ಹಳೇ ಮೈಸೂರು ಭಾಗದಲ್ಲಿ ಸಿದ್ದು ಕೈ ಕಟ್ಟಲು ಯದುವೀರ್ ಗೆ ಬಿಜೆಪಿ ಗಾಳ!
ಮೈಸೂರು, ಮಾರ್ಚ್ 16 : ರಾಜ್ಯದ ವಿಧಾನಸಭೆ ಚುನಾವಣೆ ಕಾವು ಏರುತ್ತಲೇ ಇದೆ. ಮತದಾನ- ಮತ ಎಣಿಕೆ ದಿನಾಂಕ ಘೋಷಣೆ ಆಗದಿದ್ದರೂ ಅಭ್ಯರ್ಥಿಗಳ ಆಯ್ಕೆ ಲೆಕ್ಕಾಚಾರದಲ್ಲಿ ಎಲ್ಲಾ ಪಕ್ಷಗಳೂ ತೊಡಗಿವೆ. ಅದರಲ್ಲೂ ಮೈಸೂರಿನಲ್ಲಿ ಈ ಬಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ವರ್ಸಸ್ ಇತರರು ಎಂಬ ಸ್ಥಿತಿ ಇದೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಸಿದ್ದರಾಮಯ್ಯ ಅವರ ಕೋಟೆಯಲ್ಲೇ ಕೈ- ಕಾಲು ಕಟ್ಟಿಹಾಕಬೇಕು ಎಂಬ ಆಲೋಚನೆ ಜೆಡಿಎಸ್ ಹಾಗೂ ಬಿಜೆಪಿ ಎರಡರಲ್ಲೂ ಇದೆ. ಈ ದಿಕ್ಕಿನಲ್ಲಿ ಬಿಜೆಪಿ ಅದಾಗಲೇ ರಾಜಕೀಯ ತಂತ್ರಗಳನ್ನು ಪ್ರಯೋಗಿಸಲು ಸಜ್ಜಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ತಾವು ಗೆಲ್ಲುವುದಷ್ಟೇ ಅಲ್ಲ, ಮೈಸೂರಿನ ಪಾಳೇಪಟ್ಟಿನಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಬೇಕು.
ಒನ್ ಇಂಡಿಯಾ ಸಮೀಕ್ಷೆ : ಸಿದ್ದರಾಮಯ್ಯ ಸರ್ಕಾರಕ್ಕೆ ಜನರು ಕೊಟ್ಟ ಅಂಕವೆಷ್ಟು?
ಒಂದು ವೇಳೆ ಹಾಗೆ ಗೆಲ್ಲಿಸಿಕೊಂಡು ಬರಲು ಸಾಧ್ಯವಾಗದೆ ಹಲವು ಸ್ಥಾನಗಳಲ್ಲಿ ಸೋತುಬಿಟ್ಟರೆ ಕಾಂಗ್ರೆಸ್ ಗೆ ಭಾರೀ ಮುಖಭಂಗ ಆಗಲಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್ ರಾಜ್ಯ ನಾಯಕರಿಗೆ ಮಹತ್ವದ ಸೂಚನೆಯನ್ನು ರವಾನೆ ಮಾಡಿದೆ ಎಂಬುದು ಪಕ್ಷದ ಮೂಲಗಳೇ ನೀಡುತ್ತಿರುವ ಮಾಹಿತಿ.
ಮೈಸೂರಿನ ರಾಜವಂಶಸ್ಥ ಯದುವೀರ್ ಗೆ ಬಿಜೆಪಿ ಗಾಳ
ಪ್ರತಿಪಕ್ಷಗಳನ್ನು ಹಣಿಯುವುದರೊಂದಿಗೆ ಸಮಾಜದಲ್ಲಿ ಹೆಸರುವಾಸಿ ಅಗಿರುವ, ಅಪಾರ ಬೆಂಬಲಿಗರನ್ನು ಹೊಂದಿರುವ ವ್ಯಕ್ತಿಗಳನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ಪ್ರಕ್ರಿಯೆ ಶುರುವಾಗಿದೆ. ಇದೀಗ ಬಿಜೆಪಿಯು ಮೈಸೂರು ರಾಜವಂಶಸ್ಥ ಯದುವೀರ್ಗೆ ಗಾಳ ಹಾಕುತ್ತಿದೆ ಎಂಬುದು ಜೋರಾಗಿ ಕೇಳಿಬರುತ್ತಿರುವ ಮಾತು.
ಕಾವು ಇರುವಾಗಲೇ ಪಕ್ಷಕ್ಕೆ ಸೇರಿಸಿಕೊಳ್ಳುವ ಪ್ರಯತ್ನ
ಬಿಜೆಪಿಯಿಂದ ಹುಡುಕಾಟ ಶುರುವಾಗಿದ್ದು, ಮೈಸೂರು ರಾಜವಂಶಸ್ಥ ಯದುವೀರ್ ರನ್ನು ಪಕ್ಷಕ್ಕೆ ಬರಮಾಡಿಕೊಳ್ಳುವ ಪ್ರಯತ್ನಗಳು ನಡೆಯುತ್ತಿವೆ. ಮಹಾರಾಜರ ಕಾಲದ ನಂತರ ಮೈಸೂರಿನಲ್ಲಿ ಕಾಂಗ್ರೆಸ್ ಸರಕಾರದ ಕಾಲದಲ್ಲಿ ಒಳ್ಳೆ ಕೆಲಸ ಆಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದರು. ಈ ವಿಚಾರವಾಗಿ ಯದುವೀರ್ ಹಾಗೂ ಪ್ರಮೋದಾದೇವಿ ತುಂಬ ಎಚ್ಚರಿಕೆಯ ಹಾಗೂ ತೂಕದ ಉತ್ತರ ನೀಡಿದ್ದಾರೆ. ಈ ಕಾವು ಇರುವಾಗಲೇ ಯದುವೀರ್ ರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬೇಕು ಎಂದು ಬಿಜೆಪಿಯು ಪ್ರಯತ್ನದಲ್ಲಿ ತೊಡಗಿದೆ.
