ಮೈಸೂರು ಬಿಜೆಪಿ ಸಮಾವೇಶಕ್ಕೆ ವಿಜಯ್ ಶಂಕರ್ ಗೈರು, ಪಕ್ಷಕ್ಕೆ ಹಿನ್ನಡೆ!
ಮೈಸೂರು, ಅಕ್ಟೋಬರ್ 27 : ಮಾಜಿ ಸಚಿವ, ಕುರುಬ ಸಮುದಾಯದ ಪ್ರಭಾವಿ ಮುಖಂಡ ಸಿ.ಎಚ್.ವಿಜಯ್ ಶಂಕರ್ ಪಕ್ಷದ ಸಮಾವೇಶಕ್ಕೆ ಗೈರು ಹಾಜರಾಗಿದ್ದಾರೆ. ಅವರು ಬಿಜೆಪಿ ತೊರೆಯುವ ಸುದ್ದಿ ಹಬ್ಬಿದ್ದು, ಪಕ್ಷ ತೊರೆದರೆ ಕರ್ನಾಟಕ ಬಿಜೆಪಿಗೆ ಮೈಸೂರು ಭಾಗದಲ್ಲಿ ಭಾರೀ ಹಿನ್ನಡೆ ಉಂಟಾಗಲಿದೆ.
ಮೈಸೂರಿನಲ್ಲಿ ಬಿಜೆಪಿ ಗುರುವಾರ ಬೃಹತ್ ರೈತ ಸಮಾವೇಶ ಆಯೋಜನೆ ಮಾಡಿತ್ತು. ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಹಲವು ನಾಯಕರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಮೈಸೂರಿನಲ್ಲಿಯೇ ಸಮಾವೇಶ ನಡೆದರೂ ಸಿ.ಎಚ್.ವಿಜಯ್ ಶಂಕರ್ ಗೈರಾಗಿದ್ದರು.
ಸಿ.ಎಚ್.ವಿಜಯಶಂಕರ್ ಮನವೊಲಿಸಿದ ಬಿಜೆಪಿ ನಾಯಕರು
ಸಿ.ಎಚ್.ವಿಜಯ್ ಶಂಕರ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರಲಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಆದ್ದರಿಂದ, ಪಕ್ಷದ ಚಟುವಟಿಕೆಗಳಿಂದ ದೂರವಾಗುತ್ತಿದ್ದಾರೆ. 2018ರ ವಿಧಾನಸಭೆ ಚುನಾವಣೆಯಲ್ಲಿ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಪಿರಿಯಾಪಟ್ಟಣದಿಂದ ಸ್ಪರ್ಧಿಸುವ ಸಾಧ್ಯತೆ ಇದೆ.
ಸಿದ್ದರಾಮಯ್ಯ ಓರ್ವ ಲೂಟಿಕೋರ : ಮೈಸೂರಿನಲ್ಲಿ ಯಡಿಯೂರಪ್ಪ ವಾಗ್ದಾಳಿ
ಭಾನುವಾರ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕೋಟೆ ಶಿವಣ್ಣ ಸೇರಿದಂತೆ ಹಲವು ನಾಯಕರು ಸಿ.ಎಚ್.ವಿಜಯ್ ಶಂಕರ್ ಅವರನ್ನು ಭೇಟಿ ಮಾಡಿದ್ದರು. ಪಕ್ಷ ಬಿಡದಂತೆ ಮನವೊಲಿಸಿದ್ದರು. ಆದರೂ ಗುರುವಾರ ನಡೆದ ಸಮಾವೇಶಕ್ಕೆ ಅವರು ಗೈರಾಗಿದ್ದಾರೆ..
ಪ್ರಭಾವಿ ನಾಯಕ
ಕುರುಬ ಸಮುದಾಯಕ್ಕೆ ಸೇರಿದ ಸಿ.ಎಚ್.ವಿಜಯ್ ಶಂಕರ್ ಮೈಸೂರು ಭಾಗದ ಪ್ರಭಾವಿ ನಾಯಕರು. ಬಿಜೆಪಿ ನಾಯಕರು ಅವರನ್ನು ಕಡೆಗಣಿಸುತ್ತಿದ್ದಾರೆ ಎಂದು ಅವರು ದೂರಿದ್ದು, ಕಾಂಗ್ರೆಸ್ ಸೇರುವ ಸಾಧ್ಯತೆ ಇದೆ. ವಿಜಯ್ ಶಂಕರ್ ಕಾಂಗ್ರೆಸ್ ಸೇರಿದರೆ ಬಿಜೆಪಿಗೆ ಹಿನ್ನಡೆ ಉಂಟಾಗಲಿದೆ.
