ಓವೈಸಿಯದ್ದು ಕೋಮುವಾದಿ ಪಕ್ಷ, ಅದಕ್ಕೆ ರಾಜ್ಯದಲ್ಲಿ ಬೆಲೆ ಇಲ್ಲ: ಸಿಎಂ
ಮೈಸೂರು, ಏಪ್ರಿಲ್ 16: "ಅಸಾದುದ್ದೀನ್ ಓವೈಸಿಯವರ ಎಐಎಂಐಎಂ ಕೋಮುವಾದ ಪಕ್ಷ ಎಂದು ರಾಜ್ಯದಲ್ಲಿ ಬಿಂಬಿತವಾಗಿದೆ. ಅಂತಹ ಪಕ್ಷ ಜೆಡಿಎಸ್ ಬೆಂಬಲಿಸಿದರೆ ಯಾರಿಗೂ ಲಾಭವಿಲ್ಲ," ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.
ಇಂದು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸಿದ ಅವರು, ಪ್ರಚಾರದ ನಡುವೆ ಸುದ್ದಿಗಾರರೊಂದಿಗೆ ಮಾತನಾಡಿದರು. "ಜೆಡಿಎಸ್ ಗೆ ಓವೈಸಿ ಬೆಂಬಲ ನೀಡಿದರೆ ಕಾಂಗ್ರೆಸ್ ಗೇ ಯಾವ ಹೊಡೆತವೂ ಬೀಳುವುದಿಲ್ಲ," ಎಂದರು. ಓವೈಸಿಗೆ ರಾಜ್ಯದಲ್ಲಿ ಎಲ್ಲಿ ಸ್ಥಾನವಿದೆ. ಅವರು ಎಲ್ಲಿ ಗೆದ್ದಿದ್ದಾರೆ? ಎಂದು ಪ್ರಶ್ನಿಸಿದರು.
ಓವೈಸಿ ಕೋಮು ಗಲಭೆಗೆ ಅವಕಾಶ ಕೊಟ್ಟಿಲ್ಲ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, "ಹೆತ್ತವರಿಗೆ ಹೆಗ್ಗಣ ಮುದ್ದು ಅಂತಾರಲ್ಲ ಹಾಗೆ. ಅವರು ಸಹಾಯ ತೆಗೆದುಕೊಳ್ಳುತ್ತಿದ್ದಾರಲ್ಲ, ಅದಕ್ಕೆ ಹಾಗೆ ಹೇಳ್ತಾರೆ," ಎಂದರು.
ರಾಜಕೀಯ ಪ್ರೇರಿತ ಐಟಿ ದಾಳಿ
ಆನೇಕಲ್ ಶಾಸಕ ಶಿವಣ್ಣ ಮನೆ ಮೇಲೆ ಐಟಿ ರೈಡ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, "ಚುನಾವಣೆ ಸಂದರ್ಭದಲ್ಲಿ ದಾಳಿ ಮಾಡಿರುವುದು ರಾಜಕೀಯ ಪ್ರೇರಿತ. ನಾನು ಇದನ್ನು ಖಂಡಿಸುತ್ತೇನೆ. ಐಟಿ ರೈಡ್ ಮಾಡುವ ಬಗ್ಗೆ ತಕರಾರಿಲ್ಲ. ಆದರೆ ಚುನಾವಣೆ ಸಮಯದಲ್ಲಿ ಮಾಡಿದ್ದು ಎಷ್ಟರ ಮಟ್ಟಿಗೆ ಸರಿ?" ಎಂದರು.
ಬಿಸಿಲಿನ ಝಳಕ್ಕೆ ಸಿದ್ದರಾಮಯ್ಯ ಪ್ರಚಾರ ಮಾಡ್ತಿದ್ದೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, "ನಾವು ಬಿಸಿಲಿನಲ್ಲಿ ಎಮ್ಮೆ ಮೇಯಿಸಿಕೊಂಡು ಬೆಳೆದು ಬಂದವರು. ಈ ಬಿಸಿಲು ನನಗೆ ಲೆಕ್ಕಕ್ಕಿಲ್ಲ," ಎಂದರು.
ಹಿಂದಿನ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಇಲ್ಲಿನ ಮತದಾರರಾದ ನೀವು ನನ್ನನ್ನು ಗೆಲ್ಲಿಸಿದ್ದೀರಿ. ಈ ಬಾರಿಯೂ ಅದೇ ರೀತಿ ಆಶೀರ್ವದಿಸಿ ಎಂದು ಸಿಎಂ ಪ್ರಚಾರದ ವೇಳೆ ಮನವಿ ಮಾಡಿದರು.
ಬೆಳಿಗ್ಗೆಯಿಂದ ರೋಡ್ ಶೋ
ಇಂದು ಬೆಳಿಗ್ಗೆಯಿಂದಲೇ ರೋಡ್ ಶೋನಲ್ಲಿ ಭಾಗವಹಿಸಿದ ಸಿಎಂ, ಇದೇ 20ರಂದು ಚಾಮುಂಡೇಶ್ವರಿಯಲ್ಲಿ ನಾನು ಹಾಗೂ ವರುಣಾದಿಂದ ಡಾ. ಯತೀಂದ್ರ ನಾಮಪತ್ರ ಸಲ್ಲಿಸುತ್ತಿದ್ದೇವೆ. ನೀವೆಲ್ಲರೂ ಸೇರಿ ನಮಗೆ ಆಶೀರ್ವಾದ ಮಾಡಬೇಕು ಎಂದರು.
