ವಂಚನೆ ಕೇಸ್ : ಬಿಎಸ್ವೈ ಸೋದರಳಿಯ ಬಂಧನ
ಮೈಸೂರು, ಡಿ.2 : ಸಂಸದ ಬಿ.ಎಸ್.ಯಡಿಯೂರಪ್ಪ ಅವರ ಸಹೋದರಿಯ ಮಗ ಎಸ್.ಸಿ.ರಾಜೇಶ್ ಅವರನ್ನು ಪೊಲೀಸರು ಬೆಂಗಳೂರಿಗೆ ಕರೆದುಕೊಂಡು ಬಂದು 24ನೇ ಎಸಿಎಂಎಂ ನ್ಯಾಯಾಲಯದ ಮುಂದೆ ಮಂಗಳವಾರ ಹಾಜರುಪಡಿಸಿದ್ದಾರೆ. ನ್ಯಾಯಾಲಯ ರಾಜೇಶ್ ಅವರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶ ನೀಡಿದೆ.
ಹಿಂದಿನ ಸುದ್ದಿ : ಕೆಐಎಡಿಬಿ ಸ್ವಾಧೀನಪಡಿಸಿಕೊಂಡಿದ್ದ ಜಮೀನನ್ನು ಡಿನೋಟಿಫೈ ಮಾಡಿಸಿಕೊಡುವುದಾಗಿ ಉದ್ಯಮಿಯೊಬ್ಬರಿಂದ ಹಣ ಪಡೆದು ವಂಚಿಸಿದ ಆರೋಪದ ಮೇಲೆ, ಸಂಸದ ಬಿ.ಎಸ್.ಯಡಿಯೂರಪ್ಪ ಅವರ ಸಹೋದರಿಯ ಮಗ ಎಸ್.ಸಿ.ರಾಜೇಶ್ ಎಂಬುವರನ್ನು ಬೆಂಗಳೂರಿನ ಹನುಮಂತನಗರ ಪೊಲೀಸರು ಮೈಸೂರಿನಲ್ಲಿ ಬಂಧಿಸಿದ್ದಾರೆ.
ಮೈಸೂರಿನ ಆಲನಹಳ್ಳಿ ಬಳಿಯ ನಂದಿನಿ ಬಡಾವಣೆಯ ನಿವಾಸಿಯಾದ ರಾಜೇಶ್, ಹನುಮಂತನಗರದ ಕೆ.ಜಿ.ಕೃಷ್ಣ ಎಂಬ ಉದ್ಯಮಿಗೆ ವಂಚಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಕೃಷ್ಣ ಅವರಿಂದ 40 ಲಕ್ಷ ಹಣ ಮತ್ತು 10 ಲಕ್ಷ ಮೌಲ್ಯದ ಕಾರು ಪಡೆದುಕೊಂಡಿದ್ದ ರಾಜೇಶ್ ಅವರಿಗೆ ವಂಚಿಸಿದ್ದಾರೆ ಎಂಬುದು ಆರೋಪವಾಗಿದೆ.

ಮೈಸೂರಿನ ಕೆಆರ್ಎಸ್ ರಸ್ತೆಯಲ್ಲಿ ಕೃಷ್ಣ ಅವರಿಗೆ ಸೇರಿದ 11 ಎಕರೆ ಜಮೀನು ಇದೆ. ಅದನ್ನು ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ(ಕೆಐಎಡಿಬಿ) 2007ರಲ್ಲಿ ಸ್ವಾಧೀನಪಡಿಸಿಕೊಂಡಿತ್ತು. 2011ರಲ್ಲಿ ರಾಜೇಶ್ ಆ ಜಮೀನನ್ನು ಡಿನೋಟಿಫೈ ಮಾಡಿಸುವುದಾಗಿ ಹೇಳಿ ಕೃಷ್ಣ ಅವರಿಂದ ಹಣ ಮತ್ತು ಕಾರು ಪಡೆದಿದ್ದರು. [ಡಿಸೆಂಬರ್ 9ರೊಂದಿಗೆ ಬಿಎಸ್ ವೈ ನಂಟೇನು?]
ರಾಜೇಶ್ ಕೆಲಸ ಮಾಡಿಕೊಡದ ಹಿನ್ನಲೆಯಲ್ಲಿ ಕೃಷ್ಣ ಅವರು ಹಣ ವಾಪಸ್ ಕೇಳಿದ್ದರು. ಇದರಿಂದ ಕೋಪಗೊಂಡ ರಾಜೇಶ್ ಕೃಷ್ಣ ವಿರುದ್ಧ ಕೊಲೆ ಬೆದರಿಕೆ ಆರೋಪ ಹೊರಿಸಿ ಬನಶಂಕರಿ ಠಾಣೆಯಲ್ಲಿ ದೂರು ನೀಡಿದ್ದರು.
ವಂಚನೆಗೊಳದಾದ ಕೃಷ್ಣ ಅವರು ರಾಜೇಶ್ ವಿರುದ್ಧ 2011ರಲ್ಲಿ ಹನುಮಂತನಗರ ಠಾಣೆಗೆ ದೂರು ನೀಡಿದ್ದರು. ಆದರೆ, ಈ ಬಗ್ಗೆ ಸೂಕ್ತ ತನಿಖೆಯಾಗದ ಕಾರಣ ಕೃಷ್ಣ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಹೈಕೋರ್ಟ್ನ ಆದೇಶದ ಅನ್ವಯ ಸೋಮವಾರ ರಾಜೇಶ್ ಅವರನ್ನು ಬಂಧಿಸಿ, ಕಾರನ್ನು ವಶಪಡಿಸಿಕೊಳ್ಳಲಾಗಿದೆ.












Click it and Unblock the Notifications