆ ಮೇಯರ್ ಚುನಾವಣೆ ಹಿನ್ನಲೆಯಲ್ಲಿ ಮೈಸೂರಿನಲ್ಲೇ ಮಾಜಿ ಸಿಎಂ ಸಿದ್ದರಾಮಯ್ಯ ವಾಸ್ತವ್ಯ ಹೂಡಿದ್ದಾರೆ. ಪರಸ್ಪರ ಸದಸ್ಯರನ್ನ ಕಾಪಾಡಿಕೊಳ್ಳಲು ಎರಡು ಪಕ್ಷದ ನಾಯಕರಿಂದ ತೀವ್ರ ಕಸರತ್ತು ನಡೆಸುತ್ತಿದ್ದಾರೆ.
ಈ ನಡುವೆ ಪಕ್ಷೇತರ ನಗರಪಾಲಿಕೆ ಸದಸ್ಯ ಕೆ.ವಿ. ಶ್ರೀಧರ್ ಕಾಂಗ್ರೆಸ್ ಗೆ ಬೆಂಬಲ ಸೂಚಿಸಿದ್ದಾರೆ. ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದ ಕೆ.ವಿ.ಶ್ರೀಧರ್ ಇದೀಗ ರಾಮಕೃಷ್ಣನಗರದ ಸಿದ್ದರಾಮಯ್ಯ ನಿವಾಸದಲ್ಲಿ ಪ್ರತ್ಯಕ್ಷವಾಗಿದ್ದು , ಕಾಂಗ್ರೆಸ್ ಗೆ ಬೆಂಬಲ ಸೂಚಿಸಿದ್ದಾರೆ.












Click it and Unblock the Notifications