ಆಡಿಯೋ ವೈರಲ್:ಜಗಳದಲ್ಲಿ ಸಚಿವರ ಹೆಸರು ಎಳೆದು ತಂದ ಅಧಿಕಾರಿಗಳು!
ಮೈಸೂರು, ಫೆಬ್ರವರಿ 11: ಅಧಿಕಾರಿಗಳಿಗೆ ರಾಜ್ಯದ ಯಾವುದೇ ಕಡೆ ವರ್ಗಾವಣೆ ಮಾಡಿದರೂ ಅಲ್ಲಿ ಹೋಗಿ ಕೆಲಸ ಮಾಡಬೇಕೆಂಬುದು ಸರ್ಕಾರದ ನಿಯಮ. ಆದರೆ ಇಬ್ಬರು ಕೆಎಎಸ್ ಅಧಿಕಾರಿಗಳು ಜಾಗ ಬಿಡಲು ಹಾಗೂ ಅದೇ ಜಾಗಕ್ಕೆ ಬರಲು ಪರಸ್ಪರ ನಡೆಸಿರುವ ಆಡಿಯೋ ಈಗ ವೈರಲ್ ಆಗಿದೆ.
ಮೈಸೂರಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ತಹಶೀಲ್ದಾರ್ ರಮೇಶ್ ಬಾಬು, ಇತ್ತೀಚಿನವರೆಗೂ ಮೈಸೂರು ಜಿಲ್ಲೆಯ ತಿ. ನರಸೀಪುರದಲ್ಲಿ ತಹಶೀಲ್ದಾರ್ ಆಗಿ ಕೆಲಸ ಮಾಡುತ್ತಿದ್ದ ರೇಣುಕುಮಾರ್ ಇಬ್ಬರು ಪರಸ್ಪರ ಕಿತ್ತಾಡಿಕೊಂಡಿದ್ದಾರೆ. ಇವರ ಪೈಕಿ ರೇಣುಕುಮಾರ್ ಅವರನ್ನು ಚಳ್ಳಕೆರೆಗೆ ವರ್ಗಾವಣೆ ಮಾಡಲಾಗಿತ್ತು.
ಈಗ ಅವರನ್ನು ಮತ್ತೆ ಮೈಸೂರಿನ ರಮೇಶ್ ಬಾಬು ಅವರ ಸ್ಥಾನಕ್ಕೆ ವರ್ಗಾವಣೆ ಮಾಡಿದ್ದು, ರಿಲೀವ್ ಆಗಲು ರಮೇಶ್ ಹಿಂದೇಟು ಹಾಕಿ ವಿಳಂಬ ಮಾಡಿದ್ದಕ್ಕೆ ಫೋನ್ ನಲ್ಲಿ ಮಾತನಾಡಿರುವ ಆಡಿಯೋ ವೈರಲ್ ಆಗಿದೆ.
"ನೋಡಿ ರಮೇಶ್ ಬಾಬು ನಾನೇನಾದರೂ ನಿಮ್ಮ ಜಾಗಕ್ಕೆ ಬಂದ್ರೆ ನಿಮಗೆ ತೊಂದರೆ ಕೊಡಲ್ಲ. ಒಂದು ತಿಂಗಳು ಟೈಂ ಕೊಡ್ತೀನಿ. ನಿಮ್ಮ ಎಲ್ಲಾ ಫೈಲ್ ಕ್ಲಿಯರ್ ಮಾಡ್ಕೊಳ್ಳಿ. ಒಂದೇ ಜಾತಿಯಲ್ಲಿ ಹುಟ್ಟಿ ನನಗೆ ಯಾಕೆ ಬೆಂಬಲಿಸುತ್ತಿಲ್ಲ. ಒಕ್ಕಲಿಗರಿಗೆ ಒಕ್ಕಲಿಗರು ಸಪೋರ್ಟ್ ಮಾಡದೇ ಬ್ರಾಹ್ಮಣರಿಗೆ ಸಪೋರ್ಟ್ ಮಾಡ್ತೀಯಾ . ನನಗೆ ಪ್ರಭಾವಿ ಸಚಿವರ ಬೆಂಬಲ ಇದೆ" ಅಂತ ರೇಣುಕುಮಾರ್ ಏರು ಧ್ವನಿಯಲ್ಲಿ ಮಾತನಾಡಿದ್ದಾರೆ. ಇದಕ್ಕೆ ಪ್ರತಿಯಾಗಿ ರಮೇಶ್ ಬಾಬು ಏನು ಹೇಳಿದರು? ಮತ್ತಿತರ ವಿವರ ಇಲ್ಲಿದೆ...

