ಮೈಸೂರು : ಕಪ್ಪಾಡಿ ಜಾತ್ರೆಯಲ್ಲಿ ಪ್ರಾಣಿ ಬಲಿ ನಿಷೇಧ
ಮೈಸೂರು, ಮಾ.4 : ಮೈಸೂರು ಜಿಲ್ಲೆಯ ಕೆ.ಆರ್.ನಗರದಲ್ಲಿ ನಡೆಯುವ ಶ್ರೀ ಸಿದಪ್ಪಾಜಿ ಹಾಗೂ ರಾಚಪ್ಪಾಜಿ ದೇವರ ಜಾತ್ರಾ ಮಹೋತ್ಸವದಲ್ಲಿ ಪ್ರಾಣಿ ಕೊಡುವುದನ್ನು ನಿಷೇಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ನಿಷೇಧವನ್ನು ಉಲ್ಲಂಘನೆ ಮಾಡಿದರೆ 6 ತಿಂಗಳ ಜೈಲು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.
ಮಾರ್ಚ್ 20ರಂದು ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲ್ಲೂಕು ಕೆ.ಆರ್.ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕಪ್ಪಡಿ ಶ್ರೀ ಕ್ಷೇತ್ರದಲ್ಲಿ ಶ್ರೀ ಸಿದ್ದಪ್ಪಾಜಿ ಹಾಗೂ ರಾಚಪ್ಪಾಜಿ ದೇವರ ಕಪ್ಪಡಿ ಜಾತ್ರಾ ಮಹೋತ್ಸವ ನಡೆಯಲಿದೆ. ಜಾತ್ರೆಗೆ ಆಗಮಿಸುವ ಭಕ್ತಾದಿಗಳು ಯಾವುದೇ ಪ್ರಾಣಿಗಳನ್ನು ತರಬಾರದು ಎಂದು ಜಿಲ್ಲಾಡಳಿತ ಆದೇಶ ಹೊರಡಿಸಿದೆ.

ಜಾತ್ರೆಗೆ ಆಗಮಿಸುವಾಗ ಭಕ್ತಾದಿಗಳು ಯಾವುದೇ ಪ್ರಾಣಿಗಳನ್ನು ತರಬಾರದು, ಜಾತ್ರೆಗೆ ಆಗಮಿಸುವ ಮಾರ್ಗದಲ್ಲಿ ಪೊಲೀಸ್ ಚೆಕ್ಪೋಸ್ಟ್ಗಳನ್ನು ಹಾಕಿ ತಪಾಸಣೆ ಮಾಡಲಾಗುತ್ತದೆ. ಪ್ರಾಣಿಗಳನ್ನು ಸಾಗಾಣಿಕೆ ಮಾಡುವುದು ಕಂಡು ಬಂದಲ್ಲಿ ಕಠಿಣ ಕ್ರಮ ಜರುಗಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಸಿ. ಶಿಖಾ ಅವರು ಆದೇಶದಲ್ಲಿ ತಿಳಿಸಿದ್ದಾರೆ. [ದೇಶದ ಹುಲಿಗಳ ಸಂಖ್ಯೆಯಲ್ಲಿ ಕರ್ನಾಟಕವೇ ನಂ.1]
ಜಾತ್ರೆಯಲ್ಲಿ ದೇವರಿಗೆ ಪ್ರಾಣಿಯನ್ನು ಬಲಿಕೊಡುವ ಪದ್ಧತಿಯನ್ನು ಹಿಂದಿನಿಂದಲೂ ನಿಷೇಧಿಸಲಾಗಿದೆ. ಇದು ಕಾನೂನು ಪ್ರಕಾರ ಅಪರಾಧ 'ಕರ್ನಾಟಕ ಪ್ರಾಣಿ ಬಲಿ ಕಾಯ್ದೆ 1959ರ' ಅನ್ವಯ ಪ್ರಾಣಿ ಬಲಿಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಎಂದು ಜಿಲ್ಲಾಡಳಿತ ಹೇಳಿದೆ. [ಪ್ರಾಣಿರಕ್ಷಕರ ಹದ್ದಿನಗಣ್ಣಿನ ನಡುವೆ ಕಂಬಳ ಓಟ]
ಧರ್ಮ, ದೇವರು, ಜಾತ್ರೆ, ಹಬ್ಬ, ಉತ್ಸವ ಇತ್ಯಾದಿ ಹೆಸರಿನಲ್ಲಿ ಯಾವುದೇ ಸಂದರ್ಭದಲ್ಲಿ ಯಾವುದೇ ಸ್ಥಳದಲ್ಲಿ ಯಾವುದೇ ವ್ಯಕ್ತಿಯು ಪ್ರಾಣಿ ಬಲಿಗೆ ಪ್ರಚೋದನೆ ನೀಡುವುದು, ಅಂಗಾಂಗ ಅರ್ಪಿಸುವುದು, ರಕ್ತ ಸಿಂಪಡಿಸುವುದು ಸಾರ್ವಜನಿಕ ಸ್ಥಳಗಳಲ್ಲಿ ಪ್ರಾಣಿಗಳ ಮಾಂಸ, ಮೂಳೆ ಇತ್ಯಾದಿಗಳನ್ನು ಪ್ರದರ್ಶಿಸದಂತೆ ಆದೇಶ ನೀಡಲಾಗಿದೆ.
ಜಿಲ್ಲಾಡಳಿತದ ನಿಷೇಧವನ್ನು ಉಲ್ಲಂಘನೆ ಮಾಡಿದರೆ 6 ತಿಂಗಳವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ ಅಥವಾ ಒಂದು ಸಾವಿರ ರೂ. ದಂಡ ವಿಧಿಸಲಾಗುತ್ತದೆ. ಸಾರ್ವಜನಿಕರು ಪ್ರಾಣಿ ಬಲಿ ತಡೆಯಲು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಪ್ರಕಟಣೆಯಲ್ಲಿ ಮನವಿ ಮಾಡಲಾಗಿದೆ.












Click it and Unblock the Notifications