ಚಾಮುಂಡಿ ಬೆಟ್ಟಕ್ಕೆ ಇನ್ನು ಜಾರಿಗೆ ಬರದ ಕೇಬಲ್ ಕಾರ್ ಯೋಜನೆ

ಮೈಸೂರು, ಏಪ್ರಿಲ್ 20 : ಹೆಚ್ಚಿನ ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ಮೈಸೂರಿನಲ್ಲಿ ಚಾಮುಂಡಿಬೆಟ್ಟವನ್ನು ಆಕರ್ಷಣೀಯವಾಗಿಸಲು ರೂಪಿಸಿರುವ 'ಕೇಬಲ್ ಕಾರು' ನಿರ್ಮಾಣಕ್ಕೆ ಹಲವು ವರ್ಷಗಳು ಉರುಳಿದರೂ ಮುಹೂರ್ತ ಕೂಡಿ ಬಂದಿಲ್ಲ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಹಾಂಕಾಂಗ್‌ನಲ್ಲಿರುವ ರೋಪ್ ವೇ ಮಾದರಿಯಲ್ಲಿ 2001ರಲ್ಲೇ ಈ ಯೋಜನೆ ರೂಪಿಸಲಾಗಿತ್ತು. ಹರಿದ್ವಾರದ ಮಾನಸ ದೇಗುಲಕ್ಕೆ ಅಳವಡಿಸಿರುವ ರೀತಿಯಲ್ಲಿ ಬೆಟ್ಟಕ್ಕೆ ಕೇಬಲ್ ಕಾರು ನಿರ್ಮಿಸುವ ಬಗ್ಗೆ ಸಂಚಾರ ಹಾಗೂ ಮೂಲಸೌಲಭ್ಯ ಸಲಹೆಗಾರ ಎಂ.ಎನ್.ಶ್ರೀಹರಿ ಕೂಡ ದಶಕದ ಹಿಂದೆ ಸರ್ಕಾರಕ್ಕೆ ಸಲಹೆ ನೀಡಿದ್ದರು.

ಅಲ್ಲದೇ, ಚಾಮುಂಡಿಬೆಟ್ಟವನ್ನು ತಿರುಪತಿ ಮಾದರಿಯಲ್ಲಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಯೋಜನೆ ಜಾರಿ ಮಾಡುವುದಾಗಿ 2015-16ರ ಬಜೆಟ್‌ನಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದರು. 2015-2020ರ ಪ್ರವಾಸೋದ್ಯಮ ನೀತಿಯಲ್ಲೂ ಈ ಅಂಶ ಪ್ರಸ್ತಾಪವಾಗಿದೆ.

Cable car tourism plan is not started in Chamundi hills at Mysuru

ಯೋಜನೆ ಅನುಷ್ಠಾನ ಮಾಡಬೇಕಾದ ಅಧಿಕಾರಿ ವರ್ಗದವರು ವಿಳಂಬ ಮಾಡಿದ್ದು ಎಡವಟ್ಟಿಗೆ ಕಾಣವಾಗಿದೆ. ಈ ಯೋಜನೆಗೆ ಹಲವು ವಿಘ್ನಗಳು ಎದುರಾಗಿವೆ. ಒಂದೆಡೆ ಪರಿಸರವಾದಿಗಳು, ಮೈಸೂರು ಗ್ರಾಹಕರ ಪರಿಷತ್ ವಿರೋಧ ವ್ಯಕ್ತಪಡಿಸಿದರೆ, ಇನ್ನೊಂದೆಡೆ ವಿವಿಧ ಇಲಾಖೆಗಳಿಂದ ಸರಿಯಾದ ಬೆಂಬಲ ದೊರೆಯುತ್ತಿಲ್ಲ.

ಅರಣ್ಯ ಇಲಾಖೆಯಿಂದ ಹಸಿರು ನಿಶಾನೆ ಸಿಗುತ್ತಿಲ್ಲ. ಈ ಮಧ್ಯೆ, ರೋಪ್ ವೇ ಬದಲಿಗೆ ಬೆಟ್ಟಕ್ಕೆ ಚತುಷ್ಪಥ ರಸ್ತೆ ನಿರ್ಮಿಸಲು ಸರ್ಕಾರ ಮುಂದಾಗಿತ್ತು. ಅದಕ್ಕೂ ಪರಿಸರವಾದಿಗಳು ಅಡ್ಡಿಪಡಿಸಿದ್ದಾರೆ.

