ಚಾಮುಂಡಿ ಬೆಟ್ಟದಲ್ಲಿ ಆಷಾಢ ಶುಕ್ರವಾರ ಸಂಭ್ರಮ: ತಾಯಿ ಪಾದಕ್ಕೆ ಉಘೇ..ಉಘೇ.. ಎಂದು ಘೋಷ ಮೊಳಗಿಸಿದ ಭಕ್ತರು
ಮೈಸೂರು, ಜೂನ್, 23: ಆಷಾಢ ಶುಕ್ರವಾರ ಹಿನ್ನೆಲೆ ಭಕ್ತರು ಬೇಡಿದ್ದನ್ನು ಕರುಣಿಸುವ ತಾಯಿ, ಮಹಿಷ ಮರ್ಧಿನಿ, ದುಷ್ಟ ಶಿಕ್ಷಕಿ, ಶಿಷ್ಟ ರಕ್ಷಕಳಾದ ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆದು ಸಾವಿರಾರು ಭಕ್ತರು ಪುನೀತರಾದರು.
ಆಷಾಢ ಶುಕ್ರವಾರದ ಮೊದಲ ದಿನ, ವರ್ಧಂತಿ ಉತ್ಸವದ ಪೂಜೆಯಲ್ಲಿ ಸರ್ವಾಲಂಕೃತವಾದ ದೇವಿಯ ದರ್ಶನ ಪಡೆಯಲು ಜಿಲ್ಲಾಡಳಿತ ಹಾಗೂ ದೇವಸ್ಥಾನ ಮಂಡಳಿಯವರು ಮಾಡಿದ ಅಚ್ಚುಕಟ್ಟು ವ್ಯವಸ್ಥೆಯಿಂದಾಗಿ ದೇವಿಯ ದರ್ಶನ ಕಾರ್ಯ ಯಾವುದೇ ತೊಂದರೆಗಳಿಲ್ಲದೆ ನಡೆಯಿತು. ತಾಯಿ ಚಾಮುಂಡಿ ಸನ್ನಿಧಾನದಲ್ಲಿ ಬೆಳಗಿನ ಜಾವ 3:30ರಿಂದಲೇ ಪೂಜಾ ವಿಧಿ ವಿಧಾನಗಳು, ಮಂತ್ರ ಘೋಷಗಳು ಮೊಳಗಿದವು.

ಇನ್ನು ನಾನ ಬಗೆಯ ಹೂಗಳಿಂದ ಅಲಂಕೃತಗೊಂಡಿದ್ದ ತಾಯಿ ಚಾಮುಂಡಿಯನ್ನು ಕಣ್ತುಂಬಿಕೊಳ್ಳಲು ನಾಡಿನ ವಿವಿಧ ಮೂಲೆಗಳಿಂದ ನೆರೆ ಹೊರೆ ಜಿಲ್ಲೆಗಳು ಹಾಗೂ ಪಕ್ಕದ ರಾಜ್ಯಗಳಿಂದ ಆಗಮಿಸಿದ ಸಾವಿರಾರು ಭಕ್ತರು ಭಕ್ತಿ ಭಾವ ಪರವಶರಾಗಿ ಸದ್ದುಗದ್ದಲವಿಲ್ಲದೇ, ಉದ್ದುದ್ದ ಸಾಲುಗಳಲ್ಲಿ ಹೆಜ್ಜೆ ಹಾಕಿದರು. ಮತ್ತೊಂದೆಡೆ ತಳಿರು ತೋರಣಗಳಿಂದ, ಬಗೆಬಗೆಯ ಹೂಗಳಿಂದ ಅಲಂಕೃತವಾದ ದೇವಾಲಯದ ಪ್ರಾಂಗಣ ಒಳಭಾಗದಲ್ಲಿ ತೆಂಗಿನಕಾಯಿ, ಕಬ್ಬು, ಥರಾವರಿ ಹೂಗಳು ಹಾಗೂ ತೋರಣಗಳು ದೇವಾಲಯದ ಅಂದವನ್ನು ನೂರ್ಮಡಿಗೊಳಿಸಿದ್ದವು.
ಜನಸಾಮಾನ್ಯರಿಂದ ಹಿಡಿದು ಸೆಲೆಬ್ರೆಟಿಗಳವರಗೆ ರಾಜಕಾರಣಿಗಳು, ಅಧಿಕಾರಿಗಳು, ಮಹಿಳೆಯರು, ಮಕ್ಕಳು ದೇವಿ ದರ್ಶನ ಪಡೆದು ಪುನೀತರಾದರು. ಜನರೇ ಸ್ವಯಂ ಶಿಸ್ತು ಅಳವಡಿಸಿಕೊಂಡಿದ್ದರಿಂದ ಪೊಲೀಸರ ಕೆಲಸ ತುಸು ಹಗುರವಾಗಿತ್ತು.
ಉಚಿತ ಬಸ್, ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರ ಆಗಮನ
ಹಾಗೆಯೇ ರಾಜ್ಯ ಸರ್ಕಾರದ ಶಕ್ತಿ ಯೋಜನೆಯ ಉಚಿತ ಬಸ್ ಸೇವೆಯಿಂದಾಗಿ ಮಹಿಳೆಯರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ದೇವಸ್ಥಾನಕ್ಕೆ ಆಗಮಿಸಿ ದೇವಿಯ ದರ್ಶನ ಪಡೆದರು. ಈ ವೇಳೆ ಕೆಲ ಮಹಿಳಾ ಸಂಘಗಳು, ಸ್ತ್ರೀ ಶಕ್ತಿ ಗುಂಪುಗಳ ಮಹಿಳೆಯರು ತಂಡೋಪತಂಡವಾಗಿ ಆಗಮಿಸಿ ಸರ್ಕಾರದ ಉಚಿತ ಬಸ್ ಯೋಜನೆಯನ್ನು ಶ್ಲಾಘಿಸಿದರು.
30 ಸಾವಿರ ಭಕ್ತರಿಗೆ ಊಟದ ವ್ಯವಸ್ಥೆ
ಭಕ್ತರಿಗೆ ಪ್ರಸಾದ ವ್ಯವಸ್ಥೆಯನ್ನೂ ಮಾಡಲಾಗಿದ್ದು, ಹೊಟ್ಟೆ ತುಂಬಾ ಊಟ ಮಾಡಿ, ಆದರೆ ಅನ್ನವನ್ನು ಎಲೆಯಲ್ಲಿ ಪೋಲು ಮಾಡಬೇಡಿ ಎಂದು ಆಯೋಜಕರು ಮೈಕ್ ಮುಖಾಂತರ ಅನೌನ್ಸ್ ಮಾಡುತಿದ್ದರು. ನಗರದ ಜೋಡಿ ರಸ್ತೆಯಲ್ಲಿರುವ ಚಾಮುಂಡೇಶ್ವರಿ ಸೇವಾ ಸಮಿತಿಯವರು ಮೊದಲ ಆಷಾಢ ಶುಕ್ರವಾರದ ಅನ್ನದಾನಿಗಳಾಗಿದ್ದು, ಸುಮಾರು 30 ಸಾವಿರ ಭಕ್ತರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ಸಮಿತಿಯ ಪ್ರಧಾನ ಕಾರ್ಯದರ್ಶಿ ತಿಳಿಸಿದರು.












Click it and Unblock the Notifications