ಜನರ ಸಾಲಗಾರರನ್ನಾಗಿಸಿದ್ದೇ ಸಿದ್ದರಾಮಯ್ಯ ಸಾಧನೆ: ಸಿ.ಟಿ.ರವಿ
ಮೈಸೂರು, ಫೆಬ್ರವರಿ 1 : ಜನರನ್ನು ಸಾಲಗಾರರನ್ನಾಗಿ ಮಾಡಿಸಿದ್ದೇ ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯ ಸರಕಾರದ್ದು ದೊಡ್ಡ ಸಾಧನೆ ಎಂದು ಶಾಸಕ ಸಿ. ಟಿ ರವಿ ಟೀಕಿಸಿದ್ದಾರೆ.
ಬಿಜೆಪಿ ಮೈಸೂರು ನಗರದ ವತಿಯಿಂದ ಆಯೋಜಿಸಲಾಗಿದ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರು, ತಮ್ಮ ಐದು ವರ್ಷದ ಆಡಳಿತದ ಅವಧಿಯಲ್ಲಿ ನೆನಪಿನಲ್ಲಿ ಇರಿಸಿಕೊಳ್ಳುವ ಒಂದೇ ಒಂದು ಯೋಜನೆಯನ್ನೂ ಜಾರಿಗೆ ತಂದಿಲ್ಲ. ಯಾವ ಸಾಧನೆಯನ್ನೂ ಮಾಡದೇ ಬಡಾಯಿ ಕೊಚ್ಚಿಕೊಳ್ಳುತ್ತಾರೆ. ಸಾಲ ಮಾಡಿದ್ದೇ ಅವರ ದೊಡ್ಡ ಸಾಧನೆ ಎಂದರು.
ಭಾರತದಲ್ಲಿ ಇರುವ 125 ಕೋಟಿ ಜನರು ಕೂಡ ಒಂದೇ. ಇಲ್ಲಿ ಒಬ್ಬರಿಗೊಂದು ಮತ್ತೊಬ್ಬರಿಗೊಂದು ಸಂವಿಧಾನ ಇಲ್ಲ. ಆದರೆ ನಂತರದ ದಿನಗಳಲ್ಲಿ ರಾಜಕೀಯ ದುರ್ಬಳಕೆಗೋಸ್ಕರ ಸಂವಿಧಾನದ ಆಶಯವನ್ನು ತಿರುಚಲಾಗಿದೆ. ಅದು ಸಂವಿಧಾನ ವಿರೋಧಿ ಕೆಲಸ ಎಂದ ಅವರು ನಮ್ಮ ಭಾರತದಲ್ಲಿ ಜಾತಿಯ ರಾಜಕಾರಣ ಕುಟುಂಬ ರಾಜಕಾರಣಕ್ಕೆ ಅವಕಾಶವಿಲ್ಲ. ಜಾತಿ ಮತ್ತು ಹಣದ ಮೇಲೆ ರಾಜಕಾರಣ ವ್ಯವಸ್ಥೆ ಜಾರಿಗೆ ತಂದಿದ್ದೇ ಕಾಂಗ್ರೆಸ್ ಎಂದು ದೂರಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಕನ್ನಂಬಾಡಿ ಕಟ್ಟಿದ್ದಾರಾ ? ಆಲಮಟ್ಟಿ ಕಟ್ಟಿದ್ದಾರಾ ? ಆದರೂ 2,54 ಕೋಟಿ ಸಾಲ ಮಾಡಿದ್ದಾರೆ. ಬಿಜೆಪಿ ಸರ್ಕಾರವಿದ್ದಾಗ 18 ಸಾವಿರ ಕೋಟಿ ಖರ್ಚು ಮಾಡಿ 7 ಲಕ್ಷ ಹೆಕ್ಟೇರ್ ನೀರಾವರಿ ಕಲ್ಪಿಸಿಕೊಟ್ಟಿದ್ದರು. ಆದರೆ ಸಿದ್ದರಾಮಯ್ಯನವರು 46 ಸಾವಿರ ಕೋಟಿ ಖರ್ಚು ಮಾಡಿ 5 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಮಾಡಿದ್ದಾರೆ. ಕಡಿಮೆ ನೀರಾವರಿಗೆ ಹೆಚ್ಚು ಹಣ ಖರ್ಚು ಮಾಡಿ ಕಳ್ಳ ಬಿಲ್ಲು , ಸುಳ್ಳು ಲೆಕ್ಕ ಮಾಡಿ ರಾಜ್ಯದ ಬೊಕ್ಕಸ ಬರಿದು ಮಾಡಿದ್ದಾರೆ ಎಂದು ಆರೋಪಿಸಿದ್ದರು.
