Assembly election 2023: ಹಳೆ ಮೈಸೂರಿನಲ್ಲಿ ಜೆಡಿಎಸ್ನಿಂದ 7 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಣೆ
ಮೈಸೂರು, ಡಿಸೆಂಬರ್, 19: ಮುಂದಿನ ವಿಧಾನಸಭೆ ಚುನಾವಣೆಗೆ ಮೂರು ಪಕ್ಷಗಳು ಈಗಿನಿಂದಲೇ ಸಿದ್ಧತೆ ಕೈಗೊಂಡಿದ್ದು, ಜೆಡಿಎಸ್ ಒಂದು ಹೆಜ್ಜೆ ಮುಂದೆ ಹೋಗಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಘೋಷಣೆ ಮಾಡಿದೆ. ಸದ್ಯ ಮೈಸೂರು ಜಿಲ್ಲೆಯ 11 ಕ್ಷೇತ್ರಗಳ ಪೈಕಿ ಜೆಡಿಎಸ್ 7 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ.
ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಅವರು ಒಟ್ಟು 93 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದಾರೆ. ಈ ಮೂಲಕ ಮುಂದಿನ ವಿಧಾನಸಭಾ ಚುನಾವಣೆ ಕಹಳೆ ಮೊಳಗಿಸಿದೆ. ಗೊಂದಲ, ಅಸಮಾಧಾನ ಇರುವ ಕ್ಷೇತ್ರಗಳಿಗೆ ಕೈ ಹಾಕದ ಜೆಡಿಎಸ್ ಹಾಲಿ ಶಾಸಕರು ಇರುವ ಕ್ಷೇತ್ರಗಳಿಗೆ ಮಣೆ ಹಾಕಿದೆ. ಅಲ್ಲದೆ, ಮೈಸೂರು ಭಾಗದಲ್ಲಿ ಹೊಸ ಯುವ ನಾಯಕರಿಗೆ ಅವಕಾಶ ಕಲ್ಪಿಸಿಲ್ಲ ಎಂಬ ಮಾತುಗಳು ಕೇಳಿಬರುತ್ತಿದೆ.
Assembly Elections 2023: ಮಂಡ್ಯ ಜಿಲ್ಲೆಯಲ್ಲಿ 7 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ ಜೆಡಿಎಸ್
ಹೊಸ ಪ್ರಯೋಗಕ್ಕೆ ಮುಂದಾಗದ ಜೆಡಿಎಸ್
ಹಾಗೆ ನೋಡಿದರೆ ಜೆಡಿಎಸ್ ತನ್ನ ಅಧಿಪತ್ಯದಲ್ಲಿರುವ ಕ್ಷೇತ್ರಗಳಲ್ಲಿ ಹೊಸ ಪ್ರಯೋಗಕ್ಕೆ ಮುಂದಾಗಿಲ್ಲ. ಹಾಲಿ ಶಾಸಕರಿಗೆ ಟಿಕೆಟ್ ನೀಡಿದೆ. ತಿ.ನರಸೀಪುರ ಕ್ಷೇತ್ರದಲ್ಲಿ ಹಾಲಿ ಶಾಸಕ ಅಶ್ವಿನ್ ಕುಮಾರ್ ಅವರಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ. ಕಾಂಗ್ರೆಸ್ನಿಂದ ಎಚ್.ಸಿ.ಮಹದೇವಪ್ಪ ಅವರ ಮಗ ಸುನೀಲ್ ಬೋಸ್ ಹಾಗೂ ಬಿಜೆಪಿಯಿಂದ ಭಾರತೀಶಂಕರ್ ಟಿಕೆಟ್ಗೆ ಪ್ರಯುತ್ನಿಸುತ್ತಿದ್ದಾರೆ. ಸದ್ಯ ಹುಣಸೂರಿನಲ್ಲಿ ಕಾಂಗ್ರೆಸ್ನ ಎಚ್.ಪಿ.ಮಂಜುನಾಥ್ ಶಾಸಕರಾಗಿದ್ದಾರೆ. ಇವರಿಗೆ ಟಾಂಗ್ ನೀಡುವ ಸಲುವಾಗಿ ಜೆಡಿಎಸ್ ಶಾಸಕ ಹಾಗೂ ಮಾಜಿ ಸಚಿವ ಜಿ.ಟಿ.ದೇವೇಗೌಡ ಅವರ ಪುತ್ರ ಜಿ.ಡಿ.ಹರೀಶ್ಗೌಡ ಅವರಿಗೆ ಟಿಕೆಟ್ ಘೋಷಿಸಲಾಗಿದೆ. ಆ ಮೂಲಕ ಜಿ.ಟಿ.ದೇವೇಗೌಡರು ಹಾಗೂ ಎಚ್.ಡಿ.ಕುಮಾರಸ್ವಾಮಿ ಅವರ ನಡುವಿನ ಮುನಿಸು ಸದ್ಯಕ್ಕೆ ನಿವಾರಣೆಯಾದಂತಾಗಿದೆ.
