ಮೈಸೂರಿನ ಸರಸ್ವತಿಪುರಂನ ಜನಕ್ಕೆ ಈಗ ವಾಮಾಚಾರದ ಭಯ
ಮೈಸೂರು ,ಜುಲೈ 12: ಮಾಟ-ಮಂತ್ರ-ವಾಮಾಚಾರ ಎಲ್ಲ ನಿಜಕ್ಕೂ ಪರಿಣಾಮ ಬೀರುತ್ತದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಅರಿಶಿನ, ಕುಂಕುಮ, ನಿಂಬೆಹಣ್ಣು, ಕತ್ತರಿಸಿದ ಕೋಳಿ, ಮೊಟ್ಟೆ, ರಕ್ತ...ಇಂಥವೆಲ್ಲ ಜನರ ಮನಸ್ಸಿನಲ್ಲಿ ಗಾಬರಿಯಂತೂ ಹುಟ್ಟು ಹಾಕುತ್ತವೆ.
ಇಲ್ಲಿನ ಸರಸ್ವತಿಪುರಂ ನಲ್ಲಿರುವ ಬೇಕ್ ಪಾಯಿಂಟ್ ವೃತ್ತದಲ್ಲಿ ಯಾರೋ ಮಾಟ ಮಂತ್ರ ಮಾಡಿಸಿದ ಶಂಕೆ ವ್ಯಕ್ತವಾಗಿದೆ. ಬೇಕ್ ಪಾಯಿಂಟ್ ವೃತ್ತದಲ್ಲಿ ನಾಲ್ಕು ರಸ್ತೆಗಳು ಸೇರುವ ಜಾಗದಲ್ಲಿ ರಸ್ತೆ ಮಧ್ಯದಲ್ಲಿಯೇ ಕೋಳಿಯನ್ನು ಕತ್ತರಿಸಿದ್ದು, ಪಕ್ಕದಲ್ಲಿಯೇ ಅರಿಶಿನ, ಕುಂಕುಮ, ಕೆಂಪು-ಹಳದಿ ದಾರಗಳು ಮತ್ತು ಅಗ್ನಿಸ್ಪರ್ಶ ಮಾಡಿದ್ದಕ್ಕೆ ಕುರುಹುಗಳು ದೊರಕಿವೆ.

ಈ ರಸ್ತೆಯಲ್ಲಿ ಪೊಲೀಸ್ ಠಾಣೆ, ಕೆಲವು ವಿದ್ಯಾಲಯಗಳು ಹಾಗೂ ವಾಣಿಜ್ಯ ಮಳಿಗೆಗಳು ಇವೆ. ಇಲ್ಲಿ ಮಾಟ ಮಾಡಿಸಿದವರು ಯಾರು, ಅಷ್ಟಕ್ಕೂ ಮಾಟ ಮಂತ್ರ ಮಾಡುವ ಅವಶ್ಯಕತೆ ಯಾರಿಗಿತ್ತು ಎನ್ನುವ ಪ್ರಶ್ನೆಗಳು ಸ್ಥಳೀಯರನ್ನು ಕಾಡುತ್ತಿವೆ. ಬಹುಶಃ ಬೆಳಗಿನ ಜಾವ ಮಾಡಿಸಿರಬೇಕು. ಅಲ್ಲಿಯ ತನಕ ಇಲ್ಲಿ ಏನೂ ಇರಲಿಲ್ಲ. ಯಾರ ಕೃತ್ಯವೇನೋ, ನಮಗೆ ಭಯವಾಗುತ್ತಿದೆ ಎಂದು ಅಕ್ಕಪಕ್ಕದವರು ಭೀತಿ ವ್ಯಕ್ತಪಡಿಸಿದ್ದಾರೆ.

ಕುವೆಂಪುನಗರ, ಜಯನಗರ, ಕೆ.ಜಿ.ಕೊಪ್ಪಲು ಸಂಪರ್ಕಿಸುವ ರಸ್ತೆಯ ಮಧ್ಯೆ ಈ ರೀತಿ ಕೃತ್ಯ ನಡೆಸಿರುವುದು ಸಾರ್ವಜನಿಕರನ್ನು ಆತಂಕಕ್ಕೀಡು ಮಾಡಿದೆ. ಸಾರ್ವಜನಿಕ ಸ್ಥಳದಲ್ಲಿ ಈ ರೀತಿ ಕೃತ್ಯ ನಡೆಸಿರುವುದಕ್ಕೆ ಆಕ್ರೋಶ ಕೂಡ ವ್ಯಕ್ತವಾಗಿದೆ. ಇನ್ನು ಈ ರಸ್ತೆಯಲ್ಲಿ ಮಾಮೂಲಿಯಾಗಿ ಸಂಚರಿಸುತ್ತಿದ್ದ ಹಲವರು ದುಷ್ಟಶಕ್ತಿಗಳು ಆವರಿಸಿಕೊಂಡು ಬಿಡುವುದೋ ಎಂದು ಸುತ್ತು-ಬಳಸಿ ಹೋಗುತ್ತಿದ್ದಾರೆ.












Click it and Unblock the Notifications