ಸರಗಳ್ಳತನ:ಮೈಸೂರಿನಲ್ಲಿ ಪೊಲೀಸರ ಕಣ್ಣು ಆ್ಯಕ್ಟೀವಾದತ್ತ!
ಮೈಸೂರು, ಮೇ 21: ಮೈಸೂರಿನಲ್ಲಿ ಇತ್ತೀಚೆಗೆ ನಡೆದ ಸರಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಳಿ ಹೋಂಡಾ ಆಕ್ಟಿವಾ ಮೇಲೆಯೇ ಪೊಲೀಸರು ತಮ್ಮ ಚಿತ್ತ ನೆಟ್ಟಿದ್ದಾರೆ. ನಗರದೆಲ್ಲೆಡೆ ನಾಕಾ ಬಂಧಿಗಳನ್ನು ರಚಿಸಿರುವ ಪೊಲೀಸರು ವಾಹನಗಳನ್ನು ತಡೆದು ಪರಿಶೀಲನೆ ನಡೆಸುತ್ತಿದ್ದಾರೆ.
ಖಾಕಿ ಪಡೆ ಕಣ್ಣು ಇರುವುದು ಬಿಳಿ ಆಕ್ಟಿವಾ ಹಾಗೂ ಕಪ್ಪು ಪಲ್ಸರ್ ಮೇಲೆಯೇ. ಹೌದು, ಕಳೆದ ಕೆಲವು ದಿನಗಳಿಂದ ನಗರದ ಎಲ್ಲಾ ಪ್ರದೇಶದಲ್ಲಿಯೂ ಪೊಲೀಸರನ್ನು ತಪಾಸಣೆಗಾಗಿ ನಿಯೋಜಿಸಲಾಗುತ್ತಿದೆ. ಆರಂಭದಲ್ಲಿ ಯಾರೋ ವಿಐಪಿಗಳು ಬರುತ್ತಿದ್ದಾರೇನೋ ಎಂದು ಜನರು ತಿಳಿದುಕೊಂಡಿದ್ದರು. ಆದರೆ ಸರಗಳ್ಳರ ಪತ್ತೆಗೆ ಕಾರ್ಯೋನ್ಮುಖವಾಗಿರುವುದು ನಂತರ ತಿಳಿಯಿತು.
ಹಲವು ಬಡಾವಣೆಯಲ್ಲಿ ಪ್ರಮುಖ ರಸ್ತೆ ಬ್ಯಾರಿಕೇಡ್ ಗಳನ್ನು ಹಾಕಲಾಗಿದೆ. ಅಲ್ಲಿ ಇಬ್ಬಿಬ್ಬರು ಪೊಲೀಸರನ್ನು ಸಹ ನಿಯೋಜಿಸಲಾಗಿದೆ. ಇವರು ಅನುಮಾನ ಬಂದ ಎಲ್ಲಾ ರೀತಿಯ ದ್ವಿಚಕ್ರ ವಾಹನಗಳನ್ನು ತಡೆದು ಪರಿಶೀಲಿಸುತ್ತಿದ್ದಾರೆ. ಆದರೆ ಅವರು ಬಿಳಿ ಬಣ್ಣದ ಆಕ್ಟಿವಾ ಬಿಡುತ್ತಿಲ್ಲ.

ಆರ್ ಸಿ ಬುಕ್ , ಡಿಎಲ್ ಗಳನ್ನು ಹಂತಹಂತವಾಗಿ ಪರಿಶೀಲಿಸಿ ಸವಾರರ ಹೆಸರನ್ನು ನೋಟ್ ಮಾಡಿಕೊಳ್ಳುತ್ತಿದ್ದಾರೆ. ನಂಬರ್ ಪ್ಲೇಟ್ ಇಲ್ಲದೇ ಬಿಳಿ ಬಣ್ಣದ ಆಕ್ಟೀವಾವನ್ನು ಹಿಡಿದು ನೇರವಾಗಿ ಪೊಲೀಸ್ ಠಾಣೆಗೆ ಕೊಂಡೊಯ್ಯುತ್ತಿದ್ದಾರೆ. ಅಲ್ಲಿ ಹಿರಿಯ ಅಧಿಕಾರಿಗಳು ತಪಾಸಣೆ ನಡೆಸುತ್ತಾರೆ. ಸೂಕ್ತ ದಾಖಲೆ ತೋರಿಸಿ ಬಿಡಿಸಿಕೊಂಡು ಬರಬೇಕು.
ಇನ್ನು ದ್ವಿಚಕ್ರ ವಾಹನಗಳನ್ನು ಪರಿಶೀಲಿಸುತ್ತಿರುವುದು, ವಾಕಿಂಗ್ ಗೆ ತೆರಳುವವರಿಗೆ ಕಿರಿಕಿರಿಯನ್ನುಂಟು ಮಾಡುತ್ತದೆ. ಮನೆಯಿಂದ ಪಾರ್ಕ್ ಗೆ ತೆರಳುವ ಮಂದಿ ಹೆಲ್ಮೆಟ್ ಹಾಕಿಕೊಳ್ಳುವುದಿಲ್ಲ. ಆದರೆ ಅವರನ್ನು ತಡೆದು ಪ್ರಶ್ನಿಸಿ ವಾಹನದ ಸಂಖ್ಯೆಯನ್ನು ಬರೆದು ಕೊಳ್ಳುತ್ತಿರುವುದು ಹಲವರಿಗೆ ಅಸಹನೆ ಮೂಡಿಸುತ್ತದೆ.
ಇನ್ನು ವಿಶೇಷವೆಂದರೆ ನಾಕಾಬಂದಿಗಳಲ್ಲಿ ಪೊಲೀಸರು ಹೆಚ್ಚಾಗಿ ಹೆಲ್ಮೆಟ್ ಹಾಕದಿರುವ ಸವಾರರನ್ನೇ ತಡೆದು ವಿವರವನ್ನು ಪಡೆದುಕೊಳ್ಳುತ್ತಾರೆ. ಸಾಕಷ್ಟು ಮಂದಿ ಹೆಲ್ಮೆಟ್ ಹಾಕದಿರುವುದಕ್ಕೆ ತಡೆಯುತ್ತಿದ್ದಾರೆ ಎಂದು ತಿಳಿದುಕೊಳ್ಳುತ್ತಾರೆ. ಆದರೆ ಸರಗಳ್ಳರಿಗಾಗಿ ಪೊಲೀಸರು ಹುಡುಕುತ್ತಿರುವುದು ಎಂದು ತಿಳಿದು ಸುಮ್ಮನಾಗುತ್ತಾರೆ.












Click it and Unblock the Notifications