ದೇವೇಗೌಡರು ಭ್ರಷ್ಪಾಚಾರ ಮಾಡಿದ್ದರೆ ಸಾಬೀತುಪಡಿಸಲಿ: ಅಮಿತ್ ಶಾಗೆ ಎಚ್ಡಿಕೆ ಸವಾಲು
ಮೈಸೂರು, ಜನವರಿ, 02: ನಾನಾಗಲಿ, ದೇವೇಗೌಡರಾಗಲಿ ಹಣ ಲೂಟಿ ಮಾಡಿದ್ದರೆ ಅದನ್ನು ಸಾಬೀತುಪಡಿಸಲಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಗೃಹ ಸಚಿವ ಅಮಿತ್ ಶಾ ಅವರಿಗೆ ಮೈಸೂರಿನಲ್ಲಿ ಸವಾಲು ಹಾಕಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಪ್ರಧಾನಿ ದೇವೇಗೌಡರ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ದೇವೇಗೌಡರ ಉಗುರಿಗೂ ಸಮವಲ್ಲ ಎಂದು ಆಕ್ರೋಶ ಹೊರಹಾಕಿದರು. ಅಮಿತ್ ಶಾ ಅವರಿಗೆ ಕೆಎಂಎಫ್ ಅನ್ನು ಖಾಸಗೀಕರಣ ಮಾಡುವ ಹುನ್ನಾರವಾಗಿದೆ. ಅದಕ್ಕೆ ನಾವು ಬಿಡುವುದಿಲ್ಲ. ಉತ್ತರ ಭಾರತದ ರಾಜಕೀಯ ಕರ್ನಾಟಕದಲ್ಲಿ ನಡೆಯುವುದಿಲ್ಲ. 30 ಕ್ಷೇತ್ರಗಳನ್ನು ಗೆದ್ದು ಜೆಡಿಎಸ್ ಬ್ಲಾಕ್ಮೇಲ್ ಮಾಡುತ್ತದೆ ಎಂದು ಹೇಳಿರುವ ಅಮಿತ್ ಶಾ ಗೆ ಮುಂದಿನ ಚುನಾವಣೆಯಲ್ಲಿ ಬುದ್ಧಿ ಕಲಿಸುತ್ತೇವೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಬಿಜೆಪಿ ಅಧಃಪತನ ಕರ್ನಾಟಕದಿಂದಲೇ ಆರಂಭವಾಗಲಿದೆ. ಅದಕ್ಕೆ ಅಮಿತ್ ಶಾ ಅವರ ಟೀಕೆಗಳೇ ಕಾರಣವಾಗಲಿವೆ ಎಂದರು.

ಬಿಜೆಪಿಯಲ್ಲಿ ಯಡಿಯೂರಪ್ಪಗೆ ಕಡೆಗಣಿಸಲಾಗಿದೆ
ವೈಕುಂಠ ಏಕಾದಶಿ ದಿನ ಹೇಳುತ್ತಿದ್ದೇನೆ. ಜೆಡಿಎಸ್-ಬಿಜೆಪಿ 20:20 ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಅಧಿಕಾರ ಹಸ್ತಾಂತರ ಮಾಡುವ ವಿಚಾರದಲ್ಲಿ ನನ್ನದೇನೂ ತಪ್ಪಿಲ್ಲ. ಈ ಸಮ್ಮಿಶ್ರ ಸರ್ಕಾರ ನವದೆಹಲಿಯ ನಾಯಕರು ನಿಶ್ಚಯ ಮಾಡಿದ ಸರ್ಕಾರವಲ್ಲ. ಆದರೂ ಅಧಿಕಾರ ಹಸ್ತಾಂತರ ವಿಚಾರದಲ್ಲಿ ನನ್ನನ್ನು ಬಲಿಪಶು ಮಾಡಲಾಯಿತು. ನಾನು ಅಧಿಕಾರ ಬಿಡಲು ತಯಾರಾಗಿದ್ದೆ ಎಂದರು. ಹಾಗೆಯೇ ಬಿಜೆಪಿಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಕಡೆಗಣಿಸಲಾಗಿದೆ. ರಾಜ್ಯದಲ್ಲಿ ಬಿಜೆಪಿ ಪ್ರಬಲವಾಗಲು ಯಡಿಯೂರಪ್ಪ ಅವರೇ ಕಾರಣ. ಅವರಿಂದಲೇ ಸರ್ಕಾರ ಕೂಡ ರಚನೆಯಾಯಿತು. ಯಡಿಯೂರಪ್ಪ ಅವರ ನಾಯಕತ್ವದಲ್ಲಿ ವೀರಶೈವ ಸಮುದಾಯ ಬಿಜೆಪಿ ಜೊತೆಗೆ ನಿಂತಿತ್ತು. ಆದರೆ ಈಗ ಯಡಿಯೂರಪ್ಪ ಅವರ ಸ್ಥಿತಿ ಏನಾಗಿದೆ? ಬಿಜೆಪಿ ಹೈಕಮಾಂಡ್ ಯಾವ ರೀತಿ ನಡೆಸಿಕೊಳ್ಳುತ್ತಿದೆ ಎಂಬುದನ್ನು ವೀರಶೈವ ಸಮುದಾಯ ಗಮನಿಸಬೇಕು ಎಂದರು.

ಒಂದೇ ವೇದಿಕೆಯಲ್ಲಿ ಸಾ.ರಾ.ಮಹೇಶ್, ಜಿ.ಟಿ.ಡಿ
ಹಾವು ಮುಂಗುಸಿಯಂತಿದ್ದ ಸಾ.ರಾ.ಮಹೇಶ್ ಮತ್ತು ಜಿ.ಟಿ.ದೇವೇಗೌಡ ಅವರು ಕೆ.ಆರ್.ಕ್ಷೇತ್ರದ ಜೆಡಿಎಸ್ ಏರ್ಪಡಿಸಿದ್ದ ಶರಣರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರು. ಮಾಜಿ ಸಿಎಂ ಕುಮಾರಸ್ವಾಮಿ ಭಾಷಣ ಆರಂಭಿಸುತ್ತಿದ್ದಂತೆ ಇವರು ಅಕ್ಕಪಕ್ಕದಲ್ಲಿ ಕುಳಿತು ಮಾತುಕತೆ ನಡೆಸಿದರು. ಮೂರೂವರೆ ವರ್ಷಗಳಿಂದ ಅಂತರ ಕಾಯ್ದುಕೊಂಡಿದ್ದ ಈ ನಾಯಕರಿಬ್ಬರು ಮತ್ತೆ ಒಂದಾಗಿದ್ದಕ್ಕೆ ಜೆಡಿಎಸ್ ಕಾರ್ಯಕರ್ತರು ಸಂಭ್ರಮಪಟ್ಟರು.












Click it and Unblock the Notifications