ಸಿಎಂ ಆರಗ ಜ್ಞಾನೇಂದ್ರ ರಾಜೀನಾಮೆ ಪಡೆಯಲಿ; ಸಿದ್ದರಾಮಯ್ಯ
ಮೈಸೂರು, ಏಪ್ರಿಲ್ 08; "ಆರಗ ಜ್ಞಾನೇಂದ್ರ ನಾಲಾಯಕ್ ಗೃಹ ಸಚಿವರಾಗಿದ್ದು, ಸಿಎಂ ಕೂಡಲೇ ಅವರ ರಾಜೀನಾಮೆ ಪಡೆಯಲಿ" ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದರು.
ಶುಕ್ರವಾರ ಮೈಸೂರಿನಲ್ಲಿ ಮಾತನಾಡಿದ ಸಿದ್ದರಾಮಯ್ಯ, "ಬೆಂಗಳೂರಿನ ಯುವಕನ ಕೊಲೆ ಪ್ರಕರಣಕ್ಕೆ ಪ್ರಚೋದನೆ ಮಾಡಿದ್ದೇ ಗೃಹ ಸಚಿವರು. ಉರ್ದು ಬರಲಿಲ್ಲ ಅನ್ನೋ ಕಾರಣಕ್ಕೆ ಕೊಲೆ ಆಗಿದೆ ಅಂತಾ ಅವರೇ ಹೇಳಿದರು. ಬಳಿಕ ಬೈಕ್ ಡಿಕ್ಕಿಯಾಗಿ ಕೊಲೆ ನಡೆದಿದೆ ಎಂದಿದ್ದಾರೆ" ಎಂದರು.
"ಇದು ಪ್ರಚೋದನೆ ಹೇಳಿಕೆ ಅಲ್ವ?. ಪೊಲೀಸ್ ಇಲಾಖೆ ಇದೆ, ಗುಪ್ತಚರ ಇಲಾಖೆ ಇದೆ. ಮಾಹಿತಿ ಇಲ್ಲದೆ ಗೃಹ ಸಚಿವರು ಹೇಗೆ ಮಾತನಾಡಿದರು?" ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಮಾತೃಭಾಷೆ ತಂಟೆಗೆ ಬರಬೇಡಿ; "ಸಂಪರ್ಕ ಭಾಷೆಯಾಗಿ ಹಿಂದಿ ಬಳಸಿ" ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, "ಅಮಿತ್ ಶಾ ಮಾತೃ ಭಾಷೆ ತಂಟೆಗೆ ಬರಬಾರದು. ಬಲತ್ಕಾರವಾಗಿ ಹಿಂದಿ ಹೇರಿದರೆ ತೀವ್ರ ವಿರೋಧ ಇದೆ. ಇದು ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾದ ಹೇಳಿಕೆ" ಎಂದರು.
"ಹಿಂದಿ ರಾಷ್ಟ್ರ ಭಾಷೆನೂ ಅಲ್ಲ, ಸಂಪರ್ಕ ಭಾಷೆನೂ ಅಲ್ಲ. ಮೋದಿ ಮಾತೆತ್ತಿದರೆ ಕೋ-ಆಪರೇಟೀವ್ ಫೆಡರಲಿಸಂ ಅಂತಾರೆ. ಹಿಂದಿ ರಾಷ್ಟ್ರ ಭಾಷೆ ಅಂತ ನಾವು ಒಪ್ಪಿಕೊಂಡಿಲ್ಲ. ಕರ್ನಾಟಕದಲ್ಲಿ ಕನ್ನಡ, ತಮಿಳುನಾಡಲ್ಲಿ ತಮಿಳು, ಕೇರಳದಲ್ಲಿ ಮಲಯಾಳಂ ಸಾರ್ವಭೌಮ ಭಾಷೆ" ಎಂದು ಸಿದ್ದರಾಮಯ್ಯ ಹೇಳಿದರು.
"ಅಮಿತ್ ಶಾ ಬಲತ್ಕಾರವಾಗಿ ಹಿಂದಿ ಹೇರಿದರೆ ನಾವು ತೀವ್ರ ವಿರೋಧ ಮಾಡುತ್ತೇವೆ. ಆಯಾ ರಾಜ್ಯಗಳಲ್ಲಿ ಪ್ರಾಂತೀಯ ಭಾಷೆಗಳು ಸಾರ್ವಭೌಮ. ಅಮಿತ್ ಶಾ ಹೇಳಿಕೆ ಬಾಲಿಶತನದ್ದು. ಒಕ್ಕೂಟ ವ್ಯವಸ್ಥೆಗೆ ವಿರುದ್ದವಾದ ಹೇಳಿಕೆ" ಎಂದು ಸಿದ್ದರಾಮಯ್ಯ ತಿಳಿಸಿದರು.
ಮುಸ್ಲಿಂ ಸಮುದಾಯಗಳಿಗೆ ನಿರ್ಬಂಧ ಹೇರುತ್ತಿರುವ ಬಗ್ಗೆ ಮಾತನಾಡಿ, "ಕೇಂದ್ರ & ರಾಜ್ಯ ಸರ್ಕಾರ ಇಂತ ಸಾಧನೆ ಮಾಡಿದ್ದೀವಿ ಅಂತ ಹೇಳಲು ಏನೂ ಇಲ್ಲ. ಅದಕ್ಕಾಗಿ ಧಾರ್ಮಿಕ ವಿಚಾರಗಳನ್ನು ಚರ್ಚೆಗೆ ಬಿಡುತ್ತಿದ್ದಾರೆ. ಹಿಜಾಬ್ ಆಯ್ತು, ಹಲಾಲ್ ಆಯ್ತು, ಮಸೀದಿಯಲ್ಲಿ ಮೈಕ್ ನಿರ್ಬಂಧ ಮಾಡಬೇಕು ಅಂದರು. ಈಗ ಮಾವು ಹಣ್ಣು, ಅದು ಇದು ಅಂತ ಹೇಳ್ತಿದ್ದಾರೆ" ಎಂದರು.