ಮಹಾರಾಜರನ್ನು ಸೋಲಿಸಿದ್ದರು
ಹುಣಸೂರು ಕ್ಷೇತ್ರದಲ್ಲಿ 1994, 98ರಲ್ಲಿ ಗೆದ್ದು ಎರಡು ಬಾರಿ ಶಾಸಕರಾಗಿದ್ದರು. ಕಾಂಗ್ರೆಸ್ ಅಭ್ಯರ್ಥಿಯಾಗಿ 2004ರಲ್ಲಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರನ್ನು ಸೋಲಿಸಿದ್ದರು.
ಅರಣ್ಯ ಸಚಿವರಾಗಿದ್ದರು
2009ರ ಲೋಕಸಭೆ ಚುನಾವಣೆಯಲ್ಲಿ ಸಿ.ಎಚ್.ವಿಜಯ್ ಶಂಕರ್ ಎಚ್.ವಿಶ್ವನಾಥ್ ವಿರುದ್ಧ ಸೋಲು ಅನುಭವಿಸಿದ್ದರು. 2010 ರಿಂದ 2016ರ ತನಕ ವಿಧಾನಪರಿಷತ್ ಸದಸ್ಯರಾಗಿದ್ದರು. ಜಗದೀಶ್ ಶೆಟ್ಟರ್ ಅವರ ಸಂಪುಟದಲ್ಲಿ ಅರಣ್ಯ ಖಾತೆ ಸಚಿವರಾಗಿದ್ದರು.
ಬಿಜೆಪಿ ಟಿಕೆಟ್ ಕೈ ತಪ್ಪಿತ್ತು
2014ರ ಲೋಕಸಭೆ ಚುನಾವಣೆಯಲ್ಲಿ ಮೈಸೂರು ಕ್ಷೇತ್ರದಿಂದ ಸಿ.ಎಚ್.ವಿಜಯ್ ಶಂಕರ್ ಟಿಕೆಟ್ ಬಯಸಿದ್ದರು. ಆದರೆ, ಪತ್ರಕರ್ತ ಪ್ರತಾಪ್ ಸಿಂಹ ಅವರ ಸ್ಪರ್ಧೆಯಿಂದಾಗಿ ವಿಜಯ್ ಶಂಕರ್ ಅವರಿಗೆ ಟಿಕೆಟ್ ಕೈತಪ್ಪಿತ್ತು. ಅವರಿಗೆ ಹಾಸನದಲ್ಲಿ ಟಿಕೆಟ್ ನೀಡಲಾಗಿತ್ತು. ದೇವೇಗೌಡರ ವಿರುದ್ಧ ಸೋಲು ಅನುಭವಿಸಿದರು.
ಪಿರಿಯಾಪಟ್ಟಣದಿಂದ ಸ್ಪರ್ಧೆ?
ಪಿರಿಯಾಪಟ್ಟಣದಿಂದ ಸ್ಪರ್ಧೆ?ಬಿಜೆಪಿ ನಾಯಕರು ತಮ್ಮನ್ನು ಕಡೆಗಣಿಸಿದ್ದಾರೆ ಎಂದು ಅವರು ಪಕ್ಷ ತೊರೆಯಲು ಮುಂದಾಗಿದ್ದಾರೆ. 2018ರ ವಿಧಾನಸಭೆ ಚುನಾವಣೆಗೆ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಪಿರಿಯಾಪಟ್ಟಣದಿಂದ ಸ್ಪರ್ಧಿಸುವ ಸಾಧ್ಯತೆ ಇದೆ. ಅವರು ಕಾಂಗ್ರೆಸ್ ತೊರೆದರೆ ಬಿಜೆಪಿಗೆ ಹಿನ್ನಡೆ ಉಂಟಾಗಲಿದೆ.