ಲೈಂಗಿಕ ದೌರ್ಜನ್ಯ ಎಸಗಿದವರ ವಿರುದ್ಧ ಕಠಿಣ ಕ್ರಮ: ಸಿದ್ದು
ಮೈಸೂರು, ಜನವರಿ 6 : ಬೆಂಗಳೂರಿನ ಕಮ್ಮನಹಳ್ಳಿಯಲ್ಲಿ ಹೊಸವರುಷದ ಆಚರಣೆ ಸಂಬಂಧ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ತಿಳಿಸಿದ್ದಾರೆ.
ಮೈಸೂರಿನಲ್ಲಿರುವ ರಾಮಕೃಷ್ಣನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಲೈಂಗಿಕ ದೌರ್ಜನ್ಯವೊಂದು ಅಮಾನವೀಯ ಕೃತ್ಯ . ಇಂತಹ ಘಟನೆಗಳು ಮರುಕಳಿಸದಂತೆ ಪೊಲೀಸ್ ಇಲಾಖೆ ಜಾಗೃತವಾಗಿದೆ. ಯುವತಿಯರು ಹಾಗೂ ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸಿ ಲೈಂಗಿಕ ದೌರ್ಜನ್ಯವೆಸಗಿದರೆ, ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದರು. ಅಲ್ಲದೆ ಬೆಂಗಳೂರು ಸುರಕ್ಷಿತವಾಗಿದೆ. ಅದರ ಬಗ್ಗೆ ಅಪಪ್ರಚಾರ ಸಲ್ಲದು ಎಂದು ಹೇಳಿದರು.[ಒಂದು ಹಗ್, ಕಿಸ್ ಗಾಗಿ ನಡೆದಿತ್ತಾ ಕಮ್ಮನಹಳ್ಳಿ ಕಿರುಕುಳ?]

ಕಾವೇರಿ ಭಾಗದ ಜಲಾಶಯಗಳಲ್ಲಿ ಕುಡಿಯಲು ನೀರಿಲ್ಲ. ತಮಿಳುನಾಡಿಗೆ ನೀರು ಬಿಡುವುದಾದರೂ ಹೇಗೆ? ಸುಪ್ರೀಂಕೋರ್ಟ್ ಗೆ ಮತ್ತೆ ಮನವರಿಕೆ ಮಾಡಿಕೊಡಲು ಪತ್ರ ಬರೆಯಲಾಗುವುದು. ಕಾವೇರಿ ಭಾಗದ ರೈತರು, ಜಾನುವಾರು, ಜನತೆ ಕುಡಿಯಲು ನೀರಿಲ್ಲದೇ ಪರದಾಡುತ್ತಿರುವಾಗ ಸುಪ್ರೀಂಕೋರ್ಟ್ ನೀಡಿದ ತೀರ್ಪು ತುಂಬ ಬೇಸರ ತಂದಿದೆ ಎಂದು ಹೇಳಿದರು.
ಎರಡು ವರ್ಷಗಳಿಂದ ರಾಜ್ಯ ಮುಂಗಾರು ಹಾಗೂ ಹಿಂಗಾರು ಮಳೆ ಕೈಕೊಟ್ಟಿರುವುದರಿಂದ ಬರ ಪರಿಹಾರಕ್ಕಾಗಿ ಕೇಂದ್ರ ಸರ್ಕಾರಕ್ಕೆ ರು 4703 ಕೋಟಿ ಕೇಳಲಾಗಿತ್ತು. ಆದರೆ ಕೇಂದ್ರ ಸರ್ಕಾರ 1783 ಕೋಟಿ ನೀಡಿರುವುದು ಬಹಳ ಕಡಿಮೆಯಾಗಿದೆ. ಇದರಿಂದ ಬರ ಸಮಸ್ಯೆ ಬಗೆಹರಿಯಲು ಕಷ್ಟವಾಗಲಿದೆ. ಹೆಚ್ಚಿನ ಪರಿಹಾರಕ್ಕಾಗಿ ಮತ್ತೆ ಪ್ರಧಾನಿಯವರ ಬಳಿ ಮನವಿ ಮಾಡಲಾಗುವುದು ಎಂದು ಹೇಳಿದರು.












Click it and Unblock the Notifications