ರಸ್ತೆ ಕಿರಿದಾಗಿದ್ದು, ಈಚೆಗೆ ಬೆಟ್ಟಕ್ಕೆ ಹೋಗಿ ಬರುವ ವಾಹನಗಳ ಸಂಖ್ಯೆಯೂ ಹೆಚ್ಚಿದೆ. ಹೀಗಾಗಿ, ಸದಾ ಟ್ರಾಫಿಕ್ ಸಮಸ್ಯೆ. ಜೊತೆಗೆ ಹಬ್ಬಗಳು, ರಜೆ ದಿನ, ದಸರಾ, ಆಷಾಢ ಶುಕ್ರವಾರಗಳಲ್ಲಿ ವಾಹನ ದಟ್ಟಣೆ ಹೆಚ್ಚಾಗಿರುತ್ತದೆ. ಹೀಗಾಗಿ, ಬೆಟ್ಟಕ್ಕೆ ವಾಹನಗಳನ್ನು ನಿರ್ಬಂಧಿಸಲಾಗುತ್ತದೆ. ಇಂಥ ಸಮಯದಲ್ಲಿ ಕೇಬಲ್ ಕಾರು ಸಹಾಯಕ್ಕೆ ಬರುತ್ತದೆ.

ಭಕ್ತಿಯ ತಾಣವಾಗಿರುವ ಬೆಟ್ಟವನ್ನು ಪ್ರವಾಸಿ ಸ್ನೇಹಿಯಾಗಿಸುವ ಕನಸು ಇದುವರೆಗೆ ಈಡೇರಿಲ್ಲ. ಅಧಿಕಾರಿಗಳ ಆಲಸ್ಯ ಧೋರಣೆ, ಅಭಿವೃದ್ಧಿ ವಿರೋಧಿ ಪರಿಸರವಾದಿಗಳ ನಿಲುವಿನಿಂದ ಪ್ರವಾಸೋದ್ಯಮಕ್ಕೆ ಹಿನ್ನಡೆ ಉಂಟು ಮಾಡಿದೆ. ನೋಡಿದ್ದನ್ನೇ ಮತ್ತೆ ನೋಡಲು ಯಾರು ಇಷ್ಟಪಡುತ್ತಾರೆ? ಮರಗಳ ಹನನ ಮಾಡದೆ, ಪರಿಸರಕ್ಕೆ ಧಕ್ಕೆ ಆಗದಂತೆ ಯೋಜನೆ ಜಾರಿಗೆ ಸಾಧ್ಯವಿಲ್ಲವೇ? ಎಂಬುದು ಪ‍್ರವಾಸೋದ್ಯಮ ವಲಯದ ಪ್ರಶ್ನೆ.

ಬೆಟ್ಟದ ತಪ್ಪಲಿನಲ್ಲಿ ಗಣಪತಿ ಸಚ್ಚಿದಾನಂದ ಆಶ್ರಮದ ಮುಂಭಾಗದಲ್ಲಿ ರೋಪ್ ವೇ ಕೇಂದ್ರ ಹಾಗೂ ವಾಹನ ನಿಲುಗಡೆ ವ್ಯವಸ್ಥೆಗೆಂದು ಬೆಂಗಳೂರು ಮೂಲದ ಕಂಪನಿಯೊಂದಕ್ಕೆ ಎಂಟು ವರ್ಷಗಳ ಹಿಂದೆ ಮೂರು ಎಕರೆ ಜಮೀನು ನಿಗದಿಪಡಿಸಲಾಗಿತ್ತು.

ಆದರೆ, ಜಮೀನು ಸಮಸ್ಯೆಯಿಂದಾಗಿ ಯೋಜನೆ ಸ್ಥಗಿತಗೊಂಡಿದೆ. ಕೆಐಡಿಬಿ ನೀಡಿದ್ದ ಮೂರು ಎಕರೆ ಜಾಗಕ್ಕೆ ಸಂಬಂಧಿಸಿದಂತೆ ಸಮಸ್ಯೆ ಉದ್ಭವಿಸಿದೆ. ಕಂಪನಿಯು ಸಮಯಕ್ಕೆ ಸರಿಯಾಗಿ ಕೆಲಸ ಕೈಗೆತ್ತಿಕೊಳ್ಳದ ಕಾರಣ ಜಮೀನು ಹಿಂಪಡೆಯಲಾಗಿತ್ತು. ಅದೀಗ ನ್ಯಾಯಾಲಯದ ಮೆಟ್ಟಿಲೇರಿದೆ.

