ದೆಹಲಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಭೇಟಿ: ಬಿಜೆಪಿ ಬಿಟ್ಟು ಮತ್ತೆ ಕಾಂಗ್ರೆಸ್ ಸೇರ್ತಾರ ಎಚ್.ವಿಶ್ವನಾಥ್..?
ಮೈಸೂರು, ಡಿಸೆಂಬರ್ 6: ಮಾಜಿ ಸಂಸದ, ಹಾಲಿ ವಿಧಾನಪರಿಷತ್ ಸದಸ್ಯ, ಹಳ್ಳಿಹಕ್ಕಿ ಎಂದೇ ಖ್ಯಾತಿ ಪಡೆದಿರುವ ಎಚ್.ವಿಶ್ವನಾಥ್ ಕಮಲ ಬಿಟ್ಟು 'ಕೈ'ಹಿಡಿಯುವ ಎಲ್ಲಾ ಲಕ್ಷಣಗಳು ಕಾಣುತ್ತಿದೆ. ಕಳೆದ ಕೆಲವು ತಿಂಗಳಿನಿಂದ ಸ್ವಪಕ್ಷ ಬಿಜೆಪಿ ಮತ್ತು ಆರ್ಎಸ್ಎಸ್ ವಿರುದ್ಧ ಆರೋಪ ಮಾಡುತ್ತಾ ಕಾಂಗ್ರೆಸ್ ಪಕ್ಷದ ಪರ ಮಾತನಾಡುತ್ತಾ ಬರುತ್ತಿರುವುದನ್ನು ಗಮನಿಸಿದರೆ ಎಚ್.ವಿಶ್ವನಾಥ್ ನಡೆ ಬಹುತೇಕರಿಗೆ ಅರ್ಥವಾಗಿ ಹೋಗಿದೆ.
ಇದೀಗ ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿರುವುದನ್ನು ಗಮನಿಸಿದರೆ ಎಲ್ಲೋ ಒಂದು ಕಡೆಗೆ ಬಿಜೆಪಿಯನ್ನು ಬಿಟ್ಟು ಕಾಂಗ್ರೆಸ್ಗೆ ಸೇರುತ್ತಾರೆ ಎನ್ನುವುದು ಖಚಿತವಾದಂತೆ ತೋರುತ್ತಿದೆ. ಸಾಮಾನ್ಯವಾಗಿ ಇತ್ತೀಚೆಗಿನ ವರ್ಷಗಳಲ್ಲಿ ಎಚ್.ವಿಶ್ವನಾಥ್ ಅವರನ್ನು ಗಮನಿಸಿದರೆ ಅವರ ನಿರ್ಧಾರಗಳು ಅಚ್ಚರಿಯನ್ನು ಮೂಡಿಸುತ್ತವೆ.
Breaking; ಎಐಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಮಲ್ಲಿಕಾರ್ಜುನ ಖರ್ಗೆ
ಎಚ್.ವಿಶ್ವನಾಥ್ ಯಾವುದೇ ಪಕ್ಷಕ್ಕೆ ಹೋದರೂ ಪಕ್ಷ ನಿಷ್ಠೆಯನ್ನು ಮರೆತು ಪಕ್ಷದ ವಿರುದ್ಧವೇ ಮಾತನಾಡುತ್ತಾರೆ ಎಂಬ ಆರೋಪಗಳಿವೆ. ಆದರೆ ಬಹಳಷ್ಟು ಸಲ ಪಕ್ಷದ ವೇದಿಕೆಯಲ್ಲಿ ನಡೆಯಬೇಕಾದ ವಿಷಯನ್ನು ಸಾರ್ವಜನಿಕವಾಗಿ ಮಾತನಾಡಿ ಮುಜುಗರ ತಂದಿದ್ದು ಇದೆ. ಇದು ಪಕ್ಷದ ಮೇಲೆ ಪರಿಣಾಮ ಬೀರಿದೆ ಎನ್ನುವುದನ್ನು ತಳ್ಳಿಹಾಕುವಂತಿಲ್ಲ.
