Bengaluru-Mysuru expressway: ರಾಷ್ಟ್ರೀಯ ಹೆದ್ದಾರಿ ಉದ್ಘಾಟನೆ, ಟೋಲ್ ಶುಲ್ಕದ ಬಗ್ಗೆ ಮಹತ್ವದ ಮಾಹಿತಿ
ಬಹುನಿರೀಕ್ಷಿತ ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿ ಉದ್ಘಾಟನೆ ಮತ್ತು ಟೋಲ್ ಶುಲ್ಕದ ಬಗ್ಗೆ ಮೈಸೂರು, ಕೊಡಗು ಸಂಸದ ಪ್ರತಾಪ್ ಸಿಂಹ ಮಾಹಿತಿ ಹಂಚಿಕೊಂಡಿದ್ದಾರೆ.
ಮೈಸೂರು, ಫೆಬ್ರವರಿ. 13: ರಾಜಧಾನಿ ಮತ್ತು ಸಾಂಸ್ಕೃತಿಕ ರಾಜಧಾನಿ ನಡುವಿನ ಪ್ರಯಾಣದ ಸಮಯವನ್ನು ಕಡಿಮೆಗೊಳಿಸುವ ಬೆಂಗಳೂರು - ಮೈಸೂರು ಎಕ್ಸ್ಪ್ರೆಸ್ವೇ ಮಾರ್ಚ್ ಎರಡನೇ ಅಥವಾ ಮೂರನೇ ವಾರದಲ್ಲಿ ಅಧಿಕೃತವಾಗಿ ಉದ್ಘಾಟನೆಯಾಗಲಿದೆ.
ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಮಾರ್ಚ್ 2 ಅಥವಾ 3ನೇ ವಾರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಹೆದ್ದಾರಿ ಉದ್ಘಾಟನೆ ಮಾಡಲಿದ್ದಾರೆ ಎಂದು ಮೈಸೂರು- ಕೊಡಗು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
|
3,500 ಕೋಟಿ ವೆಚ್ಚದಲ್ಲಿ 115 ಕಿ.ಮೀ. ಉದ್ದದ ಎಕ್ಸ್ಪ್ರೆಸ್ವೇ
ಸುಮಾರು 3,500 ಕೋಟಿ ವೆಚ್ಚದಲ್ಲಿ 115 ಕಿ.ಮೀ. ಉದ್ದದ ಎಕ್ಸ್ಪ್ರೆಸ್ವೇ ನಿರ್ಮಾಣ ಮಾಡಲಾಗಿದೆ. ಶಂಕುಸ್ಥಾಪನೆಯಾದ 24 ತಿಂಗಳಲ್ಲೇ ರಸ್ತೆ ಕಾಮಗಾರಿ ಪೂರ್ಣಗೊಳ್ಳುತ್ತಿದೆ ಎಂದಿರುವ ಅವರು, ಹೆದ್ದಾರಿ ಉದ್ಘಾಟನೆ ಸಂದರ್ಭದಲ್ಲಿಯ ಕುಶಾಲನಗರ - ಮೈಸೂರು ಹೆದ್ದಾರಿಗೆ ಶಂಕುಸ್ಥಾಪನೆ ನೆರವೇರಿಸಲಾಗುತ್ತದೆ ಎಂದು ಪ್ರತಾಪ್ ಸಿಂಹ ಮಾಹಿತಿ ನೀಡಿದ್ದಾರೆ.
ಎಕ್ಸ್ಪ್ರೆಸ್ವೇ ಬಹುತೇಕ ಅಂತಿಮ ಹಂತದಲ್ಲಿದ್ದು, ಮುಂದಿನ ಆರು ತಿಂಗಳಲ್ಲಿ ಚನ್ನಪಟ್ಟಣ ಬಳಿ ಎಕ್ಸ್ಪ್ರೆಸ್ವೇ ಮಧ್ಯದಲ್ಲಿ 30 ಎಕರೆ ದ್ವೀಪದಂತಹ ತಂಗುದಾಣ ಸಿದ್ಧವಾಗಲಿದೆ. ಎಲ್ಲಾ ರೀತಿಯ ಆಹಾರ ಪೂರೈಸುವ ತಿನಿಸುಗಳು ಅಲ್ಲಿ ದೊರೆಯಲಿವೆ. ಜೊತೆಗೆ ಸ್ಥಳೀಯ ವಸ್ತುಗಳು ಸಿಗಲಿವೆ" ಎಂದಿದ್ದಾರೆ.

ಎರಡು ಕಡೆಯ ಪ್ರಯಾಣಕ್ಕೆ 250 ರೂಪಾಯಿ ಶುಲ್ಕ
ಮೈಸೂರು - ಬೆಂಗಳೂರು ಎಕ್ಸ್ಪ್ರೆಸ್ವೇ ಟೋಲ್ ದರ ನಿಗದಿ ವಿಚಾರವಾಗಿ ವಿವರಗಳನ್ನು ಹಂಚಿಕೊಂಡಿರುವ ಪ್ರತಾಪ್ ಸಿಂಹ, ಎರಡು ಕಡೆಯ ಪ್ರಯಾಣಕ್ಕೆ 250 ರೂಪಾಯಿ ಶುಲ್ಕ ವಿಧಿಸುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ.
ರಸ್ತೆಯಲ್ಲಿ ಫ್ಲೈಓವರ್ಗಳು ಇದ್ದಾಗ ಟೋಲ್ ಸುಂಕ ಕೊಂಚ ಹೆಚ್ಚಾಗುತ್ತದೆ. ಮೈಸೂರು - ಬೆಂಗಳೂರು ಎಕ್ಸ್ಪ್ರೆಸ್ವೇಯಲ್ಲಿ ಫ್ಲೈ ಓವರ್ಗಳು ಇರುವ ಕಾರಣ 250 ರೂಪಾಯಿ ಟೋಲ್ ನಿಗದಿ ಆಗಬಹುದು ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.

