ಮೈಸೂರು ಅಪಾರ್ಟ್ಮೆಂಟ್ ನಲ್ಲಿ ಬಿಜೆಪಿ ಮುಖಂಡನ ಕೊಲೆ
ಮೈಸೂರು, ಮಾರ್ಚ್ 6: ಬರ್ತ್ ಡೇ ಪಾರ್ಟಿ ವೇಳೆ ಮಾತಿನ ಚಕಮಕಿ ನಡೆದು ಬಿಜೆಪಿ ಮುಖಂಡನ ಹತ್ಯೆ ಮಾಡಿರುವ ಘಟನೆ ಮೈಸೂರಿನಲ್ಲಿ ಗುರುವಾರ, ಮಾರ್ಚ್ 5ರಂದು ನಡೆದಿದೆ.
ಮೈಸೂರಿನ ಕುವೆಂಪು ನಗರದ ಲವ ಕುಶ ಪಾರ್ಕ್ ಬಳಿಯ ಸರ್ವಿಸ್ ಅಪಾರ್ಟ್ ಮೆಂಟ್ ನಲ್ಲಿ ಘಟನೆ ನಡೆದಿದ್ದು, ಬಿಜೆಪಿ ಮುಖಂಡ ಎಸ್. ಆನಂದ್ ಕೊಲೆಯಾದವರು. ಉತ್ತನಹಳ್ಳಿ ಸಮೀಪ ಖಾಸಗಿ ಕಲ್ಯಾಣ ಮಂಟಪದಲ್ಲಿ ಪಾರ್ಟಿ ಮುಗಿಸಿ ಸರ್ವೀಸ್ ಅಪಾರ್ಟ್ ಮೆಂಟ್ ನಲ್ಲಿ ಮಾಡಿದ್ದ ರೂಮ್ ಗೆ ಮರಳಿದ್ದ ವೇಳೆ ಈ ಕೃತ್ಯ ನಡೆಸಲಾಗಿದೆ.
ಮೈಸೂರು; ಬಿಜೆಪಿ ಮುಖಂಡನನ್ನು ಕೊಚ್ಚಿ ಕೊಂದ ದುಷ್ಕರ್ಮಿಗಳು
ಬಿಯರ್ ಬಾಟಲಿಯಿಂದ ಚುಚ್ಚಿ ಕೊಲೆ
ಕೊಲೆಯಾದ ಬಿಜೆಪಿ ಮುಖಂಡ ಎಸ್. ಆನಂದ್ ಮೈಸೂರು ನಗರ ಬಿಜೆಪಿ ಸ್ಲಂ ಮೋರ್ಚಾ ಉಪಾಧ್ಯಕ್ಷರಾಗಿದ್ದರು. ಶುಕ್ರವಾರ ಬೆಳಗ್ಗೆ ಕುವೆಂಪು ನಗರದಲ್ಲಿರುವ ಅಪಾರ್ಟ್ಮೆಂಟ್ನಲ್ಲಿ ಶವ ಪತ್ತೆಯಾಗಿದೆ. ನಿನ್ನೆ ಬರ್ತ್ ಡೇ ಪಾರ್ಟಿ ನಡೆಯುವಾಗ ಸ್ನೇಹಿತರೊಂದಿಗೆ ಮಾತಿನ ಚಕಮಕಿ ನಡೆದಿದ್ದು, ಇದು ವಿಕೋಪಕ್ಕೆ ತಿರುಗಿ ಬಿಯರ್ ಬಾಟಲಿಯಿಂದ ಹೊಟ್ಟೆಗೆ ಚುಚ್ಚಿ ಕೊಲೆ ಮಾಡಿದ್ದಾರೆ. ಆನಂದ್ ಮೇಲೆ ಮನಸೋ ಇಚ್ಛೆ ಬಾಟಲಿಯಿಂದ ಇರಿದು ಹತ್ಯೆ ಮಾಡಲಾಗಿದೆ.
