ಚೆನ್ನೈ-ಬೆಂಗಳೂರು-ಮೈಸೂರು ವಿಶೇಷ ರೈಲು; ವೇಳಾಪಟ್ಟಿ
ಮೈಸೂರು, ಜನವರಿ 28: ನೈಋತ್ಯ ರೈಲ್ವೆ ಮೈಸೂರು ಮತ್ತು ತಮಿಳುನಾಡಿನ ಚೆನ್ನೈ ನಡುವೆ ಹೊಸ ವಿಶೇಷ ಎಕ್ಸ್ಪ್ರೆಸ್ ರೈಲನ್ನು ಘೋಷಣೆ ಮಾಡಿದೆ. ಜನವರಿ 29ರಿಂದ ಚೆನ್ನೈನಿಂದ ಹೊರಡುವ ರೈಲು ಬೆಂಗಳೂರು ಮೂಲಕ ಮೈಸೂರಿಗೆ ಸಂಚಾರ ನಡೆಸಲಿದೆ.
ಚೆನ್ನೈ ಮತ್ತು ಮೈಸೂರು ನಡುವೆ ರೈಲು ನಂಬರ್ 06021/06022 ಸಂಚಾರ ನಡೆಸಲಿವೆ. ಬೆಂಗಳೂರಿನ ವೈಟ್ ಫೀಲ್ಡ್, ಬೆಂಗಳೂರು ಕಟೋನ್ಮೆಂಟ್ ಮತ್ತು ಕೃಷ್ಣರಾಜಪುರಂ ನಿಲ್ದಾಣಗಳಲ್ಲಿ ರೈಲು ನಿಲುಗಡೆ ಇದೆ.
ವಿಶೇಷ ಎಕ್ಸ್ಪ್ರೆಸ್ ರೈಲು ಚೆನ್ನೈ ಸೆಂಟ್ರಲ್ ನಿಲ್ದಾಣದಿಂದ ಪ್ರತಿದಿನ ರಾತ್ರಿ 9.15ಕ್ಕೆ ಹೊರಡಲಿದೆ. ಮರುದಿನ ಬೆಳಗ್ಗೆ 6.40ಕ್ಕೆ ಮೈಸೂರನ್ನು ತಲುಪಲಿದೆ. ಮೈಸೂರಿನಿಂದ ರಾತ್ರಿ 9ಕ್ಕೆ ಹೊರಡಲಿದ್ದು, ಮರುದಿನ ಬೆಳಗ್ಗೆ 6.40ಕ್ಕೆ ಚೆನ್ನೈ ತಲುಪಲಿದೆ.

ವಿಶೇಷ ಎಕ್ಸ್ಪ್ರೆಸ್ ರೈಲಿನಲ್ಲಿ 23 ಬೋಗಿಗಳಿವೆ. 5 ಹವಾನಿಯಂತ್ರಿತ, 14 ಸ್ಲೀಪರ್, 5 ಸಾಮಾನ್ಯ ಬೋಗಿಗಳನ್ನು ರೈಲು ಒಳಗೊಂಡಿದೆ ಎಂದು ನೈಋತ್ಯ ರೈಲ್ವೆಯ ಪ್ರಕಟಣೆ ತಿಳಿಸಿದೆ.
ನೈಋತ್ಯ ರೈಲ್ವೆ ಈಗಾಗಲೇ ಸಂಚಾರ ನಡೆಸುತ್ತಿರುವ ಕೆಲವು ರೈಲುಗಳ ಸೇವೆಯನ್ನು ಏಪ್ರಿಲ್ ತನಕ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ. ಮೈಸೂರು-ಕೋಚುವೇಲಿ ಪ್ರತಿದಿನದ ಎಕ್ಸ್ಪ್ರೆಸ್ ರೈಲು 59 ಹೆಚ್ಚುವರಿ ಟ್ರಿಪ್ ಸಂಚಾರ ನಡೆಸಲಿದ್ದು, ಏಪ್ರಿಲ್ ತನಕ ಸಂಚಾರ ನಡೆಸಲಿದೆ.
ಕೊಯಮತ್ತೂರು-ಹಜರತ್ ನಿಜಾಮುದ್ದೀನ್ ಪ್ರತಿದಿನದ ಹಬ್ಬದ ವಿಶೇಷ ರೈಲು ಸೇವೆಯನ್ನು ಮಾರ್ಚ್ ಅಂತ್ಯದ ತನಕ ವಿಸ್ತರಣೆ ಮಾಡಲಾಗಿದೆ. ಈಗ ಘೋಷಣೆ ಮಾಡಿರುವುದಕ್ಕಿಂತ 8 ಹೆಚ್ಚು ಟ್ರಿಪ್ಗಳಲ್ಲಿ ಈ ರೈಲು ಓಡಲಿದೆ. ರೈಲುಗಳ ಸೇವೆಯನ್ನು ಮಾತ್ರ ವಿಸ್ತರಣೆ ಮಾಡಲಾಗಿದೆ ದರ, ನಿಲ್ದಾಣಗಳಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಲಾಗಿದೆ.












Click it and Unblock the Notifications