ಮೈಸೂರಿನಲ್ಲಿ ನನಗೆ ಹಿನ್ನಡೆಯಾಗಲು ಹೇಗೆ ಸಾಧ್ಯ?: ವಿಜಯ್ ಶಂಕರ್ ಪ್ರಶ್ನೆ
ಮೈಸೂರು, ಮೇ 3: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಕಾರ್ಯಕರ್ತರು ಬಿಜೆಪಿಗೆ ವೋಟ್ ಮಾಡಿದ್ದಾರೆ. ಇದರಿಂದ ಮೈತ್ರಿ ಅಭ್ಯರ್ಥಿಗೆ ಹಿನ್ನಡೆ ಉಂಟಾಗಿದೆ ಎಂಬುದನ್ನು ನಾನು ಒಪ್ಪಲಾರೆ. ಅದು ಅವರ ವೈಯುಕ್ತಿಕ ನಿಲುವಷ್ಟೇ ಎಂದು ಕೈ- ಜೆಡಿಎಸ್ ಮೈತ್ರಿ ಅಭ್ಯರ್ಥಿ ಸಿ.ಹೆಚ್.ವಿಜಯಶಂಕರ್ ಅಭಿಪ್ರಾಯಪಟ್ಟಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತೆನೆ ಕಾರ್ಯಕರ್ತರು ತಮ್ಮ ಮತವನ್ನು ಬಿಜೆಪಿಗೆ ಹಾಕಿದ್ದಾರೆಂದು ಜಿ.ಟಿ.ದೇವೇಗೌಡ ನೀಡಿರುವ ಹೇಳಿಕೆ ಅವರ ವೈಯಕ್ತಿಕ ನಿಲುವಷ್ಟೇ. ಈ ಬಾರಿಯ ಚುನಾವಣೆಯಲ್ಲಿ ಗೆಲುವು ನನ್ನದೇ. ಮೈತ್ರಿ ಕಾರ್ಯಕರ್ತರಲ್ಲಿ ಸಣ್ಣ, ಪುಟ್ಟ ವ್ಯತ್ಯಾಸಗಳಿರಬಹುದು. ಆದರೆ, ಅದು ಚುನಾವಣೆಯ ಫಲಿತಾಂಶದ ಮೇಲೆ ಯಾವುದೇ ಪರಿಣಾಮವನ್ನು ಬೀರಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮತದಾರರ ಅಭಿಪ್ರಾಯವೇ ಬೇರೆಯಾಗಿದೆ. ನಾನು ಚುನಾವಣೆಯನ್ನು ಇದೇ ಮೊದಲ ಬಾರಿ ಎದುರಿಸುತ್ತಿಲ್ಲ. 9 ಬಾರಿ ಎದುರಿಸಿದ್ದೇನೆ, ಹಾಗಾಗಿ ಜನರ ನಾಡಿ ಮಿಡಿತ ನನಗೆ ಚೆನ್ನಾಗಿ ಗೊತ್ತಿದೆ. ಮತದಾರರು ನನ್ನ ಕೈ ಹಿಡಿದಿದ್ದಾರೆ. ಹಾಗಾಗಿ ನನ್ನ ಗೆಲುವಿನ ಮೇಲೆ ನನಗೆ ಸಂಪೂರ್ಣ ನಂಬಿಕೆಯಿದೆ ಎಂದರು.

ಪಿರಿಯಾಪಟ್ಟಣದಲ್ಲಿ ಹಾಲಿ ಜೆಡಿಎಸ್ ಶಾಸಕ ಕೆ.ಮಹದೇವ್ ಹಾಗೂ ಮಾಜಿ ಶಾಸಕ ಕೆ.ವೆಂಕಟೇಶ್ ಅವರು ವೈರತ್ವ ಮರೆತು ಒಂದಾಗಿ ಜಂಟಿಯಾಗಿ ಚುನಾವಣಾ ಪ್ರಚಾರವನ್ನು ನಡೆಸಿದ್ದಾರೆ ಎಂದ ವಿಜಯಶಂಕರ್, ಚುನಾವಣೆಯ ವೇಳೆ ಕಾಲಾವಕಾಶದ ಕೊರತೆ ಎಲ್ಲರನ್ನೂ ಕಾಡಿದೆ. ಹೀಗಿದ್ದರೂ ಕೂಡ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಚ್.ಡಿ.ದೇವೇಗೌಡರು ನನ್ನ ಪರವಾಗಿ ಚುನಾವಣಾ ಪ್ರಚಾರ ನಡೆಸಿರುವುದು ನನಗೆ ಹೆಚ್ಚಿನ ಮತಗಳನ್ನು ತಂದು ಕೊಟ್ಟಿದೆ ಎಂದು ತಿಳಿಸಿದರು.
ಅಲ್ಲದೇ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಕಾಂಗ್ರೆಸ್ ಹೈಕಮಾಂಡ್ ರಾಹುಲ್ ಗಾಂಧಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಜಿ.ಟಿ.ದೇವೇಗೌಡರೂ ನನ್ನ ಪರವಾಗಿ ಚುನಾವಣಾ ಪ್ರಚಾರವನ್ನು ನಡೆಸಿದ್ದಾರೆ. ಹಾಗಾಗಿ ನನಗೆ ಹಿನ್ನಡೆಯಾಗಲು ಹೇಗೆ ಸಾಧ್ಯ? ಎಂದು ವಿಜಯ್ ಶಂಕರ್ ಪ್ರಶ್ನಿಸಿದ್ದಾರೆ.












Click it and Unblock the Notifications