ಚಾಮರಾಜ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಎಲ್. ನಾಗೇಂದ್ರ ಸಂದರ್ಶನ
ಮೈಸೂರು, ಮೇ 8 : ವಿದ್ಯೆ ಇದ್ದರೆ ಜಗತ್ತೇ ಗೆಲ್ಲಬಲ್ಲೆವು ಎಂಬ ಮಾತಿದೆ. ಅಂತೆಯೇ ವಿದ್ಯೆಯೆಂಬ ಒಂದು ಅಸ್ತ್ರವನ್ನು ಮುಂದಿಟ್ಟುಕೊಂಡು ಮುನ್ನಡೆಯುತ್ತಿರುವ ಚಾಮರಾಜ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಎಲ್ . ನಾಗೇಂದ್ರ ತಮ್ಮ ಬಲ ಪ್ರದರ್ಶನಕ್ಕೆ ಮುಂದಾಗಿದ್ದಾರೆ.
ಕಳೆದ ಬಾರಿ ಬಿಜೆಪಿ ಇಬ್ಭಾಗವಾಗಿದ್ದರೂ, ಎಲ್.ನಾಗೇಂದ್ರ ಚುನಾವಣೆಯಲ್ಲಿ ಸ್ಪರ್ಧಿಸಿ 37 ಸಾವಿರ ಮತಗಳನ್ನು ಗಿಟ್ಟಿಸಿದ್ದರು. ಬಿಜೆಪಿಯನ್ನು ಮೂರನೇ ಸ್ಥಾನಕ್ಕೆ ತಂದಿದ್ದ ನಾಗೇಂದ್ರರಿಗೆ ಈ ಬಾರಿಯೂ ಟಿಕೆಟ್ ಭಾಗ್ಯ ಲಭಿಸಿದೆ.
ಮುಡಾ ಅಧ್ಯಕ್ಷರಾಗಿ ಮೂರು ಬಾರಿ ಪಾಲಿಕೆ ಸದಸ್ಯರಾಗಿ ಹಲವಾರು ವರ್ಷಗಳಿಂದ ಪಕ್ಷ ಸಂಘಟಿಸಿರುವ ನಾಗೇಂದ್ರ ಅವರು ಒನ್ ಇಂಡಿಯಾದೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡದ್ದು ಹೀಗೆ...

ಶಾಸಕರಾದ ಮೇಲೆ ಮಾಡುವ ಕೆಲಸಗಳೇನು ?
ಚಾಮರಾಜ ಕ್ಷೇತ್ರದಲ್ಲಿ ಈಗಾಗಲೇ ಅಭಿವೃದ್ಧಿಗಾಗಿ ಸರ್ವೆ ನಡೆಸಿದ್ದೇವೆ. ಇಲ್ಲಿ ಸೂರುರಹಿತ ಬಡವರು ಸುಮಾರು 16 ರಿಂದ 17 ಸಾವಿರದಷ್ಟಿದ್ದು, ಅವರಿಗೆಲ್ಲಾ ಮನೆ ನಿರ್ಮಿಸಿಕೊಡುವುದು ನನ್ನ ಮುಖ್ಯ ಗುರಿ. ಹೆಬ್ಬಾಳು ಬಡಾವಣೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಕಾರ್ಮಿಕರಿದ್ದು, ಅವರ ಮಕ್ಕಳಿಗೆ ಉತ್ತಮ ಶೈಕ್ಷಣಿಕ ಸೌಕರ್ಯ ಕಲ್ಪಿಸುವುದು ಸಹ ನನ್ನ ಉದ್ದೇಶವಾಗಿದೆ.
ಕಾರ್ಮಿಕರ ಮಕ್ಕಳಿಗೆ ಉದ್ಯೋಗ ಸೃಷ್ಟಿಸಿ ದೊರಕಿಸಿಕೊಡುವುದು ಇನ್ನೊಂದು ಗುರಿ. ಕೇಂದ್ರ ಸರ್ಕಾರದ ಹಲವಾರು ಯೋಜನೆಗಳಡಿ ಉದ್ಯೋಗಗಳನ್ನು ಕಲ್ಪಿಸುವ ಅವಕಾಶವಿದ್ದು, ನಿರುದ್ಯೋಗಿಗಳಿಗೆ ಉದ್ಯೋಗ ಕೊಡಿಸುವುದು ನಮ್ಮ ಆದ್ಯತೆಯಾಗಿದೆ.