ರಿಯಲ್ ಎಸ್ಟೇಟ್, ಫೈನಾನ್ಸ್ ವ್ಯವಹಾರ ನಡೆಸುತ್ತಿದ್ದ ಆನಂದ್
ಬಿಜೆಪಿ ಮುಖಂಡ ಎಚ್.ವಿ. ರಾಜೀವ್ ಬೆಂಬಲಿಗನಾಗಿದ್ದ ಆನಂದ್ ಅಲಿಯಾಸ್ ವಡ್ಡ ಆನಂದ್ ಮೇಲೆ ಹಳೇ ವೈಷಮ್ಯಕ್ಕೆ ಕೊಲೆ ಮಾಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. 13 ವರ್ಷಗಳ ಹಿಂದೆ ಕೊಲೆ ಕೇಸ್ ನಲ್ಲಿ ಆರೋಪಿಯಾಗಿದ್ದ ಆನಂದ್, ಮೈಸೂರಿನ ಜನತಾ ನಗರದ ಸ್ಮಶಾನ ರಸ್ತೆಯಲ್ಲಿ ನೆಡೆದಿದ್ದ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ. ಈತನ ವಿರುದ್ಧ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟರ್ ಪ್ರಕರಣ ದಾಖಲಾಗಿ, ಜೈಲು ವಾಸ ಅನುಭವಿಸಿದ್ದ.
ಓರ್ವ ಆರೋಪಿ ಬಂಧನ
ಬಿಜೆಪಿ ಮುಖಂಡ ಆನಂದ್ ಹತ್ಯೆ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತ ಚಂದ್ರಗುಪ್ತ ಹಾಗೂ ಡಿಸಿಪಿ ಪ್ರಕಾಶ್ ಗೌಡ, ಹತ್ಯೆಯಾದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮುಂಜಾನೆ 3 ರಿಂದ 4 ಗಂಟೆ ವೇಳೆಯಲ್ಲಿ ಆನಂದ್ ಕೊಲೆಯಾಗಿರುವ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. "ಬಿಯರ್ ಬಾಟಲ್ನಿಂದ ಚುಚ್ಚಿ ಹತ್ಯೆ ಮಾಡಲಾಗಿದೆ. ಪ್ರಕರಣದ ಸಂಬಂಧ ಒಬ್ಬ ಆರೋಪಿಯನ್ನು ವಶಕ್ಕೆ ಪಡೆಯಲಾಗಿದ್ದು, ಈತನ ವಿಚಾರಣೆಯನ್ನು ನಡೆಸುತ್ತಿದ್ದೇವೆ" ಎಂದು ಅವರು ತಿಳಿಸಿದ್ದಾರೆ.
ಮಾಹಿತಿ ಕಲೆ ಹಾಕುತ್ತಿರುವ ಪೊಲೀಸರು
ಆನಂದ್, ಬರ್ತ್ ಡೇ ಪಾರ್ಟಿ ಹಿನ್ನೆಲೆಯಲ್ಲಿ ಮೊದಲು ಬೇರೆಡೆ ಪಾರ್ಟಿ ಮಾಡಿ ನಂತರ ಅಪಾರ್ಟ್ ಮೆಂಟ್ ಗೆ ಬಂದಿದ್ದಾರೆ. ಇಲ್ಲಿ 5 ರಿಂದ 6 ಮಂದಿ ಪಾರ್ಟಿ ಮುಂದುವರೆಸಿದ್ದು, ಈ ವೇಳೆ ಅಲ್ಲಿದ್ದವರಲ್ಲೇ ಗಲಾಟೆ ಆರಂಭವಾಗಿದೆ. ಆಗ ಬಾಟಲ್ ನಲ್ಲಿ ಚುಚ್ಚಿ ಕೊಲೆ ಮಾಡಿದ್ದಾರೆ. ಹೀಗಾಗಿ ಪಾರ್ಟಿಯಲ್ಲಿ ಯಾರು ಇದ್ದರು ಎಂಬ ಮಾಹಿತಿ ಗೊತ್ತಾಗಿದ್ದು, ಅವರೆಲ್ಲರನ್ನು ಹಿಡಿದು ವಿಚಾರಣೆ ಮಾಡಲಾಗುತ್ತದೆ. ಕೊಲೆ ಯಾವ ಕಾರಣಕ್ಕಾಗಿ ಆಗಿದೆ? ಯಾರು ಮಾಡಿದ್ದಾರೆ ಅನ್ನೋದನ್ನು ಈಗಲೇ ಹೇಳಲು ಸಾಧ್ಯವಿಲ್ಲ ಎಂದು ಪೊಲೀಸ್ ಆಯುಕ್ತ ಚಂದ್ರಗುಪ್ತ ಹೇಳಿದ್ದಾರೆ.