ಉಪಚುನಾವಣೆ ಗೆಲುವು: ಸಿದ್ದರಾಮಯ್ಯ ಟ್ವೀಟ್ ನಲ್ಲೇನಿದೆ?
ಮುಖ್ಯಮಂತ್ರಿ ಸಿದ್ದರಾಮಯ್ಯ ಖುದ್ದು ಆಸ್ಥೆ ವಹಿಸಿ, ಸತತ ಪ್ರಚಾರ ನಡೆಸಿದ್ದಕ್ಕೆ ಫಲ ಸಿಕ್ಕಿದೆ. ಈ ಕುರಿತು ಗೆದ್ದ ಅಭ್ಯರ್ಥಿಗಳಿಗೆ ಸಿದ್ದರಾಮಯ್ಯ ತಮ್ಮ ಟ್ವಿಟರ್ ಖಾತೆಯಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ.
ಮೈಸೂರು, ಏಪ್ರಿಲ್ 13: ಗುಂಡ್ಲೆಪೇಟೆ ಮತ್ತು ನಂಜನಗೂಡು ವಿಧಾನಸಭಾ ಕ್ಷೇತ್ರದ ಫಲಿತಾಂಶ ಹೊರಬಿದ್ದು, ಕಾಂಗ್ರೆಸ್ ಪಾಳೆಯದಲ್ಲಿ ಸಂಭ್ರಮ ಮನೆ ಮಾಡಿದೆ.
ಗುಂಡ್ಲೆಪೇಟೆ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಮಹದೇವಪ್ರಸಾದ್ ಮತ್ತು ನಂಜನಗೂಡು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕಳಲೆ ಕೇಶವ ಮೂರ್ತಿ ಇಬ್ಬರೂ ಕ್ರಮವಾಗಿ ಬಿಜೆಪಿಯ ನಿರಂಜನ ಕುಮಾರ್ ಮತ್ತು ಶ್ರೀನಿವಾಸ್ ಪ್ರಸಾದ್ ಅವರ ವಿರುದ್ಧ ಜಯಗಳಿಸಿದ್ದಾರೆ.[ಒಳ್ಳೆ ಕಾಮಿಡಿ ಕಣ್ರಿ; ರಾಹುಲ್ ಬಂದಿಲ್ವಂತೆ, ಅದ್ಕೆ ಕೈಗೆ ಜೈ ಅಂದ್ರಂತೆ]
2018 ರ ವಿಧಾನಸಭಾ ಚುನಾವಣೆಯ ದಿಕ್ಸೂಚಿ ಎಂದೇ ಕರೆಸಿಕೊಂಡಿದ್ದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಜಯಗಳಿಸಿರುವುದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವರ್ಚಸ್ಸು ಮತ್ತಷ್ಟು ಹೆಚ್ಚುವಂತೆ ಮಾಡಿದೆ. ಸದ್ಯಕ್ಕೆ ದೇಶದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿರುವ ಅತಿದೊಡ್ಡ ರಾಜ್ಯವಾದ ಕರ್ನಾಟಕದ ಈ ಉಪಚುನಾವಣೆಯ ಫಲಿತಾಂಶ, ಸತತ ಸೋಲಿನಿಂದ ಕಂಗೆಟ್ಟಿದ್ದ ಕಾಂಗ್ರೆಸ್ ಹೈಕಮಾಂಡ್ ಗೂ ಕೊಂಚ ಸಮಾಧಾನ ತಂದಿದ್ದು ಸುಳ್ಳಲ್ಲ.