ಮತ್ತೆ ಕಾಂಗ್ರೆಸ್ನತ್ತ ಎಚ್.ವಿಶ್ವನಾಥ್ ಒಲವು
ಹಲವು ವರ್ಷಗಳ ಹಿಂದೆ ರಾಜ್ಯ ರಾಜಕೀಯದಿಂದ ದೂರವಾಗಿ ಕೇಂದ್ರದತ್ತ ಮುಖ ಮಾಡಿದ ಎಚ್.ವಿಶ್ವನಾಥ್ ಮೈಸೂರು ಕೊಡಗು ಸಂಸದರಾಗಿ ಕಾರ್ಯನಿರ್ವಹಿಸಿದ್ದಾರೆ. ಬಳಿಕ ಪ್ರಧಾನಿ ನರೇಂದ್ರ ಮೋದಿ ಅಲೆಯ ಸಂದರ್ಭದಲ್ಲಿ ಹಾಲಿ ಸಂಸದ ಪ್ರತಾಪ್ ಸಿಂಹ ಅವರ ಮುಂದೆ ಸೋಲನ್ನು ಅನುಭವಿಸಬೇಕಾಯಿತು. ಇದಕ್ಕೆ ಕಾರಣವಾಗಿದ್ದು ಕಾಂಗ್ರೆಸ್ನಲ್ಲಿದ್ದಾಗ ದೇವೇಗೌಡರ ಕುಟುಂಬದ ವಿರುದ್ಧ ಆರೋಪಗಳನ್ನು ಮಾಡುತ್ತಾ ಬಂದಿದ್ದರು. 2014ರ ಲೋಕಸಭಾ ಚುನಾವಣೆಯಲ್ಲಿ ಸೋತ ಬಳಿಕ ಅವರು ಕಾಂಗ್ರೆಸ್ನಲ್ಲಿ ಮೂಲೆ ಗುಂಪಾದರು. ರಾಜ್ಯದಲ್ಲಿ ಆಗ ಮುಖ್ಯ ಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ವಿಶ್ವನಾಥ್ ಅವರಿಗೆ ಮಣೆ ಹಾಕಲಿಲ್ಲ. ಹೀಗಾಗಿ ಕಾಂಗ್ರೆಸ್ ನಲ್ಲಿದ್ದರೆ ಉಳಿಗಾಲವಿಲ್ಲ ಎಂದರಿತ ಅವರು ಜೆಡಿಎಸ್ನತ್ತ ಮುಖ ಮಾಡಿದರು.
ಎಚ್.ವಿಶ್ವನಾಥ್ಗೆ ಬಿಜೆಪಿಯಲ್ಲೂ ದಕ್ಕಲಿಲ್ಲ ಸಚಿವ ಸ್ಥಾನ
2018ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಹುಣಸೂರು ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಅವರು ಗೆಲುವನ್ನು ಸಾಧಿಸಿದರು. ನಂತರ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದಾಗ ತಮಗೆ ಸಚಿವ ಸ್ಥಾನ ಸಿಗಬಹುದೆಂದು ಕಾದು ಕುಳಿತರು. ಆದರೆ ಅದು ಸಾಧ್ಯವಾಗಲಿಲ್ಲ. ಅದಾದ ಬಳಿಕ ನಡೆದ ರಾಜಕೀಯ ವಿದ್ಯಮಾನದಲ್ಲಿ ಆಪರೇಷನ್ ಕಮಲ ಹೆಸರಿನಲ್ಲಿ ನಡೆದ ಬೆಳವಣಿಗೆಯಲ್ಲಿ ಜೆಡಿಎಸ್ ಬಿಟ್ಟು ಬಿಜೆಪಿ ಸೇರಿದರು. ಆ ನಂತರ ನಡೆದ ಉಪಚುನಾವಣೆಯಲ್ಲಿ ಹುಣಸೂರು ಕ್ಷೇತ್ರದಿಂದ ಸ್ಪರ್ಧಿಸಿದರಾದರೂ ಜನ ಅವರನ್ನು ಕೈಹಿಡಿಯಲಿಲ್ಲ. ಹೀಗಾಗಿ ಬಿಜೆಪಿ ಅವರನ್ನು ಎಂಎಲ್ಸಿ ಮಾಡಿತ್ತು.
