ಎಚ್ಡಿಕೆ-ಸಿದ್ದು ವೈಮನಸ್ಸೇ ಪಕ್ಷಗಳ ದೋಸ್ತಿಗೆ ಮುಳುವಾಗುತ್ತಿದೆಯಾ?
ಮೈಸೂರು, ಜೂನ್ 8: ಕಾಂಗ್ರೆಸ್ ಬೆಂಬಲದಿಂದ ರಾಜ್ಯಸಭೆಯಲ್ಲಿ ತನ್ನ ಅಭ್ಯರ್ಥಿಯನ್ನು ಸುಲಭವಾಗಿ ಗೆಲ್ಲಿಸಿಕೊಳ್ಳುವ ಜೆಡಿಎಸ್ ನ ಕನಸು ಭಗ್ನವಾದಂತೆ ಗೋಚರಿಸುತ್ತಿದೆ. ಎಚ್.ಡಿ.ಕುಮಾರಸ್ವಾಮಿ ಒಂದೆಡೆ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ವಿರುದ್ಧ ಹರಿಹಾಯುತ್ತಲೇ ಕಾಂಗ್ರೆಸ್ ನತ್ತ ಮೆದುಧೋರಣೆಯನ್ನು ತಾಳುತ್ತಿರುವುದನ್ನು ಗಮನಿಸಿದರೆ ಕಾಂಗ್ರೆಸ್ ತಮ್ಮನ್ನು ಬೆಂಬಲಿಸಬಹುದೇನೋ ಎಂಬ ನಿರೀಕ್ಷೆ ಎದ್ದು ಕಾಣುತ್ತಿದೆ.
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಕಾಂಗ್ರೆಸ್ ಹೈಕಮಾಂಡ್ ಜತೆ ಮಾತುಕತೆ ನಡೆಸಿ ಅವರ ಬೆಂಬಲದೊಂದಿಗೆ ತಮ್ಮ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಬಹುದು ಎಂಬ ವಿಶ್ವಾವಿತ್ತಾದರೂ ಅದಕ್ಕೆ ಎಳ್ಳು ನೀರು ಬಿಟ್ಟಿದ್ದು ಬೇರೆ ಯಾರೂ ಅಲ್ಲ ಸಿದ್ದರಾಮಯ್ಯ ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ರಾಜ್ಯ ಸಭೆ ಚುನಾವಣೆಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಮುನ್ನ ಜೆಡಿಎಸ್ ನಾಯಕರು ಸಿದ್ದರಾಮಯ್ಯ ಅವರನ್ನು ಬದಿಗೆ ಸರಿಸಿ ಹೈಕಮಾಂಡ್ ನ ಸಂಪರ್ಕ ಸಾಧಿಸಿ ಸೋನಿಯಾಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಮಾತುಕತೆ ನಡೆಸಿ ಸುಲಭವಾಗಿ ಗೆದ್ದು ಬಿಡಬಹುದು ಎಂಬ ನಿರೀಕ್ಷೆಯಲ್ಲಿದ್ದರು. ಆದರೆ ಆಗಿದ್ದೇ ಬೇರೆ.
ಸಿದ್ದರಾಮಯ್ಯ ಮತ್ತು ದೇವೇಗೌಡರ ಕುಟುಂಬದ ನಡುವೆ ಒಂದು ಮಾಡಲಾಗದ ಬಿರುಕು ಸೃಷ್ಟಿಯಾಗಿದೆ. ಅದು ಕಾಂಗ್ರೆಸ್ ಮತ್ತು ಜೆಡಿಎಸ್ ದೋಸ್ತಿ ಸರ್ಕಾರ ಕುಸಿದು ಬಿದ್ದ ನಂತರ ಒಂದು ಮಾಡಲಾಗದಷ್ಟು ದೊಡ್ಡದಾಗಿದೆ. ಅಷ್ಟೇ ಅಲ್ಲದೆ ಸಮಯ ಸಿಕ್ಕಾಗಲೆಲ್ಲ ಆರೋಪ- ಪ್ರತ್ಯಾರೋಪಗಳನ್ನು ಮಾಡುತ್ತಲೇ ಬರಲಾಗುತ್ತಿದೆ. ಹೀಗಿರುವಾಗ ಸಿದ್ದರಾಮಯ್ಯ ಅವರು ಜೆಡಿಎಸ್ ಗೆಲುವಿಗೆ ಕೈಜೋಡಿಸುತ್ತಾರೆ ಎಂಬುದು ಕನಸಿನ ಮಾತಾಗಿತ್ತು. ಆದರೂ ರಾಜ್ಯಸಭೆಯ ಜೆಡಿಎಸ್ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಮತ್ತು ವಿಧಾನಪರಿಷತ್ ಸದಸ್ಯ ಶರವಣ ಅವರು ಸಿದ್ದರಾಮಯ್ಯ ಅವರ ಬೆಂಬಲ ಕೋರುವ ಮನಸ್ಸು ಮಾಡಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಇದೀಗ ಸ್ವತಃ ಎಚ್ಡಿ ಕುಮಾರಸ್ವಾಮಿ ದೋಸ್ತಿಗೆ ಜೀವ ತುಂಬಲು ಹೊರಟಿದ್ದಾರೆ.