ತಹಶೀಲ್ದಾರ್ ರಮೇಶ್ ಹೇಳಿದ್ದು ಹೀಗೆ
ಇನ್ನೊಂದು ಕಡೆ ಹಾಲಿ ತಹಶೀಲ್ದಾರ್ ರಮೇಶ್, "ಲೋಕಸಭೆ ಚುನಾವಣೆಗೆ ನೀವೇ ಬನ್ನಿ, ಅಲ್ಲಿ ತನಕ ನನಗೆ ಅವಕಾಶ ಕೊಡಿ" ಎಂದು ಕೇಳಿಕೊಂಡಿದ್ದಾರೆ.

ಸಾಕಷ್ಟು ಅನುಮಾನಗಳಿಗೆ ಕಾರಣ
ಇಬ್ಬರೂ ತಹಶೀಲ್ದಾರರ ಈ ರೀತಿ ವಿನಂತಿ, ಉದ್ದೇಶವಾದರೂ ಏನು? ಎಂಬುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ಸರ್ಕಾರ ನಿಯೋಜಿಸಿದ ಕಡೆ ಕೆಲಸ ಮಾಡಬೇಕಾದ ಅಧಿಕಾರಿಗಳು ವೈಯಕ್ತಿಕ ಒಡಂಬಡಿಕೆ ಮಾಡಿಕೊಂಡು ಸ್ಥಾನಕ್ಕೆ ಬರಲು ಏಕಿಷ್ಟು ತರಾತುರಿ ಮಾಡುತ್ತಿದ್ದಾರೆ ಎಂಬುದು ಪ್ರಶ್ನೆಯಾಗಿದೆ.

ಪ್ರಭಾವಿ ಸಚಿವರು, ಜಾತಿಯ ಹೆಸರು
ಅಧಿಕಾರಿಗಳು ಸಂಭಾಷಣೆ ಮಾಡುವಾಗ ಪ್ರಭಾವಿ ಸಚಿವರ ಹೆಸರು ಹಾಗೂ ಜಾತಿ ಹೆಸರನ್ನು ಅನಗತ್ಯವಾಗಿ ಎಳೆದು ತಂದಿದ್ದಾರೆ. ಇಂತಹ ಅಧಿಕಾರಿಗಳು ಮೈಸೂರಿಗೆ ಬೇಕಿಲ್ಲ ಅಂತ ಸಾಮಾಜಿಕ ಕಾರ್ಯಕರ್ತ ಜವರಪ್ಪ ಆಗ್ರಹಿಸಿದ್ದಾರೆ.

ಈ ಘಟನೆಗಿಂತ ಸಾಕ್ಷಿ ಬೇಕಾಗಿಲ್ಲ
ಒಟ್ಟಾರೆ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಮೈಸೂರು ಜಿಲ್ಲೆಗೆ ಅಧಿಕಾರಿಗಳು ವರ್ಗವಾಗಿ ಬರಲು ಸಾಕಷ್ಟು ರಾಜಕೀಯ ಪ್ರಭಾವ ಬಳಸುತ್ತಿದ್ದಾರೆ. ಇದಕ್ಕಾಗಿ ಜಾತಿ, ಬಲ ಮತ್ತು ಹಣ ವಿನಿಯೋಗಕ್ಕೂ ಮುಂದಾಗಿದ್ದಾರೆ ಅನ್ನೋದಕ್ಕೆ ಈ ಘಟನೆಗಿಂತ ಸಾಕ್ಷಿ ಬೇಕಾಗಿಲ್ಲ.











Click it and Unblock the Notifications