ಸರ್ಕಾರ ನನ್ನನ್ನು ಕಟ್ಟಿ ಹಾಕಲು ಸಾಧ್ಯವಿಲ್ಲ: ಎಚ್.ವಿಶ್ವನಾಥ್
ಮೈಸೂರು, ಜುಲೈ 28: ರಾಜ್ಯ ಸರ್ಕಾರ ನನ್ನ ಕೈ ಹಾಗೂ ನನ್ನ ಬರವಣಿಗೆಯನ್ನು ಕಟ್ಟಿಹಾಕಲು ಸಾಧ್ಯವಿಲ್ಲ ಎಂದು ನೂತನ ಮೇಲ್ಮನೆ ಸದಸ್ಯರಾಗಿ ನಾಮ ನಿರ್ದೇಶನಗೊಂಡಿರುವ ಎಚ್.ವಿಶ್ವನಾಥ್ ಅವರು ಹೇಳಿದರು.
Recommended Video
ಮೈಸೂರಿನ ಜಿಲ್ಲಾ ಪತ್ರಕರ್ತರ ಸಂಘ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಮಂಗಳವಾರ ಜಿಲ್ಲಾ ಪತ್ರಕರ್ತರ ಸಂಘದ ಸಭಾಂಗಣದಲ್ಲಿ ಆಯೋಜಿಸಿದ್ದ ಸಾಹಿತ್ಯಿಕ-ಸಾಂಸ್ಕೃತಿಕ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾಹಿತಿಯ ಲೇಖನವನ್ನು ಯಾರೂ ತಡೆಯಲು ಆಗಲ್ಲ. ಜನತಂತ್ರ ವ್ಯವಸ್ಥೆಯನ್ನು ಯಾರೂ ನಿಲ್ಲಿಸಲು ಆಗಲ್ಲ ಎಂದರು.
ಮೈಸೂರು: ಜು.29 ರಿಂದ ಮೂರು ದಿನಗಳ ಕಾಲ ದೇವರಾಜ ಮಾರುಕಟ್ಟೆ ಬಂದ್
ನಾವು ಆಡಳಿತ ಪಕ್ಷದಿಂದ ವಿರೋಧ ಪಕ್ಷದ ಕಡೆಗೆ ಹೋದವರು. ನಾವು ಇದನ್ನು ಮಾಡಿದ್ದು ಒಂದು ಮಾದರಿ ಆಯಿತು. ಇದೇ ರೀತಿ ವಿವಿಧ ಕಡೆ ನಡೆಯುತ್ತಿದೆ. ಇದನ್ನು ಜನರಿಗೆ ಅರ್ಥವಾಗುವ ರೀತಿಯಲ್ಲಿ ಬರೆಯಬೇಕು. ನಾವು ಅನುಭವಿಸಿದ್ದನ್ನು ಬರೆಯಲೇಬೇಕಿರುವುದರಿಂದ ನಾನು ಪುಸ್ತಕ ಬರೆಯುತ್ತೇನೆ ಎಂದು ತಿಳಿಸಿದರು.