ಯಡಿಯೂರಪ್ಪರನ್ನು ಭೇಟಿ ಮಾಡಿದ್ದೇಕೆ
ಈ ನಡುವೆ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಸಿದ್ದರಾಮಯ್ಯ ಅವರ ಮೇಲಿನ ಕೋಪ ಕಡಿಮೆಯಾದಂತೆ ಕಾಣುತ್ತಿಲ್ಲ. ಅವರ ವಿರುದ್ಧ ಹರಿಹಾಯ್ದಿರುವ ಕುಮಾರಸ್ವಾಮಿ ಕಾಂಗ್ರೆಸ್ಗೆ ಆತ್ಮಸಾಕ್ಷಿ ಮತಗಳು ಸಿಗುತ್ತವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಆತ್ಮ ಸಾಕ್ಷಿ ಮತಗಳನ್ನು ಕೇಳುವ ಮುನ್ನ ನಿಮ್ಮಲ್ಲಿ ಆತ್ಮಸಾಕ್ಷಿ ಇದೆಯೇ ಎಂದು ಕೇಳಿಕೊಳ್ಳಿ, ಪ್ರಶ್ನಿಸಿಕೊಳ್ಳಿ. 2008-09ರಲ್ಲಿ ಆಪರೇಷನ್ ಕಮಲ ಆದಾಗ ನಿಮ್ಮ ಹಾಗೂ ಬಿ.ಎಸ್.ಯಡಿಯೂರಪ್ಪ ನಡುವೆ ಏನು ನಡೆಯಿತು? ಎಂಬುದರ ಬಗ್ಗೆ ಇದುವರೆಗೆ ಬಾಯಿ ಬಿಟ್ಟಿದ್ದೀರಾ? ವಿಮಾನ ನಿಲ್ದಾಣದ ವಿಐಪಿ ಕೊಠಡಿಯಲ್ಲಿ ಯಡಿಯೂರಪ್ಪ ಹಾಗೂ ನೀವು ಕುಳಿತು ಮಾತನಾಡುತ್ತಿರುವ ಚಿತ್ರ ಬಿಡುಗಡೆಯಾಗಿದೆ. ಆ ಚಿತ್ರ ಯಾವ ಉದ್ದೇಶಕ್ಕೆ, ಯಾರ ಕಡೆಯಿಂದ ಬಿಡುಗಡೆಯಾಗಿದೆ? ಯಾವ ಸಂದೇಶ ನೀಡಲು ಆ ಚಿತ್ರ ಹಾಕಿಸಿದ್ದೀರಿ ಎಂದು ಪ್ರಶ್ನಿಸಿದ್ದಾರೆ.

ಬಿಜೆಪಿ ನಿರ್ಮೂಲನೆ ಮಾಡಲು ಸಲಹೆ
ಸಿದ್ದರಾಮಯ್ಯ ನಮ್ಮ ಪಕ್ಷವನ್ನು ಉಳಿಸುವುದು ಬೇಡ. ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿರುವ ಕಾಂಗ್ರೆಸ್ ಪಕ್ಷವನ್ನು ಉಳಿಸಲು ಶ್ರಮಿಸಲಿ. 2023ಕ್ಕೆ ಆ ಋಣವನ್ನು ತೀರಿಸಿಕೊಳ್ಳಲಿ. ಅವರ ಬುರುಡೆ ಭಾಷಣ ಕೇಳಿ ಯಾರೂ ಮತ ನೀಡುವುದಿಲ್ಲ. ಬಿಜೆಪಿಯನ್ನು ನಿರ್ಮೂಲನೆ ಮಾಡಬೇಕಾದರೆ ಸಂಕುಚಿತ ಮನೋಭಾವ, ಕಲ್ಮಶದಿಂದ ಹೊರಬಂದು ಹೊಸ ರಾಜಕಾರಣವನ್ನು ಆರಂಭಿಸಲಿ ಎಂದು ಎಚ್ಡಿಕೆ ಸಲಹೆ ನೀಡಿದ್ದಾರೆ.
"ಜಾತ್ಯತೀತ ಅಸ್ಮಿತೆ ಕಾಪಾಡಬೇಕಾದರೆ ಅಲ್ಪಸಂಖ್ಯಾತ ಅಭ್ಯರ್ಥಿ ಬೆಂಬಲಿಸಬೇಕು ಎಂದು ಹೇಳಿದ್ದೀರಿ ಅದನ್ನು ಉಳಿಸಲು ನೀವು ಗುತ್ತಿಗೆ ಪಡೆದಿದ್ದೀರಾ? ನಾವೇನು ನಿಮ್ಮ ಗುಲಾಮರೇ? ಬಿಜೆಪಿ 105 ಸ್ಥಾನ ಗೆಲ್ಲಲು ನೀವೇ ಕಾರಣರಲ್ಲವೇ? ಜೆಡಿಎಸ್ ಪಕ್ಷವನ್ನು ಬಿಜೆಪಿಯ ಬಿ ಟೀಂ ಎಂದು ಬಿಂಬಿಸಲು ಹೋಗಿ ನೀವು 70 ಸ್ಥಾನಗಳಿಗೆ ಬಂದು ನಿಂತಿದ್ದೀರಿ. ನಿಜವಾದ ಬಿ ಟೀಂ ನಾಯಕ ಯಾರು ಎಂಬುದು ಜೂನ್ 10ರಂದು ಗೊತ್ತಾಗುತ್ತದೆ" ಎಂದು ಕಿಡಿ ಕಾರಿದ್ದಾರೆ.

