ಡಿಸೆಂಬರ್ 12ರಿಂದ ಭಾರತ್ ದರ್ಶನ್ ರೈಲು ಪ್ರವಾಸ ಆರಂಭ
ಮೈಸೂರು, ನವೆಂಬರ್ 13: ರೈಲ್ವೆ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಅಂಡ್ ಟೂರಿಸಂ ಕಾರ್ಪೊರೇಷನ್ ಲಿಮಿಟೆಡ್ (ಐಆರ್ ಸಿಟಿಸಿ) ವತಿಯಿಂದ ಡೆಕ್ಕನ್ ಸ್ಪ್ಲೆಂಡರ್' ಶೀರ್ಷಿಕೆಯಲ್ಲಿ ಭಾರತ್ ದರ್ಶನ್ ರೈಲು ವ್ಯವಸ್ಥೆ ಮಾಡಲಾಗಿದೆ ಎಂದು ಐಆರ್ ಸಿಟಿಸಿ ವ್ಯವಸ್ಥಾಪಕ ಮುಖ್ಯಸ್ಥ ಕಿಶೋರ್ ಸತ್ಯ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಪ್ರವಾಸಿಗರ ಅನುಕೂಲಕ್ಕಾಗಿ ಆಯೋಜಿಸಿರುವ ಈ ವಿಶೇಷ ಪ್ರವಾಸ ಕಾರ್ಯಕ್ರಮವು ಡಿ.12ರಂದು ಆರಂಭವಾಗಲಿದೆ. ಈ ಪ್ಯಾಕೇಜ್ ಪ್ರವಾಸ 10 ದಿನಗಳನ್ನು ಒಳಗೊಂಡಿದ್ದು, ಪ್ರವಾಸದಲ್ಲಿ 757 ಪ್ರಯಾಣಿಕರು ಭಾಗವಹಿಸಲು ಅವಕಾಶವಿದೆ ಎಂದು ತಿಳಿಸಿದರು.
ಮಧುರೈ ರೈಲ್ವೆ ನಿಲ್ದಾಣದಿಂದ ರೈಲು ಹೊರಟು ಬೆಂಗಳೂರಿನ ವೈಟ್ ಫೀಲ್ಡ್ ನಿಲ್ದಾಣದ ಮೂಲಕ ಹೈದರಾಬಾದ್-ಔರಂಗಾಬಾದ್-ಅಜಂತಾ-ಎಲ್ಲೋರಾ-ಮುಂಬೈ ಗೋವಾಗಳಲ್ಲಿ ಸಂಚರಿಸಲಿದೆ. ಈ ಪ್ರವಾಸದಲ್ಲಿ ಪ್ರಯಾಣಿಕರಿಗೆ ಊಟ, ತಿಂಡಿ, ವಸತಿ ಸೇರಿದಂತೆ ಎಲ್ಲಾ ರೀತಿಯ ಸೌಲಭ್ಯಗಳನ್ನು ನೀಡಲಾಗುತ್ತದೆ. ವಿಮೆಯೂ ಸೇರಿದೆ.

ಇದಕ್ಕಾಗಿ ಪ್ರತಿ ವ್ಯಕ್ತಿಗೆ 10,100 ರೂ. ಪ್ರಯಾಣದರ ನಿಗದಿಪಡಿಸಲಾಗಿದೆ. ಆಸಕ್ತರು ಮೈಸೂರು, ಬೆಂಗಳೂರು, ಹುಬ್ಬಳ್ಳಿ ರೈಲು ನಿಲ್ದಾಣದ ಜತೆಗೆ ಆನ್ ಲೈನ್ ಮೂಲಕ ಕೂಡ ಟಿಕೆಟ್ ಬುಕ್ಕಿಂಗ್ ಮಾಡಬಹುದು ಎಂದು ಕಿಶೋರ್ ಸತ್ಯ ಮಾಹಿತಿ ನೀಡಿದರು.
ಮೈಸೂರು ನಗರ ರೈಲ್ವೆ ನಿಲ್ದಾಣದ ಸಾಮಾನ್ಯ ಟಿಕೆಟ್ ಕೌಂಟರ್ ಪಕ್ಕದಲ್ಲಿಯೇ ಇದರ ಕಚೇರಿಯಿದ್ದು, ಆಸಕ್ತರು ನೇರವಾಗಿ ಕಚೇರಿ ಸಮಯದಲ್ಲಿ ಭೇಟಿ ನೀಡಬಹುದು ಎಂದರು.












Click it and Unblock the Notifications