ಭಾರತ್ ಜೋಡೋ ಯಾತ್ರೆ: ಕೊರೆಯುವ ಚಳಿಯ ಮಧ್ಯೆಯೂ ಮಂಡ್ಯದತ್ತ ಹೊರಟ ರಾಹುಲ್ ಪಾದಯಾತ್ರೆ
ಮೈಸೂರು, ಅಕ್ಟೋಬರ್, 03: ಬೆಳ್ಳಂಬೆಳಗ್ಗೆ ಕೊರೆಯುವ ಚಳಿಯ ನಡುವೆಯೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ ಐಕ್ಯತಾ ಪಾದಯಾತ್ರೆ ಸೋಮವಾರ ಮೈಸೂರಿನಿಂದ ಮಂಡ್ಯದತ್ತ ಹೊರಟಿದೆ. ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯಲಿರುವ ಭಾರತ ಐಕ್ಯತಾ ಯಾತ್ರೆಗೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಕೂಡ ಭಾಗವಹಿಸಲಿದ್ದಾರೆ. ದೆಹಲಿಯಿಂದ ಮೈಸೂರಿಗೆ ಮಧ್ಯಾಹ್ನ 12 ಗಂಟೆಗೆ ಬಂದಿಳಿಯಲಿದ್ದಾರೆ. ಅವರು ಮಾಧ್ಯಮದವರ ಜೊತೆ ಮಾತುಕತೆ ನಡೆಸಲಿದ್ದು, ಬಳಿಕ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಲಿದ್ದಾರೆ ಎನ್ನಲಾಗಿದೆ.
ನಿನ್ನೆ ನಂಜನಗೂಡಿನಿಂದ ರಾಹುಲ್ ಗಾಂಧಿ ಪಾದಯಾತ್ರೆ ಮೂಲಕ ಹೊರಟಿದ್ದು, ರಾತ್ರಿ ಸಮಯಕ್ಕೆ ಮೈಸೂರು ತಲುಪಿದ್ದರು. ಬಳಿಕ ಸುತ್ತೂರು ಮಠಕ್ಕೆ ಭೇಟಿ ನೀಡಿ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಆಶೀರ್ವಾದವನ್ನು ಪಡೆದಿದ್ದರು. ಸೋಮವಾರ ರಾಜ್ಯದಲ್ಲಿ ಭಾರತ್ ಜೋಡೋ ಯಾತ್ರೆ 4ನೇ ದಿನಕ್ಕೆ ಕಾಲಿಟ್ಟಿದೆ. ಮೈಸೂರಿನ ಆರ್ ಗೇಟ್ನಿಂದ ಪಾದಯಾತ್ರೆ ಆರಂಭವಾಯಿತು. ಮೊದಲು 12 ಕಿಲೋ ಮೀಟರ್ ಹೆಜ್ಜೆ ಪಾದಯಾತ್ರೆಯನ್ನು ರಾಹುಲ್ ಗಾಂಧಿ ಪೂರ್ಣಗೊಳಿಸಲಿದ್ದಾರೆ. ಮಧ್ಯಾಹ್ನ 10 ಕಿಲೋ ಮೀಟರ್ ಪಾದಯಾತ್ರೆ ಮಾಡುವ ಯೋಜನೆ ಹಾಕಿಕೊಳ್ಳಲಾಗಿದೆ. ಪಾದಯಾತ್ರೆಯಲ್ಲಿ ಸಾಹಿತಿ ದೇವನೂರು ಮಹದೇವ ಭಾಗವಹಿಸಿ ಗಮನ ಸೆಳೆದರು.
ಕಾಂಗ್ರೆಸ್ ಪಾದಯಾತ್ರೆ ವಿವರ
ಬೆಳಗ್ಗೆ 7:30ಕ್ಕೆ ಮೈಸೂರಿನ ಹಾರ್ಡಿಂಜ್ ವೃತ್ತದಿಂದ ಪಾದಯಾತ್ರೆ ಆರಂಭವಾಗಿದೆ. ಬೆಳಗ್ಗೆ 9:3ಕ್ಕೆ ಮೈಸೂರು ಜಿಲ್ಲೆಯ ಕಳಸ್ತವಾಡಿ ಮೂಲಕ ಮಂಡ್ಯದ ಶ್ರೀರಂಗಪಟ್ಟಣ ತಾಲೂಕು ಪ್ರವೇಶ ಪಡೆಯಲಿದೆ. ತಿಂಡಿ ಮುಗಿಸಿ ಶ್ರೀರಂಗಪಟ್ಟಣ ತಾಲೂಕು ಲಕ್ಷ್ಮೀಪುರ ಗೇಟ್ನಿಂದ ಪಾದಯಾತ್ರೆ ಮತ್ತೆ ಆರಂಭಗೊಳ್ಳಲಿದೆ. ಶ್ರೀರಂಗಪಟ್ಟಣದ ಪರಿವರ್ತನಾ ಶಿಕ್ಷಣ ಸಂಸ್ಥೆಯಲ್ಲಿ ಮಧ್ಯಾಹ್ನ ಊಟ, ವಿಶ್ರಾಂತಿ ಪಡೆದ ಬಳಿಕ ಮಧ್ಯಾಹ್ನ 3:30ಕ್ಕೆ ಸಂವಾದ ಕಾರ್ಯಕ್ರಮವನ್ನು ಇರಲಿದೆ. ನಂತರ ಶ್ರೀರಂಗಪಟ್ಟಣ ಬಸ್ ನಿಲ್ದಾಣದ ಕುವೆಂಪು ಸರ್ಕಲ್ನಿಂದ ಯಾತ್ರೆ ಪುನರಾರಂಭ ಆಗಲಿದೆ. ಸಂಜೆ 7ಕ್ಕೆ ಪಾಂಡವಪುರ ತಾಲೂಕು ಟಿ. ಎಸ್.ಛತ್ರ ಗ್ರಾಮದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಅಕ್ಟೋಬರ್ 4, 5ರಂದು ಆಯುಧ ಪೂಜೆ, ವಿಜಯದಶಮಿ ಪ್ರಯುಕ್ತ ಪಾದಯಾತ್ರೆಗೆ ಬಿಡುವು ನೀಡಲಾಗಿದೆ.