2ನೇ ಪ್ರಾಶಸ್ತ್ಯ ಮತ ನೀಡಲು ಜೆಡಿಎಸ್ ಸಿದ್ಧ
ಕಾಂಗ್ರೆಸ್ 2ನೇ ಪ್ರಾಶಸ್ತ್ಯದ ಮತ ನೀಡಲಿಇನ್ನೊಂದೆಡೆ ಕಾಂಗ್ರೆಸ್ ಇತರೆ ನಾಯಕರ ಮೇಲೆ ಮೆದುಧೋರಣೆ ತಾಳಿರುವ ಕುಮಾರಸ್ವಾಮಿ, ರಾಜ್ಯಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಮನ್ಸೂರ್ ಅಲಿ ಖಾನ್ಗೆ ಜೆಡಿಎಸ್ನ 32 ಸದಸ್ಯರ 2ನೇ ಪ್ರಾಶಸ್ತ್ಯ ಮತಗಳನ್ನು ನೀಡಲು ಪಕ್ಷ ಸಿದ್ಧವಿದೆ. ಕಾಂಗ್ರೆಸ್ನವರು 2ನೇ ಪ್ರಾಶಸ್ತ್ಯದ ಮತಗಳನ್ನು ಜೆಡಿಎಸ್ ಅಭ್ಯರ್ಥಿ ಡಿ.ಕುಪೇಂದ್ರ ರೆಡ್ಡಿಗೆ ನೀಡಲಿ ಎಂದು ಮನವಿ ಮಾಡಿದ್ದಾರೆ.
ಆದರೆ ಎಚ್.ಡಿ.ಕುಮಾರಸ್ವಾಮಿ ಮನವಿಯನ್ನು ಕಾಂಗ್ರೆಸ್ ನ ಶಾಸಕರು ಪುರಸ್ಕರಿಸುತ್ತಾರಾ? ಸಿದ್ದರಾಮಯ್ಯ ಮುಂದೆ ಅದೆಲ್ಲ ಸಾಧ್ಯವಾಗುತ್ತಾ ಗೊತ್ತಿಲ್ಲ. ಆದರೆ ರಾಜ್ಯಸಭೆ ಚುನಾವಣೆ ಬಳಿಕ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವಿನ ಜಿದ್ದಾಜಿದ್ದಿಯ ರಾಜಕೀಯಕ್ಕೆ ವೇದಿಕೆ ತಯಾರಾಗುವುದಂತು ಖಚಿತ.
Recommended Video

ಕಾಂಗ್ರೆಸ್ಗೆ ಜೆಡಿಎಸ್ ಬೆಂಬಲ ನೀಡಬೇಕು
ನಾವು ಕಳೆದ ಬಾರಿ ಜೆಡಿಎಸ್ಗೆ ಮತ ನೀಡಿ ನಾವು ದೇವೇಗೌಡರನ್ನು ಗೆಲ್ಲಿಸಿದ್ದೆವು. ಈಗ ಕೋಮುವಾದಿ ಬಿಜೆಪಿಯನ್ನು ಮಣಿಸಲು ಜೆಡಿಎಸ್ ಕಾಂಗ್ರೆಸ್ಗೆ ಬೆಂಬಲ ನೀಡಬೇಕು. ಬಿಜೆಪಿ ಸೋಲಿಸುವುದೇ ನಿಮ್ಮ ಉದ್ದೇಶವಾದರೆ, ನಿಮ್ಮ ಅಭ್ಯರ್ಥಿಯನ್ನು ನಿವೃತ್ತಿಗೊಳಿಸಿ ಕಾಂಗ್ರೆಸ್ನ 2ನೇ ಅಭ್ಯರ್ಥಿಯನ್ನು ಬೆಂಬಲಿಸಬೇಕು ಎಂದು ವಿಧಾನ ಪರಿಷತ್ ಚುನಾವಣೆಯ ಪ್ರಚಾರದ ವೇಳೆ ಸಿದ್ದರಾಮತ್ತ ತಿಳಿಸಿದ್ದರು.
(ಒನ್ಇಂಡಿಯಾ ಸುದ್ದಿ)












Click it and Unblock the Notifications