ಗ್ಯಾರಂಟಿ ಯೋಜನೆ ಮುಂದುವರೆಯಬೇಕು ಎಂದ ನೂತನ ಸಂಸದ ಯದುವೀರ್ ಒಡೆಯರ್
ಗ್ಯಾರಂಟಿ ಯೋಜನೆಗಳಿಂದಲೇ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಹಾಗಾಗಿ ಯೋಜನೆ ಮುಂದುವರಿಯಬೇಕು. ಸಾರ್ವಜನಿಕರ ಅಭಿಪ್ರಾಯ ಗಮನಿಸಿದರೆ ಈ ಯೋಜನೆ ಇರಲಿ ಎನಿಸುತ್ತದೆ ಎಂದು ಸಂಸದ ಯದುವೀರ್ ಒಡೆಯರ್ ತಿಳಿಸಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಆದರೆ, ಗ್ಯಾರಂಟಿ ಯೋಜನೆ ಮುಂದುವರಿಸುವುದು, ಬಿಡುವುದು ಸರ್ಕಾರದ ಇಚ್ಛೆ. ನಾನು ಚುನಾವಣೆಗೂ ಮುನ್ನ ಕುವೆಂಪುನಗರದಲ್ಲಿ ಕಚೇರಿ ಆರಂಭಿಸಿದ್ದೆ. ಸರ್ಕಾರದ ಅಧಿಕೃತ ಕಚೇರಿ ಆರಂಭ ಆಗುವವರೆಗೂ ಅಲ್ಲಿಯೇ ಸಿಗುತ್ತೇನೆ ಎಂದು ಯದುವೀರ್ ಹೇಳಿದರು.

ಮೈಸೂರಿನ ಅಭಿವೃದ್ಧಿಗೆ ಎಲ್ಲರ ಸಹಕಾರ ಮುಖ್ಯ. ಅಭಿವೃದ್ಧಿಗಾಗಿ ಅವಶ್ಯ ಬಿದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನೂ ಭೇಟಿಯಾಗುತ್ತೇನೆ. ಮಾಜಿ ಸಂಸದ ಪ್ರತಾಪ್ ಸಿಂಹ ಅವರ ಸಹಕಾರವನ್ನು ಕೇಳುತ್ತೇನೆ. ಪ್ರವಾಸೋದ್ಯಮ ದೃಷ್ಟಿಯಲ್ಲಿ ಮೈಸೂರಿಗೆ ಸಾಕಷ್ಟು ಯೋಜನೆ ರೂಪಿಸಬೇಕಿದೆ. ಮೈಸೂರಿನಲ್ಲಿ ಸಾಕಷ್ಟು ಕೈಗಾರಿಕಾ ಪಾರ್ಕ್ಗಳಿವೆ. ಅವುಗಳ ಅಭಿವೃದ್ಧಿ ಮತ್ತು ಹೊಸ ಕೈಗಾರಿಕೆಗಳನ್ನು ತರುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು ಎಂದರು.
ಪ್ರವಾಸಿ ತಾಣಗಳಿಗೆ ಸೂಕ್ತ ಸೌಲಭ್ಯ
ಚಾಮುಂಡಿಬೆಟ್ಟದಲ್ಲಿ ನಾಡದೇವತೆ ನೆಲೆಸಿದ್ದು, ಮೈಸೂರಿನ ಪ್ರಮುಖ ಧಾರ್ಮಿಕ ಕೇಂದ್ರವಾಗಿದೆ. ಹೀಗಾಗಿ ಅಲ್ಲಿಗೆ ಕೇವಲ ಪ್ರವಾಸಿ ಉದ್ದೇಶದಿಂದ ರೋಪ್ ವೇ ಅಗತ್ಯವಿಲ್ಲ. ಇದರಿಂದ ಪರಿಸರಕ್ಕೂ ಹಾನಿಯಾಗುತ್ತದೆ. ಮೈಸೂರಿನಲ್ಲಿರುವ ಪ್ರವಾಸಿ ತಾಣಗಳಿಗೆ ಸೂಕ್ತ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಸಂಬಂಧಿಸಿದ ಇಲಾಖೆಗಳ ಜತೆ ಮಾತನಾಡಿ ಕ್ರಮ ಕೈಗೊಳ್ಳುತ್ತೇನೆ ಎಂದರು.
ಮೈಸೂರು ಪಾರಂಪರಿಕ ಕಟ್ಟಡಗಳ ನಗರವಾಗಿದ್ದು, ದೇವರಾಜ ಮಾರುಕಟ್ಟೆ, ಲ್ಯಾನ್ಸ್ಡೌನ್ ಕಟ್ಟಡಗಳನ್ನು ನೆಲಸಮ ಮಾಡುವ ಅವಶ್ಯಕತೆ ಇಲ್ಲ. ಎರಡೂ ಕಟ್ಟಡಗಳನ್ನು ಸಂರಕ್ಷಣೆ ಮಾಡುತ್ತೇವೆ. ವಿಮಾನ ನಿಲ್ದಾಣ ವಿಸ್ತರಣೆ, ಹೆಚ್ಚು ವಿಮಾನಗಳ ಹಾರಾಟಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಕ್ಷೇತ್ರದಲ್ಲಿ ಪ್ರವಾಸ ಮಾಡುತ್ತೇನೆ
ಮೈಸೂರು-ಕೊಡಗು ಜಿಲ್ಲೆಗಳಲ್ಲಿ ವಿಧಾನಸಭಾ ಕ್ಷೇತ್ರವಾರು ಪ್ರವಾಸ ಮಾಡಿ ಜನರ ಸಮಸ್ಯೆ ಆಲಿಸುತ್ತೇನೆ. ಇಂದಿನಿಂದ ನರಸಿಂಹರಾಜ ಕ್ಷೇತ್ರದಲ್ಲಿ ಪ್ರವಾಸ ಆರಂಭಿಸಿದ್ದೇನೆ. ಆ ಭಾಗದಲ್ಲಿ ಪಾದಯಾತ್ರೆ ಮಾಡಿ ಪರಿಶೀಲಿಸುತ್ತೇನೆ. ಮೈಸೂರು- ಕೊಡಗು ದೊಡ್ಡ ಕ್ಷೇತ್ರ. ಇಲ್ಲಿ ಜನರನ್ನು ಭೇಟಿಯಾಗುವುದೇ ಸವಾಲು. ಆದರೆ, ಸಮಯ ತೆಗೆದುಕೊಂಡು ಜನರನ್ನು ಭೇಟಿ ಆಗುತ್ತೇನೆ. ಭ್ರಷ್ಟಮುಕ್ತ ತತ್ತ್ವದೊಡನೆ ಕೆಲಸ ಮುಂದುವರಿಯುತ್ತೇನೆ ಎಂದರು.












Click it and Unblock the Notifications