ಚರ್ಚೆಗೆ ಸಿದ್ಧ : ಅಮಿತ್ ಶಾಗೆ ಸಿದ್ದರಾಮಯ್ಯ ಚಾಲೆಂಜ್
ಮೈಸೂರು, ಜನವರಿ 11: ನಮ್ಮ ಮತ್ತು ಕೇಂದ್ರದ ಬಿಜೆಪಿಯ ಸಾಧನೆಗಳ ಬಗ್ಗೆ ಬಹಿರಂಗ ಚರ್ಚೆಗೆ ಸಿದ್ದನಿದ್ದೇನೆ, ಒಂದೇ ವೇದಿಕೆಯಲ್ಲಿ ಎರಡೂ ಸರ್ಕಾರಗಳ ಸಾಧನೆಗಳ ಚರ್ಚೆ ಆಗಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿಗೆ ಪಂಥಾಹ್ವಾನ ನೀಡಿದ್ದಾರೆ.
ಹೆಗ್ಗಡದೇವನಕೋಟೆ ವಿಧಾನಸಭಾ ಕ್ಷೇತ್ರದಲ್ಲಿ 113 ಕೋಟಿ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಮುಂಚೆ ನೀಡಿದ್ದ ಎಲ್ಲಾ ಭರವಸೆಗಳನ್ನು ಈಡೇರಿಸಿದೆ ಎಂದು ಹೇಳಿದರು.
ಇಡೀ ದೇಶದಲ್ಲಿ ಕರ್ನಾಟಕ ನೇರ ತೆರಿಗೆ ಸಂಗ್ರಹದಲ್ಲಿ ಎರಡನೇ ಸ್ಥಾನದಲ್ಲಿದೆ ಎಂದ ಸಿದ್ದರಾಮಯ್ಯ, ಸಂವಿಧಾನಬದ್ಧವಾಗಿ ಆಯಾ ರಾಜ್ಯಕ್ಕೆ ಕೇಂದ್ರ ಸರ್ಕಾರ ಪಾಲು ಕೊಡಲೇಬೇಕು ಅದನ್ನೇ ಕೇಂದ್ರ ನೀಡಿದೆ, ಅದು ನಮ್ಮ ಹಕ್ಕು, ಭಿಕ್ಷೆ ಅಲ್ಲ ಎಂದು ಅವರು ಹೇಳಿದರು.
ರಾಜ್ಯಗಳಿಗೆ ಎರಡು ಬಗೆಯ ಅನುದಾನ ಬರುತ್ತದೆ. ಒಂದು ಕೇಂದ್ರ ತೆರಿಗೆಗಳ ಪಾಲು ಮತ್ತೊಂದು ಅನುದಾನಗಳು. ಅಮಿತ್ ಶಾ ಅವರಿಗೆ ಸಂವಿಧಾನ ಗೊತ್ತಿಲ್ಲ. ಬಾಯಿಗೆ ಬಂದಂತೆ ಮಾತನಾಡುತ್ತಾರೆ ಎಂದರು.

2.06 ಲಕ್ಷ ಕೋಟಿ ಬಜೆಟ್
ಬಜೆಟ್ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ ಅವರು ಈ ಬಾರಿ ನಾನು 13ನೇ ಬಜೆಟ್ ಅನ್ನು ಫೆಬ್ರವರಿಯಲ್ಲಿ ಮಂಡಿಸಲಿದ್ದು, ಈ ಬಾಇರಯ ಬಜೆಟ್ 2.06 ಲಕ್ಷ ಕೋಟಿಯ ಬೃಹತ್ ಬಜೆಟ್ ಆಗಿರಲಿದೆ ಎಂದರು. ಎಲ್ಲಾ ಜಾತಿ, ವರ್ಗ, ಭಾಗಗಳಿಗೂ ಅಭಿವೃದ್ಧಿಯನ್ನು ತಲುಪಿಸುವ ಉದ್ದೇಶ ಕಾಂಗ್ರೆಸ್ ಹೊಂದಿದೆ ಎಂದು ಅವರು ಹೇಳಿದರು.