ರಾರಾಜಿಸಿದ ನಾಯಕರ ಟೀ ಶರ್ಟ್
ಯಾತ್ರೆ ಉದ್ದಕ್ಕೂ ರಾಜ್ಯ ಮತ್ತು ರಾಷ್ಟ್ರ ನಾಯಕರ ಭಾವಚಿತ್ರ, ಬ್ಯಾನರ್, ಕಟೌಟ್ಗಳು ರಾರಾಜಿಸಿದವು. ಕಾರ್ಯಕರ್ತರು ತಮ್ಮ ನಾಯಕರ ಭಾವಚಿತ್ರ ಇದ್ದ ಟೀ ಶರ್ಟ್ ಧರಿಸಿ ಗಮನ ಸೆಳೆದರು. ವಿಶೇಷವಾಗಿ ವರುಣ, ಹುಣಸೂರು ಕ್ಷೇತ್ರದ ಕಡೆಯಿಂದ ಬಂದಿದ್ದ ಸಾವಿರಾರು ಕಾರ್ಯಕರ್ತರು ಟೀ ಶರ್ಟ್ ತೊಟ್ಟು ಬ್ಯಾನರ್ಗಳನ್ನು ಕೈಯಲ್ಲಿ ಹಿಡಿದು ತಮ್ಮ ನಾಯಕನ ಪರ ಘೋಷಣೆ ಕೂಗಿದರು.

ಈ ಸಂದರ್ಭದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲ, ಕೆ.ಸಿ. ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ್, ಕೇಂದ್ರದ ಮಾಜಿ ಸಚಿವ ಕೆ.ಎಚ್. ಮುನಿಯಪ್ಪ, ಮುಖಂಡರಾದ ಸತೀಶ್ ಜಾರಕಿಹೋಳಿ, ಎಂ.ಬಿ. ಪಾಟೀಲ್, ದಿನೇಶ್ ಗುಂಡೂರಾವ್, ಕೆ.ಜೆ. ಜಾರ್ಜ್, ರಾಮಲಿಂಗರೆಡ್ಡಿ, ಎಚ್.ಸಿ. ಮಹದೇವಪ್ಪ, ಮೋಟಮ್ಮ, ಮಹಮ್ಮದ್ ನಲಪಾಡ್ ಹ್ಯಾರೀಸ್, ಶಾಸಕರಾದ ಯು.ಟಿ. ಖಾದರ್, ಐವಾನ್ ಡಿಸೋಜಾ, ರಿಜ್ವಾನ್ ಹರ್ಷದ್, ಡಾ.ಯತೀಂದ್ರ ಸಿದ್ದರಾಮಯ್ಯ, ಅನಿಲ್ ಚಿಕ್ಕಮಾದು, ಮಂಜುನಾಥ್, ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಐಶ್ವರ್ಯ ಮಹದೇವ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ. ಲಕ್ಷ್ಮಣ್ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.












Click it and Unblock the Notifications