ಬಿಜೆಪಿಗೆ ಮುಜುಗರ ತಂದ ಎಚ್.ವಿಶ್ವನಾಥ್ ಮಾತುಗಳು
ಎಚ್.ವಿಶ್ವನಾಥ್ಗೆ ಬಿಜೆಪಿಯಲ್ಲಿ ಸರಿಹೋಗಲೇ ಇಲ್ಲ. ಅಲ್ಲಿಯೂ ಅವರಿಗೆ ಸಚಿವ ಸ್ಥಾನ ಸಿಗಲಿಲ್ಲ. ಹೀಗಾಗಿ ಅದೊಂದು ಮುನಿಸು ಅವರಲ್ಲಿ ಇದ್ದೇ ಇತ್ತು. ಜೊತೆಗೆ ಅವರು ಯಾವುದೇ ಪಕ್ಷದಲ್ಲಿದ್ದರೂ ತಪ್ಪನ್ನು ಖಡಾಖಂಡಿತವಾಗಿ ಟೀಕಿಸುವುದಕ್ಕೆ ಹೆಸರುವಾಸಿಯಾಗಿದ್ದು ಅದರಂತೆ ಬಿಜೆಪಿಯಲ್ಲಿದ್ದುಕೊಂಡೇ ಯಡಿಯೂರಪ್ಪರಿಂದ ಆರಂಭವಾಗಿ ಎಲ್ಲರನ್ನು ಆಗಾಗ್ಗೆ ಕುಟುಕುತ್ತಿದ್ದರು. ಬಹಳಷ್ಟು ಸಲ ಇದು ಬಿಜೆಪಿಗೆ ಮುಜುಗರ ತಂದಿದ್ದರೂ, ಅವರ ಬಗ್ಗೆ ಪಕ್ಷದವರು ಉದಾಸೀನ ತೋರಿದ್ದರು. ಈ ಹಿಂದೆ ಸಿದ್ದರಾಮಯ್ಯ ಅವರನ್ನು ಟೀಕಿಸುತ್ತಿದ್ದವರು, ಇತ್ತೀಚಿನ ದಿನಗಳಲ್ಲಿ ಮೃದುಧೋರಣೆ ತೋರಲಾರಂಭಿಸಿದರಲ್ಲದೆ, ಆರ್ಎಸ್ಎಸ್, ಬಿಜೆಪಿ ವಿರುದ್ಧವೇ ಮಾತನಾಡಲು ಶುರು ಮಾಡಿದ್ದರು. ವಿಶ್ವನಾಥ್ ಅವರ ಈ ನಡೆ ರಾಜಕೀಯದಲ್ಲಿ ಒಂದಿಷ್ಟು ಅಚ್ಚರಿ ಮತ್ತು ಚರ್ಚೆಗೆ ಗ್ರಾಸವಾಗಿತ್ತು.
ಹೈಮಾಂಡ್ ಮೂಲಕ ಮತ್ತೆ ಕಾಂಗ್ರೆಸ್ ಸೇರ್ತಾರಾ ಎಚ್.ವಿಶ್ವನಾಥ್..?
ಮುಂದಿನ ವಿಧಾನಸಭಾ ಚುನಾವಣೆ ವೇಳೆಗೆ ಎಚ್.ವಿಶ್ವನಾಥ್ ಅವರು ಬಿಜೆಪಿಗೆ ವಿದಾಯ ಹೇಳುವ ಲಕ್ಷಣಗಳು ಗೋಚರಿಸುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ಅಲೆಯಿದೆ. ಹೀಗಾಗಿ ಮುಂದಿನ ಚುನಾವಣೆ ವೇಳೆಗೆ ಕಾಂಗ್ರೆಸ್ಗೆ ಹೋಗಿ ಯಾವುದಾದರೊಂದು ಕ್ಷೇತ್ರದಿಂದ ಸ್ಪರ್ಧಿಸುವ ಆಲೋಚನೆ ಮಾಡಿದ್ದಾರಾ..? ಅಥವಾ 2024ರ ಲೋಕಸಭಾ ಚುನಾವಣೆ ಮೇಲೆ ಕಣ್ಣಿಟ್ಟಿದ್ದಾರೋ ಗೊತ್ತಿಲ್ಲ. ಆದರೆ ಅವರು ಹೆಚ್ಚು ದಿನ ಬಿಜೆಪಿಯಲ್ಲಿ ಉಳಿಯಲ್ಲ ಎಂಬುದಂತು ಖಾತರಿಯಾಗುತ್ತಿದೆ. ಆದರೆ ಕಾಂಗ್ರೆಸ್ನ ರಾಜ್ಯ ನಾಯಕರು ಅಷ್ಟು ಸುಲಭವಾಗಿ ಅವರಿಗೆ ಮಣೆ ಹಾಕುತ್ತಾರೋ ಗೊತ್ತಿಲ್ಲ. ಎಚ್.ವಿಶ್ವನಾಥ್ ಹೈಕಮಾಂಡ್ ಮೂಲಕ ಮತ್ತೊಮ್ಮೆ ಕಾಂಗ್ರೆಸ್ ಪಕ್ಷಕ್ಕೆ ಪ್ರವೇಶಿಸಲು ಬೇಕಾದ ತಂತ್ರಗಳನ್ನು ಮಾಡುತ್ತಿರುವುದಂತು ಸತ್ಯ. ಮುಂದಿನ ಅವರ ನಿರ್ಧಾರಗಳೇನು ಎಂಬುದನ್ನು ಕಾದು ನೋಡಬೇಕಿದೆ.