ಬಿಜೆಪಿಯಿಂದ ನಾಟಕ
ಉಳುವವನೇ ಭೂಮಿಯ ಒಡೆಯ ಎಂಬಂತೆ ಹಾಡಿಗಳಲ್ಲಿ, ಹಟ್ಟಿಗಳಲ್ಲಿ ವಾಸಿಸುವವರಿಗೆ ವಾಸಿಸುವವನೇ ಮನೆಯೊಡೆಯ ಎಂಬ ಕಾನೂನು ತಂದಿದ್ದೇವೆ. ದಲಿತರ ಬಗ್ಗೆ ಕಾಳಜಿಯೇ ಇಲ್ಲದೆ ವಿರೋಧ ಪಕ್ಷದವರು 'ಬಿಜೆಪಿ ನಡಿಗೆ ದಲಿತರ ಮನೆಗೆ' ಎಂಬ ನಾಟಕ ಮಾಡುತ್ತಾರೆ. ಯಡಿಯೂರಪ್ಪ, ಶೋಭಾ ಕರಂದ್ಲಾಜೆ ಎಲ್ಲರೂ ದಲಿತರ ಮನೆಗೆ ಹೋಗಿ ಹೋಟೆಲ್ ನಿಂದ ತಿಂಡಿ ತರಿಸಿ ತಿಂದು ಬರುತ್ತಾರೆ. ಯಡಿಯೂರಪ್ಪ ಕೆಜೆಪಿ ಅಧ್ಯಕ್ಷರಾಗಿದ್ದಾಗ ಟಿಪ್ಪೂ ಜಯಂತಿಯಲ್ಲಿ ಟಿಪ್ಪೂ ಪೇಟ ಧರಿಸಿ, ಖಡ್ಗ ಹಿಡಿದು ಟಿಪ್ಪೂ ಒಬ್ಬ ದೇಶಪ್ರೇಮಿ ಎಂದಿದ್ದರು. ಈಗ ಟಿಪ್ಪೂ ಒಬ್ಬ ಮತಾಂಧ ಎನ್ನುತ್ತಾರೆ ಎಂದರು.

ರೈತ ವಿರೋಧಿ ಬಿಜೆಪಿ
ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ನಮ್ಮ ಪಕ್ಷದ ಉಗ್ರಪ್ಪ ಸಾಲ ಮನ್ನಾ ಮಾಡಿ ಎಂದು ಕೇಳಿಕೊಂಡರು ಆದರೆ ಅದಕ್ಕೆ ಯಡಿಯೂರಪ್ಪ 'ಸಾಲ ಮಾಡಲಿಕ್ಕೆ ದುಡ್ಡು ಎಲ್ಲಿಂದ ತರಲಿ? ನಾನೇನು ನೋಟ್ ಪ್ರಿಂಟ್ ಮಾಡುವ ಮಿಷಿನ್ ಇಟ್ಟಿದ್ದೀನಾ? ಎಂದು ಪ್ರಶ್ನಿಸಿದ್ದರು. ಆದರೆ ಈಗ ನನ್ನನ್ನು ಸಾಲ ಮನ್ನಾ ಮಾಡಿ ಎನ್ನುತ್ತಾರೆ ಎಂದರು.

ಪ್ರಜೆಗಳೇ ಪ್ರಭುಗಳು
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದು ನಾಲ್ಕು ವರ್ಷ ಎಂಟು ತಿಂಗಳಾಗಿವೆ. ನನಗೆ ನುಡಿದಂತೆ ನಡೆದಿರುವ ಸಮಾಧಾನವಿದೆ. ರಾಜ್ ಕುಮಾರ್ ಅಭಿಮಾನಿ ದೇವರುಗಳೇ ಎನ್ನುತ್ತಿದ್ದರು. ನಮಗೆ ಮತ ನೀಡುವ ಪ್ರಜೆಗಳೇ ಪ್ರಭುಗಳು. ನಾನು 165 ಭರವಸೆಗಳನ್ನು ನೀಡಿದ್ದೆ. ಎಲ್ಲ ಭರವಸೆಗಳನ್ನೂ ಈಡೇರಿಸಿದ್ದೇನೆ. ಪ್ರಣಾಳಿಕೆಯಲ್ಲಿ ಇಲ್ಲದ ಅನೇಕ ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದೇವೆ. ಅನಿಲ ಭಾಗ್ಯ, ಸಾಲ ಮನ್ನಾ, ಶೂ ಭಾಗ್ಯ, ಆರೋಗ್ಯಭಾಗ್ಯ ಪಶುಭಾಗ್ಯ ಪ್ರಣಾಳಿಕೆಯಲ್ಲಿ ಹೇಳಿರಲಿಲ್ಲ. ಆದರೂ ಜಾರಿಗೆ ತಂದಿದ್ದೇವೆ ಎಂದರು.












Click it and Unblock the Notifications