ಕಳ್ಳ ಸಾಗಣೆ ಜಾಲದಲ್ಲಿ ರಕ್ಷಿಸಿದರೂ ಬದುಕುಳಿಯದ ಹೆಣ್ಣು ಮಗು
ಮೈಸೂರು, ಮೇ 29: ಮಕ್ಕಳ ಕಳ್ಳ ಸಾಗಣೆ ಜಾಲವನ್ನು ಮೈಸೂರು ಪೊಲೀಸರು ಬೇಧಿಸಿದ್ದ ಸಂದರ್ಭ ರಕ್ಷಿಸಲಾಗಿದ್ದ ಹೆಣ್ಣು ಮಗು ಸಾವನ್ನಪ್ಪಿದೆ. ಮಂಡ್ಯ-ಬನ್ನೂರು ರಸ್ತೆಯಲ್ಲಿರುವ ವಿಕಸನ ದತ್ತು ಸ್ವೀಕಾರ ಕೇಂದ್ರದಲ್ಲಿ ಮಗು ಸಾವನ್ನಪ್ಪಿದೆ.
ಒಂದೂವರೆ ವರ್ಷದ ಲಯಾ ಎಂಬ ಮಗು ಅನುಮಾನಾಸ್ಪದವಾಗಿ ಮೃತಪಟ್ಟಿದ್ದು ಇದು ಹಾಲು ಕುಡಿಯುವಾಗ ಉಸಿರುಗಟ್ಟಿ ಸಾವನ್ನಪ್ಪಿದೆ ಎಂದು ಹೇಳಲಾಗುತ್ತಿದೆ. ಆದರೆ ಮೆಟ್ಟಿಲಿನಿಂದ ಅಥವಾ ಮಂಚದಿಂದ ಬಿದ್ದು ಸಾವನ್ನಪ್ಪಿರಬಹುದು ಎಂದು ಸಂಶಯಿಸಲಾಗಿದೆ.
ಪೋಷಕರ ಕಣ್ಣು ತಪ್ಪಿಸಿ ಆಸ್ಪತ್ರೆಯಿಂದ ಮಕ್ಕಳನ್ನು ಕಳವು ಮಾಡಿ ಬೇರೆಡೆಗೆ ಮಾರಾಟ ಮಾಡುವ ಜಾಲವನ್ನು ಪೊಲೀಸರು ಭೇದಿಸಿದ ಸಂದರ್ಭದಲ್ಲಿ ಮಗು ಲಯಾ ಸಿಕ್ಕಿತ್ತು. ದಾಖಲೆ ಪ್ರಕಾರ 2016ನೇ ಮಾ. 13ರಂದು ಲಯಾ ಜನಿಸಿತ್ತು. ಮಗುವನ್ನು ನವೆಂಬರ್ 11ರಂದು ಮೈಸೂರು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ವಶಕ್ಕೆ ತೆಗೆದುಕೊಂಡಿತ್ತು. ಬಳಿಕ ಮಂಡ್ಯದ ವಿಕಸನ ದತ್ತು ಸ್ವೀಕಾರ ಕೇಂದ್ರಕ್ಕೆ ನೀಡಲಾಗಿತ್ತಲ್ಲದೆ ಇಲ್ಲಿಯೇ ಮಗು ಬೆಳೆಯುತ್ತಿತ್ತು.
ಇದೀಗ ಮಗು ಶನಿವಾರ 11 ಗಂಟೆಗೆ ಮೃತಪಟ್ಟಿದೆ ಎಂದು ತಿಳಿದು ಬಂದಿದೆ. ಅಲ್ಲಿನವರು ಮಗು ಹಾಲು ಕುಡಿಯುವಾಗ ಉಸಿರುಗಟ್ಟಿ ಸತ್ತಿದೆ ಎನ್ನುತ್ತಿದ್ದಾರೆಯಾದರೂ ಸಾವಿಗೆ ನೈಜ ಕಾರಣಗಳು ತಿಳಿದು ಬಂದಿಲ್ಲ. ಹೀಗಾಗಿ ಮರಣೋತ್ತರ ಪರೀಕ್ಷೆ ಬಳಿಕವೇ ಸತ್ಯಾಸತ್ಯತೆ ತಿಳಿಯಬೇಕಿದೆ.