ಯಾವ ಕಾರಣಕ್ಕೇ ನಿಮಗೆ ಮತ ಹಾಕಬೇಕು ?
ಕೇಂದ್ರ ಸರ್ಕಾರ ಸಾಕಷ್ಟು ಯೋಜನೆಗಳನ್ನು ನೀಡಿದೆ. ಮೈಸೂರು ಬೆಂಗಳೂರು ರಸ್ತೆ ಅಭಿವೃದ್ಧಿಗೆ ಏಳೂವರೆ ಸಾವಿರ ಕೋಟಿ ರೂ. ನೀಡಿದೆ. ಕ್ಷೇತ್ರದಲ್ಲಿ ಕುಡಿಯುವ ನೀರಿನ ಅವ್ಯವಸ್ಥೆ ಇದೆ. ವಿಜಯನಗರದಲ್ಲಿರುವ ಟ್ಯಾಂಕ್ ಅವ್ಯವಸ್ಥೆಯಿಂದ ಕೂಡಿದೆ. ಕೇಂದ್ರ ಸರ್ಕಾರ ಅಮೃತ ಯೋಜನೆಯಡಿ 178 ಕೋಟಿ ರೂ. ವೆಚ್ಚದಲ್ಲಿ 6 ಹೈಟೆಕ್ ಟ್ಯಾಂಕ್ ಗಳನ್ನು ನಿರ್ಮಿಸುತ್ತಿದೆ.
ಸಂಸದರು ಪಾಸ್ ಪೋರ್ಟ್ ಕೇಂದ್ರ ತೆರೆದಿದ್ದಾರೆ. ನಾನು ಮುಡಾ ಅಧ್ಯಕ್ಷನಾಗಿದ್ದಾಗ ಕಲಾಮಂದಿರದ ಬಳಿಯಿರುವ ಬಯಲು ರಂಗಮಂದಿರದ ಅಭಿವೃದ್ಧಿ, ಜೆ.ಪಿ.ಪ್ಯಾಲೇಸ್ ರಸ್ತೆ, ವಿಜಯನಗರದಲ್ಲಿ ಹೈಟೆಕ್ ಸ್ಮಶಾನ, ಕ್ರೀಡಾ ಸಂಕೀರ್ಣ ಮುಂತಾದ ಕೆಲಸಗಳನ್ನು ಮಾಡಿದ್ದೇನೆ. ಈ ವಿಚಾರಗಳನ್ನು ಮುಂದಿಟ್ಟು ಮತ ಯಾಚಿಸುತ್ತಿದ್ದೇನೆ.

ಗೆಲ್ಲುವ ಭರವಸೆ ಇದೆಯಾ?
ಚುನಾವಣೆಯ ಕಡೆಯ ನಿಮಿಷದವರೆಗೂ ಹೋರಾಟ ಮಾಡುತ್ತೇನೆ. ನನ್ನ ಪ್ರಯತ್ನವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ.

ಮೋದಿ ಬಂದದ್ದು ಪ್ಲಸ್ ಆಯ್ತಾ?
ಪ್ರಧಾನಿ ಮೋದಿ ಮೈಸೂರು ಭಾಗಕ್ಕೆ ಬಂದ ನಂತರ ಜನರು ಮೋದಿ ಅವರ ಮೇಲೆ ಇಟ್ಟಿರುವ ಒಲವು ಇನ್ನಷ್ಟು ಹೆಚ್ಚಾಗಿದೆ. ಕ್ಷೇತ್ರದ ಅಭ್ಯರ್ಥಿಗಿಂತ ಹೆಚ್ಚಾಗಿ ಮೋದಿ ಅವರಿಗಾಗಿ ಮತ ಹಾಕುತ್ತೇವೆ ಎಂದು ಹೇಳುತ್ತಿದ್ದಾರೆ.












Click it and Unblock the Notifications