ಮುಖ್ಯಮಂತ್ರಿ ಸಿದ್ದರಾಮಯ್ಯ ಖುದ್ದು ಆಸ್ಥೆ ವಹಿಸಿ, ಮೈಸೂರಿನಲ್ಲೇ 10 ದಿನಗಳ ಕಾಲ ಠಿಕಾಣಿ ಹೂಡಿ, ಸತತ ಪ್ರಚಾರ ನಡೆಸಿದ್ದಕ್ಕೆ ಫಲ ಸಿಕ್ಕಿದೆ. ಈ ಕುರಿತು ಗೆದ್ದ ಅಭ್ಯರ್ಥಿಗಳಿಗೆ ಸಿದ್ದರಾಮಯ್ಯ ತಮ್ಮ ಟ್ವಿಟರ್ ಖಾತೆಯಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ.[ಫಲಿತಾಂಶ : ನೆಗೆದುಬಿದ್ದ ಗುಪ್ತಚರ ಇಲಾಖೆಯ ವರದಿ]
|
ಅಭಿನಂದನೆ ಸಲ್ಲಿಸಿದ ಸಿದ್ದು
ಉಪಚುನಾವಣೆಯಲ್ಲಿ ಜಯಶೀಲರಾದ ವಾ.ಗೀತಾ ಮಹದೇವಪ್ರಸಾದ್ ಮತ್ತು ಕಳಲೆ ಕೇಶವ ಮೂರ್ತಿ ಇಬ್ಬರಿಗೂ ಅಭಿನಂದನೆಗಳು ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
|
ಕಾರ್ಯಕರ್ತರಿಗೂ ಆಭಾರಿ
ಈ ಗೆಲುವು ಜನರಿಗೆ, ಜನಪರ ಆಡಳಿತಕ್ಕೆ ಸಂದ ಜಯ, ಸರ್ಕಾರದ ಕಾರ್ಯಕ್ರಮಗಳಿಗೆ, ಸಂಘಟಿತ ಹೋರಾಟಕ್ಕೆ ಸಿಕ್ಕ ಪ್ರತಿಫಲ ಇದು ಎಂದು ಚುನಾವಣೆಯ ಗೆಲುವಿಗೆ ಕಾರಣೀಕರ್ತರಾದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದ್ದಾರೆ.
|
ಜನತೆಗೆ ನಮನ
ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಆಶೀರ್ವದಿಸಿ ಗೆಲ್ಲಿಸಿದ ಗುಂಡ್ಲುಪೇಟೆ ಮತ್ತು ನಂಜನಗೂಡು ಮತದಾರರಿಗೆ ತುಂಬು ಹೃದಯದ ಧನ್ಯವಾದ ಅರ್ಪಿಸಿದ್ದಾರೆ
|
ಪ್ರಗತಿಯಷ್ಟೇ ಪರಿಗಣನೆ
ಜಾತಿ ಮತ, ಹಣ ಇಂಥ ಯಾವುದೇ ದೌರ್ಬಲ್ಯಕ್ಕೆ ಬಲಿಯಾಗದೆ, ಕೇವಲ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನಷ್ಟೇ ಪರಿಗಣಿಸಿ ಮತ ನೀಡಿದ ಜನತೆಗೆ ನಾನು ಶರಣು ಎಂದು ಜನತೆಗೆ ಮತ್ತೊಮ್ಮೆ ಕೃತಜ್ಞತೆ ಹೇಳಿದ್ದಾರೆ
ಕುತೂಹಲಕ್ಕೆ ತೆರೆ
ಏಪ್ರಿಲ್ 9 ಭಾನುವಾರದಂದು ನಡೆದಿದ್ದ ವಿಧಾನ ಸಭಾ ಚುನಾವಣೆ ರಾಜ್ಯದಲ್ಲಿ ತೀವ್ರ ಕುತೂಹಲ ಸೃಷ್ಟಿಸಿತ್ತು. ಕಾಂಗ್ರೆಸ್ ಹಾಗೂ ಬಿಜೆಪಿಯ ಘಟಾನುಘಟಿ ನಾಯಕರೂ ಸತತ ಪ್ರಚಾರ ಕಾರ್ಯದಲ್ಲಿ ತೊಡಗಿದ್ದರಿಂದ ಉಪಚುನಾವಣೆ ಉಭಯ ಪಕ್ಷಗಳಿಗೂ ಪ್ರತಿಷ್ಠೆಯ ಪ್ರಶ್ನೆ ಎನ್ನಿಸಿತ್ತು. ಇದೀಗ ಫಲಿತಾಂಶ ಹೊರಬಿದ್ದಿದ್ದು, ಇಷ್ಟು ದಿನದ ಕುತೂಹಲಕ್ಕೆ ತೆರೆಬಿದ್ದಿದೆ.