ಮೈಸೂರು ಕೆ.ಆರ್.ಆಸ್ಪತ್ರೆ ಸೇರಿದಂತೆ ವಿವಿಧೆಡೆಯಿಂದ ಮಗುವನ್ನು ಅಪಹರಿಸಿ ಕೇರಳ ಸೇರಿದಂತೆ ಹೊರದೇಶಗಳಿಗೆ ಕಳ್ಳಸಾಗಣೆ ಮಾಡುತ್ತಿದ್ದ ಜಾಲವನ್ನು ಮೈಸೂರು ಎಸ್ಪಿ ರವಿ.ಡಿ.ಚೆನ್ನಣ್ಣನವರ್ ನೇತೃತ್ವದಲ್ಲಿ ಪೊಲೀಸರು ಬಯಲಿಗೆಳೆಯುವ ಮೂಲಕ ಆರೋಪಿಗಳನ್ನು ಬಂಧಿಸಿ 16 ಮಕ್ಕಳನ್ನು ವಶಕ್ಕೆ ತೆಗೆದುಕೊಂಡಿದ್ದರು.
ಅವುಗಳಲ್ಲಿ ಆರು ಮಕ್ಕಳನ್ನು ಮಂಡ್ಯ-ಬನ್ನೂರು ರಸ್ತೆಯಲ್ಲಿರುವ ವಿಕಸನ ಕೇಂದ್ರಕ್ಕೆ, ಮತ್ತೆ 4 ಮಕ್ಕಳನ್ನು ಮೈಸೂರಿನ ಬಾಪೂಜಿ ಶಿಶುಪಾಲನಾ ಕೇಂದ್ರಕ್ಕೆ ಹಾಗೂ ಮೇಲುಕೋಟೆಯ ಜನಪದ ಸೇವಾ ಟ್ರಸ್ಟ್ ಗೆ 6 ಮಕ್ಕಳನ್ನು ನೀಡಲಾಗಿತ್ತು.
ಈ ಪೈಕಿ ಮಂಡ್ಯದ ವಿಕಸನ ದತ್ತು ಸ್ವೀಕಾರ ಕೇಂದ್ರದಲ್ಲಿದ್ದ ಲಯಾ ಇದೀಗ ಮೃತಪಟ್ಟಿದ್ದು, ವಿಕಸನ ಕೇಂದ್ರದ ಬಗ್ಗೆಯೇ ಜನ ಅನುಮಾನ ಪಡುವಂತಾಗಿದೆ. ಘಟನೆ ಬಳಿಕ ಇದೀಗ ವಿಕಸನ ಕೇಂದ್ರದಲ್ಲಿರುವ ಎಲ್ಲ ಮಕ್ಕಳನ್ನು ಬೇರೆಡೆಗೆ ವರ್ಗಾವಣೆ ಕಳುಹಿಸಲು ಕ್ರಮ ಕೈಗೊಳ್ಳಲಾಗಿದೆ.
ಇದಲ್ಲದೆ ಮೇಲುಕೋಟೆಯಲ್ಲಿರುವ ಜನಪದ ಸೇವಾ ಟ್ರಸ್ಟ್ ನ ದತ್ತು ಸ್ವೀಕಾರ ಕೇಂದ್ರಕ್ಕೂ ಅಧಿಕಾರಿಗಳ ತಂಡ ಭೇಟಿ ನೀಡಿ ಮಕ್ಕಳು ಸುರಕ್ಷಿತವಾಗಿದ್ದಾರಾ ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕಿದೆ. ಈಗಾಗಲೇ ಘಟನೆ ನಡೆದ ವಿಕಸನ ಕೇಂದ್ರದ ಮುಖ್ಯಸ್ಥರು ಮತ್ತು ಶಿಶುಪಾಲಕರು ಮೈಸೂರು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಎದುರು ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ.