ಮೈಸೂರು ದಸರಾ 2022; ಪಾಸ್ ವಾಪಸ್ ಮಾಡಿದ ಬಿಜೆಪಿ ಶಾಸಕ!
ಮೈಸೂರು, ಅಕ್ಟೋಬರ್ 05; ನಾಡಹಬ್ಬ ಮೈಸೂರು ದಸರಾ ಜಂಬೂ ಸವಾರಿ ಬುಧವಾರ ಸಂಜೆ ನಡೆಯಲಿದೆ. ದಸರಾ ಪಾಸ್ ಹಂಚಿಕೆಯಲ್ಲಿ ಗೊಂದಲ ಉಂಟಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್. ಟಿ. ಸೋಮಶೇಖರ್ ವಿರುದ್ಧ ಬಿಜೆಪಿಯ ಶಾಸಕರೇ ಅಸಮಾಧಾನಗೊಂಡಿದ್ದಾರೆ.
ನಂಜನಗೂಡು ಕ್ಷೇತ್ರದ ಬಿಜೆಪಿ ಶಾಸಕ ಬಿ. ಹರ್ಷವರ್ಧನ್ ಉಸ್ತುವಾರಿ ಸಚಿವರ ಮೇಲೆ ಅಸಮಾಧಾನಗೊಂಡಿದ್ದಾರೆ. ತಡರಾತ್ರಿ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ, ದಸರಾ ಪಾಸ್ಗಳನ್ನು ವಾಪಸ್ ನೀಡಿದ್ದಾರೆ.
ಜಂಬೂ ಸವಾರಿ ವೀಕ್ಷಣೆಗೆ ಕೇವಲ 75 ಪಾಸ್ ನೀಡಲಾಗಿದೆ ಎಂಬುದು ಶಾಸಕರ ಅಸಮಾಧಾನಕ್ಕೆ ಕಾರಣವಾಗಿದೆ. ಈ ಹಿನ್ನಲೆಯಲ್ಲಿ ನೀಡಿರುವ ಪಾಸ್ಗಳನ್ನು ಜಿಲ್ಲಾಧಿಕಾರಿಗಳ ಕಚೇರಿಗೆ ಶಾಸಕರು ಮರಳಿಸಿದ್ದಾರೆ.

ದಸರಾ ಪಾಸ್ ಹಂಚಿಕೆ ಹಲವು ದಿನಗಳಿಂದ ಗೊಂದಲಕ್ಕೆ ಕಾರಣವಾಗಿದೆ. ಬಿಜೆಪಿಯ ಶಾಸಕರು ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ಈಗ ಶಾಸಕರು ಪಾಸ್ ವಾಪಸ್ ಕೊಟ್ಟಿದ್ದಾರೆ.
ಮಂಗಳವಾರ ಸಂಜೆ ಶಾಸಕ ಹರ್ಷವರ್ಧನ್ ಮೈಸೂರಿಗೆ ಆಗಮಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ಮಾಡಿದ್ದರು. ಮುಖ್ಯಮಂತ್ರಿಗಳು ನಂಜನಗೂಡು ತಾಲ್ಲೂಕಿನಲ್ಲಿ ನಡೆದ ಗ್ರಾಮೀಣ ದಸರಾ ಕುರಿತು ಮಾಹಿತಿ ಕೇಳಿದ್ದರು. ಶಾಸಕರು ವಿವರಣೆ ನೀಡಿದ್ದರು.
ಸಚಿವ ಸೋಮಶೇಖರ್ ಹೇಳಿಕೆ; ಈ ಬಾರಿಯ ದಸರಾ ಮಹೋತ್ಸವದಲ್ಲಿ ಪಾಸ್ ವಿಚಾರ ಭಾರೀ ಸುದ್ದಿಯಾಗುತ್ತಿದೆ. ದಸರಾ ಪಾಸ್ ಸಿಗುತ್ತಿಲ್ಲ ಎಂದು ಸ್ಥಳೀಯ ಶಾಸಕರು ಅಸಮಾಧಾನಗೊಂಡಿದ್ದಾರೆ. ಬಿಜೆಪಿ ಶಾಸಕ ರಾಮದಾಸ್ ಹಲವು ಕಾರ್ಯಕ್ರಮಗಳಿಂದ ದೂರ ಉಳಿದಿದ್ದಾರೆ. ಶಾಸಕ ನಾಗೇಂದ್ರ ಸೇರಿ ಹಲವರು ಪಾಸ್ ವಿಚಾರದಲ್ಲಿ ಬಹಿರಂಗವಾಗಿಯೇ ಅಸಮಾಧಾನ ಹೊರ ಹಾಕಿದ್ದಾರೆ.
ಮಂಗಳವಾರ ಶಾಸಕರ ಅಸಮಾಧಾನದ ಬಗ್ಗೆ ಮಾತನಾಡಿದ್ದ ಸಚಿವ ಎಸ್. ಟಿ. ಸೋಮಶೇಖರ್, ದಸರಾ ಹಬ್ಬದ ಕಾರ್ಯಕ್ರಮಕ್ಕೆ ತಮ್ಮ ಪಕ್ಷದ ಶಾಸಕರು ಸಹಕಾರ ನೀಡುತ್ತಿಲ್ಲ ಎಂದು ಪರೋಕ್ಷವಾಗಿ ಬೇಸರ ವ್ಯಕ್ತಪಡಿಸಿದ್ದರು.
"ನಾನು ಸಹಕಾರ ಸಚಿವ ಪ್ರತಿಯೊಬ್ಬರಿಗೂ ಸಹಕರಿಸೋದು ನನ್ನ ಕರ್ತವ್ಯ. ನಾನು ಸಹಕಾರ ಕೊಟ್ಟು ನನಗೆ ಸಹಕಾರ ಕೊಡದೇ ಇರೋರಿಗೆ ನಾನೇನು ಮಾಡಲಿ? ಎಂದು ಸಚಿವರು ಪ್ರಶ್ನಿಸಿದ್ದರು. ಆ ತಾಯಿ ಚಾಮುಂಡಿಗೆ ಕೈ ಮುಗಿದು ಕೇಳಿಕೊಳ್ಳುತ್ತೇನೆ. ಅವರನ್ನು ಆ ತಾಯಿಯೇ ನೋಡಿಕೊಳ್ಳಲಿ" ಎಂದು ಹೇಳಿದ್ದರು.
ಸಂಜೆ ಜಂಬೂ ಸವಾರಿ; 10 ದಿನಗಳ ಮೈಸೂರು ದಸರಾ ಮಹೋತ್ಸವಕ್ಕೆ ಜಂಬೂ ಸವಾರಿ ಮೂಲಕ ಬುಧವಾರ ಸಂಜೆ ತೆರ ಬೀಳಲಿದೆ. ಮಧ್ಯಾಹ್ನ 2.36ರಿಂದ 2.50ರ ಒಳಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ಅರಮನೆಯ ಬಲರಾಮ ದ್ವಾರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಂದಿಧ್ವಜಕ್ಕೆ ಪೂಜೆ ಸಲ್ಲಿಸಲಿದ್ದಾರೆ.
ಜಂಬೂ ಸವಾರಿ ಮೆರವಣಿಗೆಯಲ್ಲಿ ರಾಜ್ಯದ 31 ಜಿಲ್ಲಾ ಪಂಚಾಯಿತಿಗಳ, ರಾಜ್ಯಮಟ್ಟದ ವಿವಿಧ ಇಲಾಖೆಗಳು, ನಿಗಮ ಮಂಡಳಿಗಳು, ಸ್ತಬ್ಧಚಿತ್ರ ಉಪಸಮಿತಿ ಸೇರಿ 43 ಸ್ತಬ್ಧಚಿತ್ರಗಳು ಸೇರಿದಂತೆ 100ಕ್ಕೂ ಜಾನಪದ ಕಲಾ ತಂಡಗಳು ಭಾಗವಹಿಸಲಿವೆ.
ಸಂಜೆ 5.07 ರಿಂದ 5.18ರ ಒಳಗೆ ಸಲ್ಲುವ ಶುಭ ಮೀನ ಲಗ್ನದಲ್ಲಿ ಜಂಬೂಸವಾರಿ ಮೆರವಣಿಗೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ 8 ಮಂದಿ ಗಣ್ಯರು ಚಿನ್ನದ ಅಂಬಾರಿಯಲ್ಲಿ ವೀರಾಜಮಾನಳಾದ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಲಿದ್ದಾರೆ.
ಜಂಬೂ ಸವಾರಿ ವೀಕ್ಷಣೆ ಮಾಡಲು ಅರಮನೆ ಆವರಣದಲ್ಲಿ 20 ಸಾವಿರ ಮಂದಿ ಕೂರಲು ಆಸನ ವ್ಯವಸ್ಥೆ ಮಾಡಲಾಗಿದೆ. ಜಂಬೂ ಸವಾರಿ ಸಾಗುವ ಮಾರ್ಗದಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ಪೆಂಡಾಲ್ ಹಾಕಿ ಆಸನದ ವ್ಯವಸ್ಥೆ ಮಾಡಲಾಗಿದೆ. ಗೋಲ್ಡ್ ಕಾರ್ಡ್, ವಿವಿಐಪಿ, ವಿಐಪಿ ಪಾಸ್ ಹೊಂದಿದವರಿಗೆರಿಗೆ ಪ್ರತ್ಯೇಕ ವ್ಯವಸ್ಥೆ ಇದೆ.












Click it and Unblock the Notifications