ಕಾವೇರಿ ಈ ನಾಡಿನ ಜೀವ ನದಿ, ಹೆದ್ದಾರಿ ಹೆಸರಿಗೆ ವಿವಾದ ಬೇಡ
ಇದರ ಜೊತೆಗೆ ಹೆದ್ದಾರಿಗೆ ಹೆಸರಿಡುವ ಬಗ್ಗೆ ವಿವಾದಗಳು ಉಂಟಾಗುತ್ತಿರುವುದಕ್ಕೆ ಪ್ರತಿಕ್ರಿಯಿಸಿ, ರಾಷ್ಟ್ರೀಯ ಹೆದ್ದಾರಿಗೆ ವ್ಯಕ್ತಿಗಳ ಹೆಸರಿಡುವ ಪದ್ಧತಿ ಇಲ್ಲ. ಕರ್ನಾಟಕದಲ್ಲಿ ಜಿಲ್ಲೆಗಳಿಗೂ ಹೆಸರು ಇಡುವ ಪದ್ಧತಿ ಇಲ್ಲ. ಇದರ ಬಗ್ಗೆ ಮಾತನಾಡುವವರು ಮೊದಲು ಇದನ್ನು ತಿಳಿದುಕೊಂಡು ಮಾತನಾಡಲಿ. ಈಗಾಗಲೇ ಮೈಸೂರು ವಿಮಾನ ನಿಲ್ದಾಣಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರಿಟ್ಟಿದ್ದೇವೆ. ರೈಲುಗಳಿಗೆ ಒಡೆಯರ್ ಹೆಸರನ್ನು ಮರುನಾಮಕರಣ ಮಾಡಿದ್ದೇವೆ. ಕಾವೇರಿ ಈ ನಾಡಿನ ಜೀವ ನದಿ ಈ ಹೆಸರಿನ ವಿಚಾರದಲ್ಲಿ ವಿವಾದ ಮಾಡಬೇಡಿ. ಮಗ ದೊಡ್ಡೋನಾ ತಾಯಿ ದೊಡ್ಡೋರಾ ಎಂಬ ವಿವಾದಗಳು ಬೇಡ. ತಾಯಿಯೇ ದೊಡ್ಡವರು ಎಂದು ಮನವಿ ಮಾಡಿಕೊಂಡಿದ್ದಾರೆ.

ಕುಶಾಲನಗರ - ಮೈಸೂರು ಹೆದ್ದಾರಿಗೆ ಮೋದಿ ಶಂಕುಸ್ಥಾಪನೆ
ಇನ್ನು, ಮೈಸೂರು - ಕುಶಾಲನಗರ NH-275 ರಸ್ತೆ ಅಭಿವೃದ್ಧಿ ಯೋಜನೆಗೆ ಸಂಬಂಧಿಸಿದಂತೆ ಸೋಮವಾರ ಅಧಿಕಾರಿಗಳ ಜೊತೆಗೆ ಸಭೆ ನಡೆಸಿದ್ದಾರೆ.
ಮೈಸೂರು - ಕುಶಾಲನಗರ ಅಭಿವೃದ್ಧಿ ಯೋಜನೆಯ ಕಾಮಗಾರಿ ಟೆಂಡರ್ ಅನ್ನು ಗುತ್ತಿಗೆದಾರರಿಗೆ ನೀಡುವ ಪೂರ್ವದಲ್ಲಿ ಯೋಜನೆಯನ್ನು ಯಶಸ್ವಿಯಾಗಿ ನಿರ್ವಹಿಸಲು ಸರ್ಕಾರಿ ಇಲಾಖೆಗಳ ವತಿಯಿಂದ ವಿದ್ಯುತ್ ಪೂರೈಕೆ, ನೀರು ಸರಬರಾಜು, ಅರಣ್ಯ ಇಲಾಖೆ ಹಾಗೂ ಇನ್ನಿತರ ಇಲಾಖೆಗಳಿಂದ ನಿರಾಕ್ಷೇಪಣಾ ಪತ್ರದ ಅವಶ್ಯಕತೆ ಇರುವುದರಿಂದ ಹಾಗೂ ಯೋಜನೆಯ ಕಾಮಗಾರಿಯನ್ನು ಚುರುಕುಗೊಳಿಸಲು ಜಿಲ್ಲಾಧಿಕಾರಿ ಡಾ. ಕೆ.ವಿ ರಾಜೇಂದ್ರ ಮತ್ತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಯಿತು ಎಂದು ಪ್ರತಾಪ್ ಸಿಂಹ ತಿಳಿಸಿದ್ದಾರೆ.
ಮೈಸೂರು - ಬೆಂಗಳೂರು ಎಕ್ಸ್ಪ್ರೆಸ್ವೇ ಉದ್ಘಾಟನೆ ಸಂದರ್ಭದಲ್ಲಿಯ ಕುಶಾಲನಗರ - ಮೈಸೂರು ಹೆದ್ದಾರಿಗೆ ಶಂಕುಸ್ಥಾಪನೆ ನೆರವೇರಿಸಲಾಗುತ್ತದೆ ಎಂದು ಪ್ರತಾಪ್ ಸಿಂಹ ತಿಳಿಸಿದ್ದಾರೆ.











Click it and Unblock the Notifications