Mysuru Dasara: ಮೈಸೂರು ದಸರಾ; ಉನ್ನತ ಮಟ್ಟದ ಸಭೆ ನಡೆಸಲಿರುವ ಸಿಎಂ ಸಿದ್ದರಾಮಯ್ಯ
ನಾಡಹಬ್ಬ ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಜುಲೈ ಅಂತ್ಯದಲ್ಲಿ ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆಯಲಿದೆ ಎಂದು ಮೈಸೂರು ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿ ಮಾತನಾಡಿದ ಅವರು, ಅಕ್ಟೋಬರ್ 3ರಿಂದ 12ರವರೆಗೆ ಮೈಸೂರು ದಸರಾ ನಡೆಯಲಿದ್ದು, ಕಳೆದ ಬಾರಿ ದಸರಾ ಕಾರ್ಯಕ್ರಮಗಳಲ್ಲಿ ಏನಾದರೂ ಲೋಪವಾಗಿದ್ದರೆ ಸರಿಪಡಿಸಿಕೊಂಡು ಈ ಬಾರಿ ವ್ಯವಸ್ಥಿತವಾಗಿ ನಾಡಹಬ್ಬ ನಡೆಸಲು ಕೈಗೊಳ್ಳಬೇಕಾದ ಕ್ರಮಗಳು, ದಸರಾ ಉದ್ಘಾಟನೆ, ಗಜ ಪಯಣ, ಆನೆಗಳ ಆರೈಕೆ, ವಿದ್ಯುತ್ ದೀಪಾಲಂಕಾರ, ವಿಜಯ ದಶಮಿ ಮೆರವಣಿಗೆ, ಪ್ರವಾಸೋದ್ಯಮ ಅಭಿವೃದ್ಧಿ ಸಂಬಂಧ ಮಾಹಿತಿ ಕಲೆ ಹಾಕಿದರು.

ನವರಾತ್ರಿ ಉತ್ಸವದ ಎಲ್ಲಾ ಕಾರ್ಯಕ್ರಮಗಳ ಪಟ್ಟಿ, ಉಪಸಮಿತಿಗಳು, ದಸರಾ ಅಭಿವೃದ್ಧಿ ಕಾಮಗಾರಿಗಳು, ಸ್ವಚ್ಛತೆ, ಸಾರಿಗೆ, ಪ್ರಚಾರ, ನಿರ್ವಹಣೆ, ಅರಮನೆ ಕಾರ್ಯಕ್ರಮಗಳು, ಪ್ರವಾಸೋದ್ಯಮ ಅಭಿವೃದ್ಧಿ ಕುರಿತಂತೆ ಪೂರ್ವ ತಯಾರಿ ಮಾಡಿಕೊಂಡು ಸಂಪೂರ್ಣ ಮಾಹಿತಿಯೊಂದಿಗೆ ಉನ್ನತ ಮಟ್ಟದ ಸಮಿತಿ ಸಭೆಗೆ ತಿಳಿಸಬೇಕಿರುವುದರಿಂದ ಎಲ್ಲರೂ ತಯಾರಿ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಈ ಬಾರಿಯ ನಾಡಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲು ಸರಕಾರ ನಿರ್ಧರಿಸುವ ಸಾಧ್ಯತೆ ಇರುವ ಕಾರಣ ಯುವ ಸಂಭ್ರಮ, ಯುವ ದಸರಾ, ಆಹಾರ ಮೇಳ, ಕ್ರೀಡಾಕೂಟ, ಸಾಂಸ್ಕೃತಿಕ ಕಾರ್ಯಕ್ರಮಗಳು, ಪಂಜಿನ ಕವಾಯತು ಪ್ರದರ್ಶನ ಹಾಗೂ ದೀಪಾಲಂಕಾರವನ್ನು ಅತ್ಯುತ್ತಮವಾಗಿ ಮಾಡಲು ನಾವು ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.












Click it and Unblock the Notifications