ಮುಖ್ಯಮಂತ್ರಿಯಾಗಿ ಕೂರುವ ನೈತಿಕತೆ ಸಿದ್ದರಾಮಯ್ಯರವರಿಗಿಲ್ಲ. ತಮ್ಮ ಸೈದ್ಧಾಂತಿಕ ನಿಲುವುಗಳಿಂದ ಬಿಜೆಪಿಯನ್ನು ಸೋಲಿಸಬಹುದು ಎಂದು ಅಂದುಕೊಂಡರೆ ಅದು ಅವರ ದಡ್ಡತನ. ಗೌರಿ ಲಂಕೇಶ್ ಹತ್ಯೆಗೆ ಬಿಜೆಪಿ ಹಾಗೂ ಹಿಂದೂ ಕಾರ್ಯಕರ್ತರ ಮೇಲೆ ಆರೋಪ ಹೊರಿಸುವ ಕಾರ್ಯಕ್ಕೆ ಕಾಂಗ್ರೆಸ್ ಮುಂದಾಗಿದೆ ಇದು ತಪ್ಪು ಎಂದರು.
ಬಿಜೆಪಿ ಕಾರ್ಯಕರ್ತ ಸಂತೋಷ್ ಹತ್ಯೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಹಿಂದೂ ಹಾಗೂ ಬಿಜೆಪಿ ಕಾರ್ಯಕರ್ತರ ಹತ್ಯೆ ಕೂಡ ಕಾಂಗ್ರೆಸ್ ಸಾಧನೆ. ಭ್ರಷ್ಟಾಚಾರದ ಸಾಧನೆಯೊಂದಿಗೆ ಇದೊಂದು ಸಾಧನೆ ಕೂಡ ಸೇರಿದೆ. ಗೌರಿ ಹತ್ಯೆ ಹಂತಕರು ಕರಾವಳಿ ಭಾಗದಲ್ಲಿದ್ದಾರೆ ಎಂಬ ದೊರೆಸ್ವಾಮಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಹಿರಿಯರು ಅವರ ಮಾತಿಗೆ ಗೌರವ ಕೊಡಬೇಕು. ಸಿಎಂ ಸಿದ್ದರಾಮಯ್ಯ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಬೇಕು ಎಂದರು.
ಸರ್ಕಾರದ ಮಾನಸಿಕತೆ ಸರಿಯಿಲ್ಲ. ಪಿಎಫ್ಐ ಸಂಘಟನೆಗಳಿಗೆ ಪ್ರೋತ್ಸಾಹ ನೀಡುತ್ತಿದೆ. ಕ್ರಿಮಿನಲ್ಗಳಿಗೆ ಪ್ರಶಸ್ತಿ ನೀಡುವುದಾದರೆ ಅದು ಮುಖ್ಯಮಂತ್ರಿಗಳಿಗೆ ಸಲ್ಲುತ್ತದೆ. ಮುಖ್ಯಮಂತ್ರಿಯಾಗಿ ಉಳಿಯುವ ನೈತಿಕತೆ ಸಿದ್ದರಾಮಯ್ಯನವರಿಗಿಲ್ಲ ಎಂದು ಟೀಕಿಸಿದರು.