ಮಾವನ ಮನೆಯ ಮೂಲಕ ಯದುವೀರ್ ಮೇಲೆ ಒತ್ತಡ
ರಾಜಕಾರಣದ ಬಗ್ಗೆ ಆಸಕ್ತಿ ಹೊಂದಿರುವ ಯದುವೀರ್ ಒಡೆಯರ್ ಅವರನ್ನು ಲೋಕಸಭೆ ಚುನಾವಣೆ ವೇಳೆಗಾದರೂ ಬಿಜೆಪಿಗೆ ಸೆಳೆಯಲು ಆಲೋಚನೆ ಮಾಡಲಾಗಿದೆ. ಇನ್ನು ಅವರ ಮನವೊಲಿಸುವ ಸಲುವಾಗಿ ತ್ರಿಷಿಕಾ ದೇವಿ ಅವರ ತವರು, ರಾಜಸ್ತಾನದ ಯದುವೀರ್ ಮಾವನ ಮನೆಯ ಮೂಲಕ ಗಾಳ ಹಾಕಲು ತಯಾರಿ ನಡೆದಿದೆ. ವಿಧಾನಸಭೆ ಚುನಾವಣೆಗೆ ದಿನಗಳು ಹತ್ತಿರವಾಗುತ್ತಿದ್ದಂತೆ ಸ್ಥಳೀಯವಾಗಿ ಮತದಾರರನ್ನು ಸೆಳೆಯಲು ಪ್ರಭಾವಿ ನಾಯಕನ ಹುಡುಕಾಟದಲ್ಲಿರುವ ಬಿಜೆಪಿಯು ಮೈಸೂರು ರಾಜವಂಶಸ್ಥರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ರನ್ನು ಪಕ್ಷಕ್ಕೆ ಕರೆತರುತ್ತದಾ ಎಂದು ಕಾದುನೋಡಬೇಕಿದೆ.
ವರ್ಷದಿಂದ ನಡೆಯುತ್ತಿದೆ ಪ್ರಯತ್ನ
ಒಂದು ವರ್ಷದಿಂದಲೂ ಇಂತಹದೊಂದು ಪ್ರಯತ್ನ ನಡೆದಿದ್ದು, ಸ್ವತಃ ಯದುವೀರ್ ಅವರೇ ಸದ್ಯಕ್ಕೆ ರಾಜಕೀಯ ಪ್ರವೇಶಿಸುವ ಆಲೋಚನೆ ಇಲ್ಲ ಎಂದು ಸ್ಪಷ್ಟಪಡಿಸಿದ್ದರು. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಹಳೇ ಮೈಸೂರು ಭಾಗದ ಕ್ಷೇತ್ರಗಳಲ್ಲಿ ಗೆಲುವು ಪಡೆಯುವ ದೃಷ್ಟಿಯಿಂದ ಯದುವೀರ್ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ, ಯಾವುದಾದರೂ ಒಂದು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿಸುವ ಇರಾದೆ ಇದೆ. ಆ ಮೂಲಕ ಈ ಭಾಗದಲ್ಲಿ ಮೈಸೂರು ರಾಜಮನೆತನದ ಬಗ್ಗೆ ಇರುವ ಭಾವನಾತ್ಮಕ ನಂಟನ್ನು ಮತವಾಗಿ ಪರಿವರ್ತಿಸಿಕೊಳ್ಳಬಹುದು ಎಂಬ ಲೆಕ್ಕಾಚಾರವನ್ನು ಬಿಜೆಪಿ ಹಾಕಿದೆ.
ವಿಧಾನಸಭೆ ಚುನಾವಣೆಗೂ ಅನುಕೂಲ
ಲೋಕಸಭೆ ಚುನಾವಣೆಗೆ ಇನ್ನೂ ಒಂದು ವರ್ಷ ಇದೆ. ಈ ವೇಳೆಯಲ್ಲಿ ಯದುವೀರ್ ಅವರನ್ನು ಪಕ್ಷಕ್ಕೆ ಕರೆತರುವುದರಿಂದ ವಿಧಾನಸಭೆ ಚುನಾವಣೆಯಲ್ಲೂ ಅನುಕೂಲವಾಗಲಿದೆ. ಆದ್ದರಿಂದ ವಿಧಾನಸಭೆ ಚುನಾವಣೆಗೂ ಮುನ್ನವೇ ಯದುವೀರ್ ಅವರನ್ನು ಪಕ್ಷಕ್ಕೆ ಸೆಳೆಯಲು ಬಿಜೆಪಿ ಸಕಲ ಪ್ರಯತ್ನ ನಡೆಸುತ್ತಿದೆ ಎಂಬುದು ಪಕ್ಷದ ಮೂಲಗಳು ಬಯಲು ಪಡಿಸುತ್ತಿರುವ ಮಾಹಿತಿ.