ಬೆಟ್ಟದಲ್ಲಿ ರೋಪ್ ವೇ ಕೇಂದ್ರಕ್ಕೆಂದು ಮಹಿಷಾಸುರ ವಿಗ್ರಹದ ಸಮೀಪ ನಾಲ್ಕು ಎಕರೆ ಜಾಗ ಗುರುತಿಸಲಾಗಿದೆ. ಆದರೆ, ಬೆಟ್ಟದ ತಪ್ಪಲಿನಲ್ಲಿ ಕೇಂದ್ರ ಸ್ಥಾಪಿಸಲು ಜಾಗಕ್ಕೆ ಹುಡುಕಾಟ ನಡೆಯುತ್ತಿದೆ ಎನ್ನುತ್ತಾರೆ ಅಧಿಕಾರಿಗಳು. ಆದರೆ, ಕೇಬಲ್ ಕಾರು ಯೋಜನೆ ಸಾಕಾರಗೊಂಡಿದ್ದರೆ ಅದರ ಅಗತ್ಯವೇ ಇರುತ್ತಿರಲಿಲ್ಲ. ತಪ್ಪಲಿನಲ್ಲೇ ವಾಹನ ನಿಲುಗಡೆ ಸೌಕರ್ಯ ಕಲ್ಪಿಸಿ ರೋಪ್ ವೇನಲ್ಲಿ ಹೋಗಿ ಬರಬಹುದಿತ್ತು.

ವಾಹನದಲ್ಲಿ ಬೆಟ್ಟ ತಲುಪಲು 15 ನಿಮಿಷ ಬೇಕು. ಕೇಬಲ್ ಕಾರಿನಲ್ಲಿ 5-10 ನಿಮಿಷದೊಳಗೆ ತಲುಪಲು ಸಾಧ್ಯ. ಉತ್ತಮ ಆದಾಯ ಸಂಗ್ರಹವಾಗಲಿದ್ದು, ರೋಪ್ ವೇ ನಿರ್ಮಾಣದ ವೆಚ್ಚವನ್ನು ನಾಲ್ಕೈದು ವರ್ಷಗಳಲ್ಲಿ ಹಿಂಪಡೆಯಬಹುದು ಎಂದು ಪ್ರವಾಸೋದ್ಯಮ ಪ್ರವರ್ತಕರು ಹೇಳುತ್ತಾರೆ.

ಈ ಹಿಂದೆ ಬೆಟ್ಟದ 1,001 ಮೆಟ್ಟಿಲು ಮೇಲೆ ಉಕ್ಕಿನ ಚಾವಣಿ ನಿರ್ಮಿಸುವ ಯೋಜನೆ ಇತ್ತು. ಆದರೆ, ಆ ಯೋಜನೆಗೆ ವಿರೋಧ ವ್ಯಕ್ತವಾಗಿದ್ದರಿಂದ ಕೈಬಿಡಲಾಯಿತು. ಬೆಟ್ಟಕ್ಕೆ ತೆರಳುವ ಪ್ರವಾಸಿಗರ ವಾಹನ ನಿಲುಗಡೆಗೆ ದೇವಿಕೆರೆ ಬಳಿ ಅವಕಾಶ ನೀಡಲಾಗಿದೆ. ಇದರಿಂದಾಗಿ ನಿತ್ಯವೂ ವಯಸ್ಸಾದವರು ದೇವಿಕೆರೆಯಿಂದ ದೇಗುಲದವರೆಗೆ ಸುಮಾರು 2 ಕಿ.ಮೀ. ನಡೆಯಬೇಕಿದೆ. ಈ ತೊಂದರೆ ತಪ್ಪಿಸಲು ಕೇಬಲ್ ಕಾರು ಸಹಕಾರಿಯಾಗಲಿದೆ ಎಂಬುದು ಪ್ರವಾಸಿ ವಲಯದ ಅಭಿಪ್ರಾಯ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+