ಬೋವಿ ಜನಾಂಗ ಹೆಚ್ಚಿರುವ ಲಿಂಗಾಬುದು ಪಾಳ್ಯದಲ್ಲಿ ಮಾತನಾಡಿ, "ರಾಜ್ಯದಲ್ಲಿ ಈ ಬಾರಿ ಚುನಾವಣೆಯಲ್ಲಿ ಬೋವಿ ಸಮುದಾಯದ 7 ಮುಖಂಡರಿಗೆ ಟಿಕೆಟ್ ನೀಡಿದ್ದೇವೆ. ಈ ಬಾರಿ 7 ಜನ ಅಭ್ಯರ್ಥಿಗಳು ಗೆದ್ದೇ ಗೆಲ್ಲುವ ವಿಶ್ವಾಸವಿದೆ. ಕಳೆದ ಬಾರಿ 5 ಜನ ಬೋವಿ ಮುಖಂಡರು ಶಾಸಕರಾಗಿ ಆಯ್ಕೆಯಾಗಿದ್ದರು. ನಿಮ್ಮ ಸಮುದಾಯದ ಮತ್ತು ಮುಖಂಡ ಎಂಎಲ್ಎ ಆದರೆ ನಿಮಗೆ ತಾನೇ ಅನುಕೂಲ," ಎಂದರು.
ಪ್ರೀತಿ ವಿಶ್ವಾಸ ಹೀಗೇ ಇರಲಿ
ನಮ್ಮ ಸರ್ಕಾರ ನಿಮ್ಮ ಗ್ರಾಮದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದೆ. ನಿಮ್ಮ ಈ ಪ್ರೀತಿ ವಿಶ್ವಾಸ ನನ್ನ ಮೇಲೆ ಹೀಗೆ ಇರಲಿ. 2006ರಲ್ಲಿ ಈ ಕ್ಷೇತ್ರದಲ್ಲಿ ನಾನು ಸ್ಪರ್ಧಿಸಿದ್ದೆ. ಆಗ ಚುನಾವಣೆಯಲ್ಲಿ ನನ್ನನ್ನು ಆಶೀರ್ವದಿಸಿ ಕಳುಹಿಸಿದ್ದೀರಿ. ಹಾಗೆಯೇ ಈ ಬಾರಿಯೂ ನನ್ನನ್ನು ಆಶೀರ್ವದಿಸಿ ಎಂದು ಮನವಿ ಮಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದೇ ಏರಿಯಾದಲ್ಲಿ ಎರಡೆರಡು ದೇವಸ್ಥಾನಗಳಿಗೆ ಭೇಟಿ ನೀಡಿದ್ದು, ಮೊದಲು ಸಿದ್ದಪ್ಪಾಜಿ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರು. ನಂತರ ರಾಮ ಮಂದಿರಕ್ಕೆ ತೆರಳಿ ಕೈ ಮುಗಿದು ಪೂಜೆ ಸಲ್ಲಿಸಿದರು.
ರೋಡ್ ಶೋ ಎಂಜಾಯ್ ಮಾಡಿದ ಸಿಎಂ
ಇದೇ ವೇಳೆ ಶ್ರೀರಾಂಪುರ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಲಕ್ಷ್ಮಯ್ಯ ಮನೆಯಲ್ಲಿ ರಾಗಿ ದೋಸೆ, ಇಡ್ಲಿ ತಿದ್ದು ಖುಷಿ ಪಟ್ಟರು. ಕತ್ತು ಹಿಡಿದು ವೀರಭದ್ರ ಕುಣಿತ ಸಹ ಮಾಡಿದ ಸಿಎಂ, ಚಾಮುಂಡಿ ಅಧಿಪತ್ಯಕ್ಕೆ ನಾನು ರೆಡಿ ಎಂದು ತೋರಿಸಿಕೊಟ್ಟರು.
ಲಿಂಗಾಂಬುದಿ
ಪಾಳ್ಯದ
ಬೋವಿ
ಸಮುದಾಯದ
ಸಮಾವೇಶದಲ್ಲಿ
ಪಾಲ್ಗೊಂಡು
ತಮ್ಮ
ಬಹು
ದಿನಗಳ
ಸ್ನೇಹಿತರೊಂದಿಗೆ
ನಗುನಗುತ್ತಲೇ
ಕಾರ್ಯಕ್ರಮದಲ್ಲಿ
ಭಾಗವಹಿಸಿದರು.
ಇಂದು 17 ಗ್ರಾಮಗಳಲ್ಲಿ ರೋಡ್ ಶೋ ಹಾಗೂ ಪಾದಯಾತ್ರೆ ಮೂಲಕ ಮತ ಯಾಚನೆ ನಡೆಸಿದ ಸಿಎಂ ಸಿದ್ದರಾಮಯ್ಯ, ನಾಳೆ ಅಂದರೆ ಮಂಗಳವಾರ ವರುಣಾ ಕ್ಷೇತ್ರದ ಹಳ್ಳಿಗಳಲ್ಲಿ ತಮ್ಮ ಮಗನ ಪರವಾಗಿ ಪ್ರಚಾರ ನಡೆಸಲಿದ್ದಾರೆ. ಸಿಎಂಗೆ ಇದೇ ಮೊದಲ ಬಾರಿಗೆ ಆಪ್ತ ಸಚಿವ ಮಹದೇವಪ್ಪ ಸಾಥ್ ನೀಡುತ್ತಿರುವುದು ವಿಶೇಷವಾಗಿದೆ.