"ಬೆಲೆ ಏರಿಕೆ ಬಗ್ಗೆ ಯಾಕೆ ಯಾರು ಮಾತನಾಡುತ್ತಿಲ್ಲ. ಪೆಟ್ರೋಲ್, ಡಿಸೇಲ್ ಬೆಲೆ ಪ್ರತಿದಿನ ಏರಿಕೆ ಆಗುತ್ತಿದೆ. ತನ್ನ ವೈಫಲ್ಯ ಮುಚ್ಚಿ ಹಾಕಲು ಧಾರ್ಮಿಕ ವಿಚಾರವನ್ನು ಚರ್ಚೆಗೆ ತರುತ್ತಿದ್ದಾರೆ. ಹಲಾಲ್ ಮಾಂಸವನ್ನು ಹಿಂದೆಲ್ಲಾ ತಿಂದಿಲ್ವಾ, ಅದೇನು ಹೊಸದ?. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿ ಇಲ್ಲ" ಎಂದು ಸಿದ್ದರಾಮಯ್ಯ ಆರೋಪಿಸಿದರು.
ಸಿ. ಟಿ. ರವಿ ವಿರುದ್ಧವೂ ಆಕ್ರೋಶ; ಗೋರಿಪಾಳ್ಯದಲ್ಲಿ ನಡೆದ ಕೊಲೆ ಪ್ರಕರಣ ಬೆಳಕಿಗೆ ಬಂದಾಗ ಸಿದ್ದರಾಮಯ್ಯ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದ್ದರು.
"ಬೈಕ್ ಡಿಕ್ಕಿಗೆ ಸಂಬಂಧಿಸಿದ ಗಲಾಟೆಯಲ್ಲಿ ನಡೆದ ಕೊಲೆಯಲ್ಲೂ ಭಾಷೆ, ಧರ್ಮ ಎಳೆದುತಂದು ಸಮಾಜಕ್ಕೆ ಬೆಂಕಿ ಹಚ್ಚುವ ಸಿ. ಟಿ. ರವಿಯಂಥ ಕೋಮು ತಂಟೆಕೋರರ ವಿರುದ್ಧ ಪೊಲೀಸರು ಮೊದಲು ಕ್ರಮ ಕೈಗೊಳ್ಳಬೇಕು" ಎಂದು ಒತ್ತಾಯಿಸಿದ್ದರು.
"ಗೋರಿಪಾಳ್ಯದ ಕೊಲೆ ಪ್ರಕರಣದ ಬಗ್ಗೆ ಈಗಾಗಲೇ ಪೊಲೀಸ್ ಮಹಾ ನಿರ್ದೇಶಕರು ಹೇಳಿಕೆ ನೀಡಿ, ಇದು ವೈಯಕ್ತಿಕ ಘರ್ಷಣೆಯಿಂದ ನಡೆದ ಹತ್ಯೆ, ಭಾಷೆ ವಿಚಾರಕ್ಕೆ ಅಲ್ಲ ಎಂದು ಹೇಳಿದ್ದಾರೆ. ಕೋಮುದ್ವೇಷ ಕಕ್ಕುವುದು ಮತ್ತು ಎಲ್ಲದಕ್ಕೂ ನನ್ನ ಹೆಸರು ಎಳೆದು ತರುವುದು ಸಿ. ಟಿ. ರವಿ ಅವರಿಗೆ ಮಾನಸಿಕ ರೋಗವಾಗಿ ಬಿಟ್ಟಿದೆ" ಎಂದು ದೂರಿದ್ದರು.
"ಮೇಕೆದಾಟು ಕುಡಿಯುವ ನೀರಿನ ಯೋಜನೆ ವಿಷಯದಲ್ಲಿ ಮೌನವಾಗಿದ್ದು ತಮಿಳುನಾಡಿಗೆ ನೆರವಾಗುವ, ಕನ್ನಡ ಭಾಷೆಯನ್ನು ಹತ್ತಿಕ್ಕಿ ಹಿಂದಿ ಭಾಷೆ ಹೇರುವ ಕೇಂದ್ರ ಸರ್ಕಾರದ ದಮನಕಾರಿ ನಿಲುವನ್ನು ಬೆಂಬಲಿಸುವ ಸಿ. ಟಿ. ರವಿಯವರ ಒಂದು ಕಾಲು ಹೇಗೂ ರಾಜ್ಯದ ಹೊರಗಿದೆ, ಇನ್ನೊಂದು ಕಾಲನ್ನೂ ಎತ್ತಿಕೊಂಡು ಹೊರಗೆ ಹೋದರೆ ರಾಜ್ಯಕ್ಕೆ ಕ್ಷೇಮ" ಎಂದು ಸಲಹೆ ನೀಡಿದ್ದರು.












Click it and Unblock the Notifications