ಬಾಂಬೆ ಡೇಸ್' ಪುಸ್ತಕ ಬರೆಯೋದು ಖಚಿತ
ಹೀಗಾಗಿ "ಬಾಂಬೆ ಡೇಸ್' ಪುಸ್ತಕ ಬರೆಯೋದು ಹಾಗೂ ಬಿಡುಗಡೆ ಮಾಡುವುದು ಎರಡೂ ಖಚಿತ. ಸರ್ಕಾರದಿಂದ ನನ್ನ ಕೈ ಮತ್ತು ಬರಹ ಕಟ್ಟಿಹಾಕಲು ಸಾಧ್ಯವಿಲ್ಲ. ಬಾಂಬೆ ಡೈರೀಸ್ ನಿಂದ ನಾನು ಯಾವುದನ್ನು ಸಾಬೀತು ಮಾಡಲು ಹೊರಟಿಲ್ಲ. ಇದರಲ್ಲಿ ಸರ್ಕಾರಕ್ಕೆ ಮುಜುಗರ ತರುವಂತಹದ್ದು ಏನೂ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ನನ್ನ ಬರವಣಿಗೆ ಮಾರಾಟಕ್ಕೆ ಇಲ್ಲ
ಬದಲಿಗೆ ಯಾವ ಕಾರಣಕ್ಕೆ ನಾವು ಬಂಡೆದ್ದು ಹೋದೆವು, ಹೇಗೆ ಕಾನೂನನ್ನು ದುರುಪಯೋಗ ಪಡಿಸಿಕೊಂಡರು ಎಂಬ ಮಾಹಿತಿ ಪುಸ್ತಕದಲ್ಲಿ ಇರಲಿದೆ. ನಾನು ಬ್ಲ್ಯಾಕ್ ಮೇಲ್ ಮಾಡುವುದಕ್ಕಾಗಿ ಪುಸ್ತಕ ಬರೆದಿಲ್ಲ, ಬರೆಯುವುದಿಲ್ಲ. ಅಲ್ಲದೇ ನನ್ನ ಬರವಣಿಗೆ ಮಾರಾಟಕ್ಕೆ ಇಲ್ಲ. ನಾನು ಮಿಸ್ಟರ್ ಕ್ಲೀನ್, ಹೀಗಾಗಿ ಚಾಮುಂಡಿ ಬೆಟ್ಟಕ್ಕೆ ಒಬ್ಬರನ್ನು ಧೈರ್ಯದಿಂದ ಕರೆದಿದ್ದು. ಶಾಸಕರಾದವರು, ಸಚಿವರಾದವರಿಗೆ ಕನಿಷ್ಠ ಜ್ಞಾನ ಇರಬೇಕು ಎಂದು ಪರೋಕ್ಷವಾಗಿ ಸಾ.ರಾ ಮಹೇಶ್ ಅವರಿಗೆ ಟಾಂಗ್ ನೀಡಿದರು.
"ಸಾ.ರಾ ಮಹೇಶ್ ನನ್ನ ಸಮನಲ್ಲ, ಅವನ ಬಗ್ಗೆ ನಾನು ಮಾತನಾಡೋದಿಲ್ಲ"
ದೇವರಾಜ ಅರಸು ನನ್ನನ್ನು ಆವರಿಸಿದ್ದಾರೆ
ಸಂವಾದದಲ್ಲಿ ಮಾತನಾಡುತ್ತಾ ತಮ್ಮ ಸಾಧನೆಗೆ ನೆರವಾದ ನಾಯಕರನ್ನು ಎಚ್.ವಿಶ್ವನಾಥ್ ನೆನೆದರು. ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಅವರನ್ನು ನೆನೆದರು. ಅಲ್ಲದೇ ದೇವರಾಜ ಅರಸು ನನ್ನನ್ನು ಆವರಿಸಿದ್ದಾರೆ. ಮೈಸೂರು ಸಂಸ್ಥಾನ ನಮಗೆ ಅನ್ನ, ಅರಿವು ಹಾಗೂ ಅಧಿಕಾರವನ್ನು ಕೊಟ್ಟಿದೆ ಎಂದರು.
ನಾನು ದೇವರಾಜ ಅರಸು ಅವರ ಗರಡಿಯಲ್ಲಿ ಬೆಳೆದ ಹುಡುಗ
1978 ರಲ್ಲಿ ನಾನು ಶಾಸಕನಾದೆ. ಇದಕ್ಕೆ ದಿ. ಡಿ.ದೇವರಾಜ ಅರಸು ಅವರು ಕಾರಣ. ಅವರ ಗರಡಿಯಲ್ಲಿ ಬೆಳೆದ ಹುಡುಗ ನಾನು. ಸಾಕಷ್ಟು ಕನ್ನಡಪರ ಹೋರಾಟದಲ್ಲಿ ಭಾಗಿಯಾಗಿದ್ದೆ. ಹಾಗಾಗಿ ನಾನು ಕನ್ನಡ ಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದ್ದೇನು ಎಂದು ತಮ್ಮ ರಾಜಕೀಯ ಜೀವನವನ್ನು ಮೆಲುಕು ಹಾಕಿದರು. ಸಂವಾದಕ್ಕೂ ಮುನ್ನ ಗಾಯನದ ಮೂಲಕ ಗಮನ ಸೆಳೆದ ವಿಶ್ವನಾಥ್, ಕುವೆಂಪು ರವರು ರಚಿಸಿದ್ದ ಸಾಲುಗಳನ್ನು ಹಾಡಿದರು.