ಹೊಸಬರಿಗೆ ಮಣೆ ಹಾಕದ ಜೆಡಿಎಸ್
ಜಿ.ಡಿ.ಹರೀಶ್ಗೌಡ ಅವರಿಗೆ ಇದು ಮೊದಲ ಸಾರ್ವತ್ರಿಕ ಚುನಾವಣೆಯಾಗಿದೆ. ಎಂಸಿಸಿಡಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಅಪೆಕ್ಸ್ ಬ್ಯಾಂಕ್ ರಾಜ್ಯ ಉಪಾಧ್ಯಕ್ಷರಾಗಿರುವ ಹರೀಶ್ಗೌಡ ಅವರಿಗೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಕಳೆದ ಚುನಾವಣೆಯಲ್ಲಿ ಹೈಪ್ ಸೃಷ್ಟಿಸಿದ್ದ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜಿ.ಟಿ.ದೇವೇಗೌಡ ಅವರು ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಸೋಲಿಸಿದ್ದರು. ಹಾಗಾಗಿ ಈ ಬಾರಿಯೂ ಜೆಡಿಎಸ್ ಪಕ್ಷ ಅವರಿಗೆ ಮಣೆ ಹಾಕಿದೆ. ಇದೀಗ ಜೆಡಿಎಸ್ನಲ್ಲಿ ತಂದೆ ಹಾಗೂ ಮಗನಿಗೆ ಟಿಕೆಟ್ ಲಭ್ಯವಾದಂತಾಗಿದೆ. ಚಾಮುಂಡೇಶ್ವರಿಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಯಾರನ್ನು ನಿಲ್ಲಿಸಬೇಕು ಎನ್ನುವ ಮಾಹಿತಿಯನ್ನು ಇನ್ನೂ ಬಹಿರಂಗಪಡಿಸಿಲ್ಲ.
ಈ ಬಾರಿ ಹೊಸಬರಿಗಿಲ್ಲ ಅವಕಾಶ
ಹಾಗೆ ನೋಡಿದರೆ ಜೆಡಿಎಸ್ ಮೈಸೂರು ಭಾಗದಲ್ಲಿ ಹೊಸ ಮುಖಗಳಿಗೆ ಅಷ್ಟಾಗಿ ಮಣೆ ಹಾಕಿಲ್ಲ. ಕೆ.ಆರ್.ನಗರ ಕ್ಷೇತ್ರದಲ್ಲಿ ಹಾಲಿ ಶಾಸಕ ಸಾ.ರಾ.ಮಹೇಶ್, ಪಿರಿಯಾಪಟ್ಟಣದಲ್ಲಿಯೂ ಶಾಸಕ ಕೆ.ಮಹದೇವ್ ಅವರಿಗೆ ಟಿಕೆಟ್ ಸಿಕ್ಕಿದೆ. ಉಳಿದಂತೆ ಕೃಷ್ಣರಾಜ ಕ್ಷೇತ್ರದಲ್ಲಿ ಕೆ.ವಿ.ಮಲ್ಲೇಶ್ ಅವರ ಮೇಲೆ ಪಕ್ಷದ ವರಿಷ್ಠರು ವಿಶ್ವಾಸವಿರಿಸಿದ್ದಾರೆ. ವರುಣಾದಲ್ಲಿ ಸಿದ್ದರಾಮಯ್ಯ ಇಲ್ಲವೇ ಡಾ.ಯತೀಂದ್ರ ಅವರ ವಿರುದ್ಧ ಅಭಿಷೇಕ್ ಸ್ಪರ್ಧಿಸಲಿದ್ದಾರೆ.